Advertisement

ಸರ್ಕಾರಿ ಶಾಲೆಗಳಲ್ಲೇ ಸಚಿವ, ಶಾಸಕ, ನೌಕರರ ಮಕ್ಕಳು ಕಲಿಯಲಿ

06:10 AM Sep 05, 2017 | |

ಬೆಂಗಳೂರು: ಇನ್ನು ಮುಂದೆ ಸಚಿವರು, ಸಂಸದರು, ಶಾಸಕರು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಕಾನೂನು ಮಾಡಿ…

Advertisement

ಇದು ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ ಬಹುಮುಖ್ಯ ಶಿಫಾರಸು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಇದಕ್ಕಿಂತ ಬೇರೊಂದು ಉತ್ತಮ ಮಾರ್ಗವಿಲ್ಲ ಎಂದಿರುವ ಈ ಸಮಿತಿ, ರಾಜ್ಯ ಸರ್ಕಾರ ಕಾನೂನು ರಚನೆಗಾಗಿ ಈ ಕೂಡಲೇ ಸುಗ್ರೀವಾಜ್ಞೆ ಹೊರಡಿಸಲಿ ಎಂದು ಹೇಳಿದೆ. ಅಲ್ಲದೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಒಟ್ಟಾರೆ 21 ಶಿಫಾರಸುಗಳನ್ನೂ ಈ ಸಮಿತಿ ನೀಡಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಿ, ಶಿಫಾರಸುಗಳ ಜಾರಿಗೆ ಮನವಿಯನ್ನೂ ಮಾಡಿದರು.

ಅಲಹಾಬಾದ್‌ ಹೈಕೋರ್ಟ್‌ನ ಸೂಚನೆಯಂತೆ ಉತ್ತರ ಪ್ರದೇಶದಲ್ಲಿ ಜನಪ್ರತಿಧಿಗಳು ಹಾಗೂ ಸರ್ಕಾರಿ ನೌಕರರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಅಥವಾ ಅನುದಾನಿತ ಶಾಲೆಗೆ ಸೇರಿಸುವಂತೆ ನಿಯಮ ರೂಪಿಸಿ ಜಾರಿಗೆ ತಂದಿದ್ದಾರೆ. ಅದೇ ಮಾದರಿಯ ನಿಯಮವನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಸುಗ್ರೀವಾಜ್ಞೆ  ಹೊರಡಿಸಬೇಕು.ಶಿಕ್ಷಣದಲ್ಲಿ ಮಾಹಿತಿ ಸಂವಾಹನ ತಂತ್ರಜ್ಞಾನದ (ಐಸಿಟಿ) ಭಾಗವಾಗಿ ಸರ್ಕಾರಿ ಶಾಲೆಗಳಲ್ಲಿ ಇ-ಲೆùಬ್ರರಿ, ಇ-ಬುಕ್‌ ಇತ್ಯಾದಿ ಕಾಲೋಚಿತ ತಂತ್ರಜ್ಞಾನದ ಜತೆಗೆ ತಾಂತ್ರಿಕ ವಿಧಾನ ಅಳವಡಿಸಬೇಕು.

ಇಂಗ್ಲಿಷ್‌ ಭಾಷೆಯ ತರಬೇತಿ ಪಡೆದ ಶಿಕ್ಷಕರಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಬೋಧಿಸಬೇಕು. ಆರ್‌ಟಿಇ ಅಡಿಯಲ್ಲಿ ಶೇ.25ರಷ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ, ಅವರ ಶುಲ್ಕವನ್ನು ಸರ್ಕಾರ ಭರಿಸುತ್ತಿರುವುದನ್ನು ನಿಲ್ಲಿಸಬೇಕು. ಅದೇ ಹಣವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬೇಕು. ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ಸೇರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಆಯಾ ಶಾಲಾಡಳಿತ ಮಂಡಳಿಯ ಸಾಮಾಜಿಕ ಜವಾಬ್ದಾರಿಯಾಗಬೇಕು.

Advertisement

ಭಾಷಾ ಕಲಿಕಾ ಅಧಿನಿಯಮ-2015ನ್ನು ಕಡ್ಡಾಯವಾಗಿ ಜಾರಿಗಳಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ಕನ್ನಡ ಕಲಿಕೆ ಕಾಯ್ದೆ ಮತ್ತು ನಿಯಮವನ್ನು ಪರಿಣಾಮಕಾರಿಗಾಗಿ ಅನುಷ್ಠಾನ ಮಾಡಲು ಮೇಲುಸ್ತುವಾರಿ ಸಮಿತಿ ರಚಿಸಬೇಕು. ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಕೇಂದ್ರವಾಗಿಸಲು ಮೂಲಭೂತ ಸೌಕರ್ಯ ಒದಗಿಸುವುದು, ಪ್ರತಿ ಗ್ರಾಮದಲ್ಲೂ ಶಿಶುಪಾಲನ ಕೇಂದ್ರ ತೆರೆಯಬೇಕು.

ಸಮ ಸಮಾಜಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪಂಚಾಯತಿ, ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ವಾರ್ಡ್‌ ಮಟ್ಟದ ಸುಸಜ್ಜಿತ ನೆರೆಹೊರೆ ಸಮಾನ ಸಾರ್ವಜನಿಕ ಶಾಲೆಗಳನ್ನು ಕೇಂದ್ರ ಸರ್ಕಾರದ ಕೇಂದ್ರಿಯ ಶಾಲೆಗಳ ಮಾದರಿಯಲ್ಲಿ ಸ್ಥಾಪಿಸಬೇಕು ಎಂಬುದು ಸೇರಿ ಸರ್ಕಾರಿ ಶಾಲೆಯ ಸಬಲೀಕರಣಕ್ಕಾಗಿ ನೀಡಿರುವ ಈ ಎಲ್ಲಾ ಶಿಫಾರಸ್ಸಿನ ಅನುಷ್ಠಾನಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಬೇಕು ಎಂದು ಸಮಿತಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ವರದಿಯಲ್ಲಿ  ಕೋರಿಕೊಂಡಿದೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಚಂಪ, ಮುಖ್ಯಮಂತ್ರಿ ಚಂದ್ರು, ಎಲ್‌.ಹನುಮಂತಯ್ಯ, ಸಾಹಿತಿ ಗೋ.ರು.ಚನ್ನಬಸಪ್ಪ,  ಶಿಕ್ಷಣ ತಜ್ಞ ನಿರಂಜನಾರಾಧ್ಯ, ಸಮಿತಿ ಅಧ್ಯಕ್ಷ ಚಂದ್ರಶೇಖರ ದಾಮ್ಲೆ, ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಆ ಮೊದಲಾದವರು ಉಪಸ್ಥಿತರಿದ್ದರು.

ಪ್ರಮುಖ ಶಿಫಾರಸುಗಳು:
– ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳ ನವೀಕರಣ ಮಾಡಿ
– ಖಾಲಿ ಇರುವ ಸ್ಥಾನಗಳಿಗೆ ಶಿಕ್ಷಕರ ನೇಮಕ ಮಾಡಿ
– ಶಾಲೆ ವಿಲೀನ ಪ್ರಕ್ರಿಯೆ ಕೈಬಿಟ್ಟು, ಮುಚ್ಚಿರುವ ಶಾಲೆಗಳ ತೆರೆಯಿರಿ
– ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿ
– ಶಿಕ್ಷಕರನ್ನು ಕಲಿಕೆಗೆ ಮಾತ್ರ ತೊಡಗಿಸಿಕೊಂಡು, ಕಲಿಕೇತರ ಕೆಲಸದಿಂದ ಮುಕ್ತಿ ನೀಡಿ
– ಪ್ರತಿ ಶಾಲೆಗೂ ಕನಿಷ್ಠ ತರಗತಿಗೆ ಒಬ್ಬ ಶಿಕ್ಷಕ, ವಿಷಯಕ್ಕೆ ಒಬ್ಬ ಶಿಕ್ಷಕರ ನೇಮಕ ಮಾಡಿ
– ಶಿಕ್ಷಕರಿಗೆ ವೃತ್ತಿ ನೈಪುಣ್ಯತೆ ಮಾರ್ಗದರ್ಶನ ತರಬೇತಿ ಆಯೋಜಿಸಬೇಕು
– ಸರ್ಕಾರಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳನ್ನು ಬಲಪಡಿಸಬೇಕು
– ರಾಜ್ಯದ ಆಯವ್ಯಯದಲ್ಲಿ ಶೇ.25ರಷ್ಟನ್ನು ಸಾರ್ವಜನಿಕ  ಶಿಕ್ಷಣಕ್ಕೆ ಮೀಸಲಿಡಬೇಕು
– ಖಾಸಗಿ ಶಾಲೆಗಳಲ್ಲಿ ಕ್ಯಾಪಿಟೇಷನ್‌, ವಂತಿಗೆ ಶುಲ್ಕ ರದ್ದು,  ಪೋಷಕರು, ಪಾಲಕರು, ಮಕ್ಕಳ ಪ್ರವೇಶ ಪರೀಕ್ಷೆ ರದ್ದು ಮಾಡಿ
–  ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳಿಗೆ ರಾಜ್ಯ ಸರ್ಕಾರದಿಂದಲೇ ಮಾನ್ಯತಾ ಪತ್ರ ನೀಡಬೇಕು.
– ಮಗುವಿನ ಪ್ರಾಥಮಿಕ ಶಿಕ್ಷಣ ರಾಜ್ಯ ಭಾಷೆಯಲ್ಲಿ ನೀಡಲು ಸಂವಿಧಾನ ತಿದ್ದುಪಡಿ ಮಾಡಬೇಕು.
– ಗುಣಾತ್ಮಕ ಶಿಕ್ಷಣಕ್ಕಾಗಿ ಕಾಲೋಚಿತವಾಗಿ ಪಠ್ಯ, ಪಠ್ಯೇತರ ಕಲಿಕಾ ಸೌಲಭ್ಯದ ಅಪ್‌ಡೇಟ್‌ ಮಾಡುತ್ತಿರಬೇಕು.
– ದತ್ತು ಯೋಜನೆ, ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಯ ಸಬಲೀಕಣದ ನೆಪದಲ್ಲಿ ಮೂಲ ಆಶಯಕ್ಕೆ ಧಕ್ಕೆ ಮಾಡಬಾರದು.

ಗಂಭೀರವಾಗಿ ಪರಿಗಣಿಸುತ್ತೇವೆ
ವರದಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರುವುದಿಲ್ಲ. ದೇಶದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬಾರದೇ ಇರುವುದರಿಂದ ಶೈಕ್ಷಣಿಕ ತಾರತಮ್ಯ ಅಸ್ಥಿತ್ವದಲ್ಲಿದೆ. ಶಿಕ್ಷಣಕ್ಕೆ 18 ಸಾವಿರ ಕೋಟಿ ಅನುದಾನ ಮೀಸಲಿಟ್ಟದ್ದೇವೆ. ಆದರೂ, ಮೂಲಭೂತ ಸೌಕರ್ಯ ಒದಗಿಸುವ ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಪಾಲಕರಿಗೆ ಇಂಗ್ಲಿಷ್‌ ವ್ಯಾಮೋಹ ಬಂದುಬಿಟ್ಟಿದೆ. ಈಗ ಸರ್ಕಾರದ ಎಲ್ಲ ಕಡತ ಕನ್ನಡದಲ್ಲಿ ಬರುತ್ತಿದೆ. ಇಂಗ್ಲಿಷ್‌ ನಲ್ಲಿ ಸುತ್ತೋಲೆ ಅಥವಾ ಬರಹ ಕಳುಹಿಸುವ ಅಧಿಕಾರಿಗಳನ್ನು ಇಟ್ಟುಕೊಳ್ಳಬೇಡಿ ಎಂದು ಸಚಿವರಿಗೂ ಸೂಚಿಸಿದ್ದೇನೆ ಎಂದರು.

ಎಲ್ಲಾ ಸಂದರ್ಭದಲ್ಲೂ ಕನ್ನಡವನ್ನೇ ಬಳಸುವುದು ಮತ್ತು ಕನ್ನಡವೇ ಪ್ರಧಾನವಾಗಿ ಮಾಡಿಕೊಂಡಿರುವುದರಿಂದ ನನಗೆ ಇಂಗ್ಲಿಷ್‌ ಶಬ್ಧ ಕೋಶವೇ ಮರೆತು ಹೋಗಿದೆ.
– ಮುಖ್ಯಮಂತ್ರಿ ಸಿದ್ದರಾಮಯ್ಯ

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅತ್ಯಂತ ವೈಜ್ಞಾನಿಕವಾದ ವರದಿ ಸಲ್ಲಿಸಿದ್ದೇವೆ. 2016ರ ಜೂನ್‌ 13ರಂದು ಈ ಸಮಿತಿ ರಚನೆ ಮಾಡಿದ್ದು, ರಾಜ್ಯದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವಸ್ತುಸ್ಥಿತಿಯ ಆಧಾರದಲ್ಲಿ ವರದಿ ಇದೆ. ನೆಲದ ಭಾಷೆಗೆ ಆದ್ಯತೆ ನೀಡದೇ ಇದ್ದರೆ ಎಲ್ಲಾ ಕ್ಷೇತ್ರದಲ್ಲೂ ವಿಫ‌ಲತೆ ಸಾಧಿಸಲಿದ್ದೇವೆ. ಹೀಗಾಗಿ ವರದಿಯನ್ನು ಶೀಘ್ರ ಅನುಷ್ಠಾನ ಮಾಡಬೇಕು.
-ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next