Advertisement

ಪ್ರತಿಭೆಗಳು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ-ಸಚಿವ ಸತೀಶ ಜಾರಕಿಹೊಳಿ

05:35 PM Nov 28, 2023 | Team Udayavani |

ಯಮಕನಮರಡಿ: ಸತೀಶ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಗೆದ್ದಿರಬಹುದು, ಕೆಲವರು ಸೋತಿರಬಹುದು. ಆದರೆ ಸೋತ ಮಕ್ಕಳು ಚಿಂತಿಸುವ ಅವಶ್ಯಕತೆ ಇಲ್ಲ. ಮುಂದಿನ ವರ್ಷ ಮತ್ತೆ ನಿಮಗೆ ಗೆಲ್ಲುವ ಅವಕಾಶ ಸಿಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಅವರು ರವಿವಾರ ಯಮಕನಮರಡಿ ಎನ್‌ ಎಸ್‌ಎಫ್‌ ಶಾಲಾ ಆವರಣದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 10ನೇ ಸತೀಶ್‌ ಪ್ರತಿಭಾ ಪುರಸ್ಕಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

10ನೇ ಸತೀಶ್‌ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಳೆದ ಎರಡು ದಿನಗಳಿಂದ ಯಮಕನಮರಡಿಯಲ್ಲಿ ಅದ್ದೂರಿಯಾಗಿ ಜರುಗಿದ್ದು, ಅತ್ಯಂತ ಯಶಸ್ಸು ಕಂಡಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್‌ ಕಾರಣದಿಂದ ಸತೀಶ ಪುರಸ್ಕಾರ ಕಾರ್ಯಕ್ರಮ ಸ್ಥಗಿತಗೊಳಿಸಿದ್ದೆ. ನಿಮ್ಮೆಲ್ಲರ ಪ್ರೀತಿ, ಆಶಯದಿಂದ ಮತ್ತೆ ಈ ಕಾರ್ಯಕ್ರಮ ಆರಂಭವಾಗಿದೆ ಎಂದರು.

ಸತೀಶ್‌ ಪ್ರತಿಭಾ ಪುರಸ್ಕಾರ ವೇದಿಕೆ ಮೂಲಕ ಅನೇಕ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಿದ್ದು, ಬಹಳ ಸಂತೋಷದ ವಿಷಯ. ಹತ್ತು ವರ್ಷಗಳ ಹಿಂದೆ ನೆಟ್ಟ ಈ ಬೀಜ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಸತೀಶ್‌ ಪುರಸ್ಕಾರ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕೆಂದು ಹಾರೈಸಿದರು.

ನಿಡಸೋಸಿ ಶ್ರೀ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಸಮಾಜದಲ್ಲಿ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಸಚಿವ ಸತೀಶ್‌ ಜಾರಕಿಹೊಳಿಯವರೇ ಸಾಕ್ಷಿ. ಅವರ ಸಮಾಜಮುಖಿ ಕಾರ್ಯ ವೈಖರಿಯಿಂದ ಯಮಕನಮರಡಿ ಕ್ಷೇತ್ರದ ಮಕ್ಕಳು, ಯುವಕರು ಈ ನಾಡಿನ ಸಾಹಿತ್ಯ, ಸಂಸ್ಕೃತಿ ಉಳಿಸಿ, ಬೆಳೆಸುತ್ತಿದ್ದಾರೆ. ಅವರು ಯಾವುದೇ ಕಾರ್ಯ ಕೈಗೊಂಡರೂ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದರು.

Advertisement

ಹತ್ತರಗಿಯ ಹರಿಮಂದಿರದ ಆನಂದ ಮಹಾರಾಜ ಗೋಸಾವಿ ಮಾತನಾಡಿ, ಸತೀಶ ಪ್ರತಿಭಾ ಪುರಸ್ಕಾರ ನೋಡಿ ಸಂತೋಷ ಆಗುತ್ತಿದೆ. ಕಲೆಗಳನ್ನು ಗೌರವಿಸಿ, ಕಲಾವಿದರನ್ನು ಪೋಷಿಸುವ ಕೆಲಸ ಮಾಡುತ್ತಿರುವ ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾನಪದ ಕಲೆಗಳು ನಶಿಸಿ ಹೋಗುವ ಕಾಲದಲ್ಲಿ ಜನಪದ ಕಲೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಸಚಿವ ಸತೀಶ ಆದ್ಯತೆ ನೀಡುತ್ತಿದ್ದಾರೆ. ಪಾಲಕರು ಕನ್ನಡ ಉಳಿವಿಗಾಗಿ ಆದ್ಯತೆ ನೀಡಬೇಕು. ಸ್ವದೇಶಿ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.

ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ಇದೇ
ವೇಳೆ ಹುಕ್ಕೇರಿ ತಾಲೂಕಿನ ಸಾಧಕರಾದ ಕೆಂಪಣ್ಣಾ ಬಿಸಿರೊಟ್ಟಿ, ಸುಜಾತಾ ಹೆದ್ದಾಳಿ, ರಶೀಕಾ ಮೇತಾಳ, ಬಸವಣ್ಣಿ ಗುಡಸ, ಬಿ.ಹತನೂರಿ ಇವರನ್ನು ಶ್ರೀಗಳು, ಗಣ್ಯರು ಸತ್ಕರಿಸಿದರು. ಶಾಸಕರಾದ ಗಣೇಶ ಹುಕ್ಕೇರಿ, ರಾಜು ಸೇಠ್‌ ವಿಶ್ವಾಸ ವೈದ್ಯ, ಬಾಬಾ
ಸಾಹೇಬ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ಕಾಂಗ್ರೆಸ್‌ ಮುಖಂಡರಾದ ಕಿರಣ ರಜಪೂತ, ತಾಪಂ ಮಾಜಿ ಅಧ್ಯಕ್ಷ ಸುರೇಶ ಬೆಣ್ಣಿ, ದಯಾನಂದ ಪಾಟೀಲ, ಶಶಿ ಹಟ್ಟಿ, ಮಹಾದೇವ ಪಟೋಳಿ, ಆನಂದಸ್ವಾಮಿ ತವಗಮಠ, ಈರಣ್ಣಾ ಬಿಸಿರೊಟ್ಟಿ, ರವಿ ಜಿಂಡ್ರಾಳಿ, ದಸ್ತಗೀರ ಬಸಾಪೂರಿ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ
ಶಿಕ್ಷಕರು, ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು. ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next