ಜಗತ್ತಿನಲ್ಲಿ ಹಲವು ವಿಧದ, ಬಣ್ಣದ, ರೂಪದ, ಗಾತ್ರದ ಪಕ್ಷಿಗಳಿದ್ದು, ಅವೆಲ್ಲದರ ಪೈಕಿ ಅತ್ಯಂತ ಹೆಚ್ಚು ಅನಾದರಕ್ಕೆ ಒಳಗಾದ ಪಕ್ಷಿಯೆಂದರೆ ಕಾಗೆ. ಬಣ್ಣದಲ್ಲಿ ಕಪ್ಪು, ಕೂಗಿನಲ್ಲಿ ಕರ್ಕಶ ಇವೆಲ್ಲ ಕಾರಣಗಳಿಂದ ಮನುಷ್ಯನಿಗೆ ಕಾಗೆಗಳೆಂದರೆ ಅಷ್ಟಕ್ಕಷ್ಟೇ.
ಆದರೆ ಜಗತ್ತಿನ ಜೀವವಿಜ್ಞಾನಿಗಳು ಮತ್ತು ಮಹಾನ್ ಆಡಳಿತಗಾರನಾದ ಚಾಣಕ್ಯ ಹೇಳುವಂತೆ ಮನುಷ್ಯನು ಕಾಗೆಯಿಂದ ಕಲಿಯಬೇಕಾಗಿರುವ ಬಹಳಷ್ಟು ವಿಚಾರಗಳಿವೆ. ಅದರಲ್ಲೂ ಮುಖ್ಯವಾಗಿ ಕಾಗೆಯಲ್ಲಿ ಇರುವ ಯಶಸ್ಸಿನ ಗುಣಗಳನ್ನು ಎಲ್ಲರೂ ಕಲಿಯಲೇಬೇಕು.
ಕಾಗೆಯಿಂದ ಕಲಿಯಬೇಕಾದ ಮೊದಲನೆಯ ಗುಣವೆಂದರೆ “ಅನ್ನದ ಅಗುಳೊಂದ ಕಂಡರೆ ಕೂಗಿ ಕರೆಯದೇ ಕಾಗೆಯೊಂದು ತನ್ನ ಬಳಗವನ್ನು’ ಎಂಬ ಮಾತೇ ಇರುವಂತೆ ಕಾಗೆಯು ಒಂದು ತುತ್ತು ಆಹಾರ ಸಿಕ್ಕರೂ ಅದನ್ನು ತನ್ನ ಬಳಗದೊಂದಿಗೆ ಹಂಚಿಕೊಂಡು ತಿನ್ನುತ್ತದೆ. ಒಂದು ಅಗುಳು ಅನ್ನದ ಮೌಲ್ಯ ಹಾಗೂ ಹಸಿವಿನ ಬೆಲೆ ಕಾಗೆಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ತನಗೆ ಏನಾದರೂ ತಿನ್ನಲು ಸಿಕ್ಕರೆ ತತ್ಕ್ಷಣ ಅದು ತನ್ನ ಬಳಗವನ್ನೆಲ್ಲ ಕೂಗಿ ಕರೆಯುತ್ತದೆ. ಆದರೆ ಮನುಷ್ಯನು ಸ್ವಾರ್ಥ ಜೀವಿ ಯಾಗಿದ್ದು, ತನಗೇನಾದರೂ ಸಿಕ್ಕರೆ ಅದು ತನಗೊಬ್ಬನಿಗೇ ಸೇರಬೇಕು ಎನ್ನುವ ಲಾಲಸೆಯ ಗುಣಕ್ಕೆ ಬದಲಾಗಿ ಎಲ್ಲರಿಗೂ ಹಂಚಿ ತಿನ್ನುವಂತಹ ಗುಣ ವನ್ನು ಹೊಂದಬೇಕಿದೆ. ಇದರಿಂದ ಮನುಷ್ಯನಲ್ಲಿನ ಸ್ವಾರ್ಥ ಮನೋಭಾವ ತನ್ನಿಂತಾನಾಗಿಯೇ ಮಾಯವಾಗಿ ಆತ ವಿಶಾಲಹೃದಯಿಯಾಗುತ್ತಾನೆ.
ಕಾಗೆಯ ಇನ್ನೊಂದು ವಿಶೇಷ ಗುಣ ವೆಂದರೆ ತನ್ನ ಶತ್ರುಗಳು ಯಾರಾದರೂ ತನ್ನ ಮೇಲೆ, ತನ್ನ ಗೂಡಿನ ಮೇಲೆ ಅಥವಾ ತನ್ನ ಕುಟುಂಬದ ಮೇಲೆ ದಾಳಿಯನ್ನು ಮಾಡಿದರೆ ಅಥವಾ ದಾಳಿ ಮಾಡುವ ಮುನ್ಸೂಚನೆ ದೊರೆತರೆ ಶತ್ರುಗಳ ಮೇಲೆ ಏಕಾಂಗಿಯಾಗಿಯೂ ಪ್ರತಿಯಾಗಿ ದಾಳಿ ನಡೆಸಿ ಶತ್ರುವನ್ನು ಬಿಟ್ಟೂಬಿಡದೆ ಕಾಡಿ ಹೈರಾಣಾಗಿಸುತ್ತದೆ. ತನ್ನ ಹಾಗೂ ತನ್ನ ಕುಟುಂಬದ ರಕ್ಷಣೆಗೆ ತನಗೆ ಅಪಾಯವಿದ್ದರೂ ಕಾಗೆಯು ಭೀತಿಗೊಳ್ಳದೇ ಧೈರ್ಯದಿಂದ ಎದುರಾಳಿಯನ್ನು ಹಿಮ್ಮೆಟ್ಟಿ ಸುತ್ತದೆ.
ಮನುಷ್ಯನೂ ಬದುಕಲ್ಲಿ ಎಂಥ ಪರಿಸ್ಥಿತಿ ಬಂದರೂ ಧೈರ್ಯದಿಂದ ಅದನ್ನು ಎದುರಿಸುವಂತಹ ಮನೋಧೈರ್ಯವನ್ನು ಹೊಂದಬೇಕು. “ಧೈರ್ಯಂ ಸರ್ವತ್ರ ಸಾಧನಂ’ ಎಂಬ ಮಾತಿನಂತೆ ಜೀವನದಲ್ಲಿ ಯಾವುದೇ ಎಡರುತೊಡರುಗಳು ಎದುರಾದರೂ ಧೈರ್ಯವೊಂದಿದ್ದರೆ ಅವನ್ನು ಸಮರ್ಥ ವಾಗಿ ಎದುರಿಸಬಹುದಾಗಿದೆ.
Related Articles
ಅದೇ ರೀತಿ ಕಾಗೆಯಲ್ಲಿರುವ ಮತ್ತೂಂದು ಗುಣವೆಂದರೆ ತನ್ನ ಬಳಿ ಇರುವ ಯಾವುದೇ ವಸ್ತುಗಳನ್ನು ಅದು ಬಹಳ ಜಾಗರೂಕತೆಯಿಂದ ಕಾಪಾಡಿ ಕೊಳ್ಳುತ್ತದೆ. ಕಾಗೆಯು ಯಾವುದೇ ವಸ್ತುವೂ ವ್ಯರ್ಥವಾಗಿ ಹಾಳಾಗ ಬಾರದು ಎಂದು ಅದನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳುತ್ತದೆ. ಅದೇ ರೀತಿ ಮನುಷ್ಯನೂ ಯಾವುದೇ ವಸ್ತುವನ್ನು ನಿರುಪಯುಕ್ತವೆಂದು ಕಸದ ಬುಟ್ಟಿಗೆ ಎಸೆಯುವ ಮೊದಲು ಹಲವು ಬಾರಿ ಯೋಚಿಸಬೇಕು ಮತ್ತು ಅದರ ಮರುಬಳಕೆಯ ಕುರಿತು ಕಾಳಜಿ ವಹಿಸಬೇಕು.
ಕಾಗೆಯ ಮತ್ತೂಂದು ಅದ್ಭುತವಾದ ಗುಣವೆಂದರೆ ಅದು ಯಾವತ್ತೂ ಮೈಮರೆತು ಇರದೇ ಸದಾ ಜಾಗೃತ ಸ್ಥಿತಿಯಲ್ಲಿ ಇರುತ್ತದೆ. ತನ್ನ ಮೇಲೆ ಯಾವ ದಿಕ್ಕಿನಿಂದ ಆಕ್ರಮಣ ನಡೆ ದರೂ ಅದನ್ನು ಎದುರಿಸಲು ಸದಾ ಜಾಗೃತ ಸ್ಥಿತಿಯಲ್ಲೇ ಇರುತ್ತದೆ ಮತ್ತು ತನ್ನ ಶತ್ರುಗಳ ಬಗ್ಗೆ ಬಹಳ ಎಚ್ಚರಿಕೆ ಯಿಂದ ಇರುತ್ತದೆ. ಅದೇ ರೀತಿ ಮನುಷ್ಯನು ತನ್ನ ಸುತ್ತಮುತ್ತ ಇರುವ ಶತ್ರುಗಳು ಮತ್ತು ಸ್ನೇಹಿತರ ಕುರಿತು ಎಚ್ಚರಿಕೆಯಿಂದ ಇರಬೇಕು.
ಕಾಗೆಯು ಯಾರನ್ನೂ ಅತಿಯಾಗಿ ನಂಬದೇ ತನಗೆ ತಾನೆ ಸಾಟಿ ಎನ್ನುವಂತೆ ಸ್ವಸಾಮರ್ಥ್ಯವನ್ನು ನಂಬಿಕೊಂಡು ಜೀವಿಸುತ್ತದೆ.
ಮನುಷ್ಯನೂ ಇದೇ ರೀತಿ ಎಲ್ಲ ವಿಚಾರಗಳಲ್ಲೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಈ ವಿಶಿಷ್ಟ ಗುಣಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಯಶಸ್ಸಿನೆಡೆಗೆ ಸಾಗಬಹುದು.
– ಸಂತೋಷ್ ರಾವ್ ಪೆರ್ಮುಡ