Advertisement

Threatening: ಮಾಜಿ ಸಚಿವ ಗೋಪಾಲಯ್ಯಗೆ ಜೀವ ಬೆದರಿಕೆ

12:01 PM Feb 15, 2024 | Team Udayavani |

ಬೆಂಗಳೂರು: ಮಾಜಿ ಸಚಿವ ಹಾಗೂ ಮಹಾಲಕ್ಷ್ಮೀ ಲೇಔಟ್‌ ಶಾಸಕ ಕೆ.ಗೋಪಾಲಯ್ಯಗೆ ಬಸವೇಶ್ವರ ನಗರ ವಾರ್ಡ್‌ನ ಮಾಜಿ ಕಾರ್ಪೋರೇಟರ್‌ ಎಸ್‌. ಪದ್ಮರಾಜು ತಡರಾತ್ರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದಲ್ಲದೆ, ಕುಟುಂಬ ಸದಸ್ಯರನ್ನು ಹತ್ಯೆ ಮಾಡುವು ದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಗೋಪಾ ಲಯ್ಯ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದು, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್‌ ಕೂಡ ದಾಖಲಿಸಿದ್ದಾರೆ.

Advertisement

ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ಪದ್ಮ ರಾಜು ಕೋರ್ಟ್‌ ಮೂಲಕ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ.

ಮಂಗಳವಾರ ತಡರಾತ್ರಿ 11 ಗಂಟೆಗೆ ಕರೆ ಮಾಡಿದ ಪದ್ಮರಾಜು, “ನನಗೆ ಮತ್ತು ನನ್ನ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿರ್ನಾಮ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ. ಆದರೂ, ನನಗೆ ಕರೆ ಮಾಡಿ, ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ ಎಂದು ಗೋಪಾಲಯ್ಯ ತಡರಾತ್ರಿಯೇ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.

“ಹಣ ನೀಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಕಡೆಯ ಹುಡುಗರನ್ನು ಕಳುಹಿಸಿ ನಿನ್ನ ಇಡೀ ಕುಟುಂಬವನ್ನು ಕೊಲೆ ಮಾಡಿಸುತ್ತೇನೆ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. “ಒಂದು ವೇಳೆ ನನಗೆ ಮತ್ತು ನನ್ನ ಕುಟುಂಬಕ್ಕೆ ತೊಂದರೆಯಾದರೆ ಪದ್ಮರಾಜು ಕಾರಣ’ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪದ್ಮರಾಜು ಅವರನ್ನು ಠಾಣೆಗೆ ಕರೆಸಿಕೊಂಡು ಹೇಳಿಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಬಂಧನ, ಕೋರ್ಟ್‌ನಲ್ಲಿ ಜಾಮೀನು: ಪ್ರಕರಣ ಸಂಬಂಧ ಬುಧವಾರ ಬೆಳಗ್ಗೆಯೇ ಆರೋಪಿ ಪದ್ಮರಾಜು ಅವರನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೂಡಲೇ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಅದೇ ವೇಳೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪದ್ಮಾರಾಜುಗೆ ವಿಚಾರಣೆ ನಡೆಸಿದ ಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪದ್ಮರಾಜು, ಟಿಕೆಟ್‌ ವಿಚಾರ ಅಥವಾ ಮತ್ತೂಂದು ವಿಚಾರಗಳೆಲ್ಲ ಸುಳ್ಳು. ಗುತ್ತಿಗೆ ಕೆಲಸ ಕೊಡಿಸುವ ಸಂಬಂಧ ಗೋಪಾಲಯ್ಯ 15 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ, ಯಾವುದೇ ಗುತ್ತಿಗೆ ಕೆಲಸ ಕೊಡಿಸಿಲ್ಲ. ಜತೆಗೆ ಹಣ ವಾಪಸ್‌ ನೀಡಿರಲಿಲ್ಲ. ಹೀಗಾಗಿ ತಡರಾತ್ರಿ ಕರೆ ಮಾಡಿ ಹಣ ಕೊಡುವಂತೆ ಕೇಳಿಕೊಂಡೆ. ಆಗ ಅವರು ಏರುಧ್ವನಿಯಲ್ಲಿ ಮಾತಾಡಿದರು. ಅದರಿಂದ ಬೇಸರಗೊಂಡು ಮಾತನಾಡಿದ್ದೇನೆ ಎಂದು ಹೇಳಿದರು.

ಆರ್‌.ಅಶೋಕ್‌, ಮಾಜಿ ಶಾಸಕನ ವಿರುದ್ಧ ಆರೋಪ: ಮತ್ತೂಂದೆಡೆ ಪದ್ಮರಾಜು, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತು ಮೈಸೂರು ಮಾಜಿ ಶಾಸಕ ನಾಗೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “2010ರಲ್ಲಿ ನಾನು ಬಿಜೆಪಿಯಲ್ಲಿ ಇದ್ದಾಗ, ಬಿಬಿಎಂಪಿ ಮೇಯರ್‌ ಮಾಡುವುದಾಗಿ ನಂಬಿಸಿ ಅಶೋಕ್‌ 1 ಕೋಟಿ ರೂ. ಪಡೆದು ಕೊಂಡಿದ್ದರು. ಯಾವ ಮೇಯರ್‌ ಮಾಡಲಿಲ್ಲ. ಈ ವ್ಯವಹಾರಕ್ಕೆ ಶಾಸಕರಾಗಿದ್ದ ಮೈಸೂರಿನ ನಾಗೇಂದ್ರ ಸಂಪರ್ಕ ಸೇತುವೆಯಾಗಿದ್ದರು. ಆ ಬಳಿಕ ನಾನು ಕಾಂಗ್ರೆಸ್‌ ಸೇರ್ಪಡೆಗೊಂಡಾಗ ಈ ಹಣ ವಸೂಲಿ ಮಾಡಿಕೊಂಡಿದ್ದೇನೆ. 1 ಕೋಟಿ ರೂ.ಗೆ ಎಷ್ಟು ಬಡ್ಡಿ ಕಟ್ಟಿದ್ದೇನೆಂದು ವಾಟ್ಸ್‌ಆ್ಯಪ್‌ ಮೂಲದ ಅಶೋಕ್‌ ಅವರಿಗೆ ಕಳುಹಿಸಿದ್ದೇನೆ’ ಎಂದು ಆರೋಪಿಸಿದ್ದಾರೆ.

ಪದ್ಮರಾಜ್‌ ಗಡಿಪಾರು ಮಾಡಲು  ಶಾಸಕ ಗೋಪಾಲಯ್ಯ ಮನವಿ:  

ವಿಧಾನಸಭೆ: ಮಾಜಿ ಕಾರ್ಪೊರೇಟರ್‌ ಪದ್ಮರಾಜ್‌ರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆಗುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಅಕ್ರಮ ಕ್ಲಬ್‌ ವ್ಯವಹಾರದಿಂದ ಹಣ ಗಳಿಸಿರುವ ಪದ್ಮರಾಜ್‌, ಈ ಹಿಂದೆ ವಿಪಕ್ಷ ನಾಯಕ ಆರ್‌.ಅಶೋಕ್‌, ಶಾಸಕ ಸುರೇಶಕುಮಾರ್‌ ಗೂ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಆತನನ್ನು ತಕ್ಷಣ ಗಡಿಪಾರು ಮಾಡಬೇಕು. ಶಾಸಕರ ಹಕ್ಕು ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು. ರಾತ್ರಿ 12 ಗಂಟೆಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಮನೆಯೊಳಗೆ ಸೇರಿಕೊಂಡಿರುವ ಆತನನ್ನು ಪೊಲೀಸರು ತಕ್ಷಣ ಬಂಧಿಸಿಲ್ಲ. ಕುಡಿದು ಮದ ಏರಿಸಿಕೊಂಡು ಮನಬಂದಂತೆ ವರ್ತಿಸುತ್ತಾನೆ. ಪದ್ಮರಾಜ್‌ ಜತೆಗೆ ಅಕ್ರಮ ಕ್ಲಬ್‌ಗಳಿಗೂ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸುರೇಶ್‌ಕುಮಾರ್‌, ಪದ್ಮರಾಜ್‌ ಜನಪ್ರತಿನಿಧಿಗಳಿಗೆ ಕಿರುಕುಳ ನೀಡುವುದು ಇದೇ ಮೊದಲಲ್ಲ. ನಾನು ಹಾಗೂ ಆರ್‌.ಅಶೋಕ್‌ ಈ ಅಟ್ಟಹಾಸದ ಫ‌ಲಾನುಭವಿಗಳು. ಗೋಪಾಲಯ್ಯನವರಿಗೇ ಈ ರೀತಿ ಬೆದರಿಕೆ ಬಂದಿದೆ ಎಂದರೆ ಅದರ ತೀವ್ರತೆ ಗಮನಿಸಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರಿಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಶಾಸಕರಿಗೆ ಕರೆ ಮಾಡಿ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದ ಬಿಬಿಎಂಪಿ ಮಾಜಿ ಸದಸ್ಯ ಪದ್ಮರಾಜ್‌ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next