ಹುಬ್ಬಳ್ಳಿ: ಐವತ್ತು ವರ್ಷದ ಇತಿಹಾಸದಲ್ಲಿ ಕೇವಲ ಒಂಭತ್ತು ತಿಂಗಳು ವೀರೇಂದ್ರ ಪಾಟೀಲ ಅವರಿಗೆ ಅಧಿಕಾರ ನೀಡಿ, ನಂತರ ಮನೆಗೆ ಕಳುಹಿಸಿದ್ದು ಕಾಂಗ್ರೆಸ್. ಆ ಪಕ್ಷದ ನಾಯಕರ ಹಕೀಕತ್ತು ಏನೆಂದು ರಾಜ್ಯದ ಜನರಿಗೆ ಗೊತ್ತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ, ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ ವಿಚಾರದಲ್ಲಿ ಲಿಂಗಾಯತ ಫ್ಯಾಕ್ಟರ್ ಕೆಲಸ ಮಾಡುವುದಿಲ್ಲ. ಅಲ್ಲದೆ ಹು-ಧಾ ಕೇಂದ್ರ ಕ್ಷೇತ್ರದಲ್ಲಿ ಬಹಳ ಸ್ಟ್ರಾ ಟಜಿ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಜನರು ತೀರ್ಮಾನಿಸಿದ್ದಾರೆ. ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಆಯ್ಕೆ ಮಾಡುತ್ತಾರೆ. ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಆರಿಸಿ ಬರುತ್ತಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹೇಳಿದ್ದಾರೆ. ನನಗೆ ಬೇರೆ ಬೇರೆ ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಳ್ಳಲೂ ಸೂಚಿಸಿದ್ದಾರೆ ಎಂದರು.