Advertisement

ಗುಡ್ಡದ ಮೇಲೆ ಪಾಲಕರಿಗೆ ಪಾಠ

06:14 PM May 11, 2018 | |

“ನಿನ್ನ ಸ್ನೇಹಿತರಿಂದ ದೂರವಿರಬೇಕು, ಇಲ್ಲದಿದ್ದರೆ ನಾನು ನಿನ್ನಿಂದ ದೂರವಾಗುತ್ತೇನೆ …’ ತಾಯಿ ಮಗಳಿಗೆ ಹೇಳುತ್ತಾಳೆ. ಮಗಳು ಅನಿವಾರ್ಯವಾಗಿ ತಾನು ಇಷ್ಟಪಟ್ಟ ಸ್ನೇಹಿತರಿಂದ ದೂರವಿರುತ್ತಾಳೆ. ಆದರೆ, ಅದು ಆಕೆಯ ಮೇಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ. ಮತ್ತೂಂದು ಘಟನೆಯಲ್ಲಿ ಪಾಲಕರು ಮಗಳನ್ನು ಓದಿಗಾಗಿ ದೂರದ ಊರಿನಲ್ಲಿ ಬಿಡುತ್ತಾರೆ. ಪಾಲಕರ ಪ್ರೀತಿಯನ್ನು ಬಯಸುತ್ತಿದ್ದ ಆ ಹುಡುಗಿ ಇನ್ಯಾವುದೇ ಊರಿನಲ್ಲಿ ಬದುಕುವಾಗ ಆಕೆಯ ಜೀವನದಲ್ಲೂ ದೊಡ್ಡ ಘಟನೆಯೊಂದು ನಡೆದು ಹೋಗುತ್ತದೆ.

Advertisement

ಎರಡು ಘಟನೆಗಳಲ್ಲೂ ಮಕ್ಕಳ ಮೇಲೆ ಪರಿಣಾಮ ಬೀರಿರೋದು ಪಾಲಕರ ನಿರ್ಲಕ್ಷ್ಯ, ಮಕ್ಕಳ ಮೇಲೆ ಅವರು ಹಾಕುವ ಒತ್ತಡ. “ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದ ಕಥೆ ಸಾಗುವುದೇ ಪಾಲಕರು ಹಾಗೂ ಮಕ್ಕಳ ಸುತ್ತ. ಕೆಲಸ, ಬಿಝಿನೆಸ್‌ ಎಂದು ಬಿಝಿಯಾಗಿ ಮಕ್ಕಳ ಕಡೆ ಗಮನ ಕೊಡದಿದ್ದರೆ ಅದು ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಹದಿಹರೆಯದ ಮಕ್ಕಳ ವರ್ತನೆ, ಅವರ ತುಂಟತನದೊಂದಿಗೆ ಆರಂಭವಾಗುವ ಸಿನಿಮಾ ಕೊನೆಗೊಂದು ಸಂದೇಶದೊಂದಿಗೆ ಮುಗಿಯುತ್ತದೆ. 

ನಿರ್ದೇಶಕ ವಿವಿನ್‌ ಸೂರ್ಯ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಇಂದಿನ ಬಿಝಿ ಶೆಡ್ನೂಲ್‌ನಲ್ಲಿ ಮಕ್ಕಳಿಗೆ ಪ್ರೀತಿಯೊಂದು ಬಿಟ್ಟು ಬೇರೆಲ್ಲವನ್ನು ಕೊಡುವ ಪಾಲಕರು, ಹೇಗೆ ತಮ್ಮ ಮಕ್ಕಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತಾ ಹೋಗುತ್ತಾರೆ, ಅಡ್ಡದಾರಿ ಹಿಡಿಯಲು ಹೇಗೆ ತಾವೇ ಕಾರಣರಾಗುತ್ತಾರೆಂಬ ಅಂಶ ಸಿನಿಮಾದಲ್ಲಿ ಪ್ರಮುಖವಾಗಿದೆ. ಸದ್ಯದ ಬಿಝಿ ಲೈಫ್ಗೆ ಈ ಕಥೆ ಹೆಚ್ಚು ಹೊಂದುತ್ತದೆ. ಆದರೆ, ನಿರ್ದೇಶಕರು ಅದನ್ನು ಸಮರ್ಪಕವಾಗಿ ಕಟ್ಟಿಕೊಡುವಲ್ಲಿ ಅಲ್ಲಲ್ಲಿ ಎಡವಿದ್ದಾರೆ.

ಏನು ಹೇಳಬೇಕಿತ್ತೋ, ಅದನ್ನು ನೇರವಾಗಿ, ಮನಮುಟ್ಟುವಂತೆ ಹೇಳುವ ಅವಕಾಶ ನಿರ್ದೇಶಕರಿಗಿತ್ತು. ಆದರೆ, ಅದರ ಬದಲಾಗಿ ಸಾಕಷ್ಟು ಸುತ್ತಿ ಬಳಸಿ ಹೇಳಿರುವುದು ಸಿನಿಮಾದ ವೇಗಕ್ಕೆ ಅಡ್ಡಿಯುಂಟು ಮಾಡಿದೆ. ಟೀನೇಜ್‌ ಹುಡುಗಿಯರ ಸ್ಕೂಲ್‌ ಪುರಾಣದೊಂದಿಗೆ ತೆರೆದುಕೊಳ್ಳುವ ಕಥೆಯಲ್ಲಿ ಬಹುತೇಕ ಸಮಯವನ್ನು ಅವರ ಮೋಜು, ಮಸ್ತಿ, ತರಲೆಗೆ ಮೀಸಲಿಡಲಾಗಿದೆ. ಇಲ್ಲಿ ಹೇಳಿಕೊಳ್ಳುವಂಥದ್ದೇನೂ ಆಗುವುದಿಲ್ಲ. ಆದರೆ, ಆಗಾಗ ಜಾಗೃತರಾದಂತೆ ಕಂಡುಬರುವ ನಿರ್ದೇಶಕರು ಚಿತ್ರದ ಮೂಲ ಆಶಯವನ್ನು ಕೆಲವು ದೃಶ್ಯಗಳ ಮೂಲಕ ಎಚ್ಚರಿಸುತ್ತಲೇ ಇರುತ್ತಾರೆ.

ಮೊದಲೇ ಹೇಳಿದಂತೆ ಚಿತ್ರದ ಕಥೆ ಹಾಗೂ ಆಶಯ ಚೆನ್ನಾಗಿದೆ. ಆದರೆ, ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡಬೇಕಿತ್ತು. ಸಿನಿಮಾದ ಮೊದಲರ್ಧ ಬರುವ ಅನೇಕ ದೃಶ್ಯಗಳಿಗೆ ಕತ್ತರಿ ಹಾಕಿ, ಕಥೆಯನ್ನೇ ಮತ್ತಷ್ಟು ಬೆಳೆಸುವ ಅವಕಾಶವಿತ್ತು. ದ್ವಿತೀಯಾರ್ಧದಲ್ಲಿ ಸಿನಿಮಾ ಹೆಚ್ಚು ಗಂಭೀರವಾಗುತ್ತಾ ಸಾಗುತ್ತದೆ. ಇಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತವೆ. ಹಾಗೆ ನೋಡಿದರೆ ಸಿನಿಮಾ ಸತ್ವ ಅಡಗಿರೋದು ಕೂಡಾ ಇಲ್ಲೇ ಎನ್ನಬಹುದು. ಹುಡುಗಿಯೊಬ್ಬಳ ಜೀವನದಲ್ಲಿ ನಡೆಯುವ ಘಟನೆ, ಅದರ ವಿರುದ್ಧ ಹೋರಾಡಿದಾಗ ಅದಕ್ಕೆ ಸಿಗುವ ತೀರ್ಪು … ಇಂತಹ ಅಂಶಗಳೊಂದಿಗೆ ಕಥೆಯನ್ನು ಗಟ್ಟಿಗೊಳಿಸಲಾಗಿದೆ. 

Advertisement

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಸ್ವಾತಿ ಶರ್ಮಾ ತಕ್ಕಮಟ್ಟಿಗೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಗೆ ನೋಡಿದರೆ ಸಿನಿಮಾದ ದ್ವಿತೀಯಾರ್ಧವನ್ನು ಆವರಿಸಿಕೊಂಡಿರೋದು ಸ್ವಾತಿ. ತಮ್ಮ ಪಾತ್ರಕ್ಕೆ ಮತ್ತಷ್ಟು ನ್ಯಾಯ ಒದಗಿಸುವ ಅವಕಾಶ ಸ್ವಾತಿಗಿತ್ತು. ನಾಯಕ ನಕುಲ್‌ ಕೆಲ ಹೊತ್ತು ಬಂದರೂ ಲವಲವಿಕೆಯಿಂದ ನಟಿಸಿದ್ದಾರೆ. ಉಳಿದಂತೆ ಭಾರತಿ ವಿಷ್ಣುವರ್ಧನ್‌, ದತ್ತಣ್ಣ, ಚಂದ್ರಶೇಖರ್‌, ಉಷಾ ಭಂಡಾರಿ, ಜ್ಯೋತಿ ರೈ ಸೇರಿದಂತೆ ಸಾಕಷ್ಟು ಮಂದಿ ಹಿರಿಯ ಕಲಾವಿದರು ನಟಿಸಿದ್ದಾರೆ. ಶಂಕರ್‌ ಅವರ ಛಾಯಾಗ್ರಹಣದಲ್ಲಿ ಚಿಕ್ಕಮಗಳೂರು ಸೊಬಗು ಕಂಡಿದೆ.

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ನಿರ್ಮಾಣ: ಜಿ.ಪಿ.ಪ್ರಕಾಶ್‌
ನಿರ್ದೇಶನ: ವಿವಿನ್‌ ಸೂರ್ಯ
ತಾರಾಗಣ: ಸ್ವಾತಿ ಶರ್ಮಾ, ನಕುಲ್‌, ಭಾರತಿ ವಿಷ್ಣುವರ್ಧನ್‌, ದತ್ತಣ್ಣ, ಚಂದ್ರಶೇಖರ್‌, ಉಷಾ ಭಂಡಾರಿ, ಜ್ಯೋತಿ ರೈ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next