Advertisement

ಅಪಾಯದ ಮಟ್ಟ ತಲುಪಿದ ಜೀವನ ಮೌಲ್ಯಗಳು

11:57 PM Aug 01, 2023 | Team Udayavani |

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಕಳೆದು ಹೋಗುತ್ತಿರುವ ಮಾನವೀಯ ಮೌಲ್ಯಗಳು ಎನ್ನುವ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಬಂಧದ ವಿಷಯ ನನ್ನನ್ನು ಅಂತರಂಗದ ಶೋಧಕ್ಕೆ ದೂಡಿದ್ದು, ಪ್ರಸಕ್ತ ವಿದ್ಯಮಾನಗಳ ಗಂಭೀರತೆಯನ್ನು ತೆರೆದು ತೋರುವಂತಿದೆ. ಇನ್ನೊಬ್ಬರನ್ನು ದುರು ಗುಟ್ಟಿ ನೋಡುವ, ಬೈಯ್ದಾಡುವ, ಕಾಲು ಕೆರೆದು ಜಗಳಕ್ಕಿಳಿಯುವ, ಹೊಡೆದಾಟ ಬಡಿದಾಟದ ಪ್ರವೃತ್ತಿಗಳೇ ಅಕ್ಷಮ್ಯ ಅಪ ರಾಧವಾಗಿತ್ತು; ಅಂಥವರನ್ನು ಸಮಾಜ ಅಪರಾಧಿಗಳಂತೆ ಕಾಣುತ್ತಿತ್ತು ಮತ್ತು ನಮ್ಮ ಆಂತರ್ಯದಲ್ಲೂ ಅಪರಾಧಿ ಪ್ರಜ್ಞೆ ಕಾಡು ತ್ತಿತ್ತು. ಆದರಿಂದು ಅವೆಲ್ಲವೂ ಸಾಮಾನ್ಯ ಎಂಬಂತಾಗಿದೆ.

Advertisement

ಅತ್ಯಾಚಾರ, ಅನಾಚಾರ, ಮೋಸ, ವಂಚನೆಯಂತಹ ಕೇಳಬಾರದ ಪದ ಗಳು ಎಲ್ಲೆಲ್ಲೂ ಕೇಳುತ್ತಿವೆ. ಗುರುಹಿರಿಯರು, ಮಕ್ಕಳು-ಮಹಿಳೆಯರೆಡೆಗಿನ ಭಾವ ನಾಚಿಕೆ ಹುಟ್ಟಿಸುವಂತಿದೆ. ಅಣು, ರೇಣು, ತೃಣ, ಕಾಷ್ಠ ಗಳಲ್ಲಿ ಚೈತನ್ಯವನ್ನು ಆರೋಪಿಸಿ ಆರಾಧಿಸುವ ನಾವು ಜೀವ ಕಾರುಣ್ಯವನ್ನು ಯಾಕಾಗಿ ಕಳೆದುಕೊಂಡೆವು? ಯಾಕಿಷ್ಟು ಕಾಠಿನ್ಯ ನಮ್ಮ ಮನೋಭೂಮಿಕೆಯಲ್ಲಿ ಸಾಂದ್ರಗೊಂಡಿದೆ? ಸಾವಿನ ಬಳಿಕ ಮೃತದೇಹವನ್ನು ಸಹ ಪರಮ ಮರ್ಯಾದೆಯಲ್ಲಿ ಕಂಡು ಶವಸಂಸ್ಕಾರದ ಮುಖೇನ ಗೌರವ ಭಾವದಲ್ಲಿ ನಡೆಸಿಕೊಳ್ಳುವ ಕಣ್ಣುಗಳೇಕೆ ಇಂದು ಮಂಜಾಗುತ್ತಿವೆ? ನಮ್ಮ ನಡುವೆಯೇ ಜೀವನ ಕಟ್ಟಿಕೊಂಡವರ ಮಧ್ಯೆ ಪ್ರತೀ ಹಂತದಲ್ಲೂ ಹಂತಕರ ಆತಂಕ ಸೃಷ್ಟಿಯಾ ದದ್ದು ಹೇಗೆ? ಮಾನವೀಯ ಮೌಲ್ಯಗಳು ಮೂಕವಾಗಿ ರೋದಿಸುತ್ತಿವೆ ಯಾಕಾಗಿ?

ಒಂದು ಕಾಲದಲ್ಲಿ ಉಚ್ಛಾ†ಯ ಸ್ಥಿತಿಯಲ್ಲಿದ್ದ ಮನೆ, ಮನೆತನ ಕಾಲಾನುಕ್ರಮದಲ್ಲಿ ಧರಾಶಾ ಯಿಯಾಗುವುದು ಇತಿಹಾಸ ಹೇಳುತ್ತಲೇ ಬಂದ ಪಾಠ. ಹಾಗೆಂದು ಅದೇ ಮನೆಯ ಭಾಗ ವಾಗಿದ್ದ ನಮ್ಮಲ್ಲಿ ಯಾಕೀ ರೀತಿಯ ಅನಪೇಕ್ಷಿತ ಪಲ್ಲಟಗಳು? ಆ ನಿನ್ನೆಗಳಲ್ಲಿ ಘನೀಭವಿಸಿದ ಆದರ್ಶಗಳನ್ನು, ಅನನ್ಯ ಸಾಧನೆಗಳನ್ನು, “ಪುರಾ ಣ ಮಿತ್ಯೇವ ನ ಸಾಧು ಸರ್ವಂ’ ಎಂಬಷ್ಟರ ಮಟ್ಟಿಗಿನ ಗಟ್ಟಿತನವನ್ನು ಹೊಸ ಪೀಳಿಗೆಗೆ ಉದಾ ಹರಿಸುವ ನಾವು ಈ ಮಧ್ಯದಲ್ಲಿ ಎಡ ವಿದ್ದೆಲ್ಲಿ?

ತಲೆ ತಲಾಂತರಗಳಿಂದ ಪರಿಷ್ಕರಿಸಿ ಸಂಸ್ಕರಿಸಿ ಆಚಾರ ಮುಖೇನ ಅನುಸರಿಸಿಕೊಂಡು ಬಂದ ಉದಾತ್ತ ಮೌಲ್ಯಗಳನ್ನು ಗ್ರಹಿಸಿ, ವೈಯಕ್ತಿಕ ಬದು ಕಿನ ನೆಲೆಯಲ್ಲಿ ಸಮಗ್ರವಾಗಿ ಅನುಭವಿಸಿ ತದ ನಂತರ ಮುಂದಿನ ಜನಾಂಗಕ್ಕೆ ಜತನದಿಂದ ಸರ್ವಸಂಸ್ಕಾರವನ್ನೂ ವರ್ಗಾಯಿಸಬೇಕಲ್ಲವೇ? ಇಂದೀಗ ಯೋಚಿಸಿದರೆ ಕೊಟ್ಟವನಲ್ಲಿ ತಪ್ಪಾಯಿತೇ, ಪಡೆಯುವಲ್ಲಿ ಎಡವಿದರೇ, ವರ್ಗಾ ಯಿಸುವಾಗ ಲೋಪವಾಯಿತೇ ಅಥ ವಾ ಸ್ವೀಕರಣೆಯಲ್ಲಿ ಔದಾಸೀನ್ಯ ಇಣುಕಿತ್ತೆ, ಆಚರಣೆಯಲ್ಲಿ ಬದ್ಧತೆ ಇರಲಿಲ್ಲವೇ…ಒಟ್ಟಾರೆ ಕಣ್ಣೆದುರು ಭೂತಾಕಾರವಾಗಿ ನಿಂತಿರುವುದು

ಭ್ರಷ್ಟಗೊಂಡ ಮಾನವೀಯ ಮೌಲ್ಯಗಳುಮಾತ್ರ.

Advertisement

“ವಿದ್ಯೆ’ ನಯ-ವಿನಯಗಳನ್ನು ನಡೆ ನುಡಿ, ಆಚಾರ ವಿಚಾರಗಳಲ್ಲಿ ಕಲಿಸಿಕೊಡುತ್ತದೆ. ಚೋದ್ಯವೆಂದರೆ ವಿನಯ ವಿಧೇಯತೆಗಳು ಇಂದು ಕಾಣುವುದೇ ದುಸ್ತರ. ಇನ್ನು ಮಾನ ವೀಯ ಮೌಲ್ಯಗಳ ಬಗ್ಗೆ ಕೇಳಿದರೆ ಜನರು ಏನೆಂದಾರು? ಅಷ್ಟಕ್ಕೂ ಈ ನಿರುತ್ತರ ಸ್ಥಿತಿಗೆ ಯಾರು ಹೊಣೆಗಾರರು? ಪರಿವಾರ, ಪರಿಸರ, ಸಮಾಜ, ಸಮಗ್ರ ವ್ಯವಸ್ಥೆ…ಹೀಗೆ ಒಂದು ಮಗು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯುವ ಕಾಲಘಟ್ಟದವರೆಗೂ ಪ್ರಭಾವಿಸುವ ಎಲ್ಲ ವ್ಯಕ್ತಿ, ವಸ್ತು, ವಿಷಯ, ವಿಚಾರಗಳು ಕಾರಣೀಭೂತ.
ಮಾನವೀಯ ಮೌಲ್ಯಗಳೆಂದರೇನು ಎಂಬ ಲ್ಲಿಂದ ತೊಡಗಿ ಅದರಿಂದೇನು ಲಾಭ? ಎನ್ನುವ ಮನಃಸ್ಥಿತಿ ಪ್ರತಿಯೊಬ್ಬರದ್ದೂ ಆಗಿರುವಾಗ ಕೇವಲ ವಿದ್ಯಾರ್ಥಿಗಳನ್ನು ಮಾತ್ರ ಪರಿಗಣಿಸಿದರೆ ಅಷ್ಟು ಸಮಂಜಸವೆನಿಸದು.

ಜಗತ್ತಿಗೆ ಹುಚ್ಚು ವೇಗ, ಆ ವೇಗಕ್ಕೆ ರಾಕ್ಷಸ ಬಲ. ಓಡುತ್ತಾ ಓಡುತ್ತಾ ಎಲ್ಲರನ್ನೂ ಹಿಂದಿಕ್ಕುವ, ತನ್ನ ಗಮ್ಯ ಸೇರುವ ಧಾವಂತ. ಆ ಮೇಲಾಟದಲ್ಲಿ ನೀತಿ ನಿಯಮಗಳು ಗಾಳಿಗೆ ತೂರಲ್ಪಡುತ್ತವೆ, ಕರುಣೆ ಅನುಕಂಪಗಳಿಗೆ ಜಾಗವಿಲ್ಲ, ಪ್ರೇಮ ಮಮಕಾರಗಳು ಮೌನವಾಗಿ ನರಳುತ್ತವೆ, ಸಹಾ ಯ ಸಹಕಾರಗಳೆಂಬ ಪದಗಳಿಗೆ ಅರ್ಥವಿಲ್ಲ, ತ್ಯಾಗ ಸಮರ್ಪಣೆಯ ಮಾತೇ ಇಲ್ಲ…ಹಾಗಾಗಿ ಮಾನವೀಯ ಮೌಲ್ಯಗಳು ಎನ್ನುವ ವಿಚಾರವೇ ಸಿನಿಕತನ ಎನಿಸಿಕೊಳ್ಳುತ್ತಿದೆ.

ಸ್ಪರ್ಧಾತ್ಮಕ ಕಾಲಸ್ಥಿತಿಯಲ್ಲಿ ವೈಯಕ್ತಿಕವಾಗಿ ಯಶಸ್ಸು ಹೊಂದಬೇಕಾದಲ್ಲಿ, ಬಯಸಿದ ವೃತ್ತಿ ಗಿಟ್ಟಿಸುವಲ್ಲಿ, ಕಟ್ಟಿಕೊಂಡ ಕನಸು ನನಸಾಗಿಸುವಲ್ಲಿ ಕುತೂಹಲ, ಉತ್ಸಾಹ, ಪ್ರೋತ್ಸಾಹ, ಸೃಜನಶೀಲತೆ, ಆತ್ಮವಿಶ್ವಾಸ, ಧೈರ್ಯ, ಆಶಾವಾದ, ಧನಾತ್ಮಕ ದೃಷ್ಟಿಕೋನ, ಗುಣಾತ್ಮಕ ಚಿಂತನೆ, ಸ್ವಯಂ ಸಾಮರ್ಥ್ಯ, ಶಿಸ್ತು, ಜವಾಬ್ದಾರಿ, ದಕ್ಷತೆ, ಬದ್ಧತೆ, ಚಾಣಾಕ್ಷತನ, ನಾಯಕತ್ವ ಗುಣ, ತಂಡಕಾರ್ಯ, ಮಹತ್ವಾಕಾಂಕ್ಷೆ, ಮೇಧಾವಿತನ ಮುಂತಾದ ಮೌಲ್ಯಗಳು ಅಗತ್ಯ ಮತ್ತು ಅನಿವಾರ್ಯ.

ಪ್ರಸ್ತುತ ಕಾಲಘಟ್ಟದಲ್ಲಿ ನಿಂತು ಮೌಲ್ಯ ಗಳು ಕಳೆದು ಹೋಗುತ್ತಿರುವ ಪರಿಸ್ಥಿತಿಗೆ ಮರು ಗುವುದನ್ನು ಬಿಟ್ಟು ಮೂಲ ಕಾರಣ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಅವಿಭಕ್ತ ಕುಟುಂಬ ಸಿಡಿದು ಹೋಗಿದೆ. ಹಿರಿಯರಿಲ್ಲದ ಮನೆ ಮೊದಲ ಪಾಠಶಾಲೆಯಾಗಿ ಉಳಿದಿಲ್ಲ, ಮೊದಲ ಗುರು ಅಮ್ಮ ಬೇರೆಬೇರೆ ಕಾರಣಗಳಿಂದ ವಿಪರೀತ ವ್ಯಸ್ತವಾಗಿಬಿಟ್ಟಿದ್ದಾಳೆ. ಪ್ರತಿಯೊಂದು ಶಿಸ್ತು, ಜವಾಬ್ದಾರಿ ಹೇಳಿಕೊಡಬೇಕಾದ ಅಪ್ಪನ ಭೇಟಿಯೇ ಅಪರೂಪ. ಹೇಳಲು ಕೇಳಲು ಗದರಿ ಬುದ್ಧಿ ಹೇಳಲು ಮನೆಯಲ್ಲಿ ಯಾರೂ ಇಲ್ಲ. ಜಾತಕರ್ಮದಿಂದ ತೊಡಗಿ ಅಂತ್ಯೇಷ್ಟಿ ಸಂಸ್ಕಾರದವರೆಗಿನ ಷೋಡಶ ಸಂಸ್ಕಾರಗಳು ಜಂತುವಾಗಿ ಪ್ರಪಂಚಮಖಕ್ಕೆ ಪರಿಚಯಿಸಲ್ಪಡುವ ಮಗುವನ್ನು ಮಾನ ಮೌಲ್ಯಗಳ ಒಟ್ಟಂದದಲ್ಲಿ ಚಂದಗಾಣಿಸು ತ್ತದೆ. ಆದರೆ ನಮ್ಮ ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಸುವಲ್ಲಿ, ಸಂಸ್ಕಾರವನ್ನು ಜೀವನ ಯಾನದಲ್ಲಿ ಅಳವಡಿಸುವಲ್ಲಿ, ಸನ್ನ ಡತೆ ಸಹೃದಯತೆಯನ್ನು ತುಂಬುವಲ್ಲಿ ವಿಫಲ ರಾಗಿದ್ದೇವೆ.

ಹುಟ್ಟಿನಿಂದ ಐದು ವರುಷಗಳವರೆಗೆ ಮಗುವನ್ನು ಮುದ್ದಿಸಿ ಲಾಲನೆ ಪಾಲನೆ ಮಾಡ ಬೇಕು. ಮುಂದಿನ ಹತ್ತು ವರ್ಷ ದಂಡಿಸಿ ಗದ ರಿಸಿ ಬುದ್ದಿಹೇಳಿ ಬೆಳೆಸಬೇಕು. ಹದಿನಾರು ವರುಷದ ಅನಂತರ ಮಕ್ಕಳನ್ನು ಗೆಳೆಯರಂತೆ ಕಾಣಬೇಕು ಎನ್ನುವುದು ಆಷ್ಯ ವಾಕ್ಯ. ಆದರೆ ನಾವೇನು ಮಾಡುತ್ತಿದ್ದೇವೆ? ಭಯ-ಭಕ್ತಿ ಇರದ, ಶಿಸ್ತು ಸಂಯಮವಿರದ, ಸಂಸ್ಕೃತಿ ಸಂಸ್ಕಾರದ ಅರಿವಿರದ ಮಕ್ಕಳನ್ನು ಸಮಾಜದಲ್ಲಿ ಕಾಣು ತ್ತಿದ್ದೇವೆ. ಮೌಲ್ಯಗಳ ಲವಲೇಶವೂ ಇಲ್ಲದ ಒಂದು ಜನಾಂಗವನ್ನು ಸೃಷ್ಟಿಸಿ ನಾವೇ ಮಕ್ಕಳು ಹಾಳಾಗಿವೆ ಎಂದು ಹಲುಬುತ್ತಿದ್ದೇವೆ.

ಅಂಕ ಗಳಿಕೆಯೊಂದೇ ಮಾನದಂಡವಾಗಿ ರಿಸಿಕೊಂಡ ಶಾಲಾ ಕಾಲೇಜುಗಳಿಗೆ ನೈತಿಕ – ಮೌಲಿಕ ಶಿಕ್ಷಣ ಹೇಳಿಕೊಡಲು ಸಮಯವೇ ಇಲ್ಲ. ಆಮೋದ, ಪ್ರಮೋದ, ವಿನೋದವಿಲ್ಲದ ಗಂಭೀರ ವಾತಾವರಣದಲ್ಲಿನ ಅಧ್ಯಯನ, ಆಟವಿಲ್ಲದ, ಗೆಳೆಯರ ಕೂಟವಿಲ್ಲದ ನಿತ್ಯದ ದಿನಚರಿ, ತಪ್ಪನ್ನು ತಪ್ಪು ಎಂದು ಹೇಳದ, ಸರಿ ಯಾವುದು ಎಂದು ತಿಳಿಸದ ವ್ಯವಸ್ಥೆ… ಹೀಗೆ ಉನ್ನತ ಮೌಲ್ಯಗಳು ನಮ್ಮ ಒಳಗೆ ಇಳಿಯುತ್ತಿಲ್ಲ. ಮತ್ತೆಲ್ಲಿಯ ಮೌಲಿಕ ಬೆಳವಣಿಗೆ? ಬದುಕಿನು ದ್ದಕ್ಕೂ ಕಂಡುಂಡ ಅಪಮೌಲ್ಯಗೊಂಡ ಅಸಹಜ ಗುಣಧರ್ಮ ಪ್ರತೀ ಹೆಜ್ಜೆಯಲ್ಲೂ ಢಾಳಾಗಿ ಕಣ್ಣಿಗೆ ರಾಚುತ್ತದೆ.

ಹಾಗೆಂದು ಭವಿಷ್ಯದ ಬಗ್ಗೆ ಆತಂಕ ಬಿಡೋಣ. ಸನ್ಮಾರ್ಗದಲ್ಲಿ ಮುನ್ನಡೆಯುವಾಗ ಕಳೆದುಹೋದ ಎಲ್ಲ ಮೌಲ್ಯಗಳು ಒಂದೊಂದಾಗಿ ನಮ್ಮೆಡೆಗೆ ಸೇರಿಕೊಳ್ಳುತ್ತವೆ. ಎಲ್ಲರೂ ಒಂದಾಗಿ ವರ್ತಮಾನದ ನಷ್ಟ, ಸಂಕಷ್ಟಗಳ ಬಗ್ಗೆ ಗುಣಾ ತ್ಮಕವಾಗಿ ಕಾರ್ಯ ತತ್ಪರರಾಗೋಣ. ಮಕ್ಕಳನ್ನು ತಿದ್ದಿ ಬುದ್ಧಿ ಹೇಳ್ಳೋಣ. ಹಿರಿಯರು ಸ್ವತಃ ಮೌಲ್ಯಗಳ ಹಿರಿಮೆಯನ್ನು ಎತ್ತಿ ಹಿಡಿದು ಮಾದರಿಯಾಗೊಣ. ಹೊಸ ಪೀಳಿಗೆಯ ಏಳಿಗೆಗಾಗಿ ಮೌಲ್ಯಗಳ ಪರಿಚಯ ಮಾಡೋಣ. ಇದನ್ನು ಪ್ರತೀ ಮನೆ ಮನದಲ್ಲಿ ಆರಂಭಿಸೋಣ. ಭವ್ಯ ಭಾರತದ ಮೌಲ್ಯಗಳ ಔನ್ನತ್ಯವನ್ನು ಜಗತ್ತಿಗೆ ಸಾರಬೇಕಾದ ತುರ್ತು ನಮ್ಮ ಮುಂದಿದೆ.

ಡಾ| ಬುಡ್ನಾರು ವಿನಯಚಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next