Advertisement

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

12:25 AM Nov 30, 2021 | Team Udayavani |

ಸೋಮವಾರದಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಶುರುವಾಗಿದ್ದು, ಮೊದಲ ದಿನವೇ ಗದ್ದಲಗಳಿಂದಾಗಿ ಕಲಾಪ ವ್ಯರ್ಥವಾಗಿದೆ. ಕೇಂದ್ರ ಸರಕಾರ ಈ ಹಿಂದೆಯೇ ರೈತರಿಗೆ ವಾಗ್ಧಾನ ನೀಡಿದಂತೆ ಮೊದಲ ದಿನವೇ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವ ಮಸೂದೆಯನ್ನು ಉಭಯ ಸದನಗಳಲ್ಲೂ ಮಂಡಿಸಿ ಒಪ್ಪಿಗೆ ಪಡೆದುಕೊಂಡಿದೆ.

Advertisement

ಯಾವುದೇ ಚರ್ಚೆಗೆ ಅವಕಾಶವಿಲ್ಲದೇ ಈ ಮಸೂದೆಗಳನ್ನು ಕೇಂದ್ರ ಸರಕಾರ ಮಂಡಿಸಿ, ಅನುಮೋದನೆ ಪಡೆದುಕೊಂಡಿದೆ ಎಂಬುದು ವಿಪಕ್ಷಗಳ ಆಕ್ಷೇಪವಾದರೆ, ಈ ಹಿಂದೆಯೇ ಚರ್ಚೆ ನಡೆಸಲಾಗಿದ್ದ ಕಾಯ್ದೆಗಳ ಬಗ್ಗೆ ಈಗ ಮತ್ತೆ ಏಕೆ ಚರ್ಚೆ ಎಂಬುದು ಕೇಂದ್ರ ಸರಕಾರದ ವಾದ. ಅಲ್ಲದೇ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕುರಿತಂತೆ ಕಾಯ್ದೆ, ಪ್ರತಿಭಟನೆ ವೇಳೆ ಮೃತಪಟ್ಟಿರುವ ರೈತರಿಗೆ ಪರಿಹಾರ ಘೋಷಣೆ ಸೇರಿದಂತೆ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು ಎಂದು ವಿಪಕ್ಷಗಳು ಒತ್ತಾಯಿಸಿವೆ. ಈ ಗದ್ದಲದ ನಡುವೆಯೇ ಮೊದಲ ದಿನದ ಕಲಾಪ ಮಧ್ಯಾಹ್ನಕ್ಕೇ ಮುಗಿದಿದೆ.

ಇದರ ಜತೆಗೆ ಮುಂಗಾರು ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಅನುಚಿತವಾಗಿ ವರ್ತಿಸಿದ್ದ ಆರೋಪದ ಮೇಲೆ 12 ಸದಸ್ಯರನ್ನು ಇಡೀ ಚಳಿಗಾಲದ ಅಧಿವೇಶನದಿಂದಲೇ ಅಮಾನತು ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಆರು, ಟಿಎಂಸಿ, ಶಿವಸೇನೆಯ ತಲಾ ಇಬ್ಬರು, ಸಿಪಿಎಂ, ಸಿಪಿಐನ ತಲಾ ಒಬ್ಬರನ್ನು ಸಸ್ಪೆಂಡ್‌ ಮಾಡಲಾಗಿದೆ. ಆದರೆ ಮುಂಗಾರು ಅಧಿವೇಶನದಲ್ಲಿನ ಗದ್ದಲಕ್ಕೆ ಸಂಬಂಧಿಸಿದಂತೆ ಈಗ ಅಮಾನತು ಮಾಡಿರುವ ಕ್ರಮ ಸರಿಯಲ್ಲ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಈ ಬಗ್ಗೆ ಸದನದ ವೀಡಿಯೋ ಸೇರಿದಂತೆ ಹಲವಾರು ಸಾಕ್ಷಿಗಳನ್ನು ಪರಿಗಣಿಸಿ, ಶಿಸ್ತು ಕ್ರಮ ಸಮಿತಿಯ ಶಿಫಾರಸಿನ ಮೇರೆಗೆ ಈ 12 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಇದೂ ವಿಪಕ್ಷಗಳ ಕೋಪಕ್ಕೆ ಕಾರಣವಾಗಿದ್ದು, ಮಂಗಳವಾರ ಸಭೆ ಸೇರಿ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿಕೊಂಡಿವೆ. ಅಲ್ಲದೆ, ಕೇಂದ್ರ ಸರಕಾರ ಈ 12 ಮಂದಿಯ ಅಮಾನತು ನಿರ್ಧಾರವನ್ನು ವಾಪಸ್‌ ಪಡೆಯದಿದ್ದರೆ, ಇಡೀ ಚಳಿಗಾಲದ ಅಧಿವೇಶನದಿಂದಲೇ ದೂರ ಉಳಿಯುವುದಾಗಿ ಎಚ್ಚರಿಕೆಯನ್ನೂ ನೀಡಿವೆ.

ಇದನ್ನೂ ಓದಿ:ರಾಜ್ಯದಲ್ಲಿ 257ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆ: ಐವರು ಸಾವು

ಈ ಎಲ್ಲ ಬೆಳವಣಿಗೆಗಳು ಮೊದಲ ದಿನವೇ ನಡೆದಿದ್ದು, ಇಡೀ ಅಧಿವೇಶನ ಹಾದಿ ತಪ್ಪುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಬೇರೆ ಕಾರಣಗಳನ್ನು ಇರಿಸಿಕೊಂಡು ಅಧಿವೇಶನ ಮುಂದೂಡುವ ಕ್ರಮ ಸರಿಯಲ್ಲ. ಮುಂಗಾರು ಅಧಿವೇಶನವೂ ಸರಿಯಾಗಿ ನಡೆದಿಲ್ಲ. ಈಗ ಚಳಿಗಾಲದ ಅಧಿವೇಶನವೂ ಗದ್ದಲದಲ್ಲೇ ಕೊಚ್ಚಿ ಹೋದರೆ ಎಷ್ಟೋ ಮಸೂದೆಗಳು, ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವುದೇ ಇಲ್ಲ. ಇಲ್ಲಿ ಕೇಂದ್ರ ಸರಕಾರ ಮತ್ತು ವಿಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಮಾತನಾಡಿಕೊಂಡೇ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ.

Advertisement

ಅಷ್ಟೇ ಅಲ್ಲದೆ, ಈಗಷ್ಟೇ ಕೊರೊನಾದ ಒಮಿಕ್ರಾನ್‌ ವೈರಸ್‌ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಈ ಬಗ್ಗೆಯೂ ಚರ್ಚೆ ನಡೆಸಿ, ಆಡಳಿತ ಮತ್ತು ವಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವೂ ಇದೆ. ಹೀಗಾಗಿ ಸರಾಗವಾಗಿ ಸಂಸತ್‌ ಅಧಿವೇಶನ ಸರಾಗವಾಗಿ ನಡೆಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next