Advertisement

ಜ್ಞಾನ ದೇಗುಲಕ್ಕಿಲ್ಲ ಸ್ವಂತ ಕಟ್ಟಡ ಭಾಗ್ಯ

12:40 PM Oct 19, 2019 | Suhan S |

ಮಹಾಲಿಂಗಪುರ: ಪಟ್ಟಣದ ಏಕೈಕ ಜ್ಞಾನ ದೇಗುಲ ಗ್ರಂಥಾಲಯಕ್ಕೆ ಸ್ವಂತ ಸೂರು ಭಾಗ್ಯವಿಲ್ಲ. ಶಿಥಿಲಾವಸ್ಥೆ ಕಟ್ಟಡದಲ್ಲಿ ಪುಸ್ತಕ ಮತ್ತು ಪತ್ರಿಕೆ ವ್ಯವಸ್ಥಿತ ಜೋಪಾನಕ್ಕಾಗಿ ಶಾಖಾ ಗ್ರಂಥಪಾಲಕರು ಪರದಾಡುವಂತಾಗಿದೆ.

Advertisement

ಅರ್ಧ ಶತಮಾನದ ಗ್ರಂಥಾಲಯ!: ಪಟ್ಟಣದ ಜ್ಞಾನ ದೇಗುಲ ಗ್ರಂಥಾಲಯ ಆರಂಭವಾಗಿ 51 ವರ್ಷಗಳಾಗಿವೆ. ಸ್ವಂತ ಕಟ್ಟಡಕ್ಕೆ ಎಂಟು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಸುಮಾರು 1968ರಲ್ಲಿ ಪುರಸಭೆಯಿಂದ ಹಳೆಯ ಪುರಸಭೆಯ ಪಕ್ಕದ ಕಟ್ಟಡದಲ್ಲಿ ವಾಚನಾಲಯ ಆರಂಭಿಸಲಾಗಿತ್ತು. ಒಂದು ದಶಕಗಳ ಕಾಲ ಪುರಸಭೆಯೇ ಅದರ ನಿರ್ವಹಣೆ ಮಾಡಿತ್ತು. 1978ರಲ್ಲಿ ಅದೇ ವಾಚನಾಲಯವು ಗ್ರಂಥಾಲಯ ಇಲಾಖೆಗೆ ಒಳಪಟ್ಟು ಅದೇ ಸ್ಥಳದಲ್ಲಿ ಸುಸಜ್ಜಿತ ಗ್ರಂಥಾಲಯವಾಗಿತ್ತು.

ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ: 2009ರಲ್ಲಿ ಹಳೆಯ ಪುರಸಭೆ ಆವರಣದಲ್ಲಿನ ಎಲ್ಲಾ ಕಟ್ಟಡ ನೆಲಸಮಗೊಳಿಸಿ ಪುರಸಭೆಗೆ ನೂತನ ಕಟ್ಟಡ ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ 40 ವರ್ಷಗಳಿಂದ ಒಂದೇ ಕಟ್ಟಡದಲ್ಲಿದ್ದ ಗ್ರಂಥಾಲಯ ವನ್ನು ಹಳೆ ಸರಕಾರಿ ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ಅಪಾಯ ಹಂತದಲ್ಲಿ ಕಟ್ಟಡ?: 1958ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಉದ್ಘಾಟಿಸಿದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಟ್ಟಡದಲ್ಲೇ, ಕಳೆದ 10 ವರ್ಷಗಳಿಂದ ಗ್ರಂಥಾಲಯ ನಡೆಯುತ್ತಿದೆ. ಈ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೊಂಡಿದೆ. ಆದರೆ, ನಿರಂತರ ಮಳೆ ಪರಿಣಾಮ ಕಟ್ಟಡದ ಮೇಲ್ಛಾವಣಿಯಿಂದ ನೀರು ಸೋರುವುದರಿಂದ ಪುಸ್ತಕಗಳ ರಕ್ಷಣೆಗಾಗಿ ಪುಸ್ತಕ ಪುಸ್ತಕ ಸಂಗ್ರಹ ಕಪಾಟಿನ ಮೇಲೆ ಪ್ಲಾಸ್ಟಿಕ್‌ ತಟ್ಟಿನ ಹೊದಿಕೆ ಹಾಕಲಾಗಿದೆ. ಗ್ರಂಥಾಲಯಕ್ಕೆ ಸ್ವಂತ ಸೂರು ಕಲ್ಪಿಸಿ, ಗ್ರಂಥಾ ಲಯದಲ್ಲಿನ ಅಮೂಲ್ಯ ಗ್ರಂಥಗಳನ್ನು ರಕ್ಷಿಸುವ ಕಾರ್ಯಕ್ಕೆ ಓದುಗರು, ಸಾರ್ವಜನಿಕರು, ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿದೆ.

ಸಾವಿರಾರು ಪುಸಕ್ತಗಳ ಸಂಗ್ರಹ: ಗ್ರಂಥಾಲಯದಲ್ಲಿ 32 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. 12 ದಿನಪತ್ರಿಕೆ, 8 ವಾರ ಪತ್ರಿಕೆ, 7 ಮಾಸ ಪತ್ರಿಕೆ, 2 ತ್ತೈಮಾಸಿಕ ಪತ್ರಿಕೆಗಳು ಬರುತ್ತವೆ. ಗ್ರಂಥಾಲಯ ನಿರ್ವಹಣೆಗಾಗಿ ಓರ್ವ ಶಾಖಾ ಗ್ರಂಥಪಾಲಕರು, ಒಬ್ಬ ಸಹಾಯಕರು ಇದ್ದಾರೆ. ಸಮಯಕ್ಕೆ ತಕ್ಕಂತೆ ಗ್ರಂಥಾಲಯ ಓದುಗರಿಗೆ ಲಭ್ಯವಿದ್ದು ಜ್ಞಾನಾಮೃತ ನೀಡುತ್ತಿದೆ. ಆದರೆ, ಅದಕ್ಕೆ ಒಂದು ಸ್ವಂತ ಸೂರಿಲ್ಲ ಎಂಬುದೇ ವಿಪರ್ಯಾಸದ ಸಂಗತಿ.

Advertisement

ಜಾಗ ಇಕ್ಕಟ್ಟಿನಿಂದಾಗಿ ಕೆಲ ಗ್ರಂಥಗಳನ್ನು ದುರಸ್ತಿಯಿರುವ ಇರುವ ಒಂದೇ ಕೋಣೆಯಲ್ಲಿ ಇಡಲಾಗಿದೆ. ಹೆಚ್ಚಿನ ಗ್ರಂಥಗಳನ್ನು ಒಂದೆ ಕಡೆಗೆ ಇಡಲಾಗಿದೆ. ಕನಿಷ್ಠ 40×60, ಗರಿಷ್ಠ 60×100 ಅಳತೆಯ ಜಾಗ ದೊರೆತರೆ ಕಟ್ಟಡ ನಿರ್ಮಿಸಲು ಇಲಾಖೆ ಸಿದ್ಧªವಿದೆ. ಕಳೆದ ಎಂಟು ವರ್ಷಗಳಿಂದ ಪುರಸಭೆಯಿಂದ ಜಾಗ ಪಡೆಯಲು ಓದುಗರೊಂದಿಗೆ ಹೋರಾಟ ಮಾಡುತ್ತಿದ್ದೇವೆ. ಜಾಗ ನೀಡಲು ಒತ್ತಾಯಿಸಿ ಪುರಸಭೆಗೆ ಹತ್ತಾರು ಬಾರಿ ಮನವಿ ನೀಡಿದ್ದೇವೆ. ಶಾಸಕ ಸಿದ್ದು ಸವದಿ, ಮಾಜಿ ಶಾಸಕಿ ಉಮಾಶ್ರೀ ಅವರಿಗೂ ಕೂಡಾ ವಿನಂತಿಸಿದ್ದೇವೆ. ಇದುವರೆಗೂ ಯಾರಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. -ಜಿ.ಎಚ್‌. ಪಾಟೀಲ, ಶಾಖಾ ಗ್ರಂಥಪಾಲಕ

 

-ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next