Advertisement

ಸಾಹಿತ್ಯಕ್ಕಿದೆ ಸರ್ಕಾರ ಎಚ್ಚರಿಸುವ ಶಕ್ತಿ

10:11 AM Jan 21, 2019 | |

ಮೂಡಿಗೆರೆ: ಉತ್ತಮ ಬದುಕು ಕಂಡುಕೊಳ್ಳಲು ಗಾಂಧಿ, ಬುದ್ಧ, ಅಂಬೇಡ್ಕರ್‌ರಂತಹ ಮಹನೀಯರು ದಾರಿ ತೋರಿಸಿಕೊಟ್ಟಿದ್ದಾರೆ. ಅಧಿಕಾರಕ್ಕೆ ಮಣೆ ಹಾಕುವ ಕೆಲ ಸಾಹಿತಿಗಳು ಹಾಗೂ ರಾಜಕಾರಣಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಆಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯ ಎಂದು ಬೆಂಗಳೂರಿನ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾ| ಕೆ.ವೈ.ನಾರಾಯಣಸ್ವಾಮಿ ಹೇಳಿದರು.

Advertisement

ಅವರು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ 15ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜನರ ಮಾತನ್ನು ಕೇಳಿಸಿಕೊಳ್ಳದ ಕಿವುಡು ಸರಕಾರಕ್ಕೆ ಭವಿಷ್ಯವಿರುವುದಿಲ್ಲ. ಅಂತಹ ಸರಕಾರವನ್ನು ಎಚ್ಚರಿಸುವುದು ಸಾಹಿತಿಗಳಿಗೆ ಸಾಧ್ಯವಿದೆ. ಇಂದಿನ ನೈಜ್ಯತೆ ಮತ್ತು ದುರಂತ ಚಿತ್ರಣವನ್ನು ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಅಂದೇ ದಾಖಲಿಸಿದ್ದಾರೆ. ಅವರು ಬದುಕಿದ ಮಣ್ಣಿನಲ್ಲಿ ಕನ್ನಡಿಗರು ಸಾಹಿತ್ಯ ನಾಶವಾಗದಂತೆ ಕಾಪಾಡಿಕೊಳ್ಳಬೇಕು.

ಕುವೆಂಪು ಅವರ ಮಾರ್ಗದರ್ಶನ, ವೈಚಾರಿಕತೆ ಮತ್ತು ಸುಂದರವಾದ ಶಾಂತಿಯ ತೋಟವನ್ನು ಆತ್ಮ ವಿಮರ್ಶೆ ಮೂಲಕ ಪರಾಮರ್ಶಿಸಬೇಕು. ಇಂತಹ ಸಾಹಿತ್ಯ ಮಲೆನಾಡಿನ ಮಣ್ಣಿನಿಂದ ಹೊರಟಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರ. ಕನ್ನಡ ಭಾಷೆಯನ್ನು ಉಳಿಸಲು ನಾವು ಹೋರಾಟ ಮಾಡಬೇಕಿಲ್ಲ. ಕನ್ನಡವನ್ನು ಪ್ರತಿನಿತ್ಯ ಬಳಸಿದರೆ ಸಾಕು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ ಮಾತನಾಡಿ, ಕರ್ನಾಟಕದ ಏಕೀಕರಣಕ್ಕಾಗಿ ನಡೆಸಿದ ಹೋರಾಟದ ಫಲವಾಗಿ ರಾಜ್ಯವಿಂದು ಕನ್ನಡ ಭಾಷೆ ಉನ್ನತ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ಕನ್ನಡಿಗರು ಮುಂದಾಗಬೇಕು ಎಂದು ಹೇಳಿದರು.

Advertisement

ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕನ್ನಡದಲ್ಲಿ ಸತ್ವಭರಿತ ಅರ್ಥಗರ್ಭಿತ ವೈಭವವಿದೆ. ಕನ್ನಡದ ಗಾಳಿ, ನೀರು, ಭಾಷೆ, ನೆಲ, ಗಿಡಮರಗಳು ಇವೆಲ್ಲವೂ ನೋಡುಗರಿಗೆ ಕನ್ನಡದ ಕಂಪು ನೀಡುತ್ತಿರುವುದು ನಮ್ಮ ಭಾಷೆಯ ಹೆಮ್ಮೆಯಾಗಿದೆ ಎಂದರು. ರಾಜಕೀಯ ಕಾರಣದಿಂದ ಕನ್ನಡ ಸಮ್ಮೇಳನದ ಪೂರ್ವ ತಯಾರಿ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಸಮ್ಮೇಳನ ಎಲ್ಲಾ ತಯಾರಿಯನ್ನು ಸ್ವಾಗತ ಸಮಿತಿ ಇತರೇ ಪದಾಧಿಕಾರಿಗಳು ಮಾಡಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಡಿ.ಎಸ್‌.ಜಯಪ್ಪ ಗೌಡ ಅವರು ಮಾತನಾಡಿ, ಸಮ್ಮೇಳನಧ್ಯಕ್ಷ ಸ್ಥಾನ ಅಲಂಕರಿಸಿದ್ದು, ತಮ್ಮ ಜೀವನದ ಸೌಭಾಗ್ಯವಾಗಿದೆ. ಜನತೆ ನೀಡಿದ ಪ್ರೋತ್ಸಾಹ ಮರೆಯಲಾಗದು. ನನ್ನನ್ನು ಆಯ್ಕೆ ಮಾಡಿರುವುದು ಸಮಾದಾನ ತಂದಿದೆ. ಸಂಘಟಕರಿಗೆ ಅಭಿನಂದನೆಗಳು ಎಂದು ಹೇಳಿದರು.

ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ| ಡಿ.ಎಸ್‌.ಜಯಪ್ಪ ಗೌಡ ಮತ್ತು ಅವರ ಪತ್ನಿ ಸುಲೋಚನಾ ಅವರನ್ನು ಸನ್ಮಾನಿಸಲಾಯಿತು. ಸಕ್ಕರೆಪಟ್ಟಣದ ಕೆ.ವಿ.ಚಂದ್ರಮೌಳಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌, ಸ್ವಾಗತ ಸಮಿತಿ ಕೋಶಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌, ಚಿಕ್ಕಮಗಳೂರು ತಾ.ಪಂ. ಅಧ್ಯಕ್ಷ ಜಯಣ್ಣ, ಕೊಪ್ಪ ಇನೇಶ್‌, ರವಿಪ್ರಕಾಶ್‌, ಮಗ್ಗಲಮಕ್ಕಿ ಗಣೇಶ್‌ ಉಪಸ್ಥಿತರಿದ್ದರು.

ಹಾಸ್ಯಕ್ಕಿದೆ ಅದ್ಭುತ ಶಕ್ತಿ : ಕಣ್ಣನ್
ಮೂಡಿಗೆರೆ: ಮನುಷ್ಯನ ಮನಸ್ಸನ್ನು ನಿರುಮ್ಮುಳಗೊಳಿಸುವ ಶಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿ ಹಾಸ್ಯಕ್ಕಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಅವರು ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ 15 ನೇ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಹಾಸ್ಯಪ್ರಜ್ಞೆ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸ್ಕೃತ ಸಾಹಿತ್ಯದಲ್ಲಿ ನಾಲ್ಕು ಹಾಸ್ಯ ಪ್ರಕಾರಗಳನ್ನು ಹೊಂದಿದೆ. ಇವುಗಳಲ್ಲಿ ಎರಡು ಆರೋಗ್ಯವನ್ನು ವೃದ್ಧಿಸಬಲ್ಲದು. ಇನ್ನೆರಡು ಪ್ರಕಾರ ಅನಾರೋಗ್ಯದೆಡೆಗೂ ಕೊಂಡೊಯ್ಯಬಲ್ಲದು. ಹಳ್ಳಿಯ ಜೀವನ ಶೈಲಿಯೇ ನಗುವಿನ ಅಲೆ. ಮಲೆನಾಡು ಭಾಗದ ಕನ್ನಡ ಭಾಷೆ ಹಾಸ್ಯವನ್ನು ತುಂಬಿ ತುಳುಕಿಸಬಲ್ಲ ಶಕ್ತಿ ಹೊಂದಿದೆ. ಕನ್ನಡ ಮತ್ತು ಸಂಸ್ಕೃತ ಹಾಸ್ಯವ್ಯಾಪ್ತಿ ಒಂದೇ ನಾಣ್ಯದ ಎರಡು ಮುಖಗಳಂತಿದ್ದರೂ ಕನ್ನಡ ಸಾಹಿತ್ಯದಲ್ಲಿ ಬರುವ ಹಾಸ್ಯ ಪ್ರಕಾರಗಳಿಗೆ ಶಕ್ತಿದಾಯಕ ಚೈತನ್ಯ ಹೆಚ್ಚಾಗಿದೆ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲೆ ಇಳಕಲ್‌ನ ಸಾಹಿತಿ ಶಂಭು ಬಳಿಗಾರ್‌ ಜಾನಪದ ಸಾಹಿತ್ಯದಲ್ಲಿ ಹಾಸ್ಯ ಮತ್ತು ಚುಟುಕು ಕವಿ ಎಚ್.ದುಂಡಿರಾಜು ಅವರ ಹಾಸ್ಯ ಸಮ್ಮೇಳನದಲ್ಲಿ ಜನರನ್ನು ರಂಜಿಸಿತು.

ಗೋಷ್ಠಿಯಲ್ಲಿ ಸಂಸ್ಕೃತಿ ಚಿಂತಕ ಎ.ಎನ್‌.ಮಹೇಶ್‌, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಬಿ.ಪರಮೇಶ್ವರಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜೆ.ಎಸ್‌.ರಘು, ಕಸಾಪ ಬಾಳೂರು ಅಧ್ಯಕ್ಷ ಎಂ.ವಿ.ಚನ್ನಕೇಶವ, ಗೋಣಿಬೀಡು ಕಸಾಪ ಅಧ್ಯಕ್ಷ ಎಂ.ಸಿ.ಸಂದೀಪ್‌, ಕಳಸ ಕಸಾಪ ಅಧ್ಯಕ್ಷ ನರೇಂದ್ರ ಕಲ್ಲಾನೆ, ಶ್ರೀನಿವಾಸ್‌ ತೋಟದೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next