Advertisement

ಆಮ್ಲಜನಕ ಕೊರತೆಯಾಗದಂತೆ ಸರಕಾರ ನಿಗಾ ವಹಿಸಲಿ

12:03 AM May 04, 2021 | Team Udayavani |

ಸಕಾಲಕ್ಕೆ ಆಮ್ಲಜನಕ ಸಿಗದೆ ತಮ್ಮದಲ್ಲದ ತಪ್ಪಿಗೆ ಅಮಾಯಕರು ಚಾಮರಾಜನಗರದಲ್ಲಿ ತಮ್ಮ ಅಮೂಲ್ಯ ಪ್ರಾಣಗಳನ್ನು ಕಳೆದು ಕೊಂಡಿದ್ದಾರೆ. ಈ ಸಾವುಗಳು ಸರಕಾರದ ಕಾರ್ಯವೈಖರಿಗೆ ದೊಡ್ಡ ಸವಾಲು ಇಟ್ಟಿವೆ. ಕೊರೊನಾ ಸೋಂಕಿನಿಂದ ನರಳುತ್ತಿರುವವರ ಜತೆಗೆ ಸರಕಾರಕ್ಕೂ ಆಡಳಿತ ಚುರುಕುಗೊಳಿಸುವ ಆಮ್ಲಜನಕ ತುರ್ತಾಗಿ ಬೇಕಾಗಿದೆ ಎಂದು ಈ ಘಟನೆ ನಿದರ್ಶನ ನೀಡಿದೆ.

Advertisement

ಈ ದಾರುಣ ಘಟನೆಯನ್ನು “ಆಡಳಿತ ವೈಫಲ್ಯ’ ಎಂಬ ಸಿದ್ಧ ಪದ ಪುಂಜಗಳಲ್ಲಿ ವಿಶ್ಲೇಷಿಸುವ ಬದಲು ಮಾನವೀಯ ದೃಷ್ಟಿಯಲ್ಲಿ ನೋಡ ಬೇಕಿದೆ. ಆಳುವ ವರ್ಗಕ್ಕೆ ಅಂತಃಕರಣ ಇರಬೇಕು ಎಂಬ ಸಂದೇಶವನ್ನು ಆ  ಮೃತ ದೇಹಗಳು ಸಾರಿ ಹೋಗಿವೆ. ಈ ಘಟನೆಯಿಂದ ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಸ್ವತಃ  ಇನ್ನಷ್ಟು  ಜನರನ್ನು ಸಾವಿನ ದವಡೆಗೆ ಸಿಲುಕುವುದರಲ್ಲಿ ಅನುಮಾನವಿಲ್ಲ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ ಒಂದು ಕರಾಳ ನಿದರ್ಶನವಷ್ಟೇ, ಆಮ್ಲಜನಕದ ಕೊರತೆಯ ಕೂಗು ಎಲ್ಲ ಕಡೆ ಇದೆ. ರಾಜ್ಯದ ಒಂದಿಲ್ಲ ಒಂದು ಕಡೆ ಪ್ರತೀ ದಿನ ಅಮ್ಲಜನಕದ ಕೊರತೆ ಅಥವಾ ಸಕಾಲಕ್ಕೆ ಆಮ್ಲಜನಕ ಸಿಕ್ಕಿಲ್ಲ ಎಂಬ ಕಾರಣಕ್ಕೆ ಒಬ್ಬಿಬ್ಬರು ಪ್ರಾಣ ಬಿಡುತ್ತಿದ್ದಾರೆ. ಈ ದುರವಸ್ಥೆಯನ್ನು ತತ್‌ಕ್ಷಣ ಸರಕಾರ ಸರಿಪಡಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಕೈ ಮೀರಿ ಹೋಗಲಿದೆ. ವ್ಯವಸ್ಥೆಯ ಲೋಪದಿಂದ ಪ್ರಾಣ ಕಳೆದುಕೊಳ್ಳುವ ಪ್ರತಿಯೊಂದು ಜೀವಕ್ಕೆ ಸರಕಾರವೇ ನೇರ ಹೊಣೆ ಹೊರಬೇಕಾಗುತ್ತದೆ.

ಇನ್ನೂ ಕಾಲ ಮಿಂಚಿಲ್ಲ. ಚಾಮರಾಜನಗರ ಘಟನೆ ಸರಕಾರಕ್ಕೆ ಎಚ್ಚರಿ ಕೆಯ ಗಂಟೆ ಆಗಬೇಕು. ಆಮ್ಲಜನಕ ತಯಾರಕರು, ಸರಬರಾಜುದಾರರ ಜತೆ ಸಭೆ ನಡೆಸುವುದು, ಆಮ್ಲಜನಕ ಪೂರೈಕೆ ಬಗ್ಗೆ ಸರಕಾರ ಆದೇಶ ಹೊರಡಿಸಿದರೆ, ಮಾರ್ಗಸೂಚಿಗಳನ್ನು ಜಾರಿಗೊಳಿಸಿದರೆ, ಘಟನೆ ಬಗ್ಗೆ ತನಿಖೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿದರೆ, ಆರೋಗ್ಯ ಸಚಿ ವರು, ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿದರೆ ಸರಕಾರದ ಜವಾಬ್ದಾರಿ ಮುಗಿಯುವುದಿಲ್ಲ.

ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ ಸ್ವತಃ ಆಳುವರು “ವ್ಯವಸ್ಥೆ ಕೆಟ್ಟುಹೋಗಿದೆ’ ಎಂಬ ಹೇಳಿಕೆ ಮುನ್ನೆಲೆಗೆ ತರುವ ಮೂಲಕ ಆಡಳಿತ ವೈಫಲ್ಯಗಳನ್ನು ವ್ಯವಸ್ಥೆ ಕೆಟ್ಟು ಹೋಗಿದೆ ಎಂದು “ರೂಪಾಂ ತರಿಸಿದೆ’. ವ್ಯವಸ್ಥೆ ಎಂದರೇನು? ಅದನ್ನು ನಿರ್ವಹಿಸುತ್ತಿರು ವವರು ಯಾರು? ಎಂಬ ಪ್ರಶ್ನೆಯನ್ನು ಸ್ವತಃ ಸರಕಾರ ತನ್ನನ್ನು ತಾನು ಕೇಳಿಕೊಂಡಿದ್ದರೆ, ಈ ಸಾವುಗಳು ಸಂಭವಿಸುತ್ತಿರಲಿಲ್ಲವೇನೋ?

Advertisement

ಕೊರೊನಾ ಪ್ರಕರಣ ಏರಿಕೆ ಪ್ರಮಾಣ, ಅದರಲ್ಲಿ ಆಮ್ಲಜನಕದ ಅವಶ್ಯಕತೆ ಇರುವವರ ಪ್ರಮಾಣ ಎಷ್ಟು ಎಂಬ ಬಗ್ಗೆ ಸರಕಾರಕ್ಕೆ ವಸ್ತುನಿಷ್ಠ ಅಂದಾಜು ಇರಬೇಕು. ರಾಜ್ಯದಲ್ಲಿ ಆಮ್ಲಜನಕದ ಉತ್ಪಾದನೆ ಎಷ್ಟಿದೆ, ಸರಬರಾಜು ಸರಪಳಿ ಹೇಗಿದೆ, ಎಷ್ಟು ಆಮ್ಲಜನಕ ಆಮದು ಮಾಡಿ ಕೊಳ್ಳಲಾಗುತ್ತಿದೆ, ಕೇಂದ್ರ ಸರಕಾರದ ಹಂಚಿಕೆ ಎಷ್ಟಿದೆ ಎಂಬ ವಾಸ್ತವಿಕ ಅಂಶಗಳನ್ನು ಮುಂದಿಟ್ಟುಕೊಂಡು ಅವಶ್ಯಕತೆ ಇರುವ ರಾಜ್ಯದ ಯಾವೊಬ್ಬ ವ್ಯಕ್ತಿಗೂ ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ.

ಸಂವಿಧಾನದ ಕಲಂ 21ರ ಜೀವಿಸುವ ಹಕ್ಕಿನಲ್ಲಿ ಆರೋಗ್ಯದ ಹಕ್ಕು ಸೇರಿದೆ ಎಂಬುದನ್ನು ಮನಗಂಡು ಕೊರೊನಾ ಸೋಂಕಿತರ ಚಿಕಿತ್ಸೆಗೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಸರಕಾರ ಒದಗಿಸಿಕೊಡಬೇಕಿದೆ. 802 ಮೆಟ್ರಿಕ್‌ ಟನ್‌ ಆಮ್ಲಜನಕದ ಬಳಕೆಯ ಮಿತಿ ಇದೆ. ರಾಜ್ಯದಲ್ಲಿ ಹೆಚ್ಚುವರಿ ಆಮ್ಲಜನಕ ಉತ್ಪಾದನೆಗೆ ಕೇಂದ್ರ ಸರಕಾರದಿಂದ ಒಪ್ಪಿಗೆ ಬೇಕು ಎಂಬ ವಿಚಾರಕ್ಕೆ ಹೈಕೋರ್ಟ್‌ ಇತ್ತೀಚೆಗೆ ನೀಡಿರುವ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕಾರ್ಯೋನ್ಮುಖವಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next