Advertisement

ಕಾಲೇಜು ಸಮೀಪ ಮದ್ಯದಂಗಡಿ: ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಗೆ ಆಕ್ಷೇಪ

03:20 AM Jul 05, 2017 | Team Udayavani |

ಸುಳ್ಯ: ಜಾಳ್ಸೂರು- ಸುಬ್ರಹ್ಮಣ್ಯ ಹೆದ್ದಾರಿಯ ಗುತ್ತಿಗಾರು ಪೇಟೆಯಲ್ಲಿದ್ದ 2 ಮದ್ಯದಂಗಡಿಗಳು ಮುಚ್ಚಿರುವುದಕ್ಕೆ ಪ್ರತಿಯಾಗಿ ಈಗ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಸಮೀಪವೇ ಮದ್ಯದಂಗಡಿ ತೆರೆಯಲು ಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಈಗಾಗಲೇ ಅನುಮತಿ ನೀಡದಂತೆ ಕಾಲೇಜು ವಿದ್ಯಾರ್ಥಿಗಳು ಲಿಖೀತವಾಗಿ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಗುತ್ತಿಗಾರು ಜೂನಿಯರು ಕಾಲೇಜು ಸಮೀಪವೇ ಕಳೆದೆರಡು ದಿನಗಳಿಂದ ಸದ್ದಿಲ್ಲದೇ ಕಟ್ಟಡವೊಂದು ಅತೀ ವೇಗದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದೀಗ ಅರ್ಧ ನಿರ್ಮಾಣಗೊಂಡ ಕಟ್ಟಡಕ್ಕೆ ಶೇಡ್‌ನ‌ಟ್‌ ಹಾಕಿ ಕಾಮಗಾರಿ ನಡೆಯುತ್ತಿದೆ. ಇದೇ ರೀತಿ ಗುತ್ತಿಗಾರು ಪ್ರಾಥಮಿಕ ಶಾಲಾ ಸಮೀಪವೂ ಮದ್ಯದಂಗಡಿ ಸ್ಥಾಪನೆಗೆ ಯತ್ನ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

Advertisement

ಕಾಲೇಜು ಪರಿಸರದಿಂದ ಕೇವಲ 100 ಮೀಟರ್‌ಗೂ ಹತ್ತಿರ ಹಾಗೂ ಪ್ರಾಥಮಿಕ ಶಾಲಾ ಮೈದಾನದಿಂದ ಕೇವಲ 15 ಮೀಟರ್‌ ಸಮೀಪವೇ ನಿರ್ಮಾಣವಾಗುತ್ತಿದೆ. ಗುತಿಗಾರು ಕಾಲೇಜಿಗೆ ಸಾಕಷ್ಟು ವಿಸ್ತಾರವಾದ ಜಾಗವಿದ್ದರೂ ಕಂಪೌಂಡ್‌ ಇಲ್ಲ. ಹೀಗಾಗಿ ಕುಡುಕರ ಉಪಟಳ ಶಾಲೆಯ ಮೇಲಾಗಲಿದೆ. ಅಲ್ಲದೇ ಶಿಕ್ಷಣ ಸಂಸ್ಥೆ ಪರಿಸರದಲ್ಲಿ ಮಾದಕವಸ್ತು ಮಾರಾಟ ಕೇಂದ್ರಗಳಿರಬಾರದು ಎಂಬ ಸರಕಾರದ ನಿಯಮವಿದೆ. ಆದರೆ ಇದೀಗ ಕಟ್ಟಡ  ಮದ್ಯದಂಗಡಿ ಕೇಂದ್ರಕ್ಕೆ ನಿರ್ಮಾಣವಾದರೆ ಶಿಕ್ಷಣಸಂಸ್ಥೆಯ ಪರಿಸರವೇ ಹಾಳಾಗಲಿದೆ. ಶಿಕ್ಷಣ ಸಂಸ್ಥೆಗಳಿಗೂ ಧಕ್ಕೆಯುಂಟಾಗಲಿದೆ ಎಂಬ ಆತಂಕ ಪೋಷಕರಲ್ಲಿದೆ. ಹೀಗಾಗಿ ಪೋಷಕರೂ ಕೂಡಾ ವಿದ್ಯಾರ್ಥಿಗಳ ಪರ ಧ್ವನಿಯಾಗಲು ಮುಂದಾಗಿದ್ದಾರೆ. ಮದ್ಯದಂಗಡಿ ತೆರೆಯಲು ಮುಂದಾದರೆ ವಿವಿಧ ಸಂಘಸಂಸ್ಥೆಗಳೂ ಕೂಡಾ ಹೋರಾಟಕ್ಕಿಳಿಯಲಿವೆ.

ತೀವ್ರ ಹೋರಾಟ 
ಶಿಕ್ಷಣ ಸಂಸ್ಥೆ ಸಮೀಪವೇ ಮದ್ಯದಂಗಡಿ ತೆರೆಯಲು ಪ್ರಯತ್ನಿಸಿರುವುದು ಕಾನೂನು ಬಾಹಿರ. ಇದರಿಂದ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಮದ್ಯದಂಗಡಿ ತೆರೆದರೆ ಸಂಘಸಂಸ್ಥೆಗಳ ನೆರವಿನೊಂದಿಗೆ ತೀವ್ರ ಹೋರಾಟ ನಡೆಸಲಾಗುವುದು.
– ಲೋಕೇಶ್‌ ಡಿ.ಆರ್‌. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next