Advertisement

ಹನುಮಂತನ ಛಲದವನು; ಅವಮಾನವ ಮೆಟ್ಚಿ ನಿಂತು ಗೆದ್ದ ವಿಹಾರಿ

10:51 AM Oct 09, 2019 | keerthan |

ಹನುಮ ವಿಹಾರಿ ಸದ್ಯ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯ. ಈತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ಇವನಾರು ಹನುಮ ಎಂದು ಮೂಗು ಮುರಿದವರೇ ಹೆಚ್ಚು. ಯಾಕೆಂದರೆ ಹನುಮ ಐಪಿಎಲ್ ನಲ್ಲಿ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದವನಲ್ಲ, ಕ್ರಿಕೆಟ್ ಜಗತ್ತು ಬೆರಗಾಗಿ ತನ್ನತ್ತ ನೋಡುವಂತಹ ಇನ್ನಿಂಗ್ಸ್ ಆಡಿದವನಲ್ಲ. ಆದರೆ ಒಂದು ಬೇಸರ, ಅವಮಾನ ಆತನೆದೆಯಲ್ಲಿ ಕುದಿಯುತ್ತಿತ್ತು. ಅದೇ ಬೇಸರ, ಅವಮಾನ ಆತನನ್ನು ಭಾರತ ತಂಡದ ಕದ ತಟ್ಟುವಂತೆ ಮಾಡಿತ್ತು.

Advertisement

ಆಂಧ್ರ ಪ್ರದೇಶದ ಕಾಕಿನಾಡದಲ್ಲಿ 1993 ಅಕ್ಟೋಬರ್ 13ರಂದು ಜನಿಸಿದವರು ಗಾಡೆ ಹನುಮ ವಿಹಾರಿ. ಬಲಗೈ ಬ್ಸಾಟ್ಸ್ ಮನ್ ಆಗಿರುವ ವಿಹಾರಿ ಬಲಗೈ ಆಫ್ ಸ್ಪಿನ್ನರ್ ಕೂಡ. 2012ರ ಅಂಡರ್‌ 19 ವಿಶ್ವಕಪ್ ಆಡಬಯಸಿದ್ದರೂ ಮೊದಲು ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಒಬ್ಬ ಆಟಗಾರ ಗಾಯಗೊಂಡು ತಂಡದಿಂದ ಹೊರಬಿದ್ದಾಗ ಆ ಜಾಗಕ್ಕೆ ಹನುಮ ವಿಹಾರಿ ಆಯ್ಕೆಯಾದರು.

ಅದೃಷ್ಟ ಬಲದಿಂದಲೇ ವಿಶ್ವಕಪ್‌ ಗೆ ಆಯ್ಕೆಯಾದರೂ ಆಂಧ್ರದ ಈ ಹುಡುಗನ ಆಟ ಮಾತ್ರ ನಿರಾಶಾದಾಯಕವಾಗಿತ್ತು. ಕೂಟದಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 71 ರನ್. ಈ ಪ್ರದರ್ಶನದಿಂದ ಈತ ಭಾರತ ತಂಡದ ಕದ ತಟ್ಚುವುದು ದೂರದ ಮಾತಾಗಿತ್ತು. ತಂಡ ವಿಶ್ವ ಕಪ್ ಎತ್ತಿ ಹಿಡಿದಿದ್ದರೂ ಹನುಮ ಮಾತ್ರ  ಕುಗ್ಗಿ ಹೋಗಿದ್ದ. ಆದರೆ ಅಂದೇ ಒಂದು ನಿರ್ಧಾರ ಮಾಡಿದ್ದ.

ವಿಶ್ವಕಪ್ ಗೆದ್ದ ಈ ತಂಡದಿಂದ ಹಿರಿಯರ ಟೆಸ್ಟ್ ತಂಡವನ್ನು ಪ್ರತಿನಿಧಿಸುವ ಮೊದಲ ಆಟಗಾರರು ತಾನೇ ಆಗಿರಬೇಕು ಎಂದು ಅಂದೇ ಪಣ ತೊಟ್ಟಿದ್ದ ಹನುಮ ವಿಹಾರಿ. ಕಠಿಣ ಪ್ರಯತ್ನ ಆರಂಭಿಸಿದ. ರಣಜಿಯಲ್ಲಿ ಆಡಲಾರಂಭಿಸಿದ.

2013ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಹನುಮನಿಗೆ ಮೊದಲ ಪಂದ್ಯವಾಡುವ ಅವಕಾಶ ಸಿಕ್ಕಿದ್ದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ.  ಇನ್ನಿಂಗ್ಸ್‌ ನ ಮೊದಲ ಓವರ್ ಹಾಕುವ ಅವಕಾಶ ಪಡೆದ ಬಲಗೈ ಆಫ್ ಸ್ಪಿನ್ನರ್ ವಿಹಾರಿ ಮೊದಲ ಓವರ್ ನಲ್ಲೇ ವಿಕೆಟ್ ಪಡೆದು ಮಿಂಚಿದ. ಅದೂ ಕ್ರಿಸ್ ಗೈಲ್ ರದ್ದು . ಅದೇ ಪಂದ್ಯದಲ್ಲಿ  ಅಜೇಯ 46 ರನ್ ಹೊಡೆದ ವಿಹಾರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯೂ ಒಲಿದು ಬಂದಿತ್ತು.  ಆದರೆ ಆತ ಮುಂದಿನ ಐಪಿಎಲ್ ಆಡಿದ್ದು ಐದು ವರ್ಷಗಳ ನಂತರ !

Advertisement

2014ರ ಐಪಿಎಲ್ ಆವೃತ್ತಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ವಿಹಾರಿಯನ್ನು ಕೈಬಿಟ್ಟಿತು. ಈ ಅವಮಾನದಿಂದ ಎದೆಗುಂದದೆ ಸವಾಲಾಗಿ ಸ್ವೀಕರಿಸಿದ ವಿಹಾರಿ, ಒಂದು ದಿನ ಈ ಫ್ರಾಂಚೈಸಿಗಳೇ ತನನ್ನು ದುಂಬಾಲು ಬಿದ್ದು ಖರೀದಿಸಬೇಕು. ಅಂತಹ ಆಟಗಾರರ ತಾನಾಗಬೇಕು ಒಂದು ಖಚಿತ ನಿರ್ಧಾರ ಮಾಡಿದ್ದ.

ಹೈದರಾಬಾದ್ ಪರ ರಣಜಿ ಕ್ರಿಕೆಟ್ ಆಡುತ್ತಿದ್ದ ಹನುಮ ತನ್ನ ಆಟದಿಂದ ತಂಡಕ್ಕೇನೋ ನೆರವಾಗುತ್ತಿದ್ದ. ಆದರೆ ಆ ಆಟ ಅವನನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಲು ನೆರವಾಗುತ್ತಿರಲಿಲ್ಲ. ಏತನ್ಮಧ್ಯೆ ಹೈದರಾಬಾದ್ ತಂಡ ತೊರೆದು ಆಂಧ್ರಪ್ರದೇಶ ರಣಜಿ ತಂಡ ಸೇರಿದ ಹನುಮ ಅಲ್ಲಿಯೂ ಮಿಂಚಲಾರಂಭಿಸಿದ.

ರನ್ ಗುಡ್ಡೆ ಹಾಕತೊಡಗಿದ, ಆಂಧ್ರ ತಂಡದ ನಾಯಕನೂ ಆದ. 2017-18ರ ರಣಜಿ ಋತುವಿನ ಆರು ಪಂದ್ಯಗಳಿಂದ 752 ರನ್ ಬಾರಿಸಿದ.  ಒಡಿಶಾ ವಿರುದ್ಧದ ಹನುಮ ವಿಹಾರಿ ಸಿಡಿಸಿದ ಅಜೇಯ ತ್ರಿಶತಕದ ಸುದ್ದಿ ರಾಷ್ಟ್ರೀಯ ಆಯ್ಕೆಗಾರರ ಕಿವಿಗೂ ಬಿದ್ದಿತ್ತು.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 60ರ ಸರಾಸರಿಯಲ್ಲಿ ರನ್ ಕಲೆ ಹಾಕುತ್ತಿದ್ದ ಹನುಮನಿಗೆ ಮೊದಲ ಬಾರಿ ರಾಷ್ಟ್ರೀಯ ತಂಡದ ಬುಲಾವ್ ಬಂದಿದ್ದು 2018ರ ಇಂಗ್ಲೆಂಡ್ ಸರಣಿಗೆ. ಮೊದಲ ಟೆಸ್ಟ್ ಇನ್ನಿಂಗ್ಸ್ ನಲ್ಲೇ ಅರ್ಧಶತಕ ಸಿಡಿಸಿದ ವಿಹಾರಿ ಆ ಪಂದ್ಯದಲ್ಲಿ ಅಲಿಸ್ಟರ್ ಕುಕ್ ವಿಕೆಟ್ ಕೂಡಾ ಪಡೆದರು. ಅದು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಲೆಜೆಂಡ್ ಅಲಿಸ್ಟರ್ ಕುಕ್ ಅವರ ಕೊನೆಯ ಟೆಸ್ಟ್ ಇನ್ನಿಂಗ್ಸ್ !

ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದ  ಎರಡು ಅರ್ಧಶತಕ ಮತ್ತು ಒಂದು ಶತಕ ಸಿಡಿಸಿದರು. ವೆಸ್ಟ್ ಇಂಡೀಸ್ ನಲ್ಲಿನ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಾನ ಭದ್ರಗೊಳಿಸಿದ್ದಾರೆ. ಐದು ವರ್ಷಗಳ ನಂತರ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಡೇರ್ ಡೆವಿಲ್ಸ್ ಹನುಮ ವಿಹಾರಿಯನ್ನು 2 ಕೋಟಿ ಕೊಟ್ಟು ಖರೀದಿಸಿದೆ.

ತಮ್ಮ ಪ್ರತಿಭೆಯಿಂದಲೇ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಹನುಮ ವಿಹಾರಿ ಭವಿಷ್ಯದಲ್ಲಿ ಟೀಂ ಇಂಡಿಯಾದ ತಾರಾ ಆಟಗಾರನಾಗುವ ಲಕ್ಷಣ ತೋರಿಸಿದ್ದಾರೆ. ತನ್ನ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಂಡರೆ ಇದರಲ್ಲಿ ಅನುಮಾನವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next