Advertisement

ಭಾಷಾವಾರು ಪ್ರಾಂತ ರಚನೆ ಗಗನಕುಸುಮ

04:31 AM Mar 01, 2019 | |

ಆಳಂದ(ಕಲಬುರಗಿ): 56 ದೇಶಗಳಾಗಿದ್ದ ಭಾರತ ಏಕೀಕರಣವಾಗಿ ಏಳು ದಶಕಗಳಾದವು. ಇಷ್ಟಾಗಿಯೂ ಸ್ವಾತಂತ್ರ್ಯಾ ಬಂದ ಪ್ರಾರಂಭದಲ್ಲೇ ದೇಶದ ಪ್ರಮುಖ ಭಾಷೆ ಮತ್ತು ಅವುಗಳ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಭಾಷಾವಾರು ಪ್ರಾಂತ ರಚನೆ ಮಾಡಲಾಗಿದೆ. ಆದರೆ ಇಂದಿಗೂ ಆ ಉದ್ದೇಶ ಈಡೇರಿಲ್ಲ. ಮಾತ್ರವಲ್ಲ ಸನ್ನಿವೇಶ ಅಂದಿಗಿಂತ ಹೆಚ್ಚು ಅಸಂಗತ ಮತ್ತು ಭಯಾನಕವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಗುರುವಾರ ನಡೆದ ನಾಲ್ಕನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಇದೀಗ ಆಯಾ ನಾಡುಗಳ ಭಾಷೆ ಉಳಿಯುವುದೇ ಕಷ್ಟವಾಗಿದೆ. ಆ ಎಲ್ಲ ಭಾಷೆಗಳೂ ಅವಸಾನದ ಹೊಸ್ತಿಲಲ್ಲಿ ಸರದಿಗಾಗಿ ಕಾಯುತ್ತಿರುವಂತೆ ತೋರುತ್ತಿವೆ. ನಾವಿದನ್ನು ಬಯಸಿರಲಿಲ್ಲ. ಆದರೆ ಈಗ ಆಗುತ್ತಿರುವ ಅನಾಹುತವನ್ನು ಮಾಡುತ್ತಿರುವವರೂ ನಾವೇ ಆಗಿದ್ದೇವೆ ಎಂದರು.

ನಮ್ಮ ದೇಶದ ಭಾಷೆಗಳ ಸ್ವರೂಪ, ಇತಿಹಾಸ ಮತ್ತು ಗುರಿಗಳು ಒಂದೇ ಆದರೂ ಒಂದರೊಡನೊಂದು ಬೆರೆಯುವುದೇ ಇಲ್ಲ. ನಾವು ನಮ್ಮ ನೆರೆಹೊರೆಯವರ ಜತೆ ಇಂಗ್ಲಿಷ್‌ ಮೂಲಕ ಮಾತಾಡಬೇಕು. ಅಂದರೆ ನನ್ನದೂ ಅಲ್ಲದ ನೆರೆಹೊರೆಯವರದೂ ಅಲ್ಲದ ಭಾಷೆ ಇಂಗ್ಲಿಷ್‌ ಮೂಲಕ ಮಾತಾಡಿ ಅವರನ್ನು ನಿಭಾಯಿಸಬೇಕಾಗಿದೆ. ಅಷ್ಟೇ ಅಲ್ಲ ಮಧ್ಯವರ್ತಿಯಾದ ಭಾಷೆ ನಮ್ಮ ಎರಡೂ ಭಾಷೆಗಳನ್ನು ನುಂಗಿ ನೀರು ಕುಡಿಯಲು ಕಾಯುತ್ತಿದೆ ಎಂದರು.

ನಮ್ಮ ಭಾಷೆಗಳು ಉತ್ತರದಲ್ಲಿ ಸಂಸ್ಕೃತ ಮತ್ತು ದಕ್ಷಿಣದಲ್ಲಿ ತಮಿಳು ಭಾಷೆಗಳ ಸಹವಾಸದಲ್ಲಿ ಬೆಳೆದು ಬಂದವು. ನಮ್ಮ ಅಂದಿನ ಕವಿಗಳಿಗೆ, ಪಂಡಿತರಿಗೆ ಪ್ರಭಾವಿ ಭಾಷೆಗಳ ಅಂಶಗಳಲ್ಲಿ ಅಗತ್ಯವಾದುದನ್ನು ಇಟ್ಟುಕೊಂಡು ಬೇಡವಾದುದನ್ನು ನಿರಾಕರಿಸುವ ವಿವೇಕ ಇತ್ತು. ಆದರೆ ಈಗ ಹಾಗಲ್ಲ. ಜಾಗತೀಕರಣದ ಭಯಾನಕ ಪ್ರಭಾವಗಳನ್ನು ಇಂಗ್ಲಿಷ್‌ನಂತಹ ಭಾಷೆ ಮೂಲಕವೇ ಹೇರುತ್ತಿರುವ ರಾಜಕಾರಣದ ಭಾಷಾ ನೀತಿಗಳಿಂದ ನಮ್ಮ ಭಾಷೆಗಳು ತತ್ತರಿಸುತ್ತಿವೆ. ಒಂದು ಭಾಷೆ ಸತ್ವ ಪರೀಕ್ಷೆಯಾಗುವುದು ಆದರ ಕಾವ್ಯಾಭಿವ್ಯಕ್ತಿ ಸಾಮರ್ಥ್ಯದ ಮೂಲಕ. ಕನ್ನಡ ಕಾವ್ಯ ಮತ್ತು ಅನುವಾದದಲ್ಲಿ ಸಿಗುವ ಭಾರತೀಯ ಭಾಷೆಗಳ ಸಾಹಿತ್ಯಗಳನ್ನು ಪರಿಶೀಲಿಸಿದಾಗ ನನಗನಿಸುತ್ತದೆ, ನಮ್ಮ ಕಾವ್ಯ ತನ್ನ ಸಹಜ ಸತ್ವ ಕಳೆದುಕೊಂಡಿದೆ. ನನಗಿದು ಬಹಳ ಮಹತ್ವದ ಸಂಗತಿ. ಏಕೆಂದರೆ ಈಗಿನ ಕಾವ್ಯಕ್ಕೆ ಸಂಸ್ಕೃತಿಯ ನೆನಪುಗಳಿಲ್ಲ. ಇಂಥ ಕಾವ್ಯಕ್ಕೆ ವರ್ತಮಾನ ಮುನ್ನಡೆಸುವ, ಭವಿಷ್ಯದತ್ತ ಒಯ್ಯುವ ಶಕ್ತಿಯಾಗಲಿ, ಕನಸಾಗಲಿ ಇಲ್ಲ. ಹೀಗೆ ನಮ್ಮ ಭಾಷೆಗಳ ನೆನಪು ಮತ್ತು ಕನಸುಗಳ ಮಧ್ಯೆ ಬಿರುಕು ಉಂಟಾದದ್ದು ವಸಾಹತುಶಾಹಿ ಕಾಲದಲ್ಲಿ ಎಂದರು.

ನಮ್ಮ ದೇಶದಲ್ಲಾದ ಅತಿ ಮಹತ್ವದ ಎರಡು ಕ್ರಾಂತಿಗಳ ಬಗ್ಗೆ ತಿಳಿದಿರುವುದು ಉಪಯುಕ್ತಕರ. ಮೊದಲ ಕ್ರಾಂತಿ ಭಕ್ತಿ ಚಳವಳಿ. ತಮಿಳುನಾಡಿನಲ್ಲಿ ಹುಟ್ಟಿ ಕೇರಳ ಕರ್ನಾಟಕದ ಮಾರ್ಗವಾಗಿ ದೇಶವ್ಯಾಪಿಯಾಯಿತು ಎಂದು ಚರಿತ್ರೆ ಹೇಳುತ್ತದೆ. ಅದರ ಮುಂದುವರಿದ ರೂಪವೇ ನಮ್ಮ ವಚನ ಸಾಹಿತ್ಯ. ಕನ್ನಡ ಸಂಸ್ಕೃತ ಭಾಷೆಗೆ ಸರಿಯಾಗಿ ವಚನಕಾರರವರೆಗೆ ಬೆಳೆದು ಬಂದು ಪ್ರೌಢಿಮೆ ಪಡೆದು ಮತ್ತೆ ವಚನಕಾರರ ಮೂಲಕ ಹೊಸ ದಿಕ್ಕು ಪಡೆಯಿತು. ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ, ಮಾತಿನ ಮೊದಲ ಬಲ್ಲವರನೆನಗೊಮ್ಮೆ ತೋರಾ ಗುಹೇಶ್ವರಾ ಇದಕ್ಕೆ
ಪ್ರತಿಯಾಗುವಂಥ ಹೇಳಿಕೆ ಸಂಸ್ಕೃತದಲ್ಲೇ ಇಲ್ಲ ಎಂದರೆ ಕನ್ನಡ ಭಾಷೆ ಅಭಿವ್ಯಕ್ತಿ ಮಟ್ಟ ಯಾವ ಹಂತಕ್ಕೆ ತಲುಪಿತ್ತು ಎಂಬುದು ತಿಳಿಯುತ್ತದೆ ಎಂದರು. ದೇಶದಲ್ಲಿ ಎರಡನೇ ಕ್ರಾಂತಿ ಬ್ರಿಟಿಷರಾಳ್ವಿಕೆಯ ಮೆಕಾಲೆ ಶಿಕ್ಷಣ ನೀತಿಯಿಂದ ಶುರುವಾಯಿತು. ಇದು ಈ ದೇಶದ ನರನಾಡಿಗಳನ್ನು ಹಿಡಿದು ಅಲ್ಲಾಡಿಸಿದ ಕ್ರಾಂತಿ. ದೇಶಕ್ಕೆ ಇತಿಹಾಸ ಪ್ರವೇಶವಾಗಿದ್ದು ಈ ಕ್ರಾಂತಿಯಿಂದ. ಬ್ರಿಟಿಷರು ಕೊಟ್ಟ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮನಸ್ಸುಗಳು ತರಬೇತಿ ಹೊಂದಿ, ನಮ್ಮ ಮನಸ್ಸುಗಳನ್ನು ಕೂಡ ಪ್ರಶ್ನಿಸುವುದನ್ನು ನಾವು ಮರೆಯುವಂತಾಯಿತು ಎಂದರು.

Advertisement

ಪೌರಾಣಿಕ ಅಂತರ್‌ ಸಂಪರ್ಕವನ್ನು ನನ್ನ ಭಾಷೆ ಕಳೆದುಕೊಂಡಿದೆ ಎಂದ ಬಳಿಕ ಅದರ ಹೊಳೆಯುವಿಕೆ ಮತ್ತು ಚೈತನ್ಯವಷ್ಟೇ ಕುಗ್ಗಲಿಲ್ಲ. ಜತೆಗೆ ಅದರ ಬೇರೆ ಬೇರೆ ಅಂಗಗಳ ಸಂಯೋಜನೆ ಮೇಲೂ ದುಷ್ಪರಿಣಾಮ ಉಂಟಾಗಿದೆ. ನನ್ನ ಸಂಸ್ಕೃತಿಯಲ್ಲಿ ಅತ್ಯಂತ ಪಲ್ಲಟಕ್ಕೊಳಗಾಗಿರುವುದು ನನ್ನ ಭಾಷೆ. ಸದ್ಯದ ಪರಿಸ್ಥಿತಿಯಲ್ಲಿ ನೆನಪು ಮತ್ತು ಭವಿಷ್ಯದ ನಡುವಿನ ರಣಾಂಗಣವಾಗಿದೆ ನನ್ನ ಭಾಷೆ ಎಂದರು.

ನಾವು ಇಂಗ್ಲಿಷ್‌ನ್ನು ಮೊದ ಮೊದಲು ಅನುಮಾನದಿಂದ ಕಲಿತರೂ ಮುಂದೆ ಅದೇ ನಮ್ಮ ಕಾನೂನು, ಆಡಳಿತ, ತಂತ್ರಜ್ಞಾನ, ವಿಜ್ಞಾನ ಕಲೆಗಳಿಗೆ ಪ್ರಮಾಣ ಭಾಷೆಯಾಗುವಷ್ಟು ವ್ಯಾಪಕವಾಗಿ ಕಲಿತೆವು. ಈಗ ವಿದ್ಯೆ ಎಂದರೆ ಇಂಗ್ಲಿಷ್‌ ಎಂಬಷ್ಟರ ಮಟ್ಟಿಗೆ ಅವಲಂಬಿಸಿದ್ದೇವೆ. ಭಾರತದ ಶಾಸ್ತ್ರಗ್ರಂಥಗಳು ಇಂಗ್ಲಿಷ್‌ ಗೆ ಅನುವಾದಗೊಂಡಷ್ಟು ಇಂಗ್ಲಿಷ್‌ ಶಾಸ್ತ್ರಗ್ರಂಥಗಳು ನಮ್ಮ ಭಾಷೆಗಳಿಗೆ ಬರಲೇ ಇಲ್ಲ. ಏಕೆಂದರೆ ಇಂಗ್ಲಿಷ್‌ ಕಲಿತ ನಾವು ಮೂಲಗ್ರಂಥಗಳನ್ನೇ ಓದಬಲ್ಲಷ್ಟು ಇಂಗ್ಲಿಷ್‌ ಕಲಿತಿದ್ದೆವಾದ್ದರಿಂದ ನಮಗೆ ಅವುಗಳ ಅನುವಾದಗಳ ಅಗತ್ಯ ಬೀಳಲಿಲ್ಲ ಎಂದು ಹೇಳಿದರು.

ಬ್ರಿಟಿಷರಿಂದ ನಮಗಾದ ದೊಡ್ಡಲಾಭ ಎಂದರೆ ಅವರು ಶಿಕ್ಷಣವನ್ನು ಸಾರ್ವಜನಿಕಗೊಳಿಸಿದ್ದು. ನಮ್ಮ ದೇಶದಲ್ಲಾದ ಎರಡನೇ ಕ್ರಾಂತಿ ಅದು. ಕನ್ನಡದಲ್ಲಿ ವಿಜ್ಞಾನ ವಿಷಯಗಳ ಬೋಧನೆ ಸಾಧ್ಯವಿಲ್ಲ ಎನ್ನುತ್ತಾರೆ. ಇದು ಕೀಳರಿಮೆಯುಳ್ಳವರ ಕುಂಟು ನೆಪ. ಸಿ.ಎನ್‌. ಆರ್‌. ರಾವ್‌ ಅವರಂಥ ಶ್ರೇಷ್ಠ ವಿಜ್ಞಾನಿಗಳೇ ಸಾಧ್ಯ ಎಂದಾಗ ಇವರು ಸಾಧ್ಯವಿಲ್ಲ ಎನ್ನುವುದು ಹಾಸ್ಯಾಸ್ಪದ. ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ಬಂದಾಗ ಹೈದರಾಬಾದ್‌ ಪ್ರಾಂತ್ಯದ ಶಿಕ್ಷಕರು ವಿಜ್ಞಾನ ಬೋಧನೆ ದೇಶಿ ಭಾಷೆ ಉರ್ದುವಿನಲ್ಲಿ ಸಾಧ್ಯವಿಲ್ಲ ಎಂದೇ ವಾದಿ ಸಿದರು. ನಿಜಾಮರು ಉರ್ದುವಿನಲ್ಲಿ ಬೋಧಿ ಸುವುದಾದರೆ ಸರಿ. ಸಾಧ್ಯ ಇಲ್ಲ ಎಂದಾದರೆ ರಾಜೀನಾಮೆ ಕೊಡ್ರಿ ಎಂದರಂತೆ. ಆಗ ಆಗುತ್ತದೆ ಖಂಡಿತ ಸಾಧ್ಯ ಎಂದು ಎಲ್ಲರೂ ಒಪ್ಪಿಕೊಂಡು ಬೋ ಧಿಸಿದರು. ಮಾತ್ರವಲ್ಲ ಈಗಲೂ ವಿಜ್ಞಾನದ ಎಲ್ಲ ವಿಷಯಗಳನ್ನು ವಿಶ್ವವಿದ್ಯಾಲಯದಲ್ಲಿ ಉರ್ದುವಿನಲ್ಲೇ ಬೋಧಿಸುತ್ತಿದ್ದಾರೆ. ಇದನ್ನು ನಮ್ಮೆಲ್ಲ ದೇಶಿ ಭಾಷೆ ಶಿಕ್ಷಕರು ಗಮನಿಸಬೇಕು ಎಂದು ಕೋರಿದರು.

ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚು ಅಪಾಯಕಾರಿ ಸ್ಥಿತಿಯಲ್ಲಿ ಕನ್ನಡ ಭಾಷೆಯಿದೆ. ಪ್ರತಿವರ್ಷ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳು ಅದಕ್ಕಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚುತ್ತಿವೆ. 2013-18ರ ವರೆಗೆ ಅಂದರೆ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 13 ಲಕ್ಷ ಮಕ್ಕಳು ಕನ್ನಡ ಶಾಲೆಯಲ್ಲಿ ಕಡಿಮೆಯಾಗಿ ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ 15 ಲಕ್ಷ ಮಕ್ಕಳು ಹೆಚ್ಚಾಗಿದ್ದಾರೆ. ಪ್ರತಿ ವರ್ಷ ಸರಕಾರವೇ ಶುಲ್ಕ ಕೊಟ್ಟು ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆಯಂತೆ) ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದೆ. ಪರಭಾಷೆ ಮೂಲದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿ ಬೆಂಡು ಮಾಡಿದೆ. ಅವರ ನರಗಳನ್ನು ದುರ್ಬಲಗೊಳಿಸಿದೆ. ಅವರನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿದೆ. ಪ್ರತಿಭಾನ್ವಿತ ಸೃಷ್ಟಿಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ ಎಂದರು.

ವಿಜಯನಗರದ ಕಾಲದಲ್ಲಿ ಮಹಮೂದ್‌ ಗವಾನರು ಸ್ಥಾಪಿಸಿ ಬೆಳೆಸಿದ ಮದರಸಾ ಪ್ರಪಂಚದಲ್ಲೇ ಶ್ರೇಷ್ಠವಾದ ಶೈಕ್ಷಣಿಕ ಸಂಸ್ಥೆಯಾಗಿತ್ತು ಎಂದು ಅನೇಕ ವಿದೇಶಿ ಪ್ರವಾಸಿಗರೇ ಹೇಳಿದ್ದಾರೆ. ನಾಡು ನುಡಿ ಜನಗಳ ಅಸ್ಮಿತೆ ಗುರುತಿಸಿ ಕವಿಗಳಿಗೆ ರಾಜಮಾರ್ಗ ತೋರಿಸಿದ ಸ್ಥಳದಲ್ಲಿ ಈಗಿನ ನಿಮ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ ಎಂಬುದೇ ರೋಮಾಂಚನಕಾರಿ ಸಂಗತಿಯಾಗಿದೆ. ಅಂದರೆ ನಮ್ಮ ನಾಡಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಚರಿತ್ರೆ ಆರಂಭವಾದ ಕರ್ಮಭೂಮಿ, ಧರ್ಮಭೂಮಿ ಇದು ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next