Advertisement

ಚರ್ಚೆ ನಡೆಯಲಿ,ಕದನ ಬೇಡ 

10:23 AM Nov 13, 2017 | |

ಬೆಳಗಾವಿಯಲ್ಲಿ ಸೋಮವಾರದಿಂದ ತೊಡಗಿ ಹತ್ತು ದಿನಗಳ ಪರ್ಯಂತ ನಡೆಯಲಿರುವ ಚಳಿಗಾಲ ಅಧಿವೇಶನ ಯಾವ ರೀತಿ ಇರಬಹುದು ಎನ್ನುವುದರ ಒಂದು ಅಂದಾಜು ಈಗಾಗಲೇ ಸಿಕ್ಕಿದೆ. ಎಲ್ಲ ಅಧಿವೇಶನಗಳಂತೆ ಈ ಅಧಿವೇಶನವೂ ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಕದನಕ್ಕೆ ವೇದಿಕೆಯಾಗುವ ಸಾಧ್ಯತೆಯೇ ಹೆಚ್ಚು. ಇತ್ತೀಚೆಗಿನ ವರ್ಷಗಳಲ್ಲಿ ಅಧಿವೇಶನಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವ ಪರಂಪರೆಯೇ ಕಣ್ಮರೆಯಾಗಿದೆ. ಸರಕಾರವನ್ನು ವಿಪಕ್ಷದವರು ದೂರುವುದು ಮತ್ತು ಸರಕಾರ ಅದಕ್ಕೆ ತಿರುಗೇಟು ನೀಡುವುದು ಇಷ್ಟಕ್ಕೆ ಸೀಮಿತಗೊಂಡಿರುವ ಅಧಿವೇಶನದಲ್ಲಿ ಕೆಲವೊಂದು ಮಸೂದೆಗಳು ಅಂಗೀಕಾರಗೊಂಡರೆ 

Advertisement

ಅದೇ ಸಾಧನೆ ಎಂಬ ಪರಿಸ್ಥಿತಿಯಿದೆ. ಇದು ಬರೀ ಕರ್ನಾಟಕ ಎಂದು ಮಾತ್ರವಲ್ಲ ಯಾವುದೇ ರಾಜ್ಯದ ಮತ್ತು ಸಂಸತ್ತಿನ ಇಂದಿನ ಅಧಿವೇಶನದ ಸ್ವರೂಪ. ವಿದ್ವತ್‌ ಭರಿತವಾದ ಚರ್ಚೆಗಳನ್ನು ಈಗಿನ ಜನಪ್ರತಿನಿಧಿಗಳಿಂದ ನಿರೀಕ್ಷಿಸುವುದು ಮೂರ್ಖತನವಾದೀತು. ಜನಪ್ರತಿನಿಧಿಗಳು ಸದನದ ಹೊರಗೆ ಮಾಡುವ ಆರೋಪಗಳನ್ನೇ ಸದನದ ಒಳಗೂ ಮಾಡುತ್ತಾರೆ. ಯಾರಿಗೂ ಜನರಿಗೆ ಉಪಯೋಗವಾಗುವಂತಹ ವಿಷಯಗಳ ಮೇಲೆ ಚರ್ಚೆ ನಡೆಸಬೇಕೆಂಬ ಕಾಳಜಿ ಇಲ್ಲ. ಒಟ್ಟಾರೆಯಾಗಿ ಪರಸ್ಪರರ ಕಾಲೆಳೆದು ಬೀಳಿಸಿ ಗೆದ್ದೆವು ಎಂದು ಬೀಗುವುದರಲ್ಲೇ ತೃಪ್ತಿ. ಹೀಗಾಗಿ ಅಧಿವೇಶನ ಎಂದರೆ ಮಾತಿನ ಚಕಮಕಿ, ಸಭಾಧ್ಯಧ್ಯಕ್ಷರ ಪೀಠದೆದುರು ಜಮಾಯಿಸಿ ಘೋಷಣೆಗಳನ್ನು ಕೂಗುವುದು ಮತ್ತು ಕಡೆಗೆ ಸಭಾತ್ಯಾಗ ಮಾಡುವುದು ಇಷ್ಟೇ ಆಗಿದೆ.

ಬೆಳಗಾವಿ ಅಧಿವೇಶನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಈ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆಸುತ್ತಿರುವ ಚಳಿಗಾಲದ 

ಕೊನೆಯ ಅಧಿವೇಶನ ಎನ್ನುವ ಕಾರಣಕ್ಕೆ ಮಾತ್ರವಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ. ಮೌಡ್ಯ ನಿಷೇಧ ಕಾಯಿದೆ, ಬಡ್ತಿ ಮೀಸಲಿಗೆ ಸಂಬಂಧಪಟ್ಟಿರುವ ಸುಗ್ರೀವಾಜ್ಞೆ ಬದಲಿಗೆ ವಿಧೇಯಕ, ಪ್ರಾಣಿ ಹಿಂಸೆ ತಡೆ ಮಸೂದೆ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮಂಡನೆಯಾಗ ಲಿವೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿಯಿರು ವುದರಿಂದ ಈ ಪೈಕಿ ಕೆಲವು ಮಸೂದೆಗಳನ್ನಾದರೂ ಅಂಗೀಕರಿಸಿಕೊಂಡು ಶಾಸನ ರೂಪದಲ್ಲಿ ಜಾರಿಗೆ ತರಲು ಸರಕಾರ ಪ್ರಯತ್ನಿಸಲಿದೆ. ಆದರೆ ಈ ಪೈಕಿ ಮೌಡ್ಯ ನಿಷೇಧ ಮತ್ತು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ಇಂತಹ ಮಹತ್ವದ ಮಸೂದೆಗಳ ಕುರಿತು ಗಹನವಾದ ಚರ್ಚೆಯಾಗುವುದು ಅಗತ್ಯ. ಇನ್ನುಳಿದಂತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ, ಬಿಜೆಪಿ ಸರಕಾರದ ಅವಧಿಯಲ್ಲಾಗಿರುವ ವಿದ್ಯುತ್‌ ಖರೀದಿ ಹಗರಣದ ಮೇಲಿನ ಸದನ ಸಮಿತಿ ವರದಿ, ತೀವ್ರ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಆಚರಣೆ, ಬೇಲೆಕೇರಿ ಕಬ್ಬಿಣ ರಫ್ತು ಹಗರಣದ ಎಸ್‌ಐಟಿ ತನಿಖೆ ಸೇರಿದಂತೆ ಹಲವು ವಿವಾದಾತ್ಮಕ ವಿಷಯಗಳಿವೆ.
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಿದ ಬಳಿಕ ಸಚಿವ ಜಾರ್ಜ್‌ ವಿರುದ್ಧ ಎಫ್ಐಆರ್‌ ದಾಖಲಾಗಿರುವುದು ಈ ಅಧಿವೇಶನದಲ್ಲಿ ಸರಕಾರ ಮತ್ತು ವಿಪಕ್ಷಗಳ ನಡುವೆ ದೊಡ್ಡ ಮಟ್ಟದಲ್ಲಿ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಜಾರ್ಜ್‌ ರಾಜೀನಾಮೆಗೆ ಒತ್ತಾಯಿಸುವುದೇ ತನ್ನ ಪ್ರಮುಖ ಅಜೆಂಡಾ ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದೆ. ಇದೇ ವೇಳೆ ಯಾವ ಕಾರಣಕ್ಕೂ ಜಾರ್ಜ್‌ ರಾಜೀನಾಮೆ ನೀಡುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಮೊದಲ ದಿನವೇ ಈ ವಿಷಯ ಸದನದಲ್ಲಿ ಕಿಡಿಯೆಬ್ಬಿಸಿದರೂ ಆಶ್ಚರ್ಯವಿಲ್ಲ. ಸದ್ಯಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇದು ಪ್ರತಿಷ್ಠೆಯ ವಿಷಯ. ಗದ್ದಲ ಇಡೀ ಅದಿವೇಶನವನ್ನೇ ಆಪೋಶನ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಮೂರೂ ಪಕ್ಷಗಳು ಅಧಿವೇಶನದಲ್ಲಿ ಪರಸ್ಪರರ ಮೇಲೆ ದಾಳಿ ಮಾಡಲು ಹತ್ತಾರು ಶಸ್ತ್ರಗಳನ್ನು ಸಜ್ಜಾಗಿಟ್ಟುಕೊಂಡಿವೆ. ಈ ಪೈಕಿ ಹೆಚ್ಚಿನವುಗಳು ಪರಸ್ಪರರ ಮೇಲಿರುವ ಆರೋಪಗಳು ಮತ್ತು ಹಗರಣಗಳು ಮಾತ್ರ. ರಾಜ್ಯದ ಸಮಸ್ಯೆ ಮತ್ತು ಅಭಿವೃದ್ಧಿಗೆ  ಸಂಬಂಧಿಸಿದ ವಿಚಾರಗಳಿಗೆ ಯಾರೂ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎನ್ನುವುದು ವಿಷಾದನೀಯ.

ಅಧಿವೇಶನಕ್ಕೆ ಹಾಜರಾಗಲು ಜನಪ್ರತಿನಿಧಿಗಳಿಗೆ ವಿಶೇಷವಾದ ಆಸಕ್ತಿ ಇಲ್ಲ ಎನ್ನುವುದು ಕಳೆದ ನಾಲ್ಕು  ವರ್ಷಗಳ ಅಂಕಿಅಂಶಗಳಿಂದ ತಿಳಿಯು ತ್ತದೆ. 2013ರಿಂದೀಚೆಗೆ ಬರೀ ಮೂವರು ಶಾಸಕರು ಮಾತ್ರ ಅಧಿವೇಶನದಲ್ಲಿ ಶೇ. 100 ಹಾಜರಾತಿ ಹೊಂದಿದ್ದಾರೆ. ಅಧಿವೇಶನಗಳಿಗೆ ಶಾಸಕರ ಹಾಜರಾತಿ ಯನ್ನು ಹೆಚ್ಚಿಸಲು ಉಭಯ ಸದನಗಳ ಸಭಾಪತಿಗಳು ಹಲವು ಕ್ರಮಗಳು ಕೈಗೊಂಡಿದ್ದರೂ ಫ‌ಲಿತಾಂಶ ಮಾತ್ರ ಆಶಾದಾಯಕವಾಗಿಲ್ಲ. ಬೆಳಗ್ಗೆ ಮತ್ತು ಸಂಜೆ ಹಾಜರಿ ಪುಸ್ತಕಕ್ಕೆ ಸಹಿ ಹಾಕುವುದನ್ನು ಕಡ್ಡಾಯಗೊಳಿಸಿದರೂ ಹಜರಾತಿ ಸುಧಾರಣೆಯಾಗಿಲ್ಲ. ಕಡ್ಡಾಯ ಹಾಜರಾತಿಗೆ ಕಾನೂನು ರಚಿಸಲು ಅವಕಾಶವಿಲ್ಲ. ಆದರೆ ಎಲ್ಲ ಪಕ್ಷಗಳು ತಮ್ಮ ಶಾಸಕರು ಅಧಿವೇಶನದಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಬಹುದು. ಸದನದಲ್ಲಿ ಕದನ ಬೇಡ ಚರ್ಚೆಯಾಗಲಿ ಎನ್ನುವುದು ಜನತೆಯ ಬಯಕೆ. ಜನಪ್ರತಿನಿಧಿಗಳಿಗೆ ಇದು ಅರ್ಥವಾದೀತೆ?

Advertisement
Advertisement

Udayavani is now on Telegram. Click here to join our channel and stay updated with the latest news.

Next