Advertisement

ಈ ಬಾರಿ ಪಾಲಿಕೆ ಸಾಮಾನ್ಯ ಸಭೆ ಅನುಮಾನ

11:38 AM Mar 27, 2022 | Team Udayavani |

ಲಾಲ್‌ಬಾಗ್‌: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆ ಮುಂದೂಡಿಕೆಯಾದ ಪರಿಣಾಮ ಮಾರ್ಚ್‌ ತಿಂಗಳ ಪಾಲಿಕೆ ಸಾಮಾನ್ಯ ಸಭೆ ನಡೆಯುವುದು ಅನುಮಾನವಾಗಿದೆ.

Advertisement

ಪಾಲಿಕೆ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್‌ ಅಧಿಕಾರಾವಧಿ ಮಾ. 2ಕ್ಕೆ ಕೊನೆಗೊಂಡಿದ್ದರೂ, ಕಾನೂನಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಪ್ರಸ್ತುತ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ಸರಕಾರದ ಮುಂದಿನ ಆದೇಶ ಬರುವವರೆಗೆ ವಿಸ್ತರಣೆಗೊಂಡಿದೆ. ಈಗಾಗಲೇ ರಚನೆಗೊಂಡಿರುವ ಸ್ಥಾಯೀ ಸಮಿತಿಗಳಿಗೂ ಯಾವುದೇ ರೀತಿಯ ಅಧಿಕಾರ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ನಡೆಸಬಹುದೇ? ಎಂಬ ಬಗ್ಗೆ ನಿರ್ದೇಶನ ಪಡೆದುಕೊಳ್ಳಲು ಪಾಲಿಕೆಯಿಂದ ರಾಜ್ಯ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ.

ಸರಕಾರದಿಂದ ತುರ್ತಾಗಿ ಸೂಕ್ತ ನಿರ್ದೇಶನ ಬರದಿದ್ದರೆ ಈ ಬಾರಿಯ ಸಾಮಾನ್ಯ ಸಭೆ ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಈ ಹಿಂದೆಯೂ ಮನಪಾ ಸಾಮಾನ್ಯ ಸಭೆ ರದ್ದುಗೊಂಡ ಉದಾಹರಣೆಯಿದೆ. ಕಾಂಗ್ರೆಸ್‌ ಆಡಳಿತಾವಧಿ 2019ರ ಮಾ.11ಕ್ಕೆ ಮುಕ್ತಾಯವಾದ ಬಳಿಕ ಆಡಳಿತಾಧಿಕಾರಿಗಳ ನೇಮಕವಾಗಿತ್ತು. ಬಳಿಕ ಪಾಲಿಕೆ ಸದಸ್ಯರ ಚುನಾವಣೆಗಾಗಿ ಮೀಸಲಾತಿ ಪ್ರಕಟವಾಗಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆಮಾಡಿದ ಹಿನ್ನೆಲೆಯಲ್ಲಿ ಚುನಾವಣೆಯೂ ತಡವಾಗಿತ್ತು. ಪಾಲಿಕೆ ಚುನಾವಣೆ ನಡೆದ ಬಳಿಕ ಮೇಯರ್‌ ಮೀಸಲಾತಿ ಬರಲು ಮತ್ತೆ ಕೆಲವು ತಿಂಗಳು ಕಾಯಬೇಕಾಯಿತು. ಹೀಗಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಪಾಲಿಕೆ ಸಾಮಾನ್ಯ ಸಭೆ ನಡೆಯಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಹಲವು ತಿಂಗಳವರೆಗೆ ಪಾಲಿಕೆ ಸಭೆ ರದ್ದುಗೊಂಡಿತ್ತು.

ಎಪ್ರಿಲ್‌ ಅಂತ್ಯದೊಳಗೆ ಚುನಾವಣೆ ಸಾಧ್ಯತೆ

ಕಾನೂನಾತ್ಮಕ ಕಾರಣದ ಹಿನ್ನೆಲೆಯಲ್ಲಿ ಮೇಯರ್‌ ಚುನಾವಣೆ ಮೂಂದೂಡಲಾಗಿದ್ದು, ಎಪ್ರಿಲ್‌ ತಿಂಗಳಾಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರದ ರಾಹುಲ್‌ ರಮೇಶ್‌ ಎಂಬವರು ಸುಪ್ರಿಂಕೋರ್ಟ್‌ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿ ಆದೇಶ ನೀಡಿದೆ. ಹೀಗಾಗಿ, ನ್ಯಾಯಾಲಯದ ಈ ಆದೇಶದ ಬಗ್ಗೆ ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್‌, ಉಪ ಮೇಯರ್‌, 4 ಸ್ಥಾಯೀ ಸಮಿತಿ ಚುನಾವಣೆ ಮಾ. 2ರಂದು ನಿಗದಿಪಡಿಸಿದ್ದರೂ, ಚುನಾವಣೆಯನ್ನು ಮುಂದೂಡಲಾಗಿದೆ.

Advertisement

ಸರಕಾರಕ್ಕೆ ಪತ್ರ

ಕಾನೂನಾತ್ಮಕ ಕಾರಣದ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ಮುಂದೂಡಲಾಗಿದೆ. ಯಾವಾಗ ಚುನಾವಣೆ ನಡೆಯುತ್ತದೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಸ್ಥಾಯೀ ಸಮಿತಿಗಳಿಗೆ ಯಾವುದೇ ರೀತಿಯ ಅಧಿಕಾರ ಇರುವುದಿಲ್ಲ. ಹೀಗಿದ್ದಾಗ ಪಾಲಿಕೆ ಸಾಮಾನ್ಯ ಸಭೆ ನಡೆಸಬಹುದೇ ಎಂಬ ಬಗ್ಗೆ ಸೂಚನೆ ಪಡೆಯಲು ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು. ಸರಕಾರದಿಂದ ಸೂಕ್ತ ನಿರ್ದೇಶನ ದೊರಕುವವರೆಗೆ ಪಾಲಿಕೆ ಸಾಮಾನ್ಯ ಸಭೆ ನಡೆಯುವುದಿಲ್ಲ. ಅಕ್ಷಯ್‌ ಶ್ರೀಧರ್‌, ಪಾಲಿಕೆ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next