Advertisement

ತುಂಬೆಯಲ್ಲಿದೆ ಸೀಮಿತ ಪ್ರಮಾಣದ ನೀರು; ಮಳೆ ಬಂದರಷ್ಟೇ ಸಮಸ್ಯೆ ಪರಿಹಾರ

10:59 PM Apr 23, 2019 | mahesh |

ಮಹಾನಗರ: ನಗರಕ್ಕೆ ಕುಡಿಯುವ ನೀರು ಪೂರೈಕೆಯ ಏಕೈಕ ಮೂಲವಾಗಿರುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಮೇಲ್ನೋಟಕ್ಕೆ ಸುಮಾರು ಒಂದು ತಿಂಗಳಿಗೆ ಬೇಕಾಗುವಷ್ಟು ಪ್ರಮಾಣದ ನೀರಿದೆ. ಆದರೆ ಈಗ ಒಳಹರಿವು ಸಂಪೂರ್ಣ ನಿಂತಿದೆ. ಬಂಟ್ವಾಳ ಜಕ್ರಿಬೆಟ್ಟುವಿನ ಮುಂದಕ್ಕೆ ಒಂದೆರಡು ಗುಂಡಿಗಳನ್ನು ಹೊರತುಪಡಿಸಿ ಎಂಆರ್‌ಆರ್‌ ಡ್ಯಾಂವರೆಗೆ ನೇತ್ರಾವತಿ ನದಿ ಪೂರ್ಣ ಬತ್ತಿದೆ.

Advertisement

ಬೇಸಗೆಯಲ್ಲಿ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ನೆರವಿಗೆ ಬರುವ ಶಂಭೂರಿನ ಎಎಂಆರ್‌ ಡ್ಯಾಂನಲ್ಲಿ ಅಲ್ಪ ಪ್ರಮಾಣದ ನೀರಿದೆ. ಆದುದರಿಂದ ತುಂಬೆ ಡ್ಯಾಂನಲ್ಲಿ ಸದ್ಯ ಇರುವ ನೀರನ್ನು ಮಳೆಗಾಲ ಪ್ರಾರಂಭವಾಗುವರೆಗೆ ಕಾಯ್ದುಕೊಂಡು ಪೂರೈಸಬೇಕಾಗಿದೆ.

ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ಶಾಸಕರ ನೇತೃತ್ವದ ಅಧ್ಯಯನ ತಂಡದೊಂದಿಗೆ “ಉದಯವಾಣಿ’ಯು ತುಂಬೆ, ಎಎಂಆರ್‌ ಡ್ಯಾಂ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭ ಕಂಡುಬಂದ ವಸ್ತುಸ್ಥಿತಿಯಿದು.

ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಎ. 22ರಂದು ಸಂಜೆ 5 ಗಂಟೆಯ ವೇಳೆಗೆ 5.23 ಮೀಟರ್‌ ನೀರಿತ್ತು. ಮಹಾನಗರ ಪಾಲಿಕೆ ಈ ಹಿಂದೆ ಮಾಡಿರುವ ಲೆಕ್ಕಾಚಾರ ಪ್ರಕಾರ 5.5 ಮೀಟರ್‌ ನೀರು ಸಂಗ್ರಹ ಇದ್ದರೆ 48 ದಿನಗಳವರೆಗೆ ಮತ್ತು 5 ಮೀಟರ್‌ ನೀರು ಸಂಗ್ರಹವಿದ್ದರೆ 40 ದಿನಗಳವರೆಗೆ ನೀರು ಪೂರೈಸಬಹುದಾಗಿದೆ. ಅಂದರೆ ಲೆಕ್ಕಾಚಾರದ ಪ್ರಕಾರ ಅಂದಾಜು ಮೇ 20ರ ವರೆಗೆ ದಿನಂಪ್ರತಿ ನೀರು ಸರಬರಾಜು ಮಾಡಬಹುದಾಗಿದೆ. ಮುಂಗಾರು ಸಾಮಾನ್ಯವಾಗಿ ಮೇ ಅಂತ್ಯಕ್ಕೆ ಅಥವಾ ಜೂನ್‌ ಮೊದಲ ವಾರಕ್ಕೆ ಪ್ರಾರಂಭವಾಗುತ್ತದೆ. ಆದರೆ ಈ ನಡುವೆ ಚಂಡಮಾರುತ ಬಂದರೆ 15 ದಿನಗಳವರೆಗೆ ಮುಂಗಾರು ವಿಳಂಬವಾಗುವ ಸಾಧ್ಯತೆಯೂ ಇದೆ.

ವಾಡಿಕೆಯಂತೆ ಮುಂಗಾರು ಪ್ರಾರಂಭ ವಾದರೂ ಸುಮಾರು 15ರಿಂದ 20 ದಿನಗಳ ಅವಧಿಗೆ ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಅವಶ್ಯ. ಈ ನಡುವೆ ಮಳೆ ಬಂದು ನದಿಯಲ್ಲಿ ನೀರಿನ ಒಳಹರಿವು ಪ್ರಾರಂಭವಾದರೆ ಆಗ ನೀರಿನ ಸಮಸ್ಯೆ ಪರಿಹಾರಗೊಳ್ಳುತ್ತದೆ ಎಂಬುದು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಅಭಿಪ್ರಾಯ.

Advertisement

ಕಳೆದ ವರ್ಷ ಮೇ 18ರಂದು ಡ್ಯಾಂ ತುಂಬಿತ್ತು
ಸಾಮಾನ್ಯವಾಗಿ ಎಪ್ರಿಲ್‌ ತಿಂಗಳ ಆರಂಭದಲ್ಲಿ ದ.ಕನ್ನಡ ಜಿಲ್ಲೆ ಹಾಗೂ ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಬಿರುಸಿನ ಬೇಸಗೆ ಮಳೆ ಬರುತ್ತದೆ. ಇದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚುತ್ತದೆ. ಈ ಬಾರಿಯೂ ಮಳೆ ಬಂದಿದೆಯಾದರೂ ಅದರಲ್ಲಿ ಬಿರುಸು ಇರಲಿಲ್ಲ. ನದಿಗೆ ನೀರು ಹರಿದು ಬರಲಿಲ್ಲ. ಕಳೆದ ವರ್ಷ ಮೇ ಎರಡನೇ ವಾರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ತುಂಬೆ ವೆಂಟೆಡ್‌ಡ್ಯಾಂ ಮೇ 18ರಂದು ತುಂಬಿ ನೀರನ್ನು ಹೊರಬಿಡಲಾಗಿತ್ತು.

ಎಎಂಆರ್‌ ಡ್ಯಾಂ ಬರಿದು
ಶಂಭೂರಿನಲ್ಲಿರುವ ಎಎಂಆರ್‌ ಡ್ಯಾಂನಿಂದ ಈ ಬಾರಿ ಕಳೆದ ವರ್ಷಗಳಿಗೆ ಹೋಲಿಸಿದರೆ ಸಾಕಷ್ಟು ಮುಂಚಿತವಾಗಿಯೇ ಎರಡು ಬಾರಿ ನೀರು ತುಂಬೆ ಡ್ಯಾಂಗೆ ಬಿಡಲಾಗಿದೆ. ಎ.9ಕ್ಕೆ ಎಎಂಆರ್‌ ಡ್ಯಾಂ ಸಂಪೂರ್ಣ ಬರಿದಾಗಿತ್ತು. ಆ ಬಳಿಕ ನೇತ್ರಾವತಿ ಜಲಾನಯನ ಪ್ರದೇಶಗಳಲ್ಲಿ ಬಂದ ಮಳೆಯಿಂದಾಗಿ ನದಿಯಲ್ಲಿ ಒಳಹರಿವು ಪ್ರಾರಂಭವಾಗಿ ಸುಮಾರು 3 ಮೀಟರ್‌ ನೀರು ಇದೆ. ಆದರೆ ಹೂಳು ತುಂಬಿರುವುದರಿಂದ ಇದರ ಅರ್ಧದಷ್ಟು ನೀರನ್ನು ಮಾತ್ರ ನದಿಗೆ ಬಿಡಲು ಸಾಧ್ಯ.

ಇದರಿಂದ ತುಂಬೆ ವೆಂಟೆಡ್‌ಡ್ಯಾಂಗೆ ಆಗುವ ಲಾಭ ಕನಿಷ್ಠ. ಎಎಂಆರ್‌ನಿಂದ ತುಂಬೆ ಡ್ಯಾಂವರೆಗಿನ 8 ಕಿ.ಮೀ. ದೂರದ ಹೆಚ್ಚಿನ ಪ್ರದೇಶ ಒಣಗಿದೆ. ಈಗ ನೀರು ಬಿಟ್ಟರೂ ಅದರಿಂದ ಹೆಚ್ಚಿನ ಅನುಕೂಲವಾಗದು. ನದಿಯಲ್ಲಿ ನೀರಿದ್ದ ಸಂದರ್ಭ ಎಎಂಆರ್‌ನಿಂದ 1.5 ಮೀಟರ್‌ ನೀರು ಬಿಟ್ಟರೆ ತುಂಬೆ ಯಲ್ಲಿ 1.25 ಮೀಟರ್‌ನಷ್ಟು ನೀರು ಜಾಸ್ತಿಯಾಗುತ್ತದೆ ಎಂದು ಎಎಂಆರ್‌ ಜಲವಿದ್ಯುತ್‌ ಸ್ಥಾವರದ ಮುಖ್ಯಸ್ಥ ಗುರುರಾಜ್‌ ವಿವರಿಸುತ್ತಾರೆ.

ಸದ್ಯದಸ್ಥಿತಿಯಲ್ಲಿ ಎಪ್ರಿಲ್‌ ಕೊನೆ ಅಥವಾ ಮೇ ತಿಂಗಳ ಪ್ರಾರಂಭದಲ್ಲಿ ದ.ಕ. ಜಿಲ್ಲೆ ಮತ್ತು ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ನಗರದ ಕುಡಿಯುವ ನೀರು ಪೂರೈಕೆಯಲ್ಲಿ ಸುಧಾರಣೆ ಕಾಣಬಹುದು.

ಮಾಹಿತಿ ನೀಡಿ
ಮಹಾನಗರ ವ್ಯಾಪ್ತಿಯಲ್ಲಿ ನೀರಿನ ತೀವ್ರ ಸಮಸ್ಯೆ ಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ಸುದಿನ ವಾಟ್ಸಪ್‌ ನಂಬರ್‌ 9900567000 ಬರೆದು ಕಳುಹಿಸಿ. ಅದನ್ನು ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಜತೆಗೆ ನೀರು ಉಳಿತಾಯ ಮಾಡುವ ಬಗ್ಗೆ ಅಥವಾ ಮಾದರಿಯಾಗುವ ಪರ್ಯಾಯ ನೀರಿನ ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲಿ ಸ್ವಯಂ ಅಳವಡಿಸಿಕೊಂಡಿದ್ದರೆ ಅಂತಹ ಯಶೋಗಾಥೆಗಳನ್ನೂ ಕಳುಹಿಸಬಹುದು.

ತುಂಬೆ ಡ್ಯಾಂನಲ್ಲಿ ಮೇಲ್ನೋಟಕ್ಕೆ ಸುಮಾರು ಒಂದು ತಿಂಗಳಿಗೆ ಬೇಕಾಗುವಷ್ಟು ನೀರಿದೆ. ಆದರೆ ಈಗ ಒಳಹರಿವು ಸಂಪೂರ್ಣ ಬತ್ತಿರುವುದರಿಂದ ಮಳೆ ಬಂದು ನೀರಿನ ಹರಿವು ಹೆಚ್ಚುವ ವರೆಗೆ ಈಗ ಇರುವ ನೀರನ್ನು ಕಾಯ್ದುಕೊಳ್ಳಬೇಕಿರುವುದು ವಾಸ್ತವ ಸ್ಥಿತಿ.

 ನೀರು ಪೋಲು
ಬೆಳಗ್ಗೆ ನೀರು ಬಿಡುವ ಸಮಯದಲ್ಲಿ ನಂತೂರು ಬಸ್‌ ನಿಲ್ದಾಣ ಬಳಿ ಪೈಪ್‌ನಿಂದ ಪ್ರತೀ ದಿನ ನೀರು ಸೋರಿಕೆಯಾಗುತ್ತಿದೆ. ಪೈಪ್‌ನ ಸುತ್ತಮುತ್ತಲೂ ಹುಲ್ಲು ಆವರಿಸಿರುವುದರಿಂದ ನೀರು ಸೋರಿಕೆಯಾಗುತ್ತಿರುವುದು ಬೆಳಕಿಗೆ ಬಂದಿಲ್ಲ. ಸಂಬಂಧಪಟ್ಟ ಇಲಾಖೆ ಕೂಡಲೇ ಈ ಬಗ್ಗೆ ಗಮನಹರಿಸಿ, ನೀರು ಸೋರಿಕೆಗೆ ಪರಿಹಾರ ಪದಗಿಸಬೇಕು.
– ಚಾಲ್ಸ್‌ ಲೆವಿಸ್‌, ನಂತೂರು

ಆರು ದಿನಗಳಿಂದ ನೀರಿಲ್ಲ
ದೇರೆಬೈಲ್‌ ಕೊಂಚಾಡಿ ಬಳಿ ಇರುವ ನಾಗಕನ್ನಿಕ ದೇವಸ್ಥಾನ ಪಕ್ಕದ ಕೊಂಚಾಡಿ ಹೈಟ್ಸ್‌ ಅಪಾರ್ಟ್‌ ಮೆಂಟ್‌ ನಿವಾಸಿಗಳಿಗೆ ಪಾಲಿಕೆಯಿಂದ ಕಳೆದ ಆರು ದಿನಗಳಿಂದ ನೀರು ಸರಬರಾಜು ಮಾಡಲಾಗಿಲ್ಲ. ಚುನಾವಣೆಯ ದಿನ ನೀರು ಬಂದಿತ್ತು. ಬಳಿಕ ನೀರು ಸರಬರಾಜು ಆಗಿಲ್ಲ.
– ಸುಬ್ರಹ್ಮಣ್ಯ ಭಟ್‌, ದೇರೆಬೈಲ್‌ ಕೊಂಚಾಡಿ

ನೀರಿಲ್ಲದೆ ಬಹಳ ತೊಂದರೆ
ಬಿಜೈ ಬಳಿಯ ಭಾರತೀ ನಗರದ ಪ್ರಥಮ ಅಪಾರ್ಟ್‌ ಮೆಂಟ್‌ಗೆ ಪಾಲಿಕೆ ನೀರು ತುಂಬಾ ನಿಧಾನವಾಗಿ ಬರುತ್ತಿದೆ. ದಿನದಲ್ಲಿ 4-5 ಗಂಟೆ ರಭಸವಾಗಿ ನೀರು ಸರಬರಾಜು ಮಾಡಿದರೆ ಉತ್ತಮ.
– ಚಂದ್ರಶೇಖರ ರಾವ್‌, ಭಾರತೀ ನಗರ

ಕೆಲವು ದಿನಗಳಿಂದ ನೀರಿಲ್ಲ
ಫಳ್ನೀರ್‌ ರಸ್ತೆಯ ಹರ್ಷದ ಹಿಂಭಾಗದಲ್ಲಿರುವ ಮನೆಗಳಿಗೆ ಕೆಲವು ದಿನಗಳಿಂದ ನೀರಿಲ್ಲ. ಅಧಿಕಾರಿಗಳ ದೂರವಾಣಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ.
– ಅರ್ನೆಸ್ಟ್‌ ವೇಗಸ್‌

ನೀರು ಇಲ್ಲದೆ ಹೇಗೆ ಜೀವನ
ಚಿಲಿಂಬಿ ಶಾರದಾನಿಕೇತನದ ಆಸುಪಾಸಿನ ಮನೆಗಳಿಗೆ ಐದು ದಿನಗಳಿಂದ ನೀರು ಬಂದಿಲ್ಲ. ಟ್ಯಾಂಕರ್‌ ನೀರಿಗೆ ಹಣ ಪಾವತಿಸಿ ಸಾಕಾಗಿದೆ. ನಿತ್ಯದ ಚಟುವಟಿಕೆ ಕಷ್ಟವಾಗುತ್ತಿದೆ.
– ಎಸ್‌. ಕಾಮತ್‌ , ಚಿಲಿಂಬಿ

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next