Advertisement
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಈ 20 ದಿನಗಳಲ್ಲಿ ವಾಡಿಕೆಗಿಂತ ಸಾಕಷ್ಟು ಕಡಿಮೆ ಮಳೆಯಾಗಿದೆ. ಮುಂದೆ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ. ಇದರ ಹೊರತಾಗಿಯೂ ವರುಣನ ಅವಕೃಪೆ ಮುಂದುವರಿದರೆ ಮುಂದಿನ ತಿಂಗಳಿನ ಒಂದನೇ ತಾರೀಕು ಅಥವಾ ಮೊದಲ ವಾರದಲ್ಲಿ ಬರ ಘೋಷಣೆಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೋಡ ಬಿತ್ತನೆ ಬಗ್ಗೆ ಸದ್ಯ ಚಿಂತಿಸಿಲ್ಲ. ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳ ಪ್ರಕಾರ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಶೇ. 96ರಿಂದ 104ರಷ್ಟು ಆಗುವ ನಿರೀಕ್ಷೆ ಇದೆ. ರವಿವಾರದಿಂದ ಮಳೆ ತುಸು ಬಿರುಸಾಗಿದೆ. ಆದರೂ ನಿರೀಕ್ಷೆ ಹುಸಿಯಾಗಿ ಮಳೆ ಕೊರತೆ ಮುಂದು ವರಿ ದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು. 806 ಕಡೆ ಕುಡಿಯುವ ನೀರಿಗೆ ಬರ
ರಾಜ್ಯದ 806ಕ್ಕೂ ಹೆಚ್ಚು ವಸತಿ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಲ್ಲೆಲ್ಲ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹಲವೆಡೆ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಉದಾಸೀನರಾಗಬಾರದು ಎಂದು ಸೂಚಿಸಲಾಗಿದೆ. ಸಮಸ್ಯೆ ಉಂಟಾದ 24 ತಾಸುಗಳ ಒಳಗೆ ನೀರು ಪೂರೈಸಲು ನಿರ್ದೇಶಿಸಿರುವುದಾಗಿ ಹೇಳಿದರು.
Related Articles
Advertisement
ಶೇ. 72ರಷ್ಟು ಮಳೆ ಕೊರತೆರಾಜ್ಯದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಜೂ. 1ರಿಂದ 17ರ ವರೆಗೆ ವಾಡಿಕೆಗಿಂತ ಶೇ. 72ರಷ್ಟು ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣ ಕೇಂದ್ರ ತಿಳಿಸಿದೆ. ಒಟ್ಟು ಶೇ. 72ರಲ್ಲಿ ಮಲೆನಾಡು ಭಾಗದಲ್ಲಿ ಅತೀ ಹೆಚ್ಚು, ಶೇ. 83ರಷ್ಟು ಮಳೆ ಖೋತಾ ಆಗಿದೆ. ಕರಾವಳಿಯಲ್ಲಿ ಶೇ. 77, ದಕ್ಷಿಣ ಒಳನಾಡಿನಲ್ಲಿ ಶೇ. 55, ಉತ್ತರ ಒಳನಾಡಿನಲ್ಲಿ ಶೇ. 69ರಷ್ಟು ಮಳೆ ಕೊರತೆಯಾಗಿದೆ. ಕೆಆರ್ಎಸ್: 3.811 ಟಿಎಂಸಿ ನೀರು ಮಾತ್ರ ಲಭ್ಯ
ಶ್ರೀರಂಗಪಟ್ಟಣ: ಕೆಆರ್ಎಸ್ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿತಗೊಂಡಿದೆ. ಜಲಾಶಯದಲ್ಲಿ ಒಟ್ಟು 10.811 ಟಿಎಂಸಿ ನೀರಿದ್ದು, ಈ ಪೈಕಿ 3.811 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಉಳಿದ 7 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ. ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. ಕೇವಲ ಶೇ. 12.43ರಷ್ಟು ಬಿತ್ತನೆ
ಬೆಂಗಳೂರು: ರಾಜ್ಯಕ್ಕೆ ಮುಂಗಾರು ವಿಳಂಬ ಪ್ರವೇಶವು ಇಡೀ ಬಿತ್ತನೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದ್ದು, ಇದುವರೆಗೆ ಬರೀ ಶೇ. 12.43ರಷ್ಟು ಬಿತ್ತನೆ ಯಾ ಗಿದೆ. ವರುಣನ ಅವಕೃಪೆ ಮುಂದುವರಿದರೆ ಆಹಾರ ಉತ್ಪಾ ದನೆ ಯಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಜೂ. 17ರ ವರೆಗೆ 10.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಯಾಗಿದ್ದು, ಇದು ಶೇ. 12.43 ಆಗು ತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು ಶೇ. 20ರಷ್ಟು ಬಿತ್ತನೆಯಾಗಿತ್ತು. ಕೃಷಿ ಇಲಾಖೆ ಅಧಿಕಾರಿ ಗಳು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ ಕೆಲವು ಭಾಗಗಳಲ್ಲಿ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆಯಾಗಿದೆ. ಅದರ ಬೆನ್ನಲ್ಲೇ ರೈತರು ಜಮೀನು ಸಿದ್ಧತೆ ಮಾಡಿಕೊಂಡಿದ್ದಾರೆ. 3.75 ಲಕ್ಷ ಹೆಕ್ಟೇರ್ ಪ್ರದೇಶ ದಲ್ಲಿ ಆಹಾರಧಾನ್ಯ ಬಿತ್ತನೆಯಾಗಿದೆ. ಆದರೆ ಅನಂತರ ಅಲ್ಲೆಲ್ಲ ಮಳೆಯೇ ಆಗದಿರುವುದರಿಂದ ಬೆಳೆಗಳು ಒಣಗುತ್ತಿವೆ ಹಾಗೂ ಹಲವೆಡೆ ಬಿತ್ತನೆ ಬೀಜಗಳು ಇಲಿಗಳ ಪಾಲಾಗುತ್ತಿವೆ. ಮುಂಗಾರು ಇನ್ನೂ ಚುರುಕು ಗೊಳ್ಳದೆ ಇದ್ದರೆ ಬಿತ್ತನೆ ವಿಳಂಬವಾಗಿ ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಸ್ತುತ 112 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಹೊಂದಲಾಗಿದೆ. ಎಣ್ಣೆ ಕಾಳುಗಳು 13.84 ಲಕ್ಷ ಟನ್ ಹಾಗೂ ಕಬ್ಬು, ತಂಬಾಕು ಮತ್ತಿತರ ವಾಣಿಜ್ಯ ಬೆಳೆಗಳ ಉತ್ಪಾದನೆ ಗುರಿ 607 ಲಕ್ಷ ಟನ್ ಆಗಿದೆ. ಮಳೆ ಕೊರತೆಯಿಂದ ಬಿತ್ತನೆ ತುಸು ಕಡಿಮೆಯಾಗಿದೆ. ಮುಂದಿನ ವಾರ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆ ಇದ್ದು, ಇದರೊಂದಿಗೆ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಆಹಾರ ಉತ್ಪಾದನೆ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂದು ಈಗಲೇ ಹೇಳುವುದು ಕಷ್ಟ. ಇನ್ನೂ ಸಾಕಷ್ಟು ಸಮಯ ಇದೆ. – ಜಿ.ಟಿ. ಪುತ್ರಾ, ಕೃಷಿ ಇಲಾಖೆ ನಿರ್ದೇಶಕ