Advertisement

ಲೋಪವಿಲ್ಲದೇ ಮಳೆ ಹಾನಿ ಪರಿಹಾರದ ಕೆಲಸವಾಗಲಿ

12:45 AM Oct 15, 2022 | Team Udayavani |

ಮುಂಗಾರು ಮಳೆಯಿಂದ ಪ್ರವಾಹ, ಮೂಲಸೌಕರ್ಯ ಹಾನಿ, ಬೆಳೆ ನಷ್ಟದಿಂದ ತತ್ತರಿಸಿದ್ದ ರಾಜ್ಯದ ರೈತರು ಹಾಗೂ ಜನಸಾಮಾನ್ಯರು ಇದೀಗ ಹಿಂಗಾರು ಮಳೆಯಿಂದ ಮತ್ತೆ ಸಮಸ್ಯೆ ಎದುರಿಸುವಂತಾಗಿದೆ.

Advertisement

ರಾಜ್ಯಾದ್ಯಂತ ಮಳೆಯಿಂದ ಆಪಾರ ಪ್ರಮಾಣದ ಬೆಳೆ ನಷ್ಟ, ಜಾನುವಾರು ಸಾವು ಉಂಟಾಗಿದ್ದು, ಗ್ರಾಮೀಣ ಭಾಗದ ಜನರಂತೂ ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ನಿರಂತರ ಪ್ರವಾಹದಿಂದ ಪೆಟ್ಟಿನ ಮೇಲೆ ಪೆಟ್ಟು ಎಂಬಂತೆ ಸಮಸ್ಯೆಗೆ ಸಿಲುಕುವಂತಾಗುತ್ತಿದೆ.

ರಾಜ್ಯ ಸರಕಾರ ಬೆಳೆಹಾನಿ ಪರಿಹಾರ, ತುರ್ತು ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡಿದೆಯಾದರೂ ಕೆಳ ಹಂತದಲ್ಲಿ ಅದು ಸಂತ್ರಸ್ತರನ್ನು ತಲುಪುತ್ತಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಯವರು ವಿಜಯ ಸಂಕಲ್ಪ ಯಾತ್ರೆ ನಡುವೆಯೇ ಮಳೆ ಹಾನಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಬೇಕು. ಪರಿಹಾರ ವಿತರಣೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿ ಗಳು ಕಟ್ಟೆಚ್ಚರಿಕೆ ವಹಿಸಬೇಕು. ಮಳೆಹಾನಿ ಸಂಭವಿಸಿದ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಪ್ರವಾಹ ವಿಚಾರದಲ್ಲಿ ಪರಿಹಾರ ಹಾಗೂ ಪುನರ್ವಸತಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳೇ ಖುದ್ದು ಮೇಲ್ವಿಚಾರಣೆ ನಡೆಸಿ ಕರ್ತವ್ಯ ಲೋಪ ಎಸಗಿದ ಸಿಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ಇಂತಹ ಸೂಚನೆ ಅಗತ್ಯವಿತ್ತು. ಏಕೆಂದರೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳಿಂದ ನಿರ್ದೇಶನ ಬಂದರೆ ಕೆಳ ಹಂತದ ಸಿಬಂದಿ ಚುರುಕಿನಿಂದ ಕೆಲಸ ಮಾಡುತ್ತಾರೆ.

Advertisement

ಮನೆ ಹಾನಿಗೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿರುವುದು ಸ್ವಾಗತಾರ್ಹ. ಜತೆಗೆ ಹಿಂಗಾರು ಮಳೆಯಿಂದ ಉಂಟಾಗಿರುವ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಿಸಲು ತಿಳಿಸಿದ್ದಾರೆ.

ಈ ನಡುವೆ, 2022-23ನೇ ಸಾಲಿನಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 191.50 ಕೋಟಿ ರೂ. ಬಿಡುಗಡೆಯಾಗಿರುವುದರಿಂದ ಅಧಿಕಾರಿಗಳು ಪರಿಹಾರ ಕಾರ್ಯ ಚುರುಕುಗೊಳಿಸಲು ಸಹಾಯವಾಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಹಾರ ಮತ್ತು ಪುನರ್‌ವಸತಿ, ಮೂಲಸೌಕರ್ಯ ಹಾನಿಯ ದುರಸ್ತಿ ಬಗ್ಗೆ ಹೆಚ್ಚು ಗಮನಹರಿಸಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ಗಮನನೀಡಬೇಕು. ಪ್ರವಾಹ ಸಂತ್ರಸ್ತ್ರರ ಪರಿಹಾರ, ತುರ್ತು ಕಾಮಗಾರಿ, ಬೆಳೆ ಪರಿಹಾರ ವಿಚಾರದಲ್ಲಿ ಪಕ್ಷಾತೀತವಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷ ಜತೆಗೂಡಿಯೇ ಕೆಲಸ ಮಾಡಬೇಕು.

ಮುಂದಿನ ಚುನಾವಣೆ ಹಿನ್ನೆಲೆ ಹಾಗೂ ಪಕ್ಷ ಸಂಘಟನೆಗಾಗಿ ಎಲ್ಲ ಪಕ್ಷಗಳೂ ಯಾತ್ರೆ, ಸಮಾವೇಶ ನಡೆಸುತ್ತಿವೆಯಾದರೂ ಇದರ ನಡುವೆಯೂ ಮಳೆ ಹಾನಿಯ ಬಗ್ಗೆ ಹಾಗೂ ಸಂತ್ರಸ್ತರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next