ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2017-18ನೇ ಸಾಲಿನ “ವಾರ್ಷಿಕ ಗೌರವ ಪ್ರಶಸ್ತಿ’ಗಳನ್ನ ಮತ್ತು 2016ನೇ ಸಾಲಿನ “ಪುಸ್ತಕ ಬಹುಮಾನ ‘ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದೆ.
ಪ್ರೊ.ಸಿ.ಎಸ್.ರಾಮಚಂದ್ರನ್ (ಬೆಂಗಳೂರು), ಡಾ.ಎಚ್.ಎಸ್.ಶ್ರೀಮತಿ (ಬೆಂಗಳೂರು), ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ (ಮೈಸೂರು), ಡಾ.ಧರಣೇಂದ್ರ ಕುರಕುರಿ (ಶಿರಸಿ) ಮತ್ತು ಕೆ.ಕೆ.ಗಂಗಾಧರನ್ (ಬೆಂಗಳೂರು) ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ.
ಹಾಗೇ, ಜಯಪ್ರಕಾಶನಾರಾಯಣ ಬಿ.ಎಸ್.ಅವರ “ಭಾರತ ಬೆಸುಗೆ’ ( ಇಂಗ್ಲಿಷ್ ನಿಂದ ಕನ್ನಡಕ್ಕೆ), ವಿಠಲರಾವ್ ಗಾಯಕ್ವಾಡ್ ಅವರ “ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ ‘ (ಬೇರೆ ಭಾಷೆಯಿಂದ ಕನ್ನಡಕ್ಕೆ), ರಾಜಣ್ಣ ತಗ್ಗಿ ಟಿ.ಡಿ ಅವರ “ದಾಹ’ (ಬೇರೆ ಭಾಷೆಯಿಂದ ಕನ್ನಡಕ್ಕೆ),
ಡಿ.ಎನ್.ಶ್ರೀನಾಥ್ ಅವರ “ಉಪಸಂಹಾರ’ (ಹಿಂದಿಯಿಂದ ಕನ್ನಡಕ್ಕೆ), ಉಷಾ ಎಂ ಅವರ “ಅರ್ಧಕಥಾನಕ” (ಹಿಂದಿಯಿಂದ ಕನ್ನಡಕ್ಕೆ) ಮತ್ತು ರಶ್ಮಿ ತೇರದಾಳ ಅವರ “ಮೋಹನ ಸ್ವಾಮಿ’ (ಕನ್ನಡದಿಂದ ಬೇರೆ ಭಾಷೆಗೆ) ಅನುವಾದ ಕೃತಿಗಳು 2016ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆಯಾಗಿವೆ.
ಅನುವಾದಗೊಂಡಿರುವ ಪುಸ್ತಕಗಳಿಗೆ ಮಾತ್ರ ಪ್ರಾಧಿಕಾರ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ ತಿಳಿಸಿದ್ದಾರೆ.