Advertisement

ನೆರೆ, ಬರ ಇದ್ದರೂ ಮದ್ಯ ಮಾರಾಟ ಕಡಿಮೆ ಆಗಿಲ್ಲ

09:24 PM Oct 19, 2019 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬರ ಹಾಗೂ ನೆರೆ ಆವರಿಸಿದ್ದರೂ ಮದ್ಯ ಮಾರಾಟದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೊದಲಿನಂತೆ ಮದ್ಯ ಮಾರಾಟ ನಡೆಯುತ್ತಿದೆ. ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಎಂಎಸ್‌ಐಎಲ್‌ ಮದ್ಯದಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಲಾಗುವುದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಗ್ರಾಮದಲ್ಲಿ ಶನಿವಾರ ಉದ್ಯೋಗ ತರಬೇತಿ ಇಲಾಖೆ ವತಿಯಿಂದ 1.36 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಐಟಿಐ ಕಾಲೇಜು ಕಟ್ಟಡ ಉದ್ಘಾಟಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಪಕ್ಷಗಳ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.

ದಿನಕ್ಕೊಂದು ಹೇಳಿಕೆ, ವ್ಯಾಖ್ಯಾನ: ವಿಪಕ್ಷ ನಾಯಕರು ಅಂದ್ರೆ ಬರೀ ವಿರೋಧ ಮಾಡುವ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ವಿರೋಧ ಪಕ್ಷಗಳು ಇರುವುದೇ ವಿರೋಧ ಮಾಡುವುದಕ್ಕೆ ಅಲ್ಲವಾ? ಅವರು ಸುಮ್ಮನೆ ಇರಲು ಆಗುವುದಿಲ್ಲ. ಸರ್ಕಾರದ ವಿರುದ್ಧ ದಿನಕ್ಕೊಂದು ಹೇಳಿಕೆ, ವ್ಯಾಖ್ಯಾನ ಮಾಡುತ್ತಾರೆ. ಆದರೆ ನಾವು ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದರು.

ದೇವರ ಅನುಗ್ರಹ: ನೆರೆ ಸಂತ್ರಸ್ತರು ಹಾಗೂ ಎಲ್ಲರಿಗೂ ಸಾಕಷ್ಟು ಅನುದಾನ ಬಿಡುಗಡೆ ಆಗಿದೆ. ಕೆಲಸ ಕಾರ್ಯಗಳು ನಡೆಯುತ್ತಿವೆ. ಸಚಿವ ಸಂಪುಟದಲ್ಲಿ ತೆಗೆದುಕೊಂಡ ಎಲ್ಲಾ ತೀರ್ಮಾನಗಳು ಅನುಷ್ಠಾನಗೊಳ್ಳುತ್ತಿವೆ. ಎಲ್ಲಾ ಕಡೆ ಪಕ್ಷಪಾತ ಇಲ್ಲದೇ ಸಿಎಂ ಯಡಿಯೂರಪ್ಪ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದರು.

ಒಂಟಿಸಲಗ: ವಿಪಕ್ಷಗಳ ಹೇಳಿಕೆಯನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಸಿಎಂ ಆದ ಬಳಿಕ ದೇವರ ಅನುಗ್ರಹದಿಂದ ಉತ್ತಮ ಮಳೆ ಬೆಳೆ ಆಗುತ್ತಿದೆ. ಕೆರೆ, ಕುಂಟೆಗಳಲ್ಲಿ ನೀರು ತುಂಬಿದೆ. ಸಚಿವ ಸಂಪುಟ ರಚನೆ ಆಗದಿದ್ದರೂ ಒಂದೂವರೆ ತಿಂಗಳ ಕಾಲ ಒಂಟಿ ಸಲಗದ ರೀತಿಯಲ್ಲಿ ಕೆಲಸ ಮಾಡಿದರು. ಕೇಂದ್ರದಿಂದ 1200 ಕೋಟಿ ಪರಿಹಾರ ತಂದು ಕೆಲಸ ಕಾರ್ಯ ಮಾಡುತ್ತಿದ್ದಾರೆ ಎಂದರು.

Advertisement

ಕೆ.ಸಿ. ವ್ಯಾಲಿ ನೀರು ಶುದ್ಧ, ಕೋಲಾರ ಮಲೆನಾಡಾಗಿದೆ: ಕೆ.ಸಿ.ವ್ಯಾಲಿ ಯೋಜನೆ ಮೂಲಕ ಕೋಲಾರಕ್ಕೆ ಹರಿಸುತ್ತಿರುವ ನೀರು ಶುದ್ಧವಾಗಿದೆ. ಒಳ್ಳೆಯ ಕೆಲಸ ಮಾಡಿದಾಗ ವಿರೋಧ ಮಾಡುವುದು ಸರಿಯಲ್ಲ. ಯಾರೊ ಒಬ್ಬರು ವಿರೋಧ ಮಾಡಿದರೆ ದೇಶವೆಲ್ಲಾ ವಿರೋಧ ಮಾಡಿದಂತೆ ಅಲ್ಲ ಎಂದು ಕೆ.ಸಿ.ವ್ಯಾಲಿ ಯೋಜನೆ ವಿರೋಧಿಸುತ್ತಿರುವ ನೀರಾವರಿ ಹೋರಾಟಗಾರರ ಕ್ರಮಕ್ಕೆ ಸಚಿವ ನಾಗೇಶ್‌ ಗರಂ ಆದರು.

ಕೋಲಾರಕ್ಕೆ ಕೆ.ಸಿ. ವ್ಯಾಲಿ ನೀರು ಬಂದ ಮೇಲೆ ಮಲೆನಾಡು ಆಗಿದೆ. ನೀರಿಗೆ ಸಾಕಷ್ಟು ಬೇಡಿಕೆ ಇದೆ. ಎಲ್ಲಾ ಕೆರೆ, ಕುಂಟೆಗಳು ತುಂಬಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಮರುಪೂರ್ಣಗೊಂಡಿವೆ ಎಂದರು. ಕೆಸಿ ವ್ಯಾಲಿ ಯೋಜನೆಯ ನೀರನ್ನು ನಾವು ಶುದ್ಧೀಕರಿಸಿಯೇ ಕೊಡುತ್ತಿದ್ದೇವೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಕೇಳಿದ್ದೆ. ಆದರೆ ಕೋಲಾರ ಕೊಟ್ಟರು. ಎರಡು ಜಿಲ್ಲೆಗಳಿಗೆ ಉಸ್ತುವಾರಿ ಕೊಟ್ಟಿದ್ದರೂ ಇನ್ನಷ್ಟು ಚೆನ್ನಾಗಿ ಕೆಲಸ ಮಾಡಬಹುದಿತ್ತು. ಸ್ನೇಹಿತ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಿಕ್ಕಿದೆ. ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ.
-ಎಚ್‌.ನಾಗೇಶ್‌, ಅಬಕಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next