Advertisement

ಉತ್ತರ ಕನ್ನಡ ಗಾಂಧಿ ಜಿಲ್ಲೆ ಯನ್ನಾಗಿ ಮಾಡಲಿ!

04:19 PM Oct 19, 2019 | Suhan S |

ಹೊನ್ನಾವರ: ವಯಸ್ಸು, ಲಿಂಗ, ಜಾತಿ, ಧರ್ಮ ಭೇದವಿಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಉಜ್ವಲ ಇತಿಹಾಸವುಳ್ಳ ಉತ್ತರಕನ್ನಡವನ್ನು ಯಾಕೆ ಗಾಂಧಿ ಜಿಲ್ಲೆಯನ್ನಾಗಿ ಮಾಡಬಾರದು? ಅಪಾರ ಜನಬೆಂಬಲವುಳ್ಳ ಪ್ರಬಲ ಸಂಸದರು, ಮಾತ್ರವಲ್ಲ ಭಾರೀ ಅಂತರದಿಂದ ಗೆದ್ದ ಬಿಜೆಪಿ ಶಾಸಕರು, ವಿಧಾನಸಭಾ ಸಭಾಪತಿಗಳನ್ನು ಕೊಟ್ಟ ಜಿಲ್ಲೆಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ ನಡೆದಿದೆ. ನಾವೇ ಅಸಲಿ ಗಾಂಧಿ ಚಿಂತನೆ ಕಾರ್ಯರೂಪಕ್ಕೆ ತರುವವರು ಎಂದು ಹೇಳುವ ಇವರು ಮನಸ್ಸು ಮಾಡಿದರೆ ಉತ್ತರ ಕನ್ನಡವನ್ನು ಗಾಂಧಿ ಜಿಲ್ಲೆಯನ್ನಾಗಿ ಮಾಡಬಹುದು.

Advertisement

ಕಾಂಗ್ರೆಸ್‌ನವರು ಗಾಂಧೀಜಿ ಹೆಸರನ್ನು ದುರುಪಯೋಗ ಮಾಡಿಕೊಂಡರೆ ಬಿಜೆಪಿ ಸದುಪಯೋಗ ಮಾಡಿಕೊಳ್ಳುತ್ತಾರೆಯೇ? ಒಂದೆಡೆ ಕಡಲ ತೀರದಲ್ಲಿ ಸಿಆರ್‌ಝಡ್‌ ಕಾನೂನು, ಇನ್ನೊಂದೆಡೆ ಕೇಂದ್ರ ಅರಣ್ಯ ನೀತಿ. ಇವುಗಳಿಂದಾಗಿ ಯಾವ ಕೈಗಾರಿಕೆ ಅಥವಾ ಬದಲಾವಣೆ ಸಾಧ್ಯವಿಲ್ಲವಾಗಿದೆ.

ಅರಣ್ಯ ಅತಿಕ್ರಮಣ ಸಮಸ್ಯೆ ಹಗ್ಗಜಗ್ಗಾಟ ವಾಗಿದೆ. ಒಂದಿಷ್ಟು ಭೂಮಿ ನೌಕಾನೆಲೆಗೆ, ವಿವಿಧ ವಿದ್ಯುತ್‌ ಯೋಜನೆಗಳಿಗೆ ಹೋಗಿರು ವಾಗ ಅಳಿದುಳಿದ ನೆಲದಲ್ಲಿ ಗಾಂಧಿ ಮಾರ್ಗದಲ್ಲಿ ಹಿರಿಯರು ಆರಂಭಿಸಿದ ಗುಡಿಗಾರಿಕೆ, ಕುಟೀರ ಉದ್ಯಮಕ್ಕೆ ಜೀವಕೊಟ್ಟರೆ ಜಿಲ್ಲೆಗೆ ವರವಾಗಬಹುದು. ಕರ್ನಾಟಕದ ಗಾಂಧಿ ಎಂದು ಕರೆಸಿಕೊಂಡ ತಿಮ್ಮಪ್ಪ ನಾಯಕ ಮಾಸ್ತರರು, ಸ.ಪ. ಗಾಂವಕರ ಮೊದಲಾದ ದೇಶಭಕ್ತರು ಕಟ್ಟಿದ ಗ್ರಾಮಸೇವಾ ಸಮಿತಿಯೊಂದೇ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿತ್ತು. ಕೈಮಗ್ಗ, ಬಟ್ಟೆ ತಯಾರಿಕೆ, ಚರ್ಮ ಸಂಸ್ಕರಣ, ಮೊದಲಾದ ಉದ್ಯೋಗದಲ್ಲಿ ಸ್ಥಳೀಯರು ತೊಡಗಿಕೊಂಡಿದ್ದರು. ಆ ಸಂಸ್ಥೆಯ ಆಸ್ತಿ ಹಿರಿಯ ನ್ಯಾಯವಾದಿ ಸುಭಾಷ ನಾರ್ವೇಕರ್‌ ಕೈಲಿ ಸುರಕ್ಷಿತವಾಗಿದೆ.

ಸರ್ಕಾರ ನಮ್ಮ ಸಂಸ್ಥೆಯಲ್ಲಿ ಸಿದ್ಧವಾಗುವ ಖಾದಿ, ಉಡುಗೆ, ತೊಡುಗೆಗಳನ್ನು ಶಾಲೆ, ಕಾಲೇಜು, ಕೈಗಾರಿಕೆಗಳಲ್ಲಿ ಸಮವಸ್ತ್ರಕ್ಕೆ ಬಳಸಿದರೆ, ಗಾಂಧಿ ಚಿಂತನೆಯ ಉತ್ಪಾದನೆ ಕುರಿತು ಸಂಶೋಧನೆಗೆ ಅಗತ್ಯ ಹಣಕೊಟ್ಟರೆ ಸಂಸ್ಥೆಯನ್ನು ದೇಶಕ್ಕೆ ಮಾದರಿಯಾಗಿ ಕಟ್ಟಬಹುದು ಅನ್ನುತ್ತಾರೆ ಅವರು. ಗಾಂಧಿ ಚಿಂತನೆಯ ಡಾ| ಕುಸುಮಾ ಸೊರಬ ಕಟ್ಟಿದ ಸ್ನೇಹಕುಂಜದಲ್ಲಿ ಗಾಂಧೀಜಿ ಯವರ ನಿಸರ್ಗ ಚಿಕಿತ್ಸೆ, ಆಯುರ್ವೇದ ಮೊದಲಾದ ಸಾಂಪ್ರದಾಯಿಕ ಚಿಕಿತ್ಸೆಗೆ ನೂರಾರು ಜನ ಬರುತ್ತಿದ್ದರು. ಇಂದು ಆ ಸಂಸ್ಥೆಗೆ ವೃದ್ಧಾಪ್ಯ ಬಂದಿದೆ. ಕಡಲ ತೀರದಲ್ಲಿ 5ಎಕರೆ ಮತ್ತು ಸಹ್ಯಾದ್ರಿಯ ಮಡಿಲು ದಿಬ್ಬಣಗಲ್‌ನಲ್ಲಿ 13ಎಕರೆ ಭೂಮಿ ಮತ್ತು ಕಟ್ಟಡಗಳಿವೆ.  ಖಾದಿ ಉಟ್ಟು ಜೀವನದುದ್ದಕ್ಕೂ ಗಾಂಧಿ ಮಾರ್ಗದಲ್ಲಿ ನಡೆದ ಕುಸುಮಾ ಸೊರಬ ಜಿಲ್ಲೆಯಲ್ಲಿ ಪ್ರಥಮ ಸಹಕಾರಿ ನೀರಾವರಿ ಯೋಜನೆ ಆರಂಭಿಸಿದ್ದರು.

ಗಾಂಧೀಜಿ ಅನುಯಾಯಿಯಾಗಿದ್ದ ಧಾರವಾಡದ ಎಸ್‌.ಕೆ. ಕಲ್ಲಾಪುರ ಎಂಬ ನ್ಯಾಯವಾದಿಗಳು ಹೊನ್ನಾವರದಲ್ಲಿ ಪ್ರಥಮ ಅಹಿಂಸಾ ಜೇನು ಸಹಕಾರಿ ಸಂಘ ಆರಂಭಿಸಿದ್ದರು. ಜೇನು ಹುಳಗಳಿಗೆ ಹಿಂಸೆಯಾಗದಂತೆ ಪೆಟ್ಟಿಗೆಯಲ್ಲಿ ಜೇನು ಸಾಕಿ ತುಪ್ಪದ ಕೆಲವು ಭಾಗವನ್ನು ಮಾತ್ರ ಪಡೆಯುವ ಗಾಂಧೀಜಿ ಚಿಂತನೆಯನ್ನು ಕಾರ್ಯರೂಪಕ್ಕೆ ತಂದಿದ್ದರು. ಜೊತೆಯಲ್ಲಿ ಸತ್ತಪ್ರಾಣಿಗಳ ಕೋಡಿನಿಂದ ಆಟಿಕೆಗಳು, ಬಾಚಣಿಕೆಗಳನ್ನು ಮಾಡುವ ಕೈಗಾರಿಕೆ ಆರಂಭಿಸಿದ್ದರು. ಅಂದು ಜಿಲ್ಲೆಯಾದ್ಯಂತ ಆರಂಭವಾಗಿದ್ದ ಅಹಿಂಸಾ ಜೇನು ಉತ್ಪಾದನೆ ಈಗ ಕುಂಠಿತಗೊಂಡಿದೆ. ಜೇನು ಸಾಕಾಣಿಕೆಯನ್ನು ಪ್ರೋತ್ಸಾಹಿಸಿದರೆ ಸಾವಿರಾರು ಜನಕ್ಕೆ ಉದ್ಯೋಗ ಕಲ್ಪಿಸಬಹುದಾಗಿದೆ.

Advertisement

ಸಹಕಾರಿ ಸಂಸ್ಥೆ ಕಟ್ಟಿದ ಆರ್‌.ಎನ್‌. ಕಾಮತ್‌ ಈಗಿಲ್ಲ, ಸಂಸ್ಥೆ ಬಹುಪಾಲು ಮುಳುಗಿದೆ. ಗಾಂಧೀಜಿ ಚಿಂತನೆಯನ್ನು ಜಗತ್ತು ಒಪ್ಪಿಕೊಂಡು ಗೌರವಿಸಿದೆ, ಅನುಸರಿಸಿದೆ. ಪ್ರಧಾನಿ ಮೋದಿ ತಮ್ಮ ಕಾರ್ಯಾಲಯದಲ್ಲಿ ಮೊದಲು ಗಾಂಧಿ, ಪಟೇಲ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಾರೆ. ಗಾಂಧಿ ಚಿಂತನೆ ಬಿಟ್ಟು ಜಗತ್ತು ಇಲ್ಲ. ಕಾಂಗ್ರೆಸ್‌ ತಪ್ಪು ಮಾಡಿದ್ದರೆ ಬಿಜೆಪಿ ಜಿಲ್ಲೆಯಲ್ಲಿ ಗಾಂಧಿ ಮಾರ್ಗದಲ್ಲಿ ನಡೆದವರನ್ನು ಗೌರವಿಸಲಿ.

ಸ್ವಾತಂತ್ರ್ಯ ಬಂದ ನಂತರ ತಿಮ್ಮಪ್ಪ ನಾಯಕರು ಮಾದನಗೇರಿಯಲ್ಲಿ ಆಶ್ರಮ ಕಟ್ಟಿಕೊಂಡು ಉಳಿದು ದಲಿತೋದ್ಧಾರದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಗೋಕರ್ಣ ಭಾಗದಲ್ಲಿ ಉಪ್ಪು ತಯಾರಿಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ಗಾಂಧೀಜಿ ಅನುಯಾಯಿ ಮಣಿಬಾಯಿ ದೇಸಾಯಿಯವರ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಪಶುಧನ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಅವರ ನಿಸರ್ಗೋಪಚಾರ ಸಂಸ್ಥೆ ಮುಖ್ಯಸ್ಥ ಕರ್ಕಿ ಮಾದಪ್ಪನ್‌ ಡಾ| ನಾರಾಯಣ ಹೆಗಡೆ ಈಗಲೂ ಗಾಂಧಿ ಮಾರ್ಗದಲ್ಲಿ ನಡೆದಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಆಯುರ್ವೇದ, ನಿಸರ್ಗೋಪಚಾರ, ಪಂಚಕರ್ಮ ಚಿಕಿತ್ಸಾಲಯಗಳಿದ್ದು ಅವುಗಳನ್ನು ಗುರುತಿಸಬೇಕಾಗಿದೆ.

ಇವುಗಳನ್ನೆಲ್ಲಾ ಮಾಡುವ ಮುಖಾಂತರ ಜಿಲ್ಲೆಯಲ್ಲಿ ಗಾಂಧಿ ಚಿಂತನೆ ಉಳಿಸಬಹುದಾಗಿದೆ. ಗಾಂಧೀಜಿಯಿಂದ ಪ್ರಭಾವಿತರಾದ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಸಾವಿರಾರು ಜನರ ಹೋರಾಟದ ಕಥೆಯನ್ನು  ಶಾಂತಾರಾಮ ನಾಯ್ಕ ಮತ್ತು ವಾಲ್ಗಳ್ಳಿಯ ನಾರಾಯಣ ಶಾನಭಾಗ ಸಾವಿರ ಪುಟದ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವರ ಕುರಿತು ಅಧ್ಯಯನ, ವಿದ್ಯಾರ್ಥಿಗಳಿಗೆ ಇವರನ್ನು ತಿಳಿಸಿಕೊಡುವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಗಾಂಧೀಜಿ ಜೀವನ ಚರಿತ್ರೆ ಹೇಳುವ ಸತ್ಯಾನ್ವೇಷಣೆ ಯಾರಿಗೂ ಗೊತ್ತಿಲ್ಲ. ಮುಂದಿನ ಪೀಳಿಗೆಗೆ ಜಿಲ್ಲೆಯ ಘನತೆ, ಗಾಂಧೀಜಿ ಅರಿವಿಗೆ ಬರಬೇಕು. ಈ ಕೆಲಸ ವನ್ನು ಬಿಜೆಪಿ ಜನಪ್ರತಿನಿಧಿಗಳು ಮಾಡಲಿ.

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next