ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ನೂತನ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲು ಅನುವು ಮಾಡಿಕೊಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಪ್ರತಿಭಟನಾ ನಿರತ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನೂತನ ಕೃಷಿ ಕಾಯ್ದೆ ರೈತರ ಒಳಿತಿಗಾಗಿಯೇ ರೂಪಿಸಲಾಗಿದೆ. ಇದನ್ನು ನಾವು ಒಂದೆರಡು ವರ್ಷಗಳ ಕಾಲ ಜಾರಿಗೆ ತರೋಣ, ಒಂದು ವೇಳೆ ಇದು ರೈತರನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದಾದಾರೆ ಆಗ ಖಂಡಿತವಾಗಿಯೂ ಮತ್ತೆ ತಿದ್ದುಪಡಿ ಮಾಡೋಣ ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಎಂದಿಗೂ ರೈತರಿಗೆ ನೀಡುವ ಕನಿಷ್ಟ ಬೆಂಬಲ ಬೆಲೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದ ಅವರು ವಿರೋಧ ಪಕ್ಷಗಳು ರೈತರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿವೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ:ಭಾರತದ ರೈತ ಪ್ರತಿಭಟನೆ: ಸಮಸ್ಯೆ ಬಗೆಹರಿಸಲು ಮೈಕ್ ಪೊಂಪಿಯೊಗೆ ಪತ್ರ ಬರೆದ ಅಮೆರಿಕನ್ ಸಂಸದರು
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಕುರಿತಾಗಿ ಮಾತನಾಡಿದ ರಾಜ್ ನಾಥ್ ಸಿಂಗ್, ನಮ್ಮ ಪ್ರಧಾನಿಗಳನ್ನು ನಾನು ಬಹಳಾ ಸಮಯದಿಂದ ಹತ್ತಿರದಿಂದ ನೋಡಿದ್ದೇನೆ. ಅವರು ಎಂದಿಗೂ ರೈತರ ವಿರುದ್ಧವಾಗಿ ಯಾವುದೇ
ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಈ ನೂತನ ಕೃಷಿ ಮಸೂದೆ ರೈತರಿಗೆ ಸಹಾಯವಾಗದಿದ್ದರೆ ಖಂಡಿತವಾಗಿಯೂ ಅವರು ಈ ಕಾಯ್ದೆಯಲ್ಲಿ ತಿದ್ದುಪಡಿ ತರುತ್ತಾರೆ ಎಂದರು.
ಈ ರೈತ ಕಾಯ್ದೆಯ ಕುರಿತಾಗಿ ಹಲವರು ತಪ್ಪು ಮಾಹಿತಿಗಳನ್ನು ರೈತರ ಮನಸ್ಸಿನಲ್ಲಿ ಬಿಂಬಿಸುತ್ತಿದ್ದಾರೆ. ರೈತರನ್ನು ದಾರಿ ತಪ್ಪಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅಂತಹ ಯಾವುದೇ ಮಾತುಗಳಿಗೆ ರೈತರು ಮರುಳಾಗಬಾರದು ಎಂದು ಹೇಳಿದರು.