Advertisement

ಅಂಗಡಿ ಬದಿಗಳ ರಸ್ತೆ ಕಸ ಮುಕ್ತವಾಗಲಿ

08:59 PM Oct 12, 2019 | Team Udayavani |

ಮಂಗಳೂರು ನಗರವು ಶುಚಿತ್ವಕ್ಕೆ ಪ್ರಶಸ್ತಿಯನ್ನು ಪಡೆದುಕೊಂಡ ನಗರವಾಗಿದೆ. ಆದರೆ, ನಗರದ ಒಳಹೊಕ್ಕು ನೋಡಿದರೆ, ಅಲ್ಲಲ್ಲಿ ಕಸದ ರಾಶಿ ಇನ್ನೂ ಗೋಚರಿಸುವುದು ಸ್ಪಷ್ಟ. ಪ್ರಮುಖವಾಗಿ ಸಣ್ಣ ಪುಟ್ಟ ಅಂಗಡಿಗಳ ಎದುರು ಅನಗತ್ಯವಾಗಿರುವ ಕಸಗಳನ್ನು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಎಸೆಯುವುದನ್ನು ಕಾಣಬಹುದು. ಪ್ಲಾಸ್ಟಿಕ್‌ನಲ್ಲಿ ಪ್ಯಾಕ್‌ ಮಾಡಲಾಗಿರುವ ವಸ್ತುಗಳನ್ನು ತಿಂದು ಅಲ್ಲಲ್ಲಿಯೇ ಬಿಸಾಡುವುದರಿಂದ ಮಣ್ಣಿನಲ್ಲಿ ಕೊಳೆತು ಹೋಗದೆ, ಹಾಗೇ ಉಳಿದು ಬಿಡುತ್ತದೆ. ಇದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ. ಮುಖ್ಯರಸ್ತೆಗಳ ಬದಿಯಲ್ಲೇ ಇರುವ ಹಲವಾರು ಅಂಗಡಿಗಳ ಎದುರಿನ ರಸ್ತೆ ಬದಿಗಳಲ್ಲಿ ಈ ರೀತಿ ಕಸ ಎಸೆಯುವುದನ್ನು ಕಾಣಬಹುದು.

Advertisement

ಪ್ರಮುಖವಾಗಿ ಆಯಾ ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ಗ್ರಾಹಕರು ಕಸ ಹಾಕಲು ಪೂರಕವಾಗುವಂತೆ ಡಸ್ಟ್‌ಬಿನ್‌ಗಳನ್ನು ಇಡಬೇಕು. ಪಾಲಿಕೆಯೂ ಹೀಗೆ ಕಸ ಎಸೆಯುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಡಸ್ಟ್‌ಬಿನ್‌ ಇಟ್ಟು ಕಸವನ್ನು ಅದಕ್ಕೆ ಹಾಕುವಂತೆ ಎಲ್ಲ ಅಂಗಡಿ ಮಾಲಕರಿಗೆ ಸೂಚಿಸಿದೆ. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ. ಆದರೆ, ಈ ಹೇಳಿಕೆ ಕೇವಲ ಹೇಳಿಕೆಯಾಗಿ ಉಳಿಯದೆ, ಕಸ ಎಸೆಯುವವರ ಮೇಲೆ ಕಠಿನ ಕ್ರಮ ಕೈಗೊಂಡರಷ್ಟೇ ಸುಧಾರಣೆ ಸಾಧ್ಯವಾಗುತ್ತದೆ.

ಹೆದ್ದಾರಿ ಸುಧಾರಣೆಯಾಗಲಿ


ಮಂಗಳೂರಿನಿಂದ ಪುತ್ತೂರಿಗೆ ತೆರಳುವ ರಸ್ತೆಯಲ್ಲಿ ಮಾಣಿವರೆಗಿನ ರಸ್ತೆ ದುಃಸ್ಥಿತಿಯಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಜನಸಾಮಾನ್ಯರಿಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ ಅಯ್ಯೋ ಎನಿಸದೆ ಇರದು. ಬಿಸಿಲಿನಲ್ಲಿ ಕಾದ ಕಬ್ಬಿಣದಂತಾದ ಹೊಂಡ ಗುಂಡಿ ರಸ್ತೆಯಲ್ಲಿ ಟ್ರಾಫಿಕ್‌ ಜಾಂ ನಡುವೆ ಸಿಕ್ಕಿ ಹಾಕಿಕೊಳ್ಳಬೇಕಾದ ಸ್ಥಿತಿ ಜನಸಾಮಾನ್ಯರದ್ದಾಗಿದೆ. ಕಳಪೆ ರಸ್ತೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆ ಎದ್ದು ಹೋಗಿ ಈ ದುಃಸ್ಥಿತಿ ಉಂಟಾಗಿರುವುದು ತಿಳಿದ ವಿಚಾರವೇ. ಸರಾಗ ಮತ್ತು ಸುಗಮ ಸಂಚಾರಕ್ಕೆ ಹೆದ್ದಾರಿಯೂ ಇಲ್ಲದಿದ್ದರೆ, ಮೂಲಭೂತ ಸೌಕರ್ಯ ಕಲ್ಪಿಸಿಯೂ ಅರ್ಥವೇನು? ಹೆದ್ದಾರಿಯ ಅಲ್ಲಲ್ಲಿ ಹೊಂಡಗುಂಡಿ ಉಂಟಾಗಿರುವುದರಿಂದ ದ್ವಿಚಕ್ರ ಮಾತ್ರವಲ್ಲದೆ, ಕಾರು ಚಾಲಕರಿಗೂ ರಸ್ತೆ ಗಮನಕ್ಕೆ ಸಿಗದೆ, ಹೊಂಡಗುಂಡಿಗೆ ಸಿಲುಕಿಕೊಂಡೇ ಕಾರು ಓಡಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಕಾರಿಗೂ ಪೆಟ್ಟು ಬಿದ್ದು, ಮತ್ತೂಂದಷ್ಟು ರಿಪೇರಿಗಾಗಿ ಖರ್ಚು ಮಾಡಬೇಕಾದ ಅನಿವಾರ್ಯತೆಯಲ್ಲಿ ಸಾಮಾನ್ಯ ನಾಗರಿಕನಿದ್ದಾನೆ. ಸಂಬಂಧಪಟ್ಟವರು ಸುಧಾರಿತ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವಲ್ಲಿ ಆದ್ಯ ಗಮನ ಹರಿಸಬೇಕು.

  ಡಿಬಿ

Advertisement

Udayavani is now on Telegram. Click here to join our channel and stay updated with the latest news.

Next