Advertisement

ಲೆವೆಲ್‌ ಕ್ರಾಸಿಂಗ್‌ ತೆರವು; ನೈಋತ್ಯ ರೈಲ್ವೆಗೆ ಪ್ರಶಸ್ತಿ

11:06 PM Jul 22, 2019 | Lakshmi GovindaRaj |

ಹುಬ್ಬಳ್ಳಿ: ರೈಲ್ವೆ ಇಲಾಖೆಯ 64ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ ತೆರವಿನಲ್ಲಿ ಕೈಗೊಂಡ ಕಾರ್ಯ ಸಾಧನೆಗೆ ನೈಋತ್ಯ ರೈಲ್ವೆಗೆ ಪ್ರಶಸ್ತಿ ನೀಡಲಾಗಿದೆ. ಹರ್ಯಾಣದ ಅಂಬಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

2018-19ರಲ್ಲಿ ನೈಋತ್ಯ ರೈಲ್ವೆ ಕ್ರಿಯಾ ಯೋಜನೆ ರೂಪಿಸಿ, 187 ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ ತೆರವಿಗೆ ಯೋಜನೆ ಸಿದ್ಧಪಡಿಸಲಾಯಿತು. ಅದರನ್ವಯ ಅಂಡರ್‌ ಬ್ರಿಡ್ಜ್, ಸಬ್‌ ವೇ, ರೋಡ್‌ ಓವರ್‌ಬ್ರಿಡ್ಜ್ ನಿರ್ಮಾಣ ಮಾಡಲಾಯಿತು. 2018 ಅಕ್ಟೋಬರ್‌ನಲ್ಲಿ ಎಲ್ಲ ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ ತೆರವುಗೊಳಿಸಲಾಯಿತು. ಇದರಿಂದ ರೈಲುಗಳು ನಿಗದಿತ ಸಮಯಕ್ಕನುಗುಣವಾಗಿ ಸಂಚರಿಸಲು ಅನುಕೂಲವಾಯಿತು. ಒಟ್ಟು 38 ರೋಡ್‌ ಅಂಡರ್‌ ಬ್ರಿಡ್ಜ್, 8 ರೋಡ್‌ ಓವರ್‌ ಬ್ರಿಡ್ಜ್, 25 ವಿಭಜನಾ ರಸ್ತೆ ನಿರ್ಮಿಸಲಾಯಿತು.

37 ಕಡೆ ಗೇಟ್‌ ಮಿತ್ರಾ ವ್ಯವಸ್ಥೆ ಮಾಡಿದ್ದರೆ, 152 ಲೆವೆಲ್‌ ಕ್ರಾಸಿಂಗ್‌ನಲ್ಲಿ ಸಿಬ್ಬಂದಿ ನೇಮಕ ಮಾಡಲಾಯಿತು. ದೇಶದೆಲ್ಲೆಡೆ 2022ರೊಳಗೆ ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ ಮುಕ್ತಗೊಳಿಸುವ ಉದ್ದೇಶವನ್ನು ಭಾರತೀಯ ರೈಲ್ವೆ ಹೊಂದಿದ್ದು, ಈ ದಿಸೆಯಲ್ಲಿ ರೈಲ್ವೆ ವಲಯಗಳು ಕ್ರಿಯಾಯೋಜನೆ ರೂಪಿಸಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next