Advertisement

ಜೀರೋದಿಂದಲೇ ಹೊರಡಿ…

06:00 AM Aug 07, 2018 | |

ಅಸಲಿಗೆ ಮನುಷ್ಯರನ್ನು ಜೀವಂತವಾಗಿರಿಸುವುದೇ ಈ ಆಸೆಗಳು. ಬೆಳಗನ್ನು ಕಾಯುವುದೇ ನಿತ್ಯದ ಅದ್ಯಾವುದೋ ಕನವರಿಕೆಗಳು. ಬೆಳಗಿನ ಕೋರಿಕೆ ಸಂಜೆ ಕಣ್ಮುಂದೆ ಸಿಗುವುದಾದರೆ, ಆ ಬದುಕಿನಲ್ಲಿ ಅಂಥ ಜೋಶ್‌ ಏನಿರುತ್ತೆ? ಎಲ್ಲವೂ ಪಿತ್ರಾರ್ಜಿತವಾಗಿ ಬಂದರೆ, ನಮ್ಮ ಪಯಣದಲ್ಲಿ ಹೆಜ್ಜೆಗಳೇ ಮೂಡುವುದಿಲ್ಲ. ಹಾರಿ ಮುಂದೆ ಹೋಗಿ ಹಿಂತಿರುಗಿ ನೋಡಿದಾಗ, ಬಂದ ಹಾದಿಯೂ ಕಾಡುವಂತಿರುವುದಿಲ್ಲ…

Advertisement

ಅದು ವ್ಯಕ್ತಿತ್ವ ವಿಕಸನದ ಕ್ಲಾಸು. ಅವನು ತಡವಾಗಿ ತರಗತಿಗೆ ಬಂದಿದ್ದ. ಕ್ಲಾಸು ಭರ್ತಿ ಇದ್ದಿದ್ದರಿಂದ, ನನ್ನ ಪಕ್ಕದ ಖಾಲಿ ಸೀಟಿನಲ್ಲಿ ಬಂದು ಕುಳಿತ. ಅವನ ನಿಸ್ತೇಜ ಕಣ್ಣುಗಳು ಏನೋ ಕತೆ ಹೇಳುತ್ತಿದ್ದವು. ಹಾಗೇ ಮಾತಿಗಿಳಿದ. ಅದೇ ಸಿನಿಮಾಗಳ ಕತೆಯೇ, ಅವನಿಗೆ ಆಸ್ತಿಯಂತಿತ್ತು. ಅದೆಷ್ಟು ದುಬಾರಿ ವಸ್ತುವಾಗಿದ್ದರೂ ಸರಿ, ಬೆಳಗ್ಗೆ ಕೇಳಿದರೆ ರಾತ್ರಿ ಕಣ್ಮುಂದೆ ಬರುವಷ್ಟು ಸಿರಿವಂತಿಕೆ ಅವನದ್ದು. ಅದ್ಯಾವುದೋ ದೊಡ್ಡ ಪರೀಕ್ಷೆ ಕಟ್ಟಿ ಕಟ್ಟಿ ಸೋತಿದ್ದಾನೆ. ಏನೋ ಗುಂಗನ್ನು ತಲೆಗೇರಿಸಿಕೊಂಡಿದ್ದಾನೆ. ಒಂದಷ್ಟು ಮಾತಾಡುತ್ತಿದ್ದಂತೆ, ಆತನಿಗೆ ಆಪ್ತವೆನಿಸಿತೋ ಏನೋ, ಸ್ವಲ್ಪ ಹಗುರಾದಂತೆ ವರ್ತಿಸಲು ಶುರುಮಾಡಿದ. “ಅಕ್ಕ ಎಂದು ಕರೆಯಬಹುದು’ ಎಂದೆ. ಹಲವು ವರ್ಷಗಳ ಪರಿಚಿತ ನಗೆಬೀರಿದ.

  ಕ್ಲಾಸ್‌ ಮುಗಿಸಿ ಹಿಂದಿರುಗುವ ಹಾದಿ. ಅವನಂಥ ಮನಃಸ್ಥಿತಿಗಳ ಚಿತ್ರಗಳೇ ಕಣ್ಮುಂದೆ ಬಂದವು. ಹತ್ತನ್ನೆರಡು ವರ್ಷಗಳ ಹಿಂದೆ, ದಾವಣಗೆರೆಯ ಹಾಸ್ಟೆಲ್‌ನಲ್ಲಿ ಮೆಡಿಕಲ್‌ ಓದುವ ಹುಡುಗಿಯರು ಹೇಳುತ್ತಿದ್ದ ಕತೆಗಳು ನೆನಪಿನ ಕಿಟಕಿಯಿಂದ ಇಣುಕಿದವು. ಉತ್ತರ ಭಾರತದಿಂದ ಪೇಮೆಂಟ್‌ ಸೀಟ್‌ ಪಡೆದು ಓದಲು ಬಂದ ಹುಡುಗರು… ಏನಿರುತ್ತಿರಲಿಲ್ಲ ಅವರ ಬಳಿ? ಸಲ್ಮಾನ್‌ ಖಾನ್‌, ಅಮೀರ್‌ಖಾನ್‌ರನ್ನೂ ಮೀರಿಸುವ ಲುಕ್ಕು, ಒಂದು ಕರೆಮಾಡಿದರೆ ಅಕೌಂಟ್‌ಗೆ ಬಂದುಬೀಳುವ ಹಣ, ಬಯಸಿದ್ದಲ್ಲಿಗೆ ಹೊತ್ತೂಯ್ಯುವ ಕಾರು, ಹಿಂದೆ ಸುತ್ತುವ ಹುಡುಗಿಯರು… ಹೀಗೆ. ಪಾಸ್‌ ಆಗದಿದ್ದರೆ, ಸರ್ಟಿಫಿಕೆಟ್‌ ಕೊಳ್ಳಬಲ್ಲವರು ಅವರೆಲ್ಲ. ಶ್ರಮದ ಅಗತ್ಯವೇ ಇಲ್ಲದೇ, ಈತನಂತೆಯೇ ಬದುಕುತ್ತಿದ್ದವರು. ಎಲ್ಲ ಅಭ್ಯಾಸಗಳಿಗೂ ಅಂಟಿಕೊಂಡು, ಕೊನೆಗೆ ಡ್ರಗ್ಸ್‌ನ ಅಮಲಿನಲ್ಲಿ ಆಸ್ಪತ್ರೆಯ ರೆಸ್ಟ್‌ರೂಮ್‌ಗಳ ಹತ್ತಿರ ಬಿದ್ದಿರುತ್ತಿದ್ದರು. ಆಗ ಮೊಬೈಲ್‌ ನಮ್ಮನ್ನೆಲ್ಲ ಆವರಿಸದೇ ಇದ್ದಿದ್ದರಿಂದ, ಹುಣ್ಣಿಮೆಯ ಟೆರೇಸಿನಲ್ಲಿ ಇವರ ಕತೆಗಳೇ ವಸ್ತುವಾಗುತ್ತಿದ್ದವು.

  ರಿಂಗಣಿಸಿದ ಮೊಬೈಲು ನನ್ನನ್ನು ಆಲೋಚನೆಗಳಿಂದ ಹೊರತಂದಿತು. ಆ ನಂಬರ್‌ ನೋಡಿದಾಗ ಮತ್ತದೇ ಚಿತ್ರಗಳು. ಶ್ರಮವಿಲ್ಲದೇ ಹುದ್ದೆಗೆ ಬಂದು, ಬೆಟ್ಟದಷ್ಟು ಆಸ್ತಿಯನ್ನು ಕರಗಿಸಲು ಹೊರಟಿದ್ದ ಕುಬೇರನ ಕರೆ. ಬದುಕಿನ ಜವಾಬ್ದಾರಿಯನ್ನು ಹೊತ್ತವನೇ ಅಲ್ಲ. ಅಪ್ಪ ಕೂಡಿಟ್ಟ ಸಂಪತ್ತೇ, ಅವನ ಬದುಕಿನ ಗತ್ತು- ಗೈರತ್ತು. ದೊಡ್ಡ ಹುದ್ದೆಯಲ್ಲಿರುವವರ ಮಕ್ಕಳೆಲ್ಲ ಯಾಕೆ ಹೀಗಾಗ್ತಾರೆ? ಇದೆಲ್ಲ ಅಗತ್ಯಗಳು ಜಾಸ್ತಿ ಸಿಕ್ಕಿದ್ದರ ಫ‌ಲವೇ? ನನ್ನೊಳಗೇ ಪ್ರಶ್ನೆ.

  ಆಗ ತಾನೆ ಬಿದ್ದ ಸೋನೆ ಮಳೆ. ಅರೆನೆನೆದ ರಸ್ತೆಯಲ್ಲಿ ಮಳೆಯದ್ದೇ ಘಮ. ಅಲ್ಲಿ ಹೆಜ್ಜೆ ಊರುವಾಗಲೂ ನಿಸ್ತೇಜ ಕಣ್ಣೆದುರು ಸುಳಿದಾಡಿದವು. ಹೌದು, ಅಂದು ಅದೆಷ್ಟೊಂದು ಅಗತ್ಯಗಳಿದ್ದವು ನಮಗೆ? ಒಂದು ಬಣ್ಣದ ಪೆನ್ಸಿಲ್‌ ಪಾಕೇಟ್‌ಗಾಗಿ ಅದೆಷ್ಟು ದಿನ ಅಮ್ಮನನ್ನು ಗೋಗರೆದಿದ್ದೆ! ಅದರ ಬೆಲೆ ಆಗ ಮೂರು ರೂಪಾಯಿ ಮಾತ್ರವೇ ಆಗಿದ್ದರೂ, ಅದನ್ನು ಕೊಡಿಸಲು ಅಮ್ಮ ಪಟ್ಟ ಪಾಡು ಎಂಥದ್ದು? ಅದು ಸಿಕ್ಕ ದಿನ ಏನೋ ಗೆದ್ದಂತೆ ಸಂಭ್ರಮಿಸಿದ್ದೆ. ಅಕ್ಕನ ಬುಕ್ಸ್‌, ಯೂನಿಫಾರಂ ನನಗೆ. ನನ್ನದು ತಂಗಿಗೆ. ವರ್ಷದ ಕೊನೆಗೆ ಬಳಸಿದ ನೋಟ್‌ ಬುಕ್‌ಗಳ ಉಳಿದ ಹಾಳೆಗಳನ್ನು ಕಿತ್ತು ಬೈಂಡ್‌ ಮಾಡಿಸಿ, ಮತ್ತೆ ಉಪಯೋಗಕ್ಕೆ ಕೊಡುತ್ತಿದ್ದರು.

Advertisement

   ವರ್ಷಕ್ಕೆ ಎರಡು ಸಲ ಮಾತ್ರವೇ ಹೊಸ ಬಟ್ಟೆ. ಆದರದು ಮತ್ತೂಂದು ಹೊಸದು ಬರುವವರೆಗೂ ಹೊಸದಾಗಿಯೇ ಇರುತ್ತಿತ್ತು. ನಾಲ್ಕೆçದು ಮೈಲು ದೂರದಿಂದ ದೊಡ್ಡ ಮಣ್ಣಿನ ಗಡಿಗೆಗಳಲ್ಲಿ ನೀರು ಹೊತ್ತು ತರುವಾಗ ಅಮ್ಮನಿಗೆ ಆಯಾಸ ಎನ್ನುವುದು ಎಲ್ಲಿತ್ತು? ನಾನಾದರೂ ಎಂದು ದಣಿದಿದ್ದೆ? ಇಂದು ಎರಡನೇ ಕ್ಲಾಸ್‌ನ ಮಕ್ಕಳಿಗೆ ಟ್ಯಾಬ್‌, ಪಾಕೇಟ್‌ ಮನಿ, ವಾರಾಂತ್ಯಕ್ಕೆ ಪೂರ್ತಿಯಾಗುವ ಅವರ ಎಲ್ಲಾ ಬೇಕುಗಳು… ಇಲ್ಲಗಳೇ ಇಲ್ಲದ ಬದುಕು ಇವರದ್ದೆಲ್ಲ. ಜೀವನಕ್ಕೆ ಈ ಅಗತ್ಯಗಳೇ ಹೆಚ್ಚಾಗಿ, ಇಂದು ನಗರಜೀವಿಗಳು ಕೌನ್ಸೆಲಿಂಗ್‌ ಸೆಂಟರ್‌ನ ಕದ ಬಡಿಯುತ್ತಿದ್ದಾರೆ. “ದಮ್ಮಯ್ಯ, ನಮ್ಮನ್ನು ಸರಿಮಾಡಿ…’ ಅಂತ ಕಾಲಿಗೆ ಬೀಳ್ಳೋದನ್ನು ನೋಡಿ, ಮನಸ್ಸೋಮ್ಮೆ ಖಾಲಿ ಆಗುತ್ತೆ.

  ಈ ಆಲೋಚನೆಗಳಲ್ಲಿ ಹೆಜ್ಜೆ ಹಾಕುತ್ತಿದ್ದವಳು ಹೋಗಿ, ಹಳ್ಳಿಯ ಹೆಂಗಸೊಬ್ಬಳಿಗೆ ಡಿಕ್ಕಿಯಾದೆ. ಅವಳು ದುರುಗುಟ್ಟಲಿಲ್ಲ. ಬಯ್ಯಲೂ ಇಲ್ಲ. ನಕ್ಕಳಷ್ಟೇ. ಆ ನಗುವಿನಲ್ಲಿ ಏನಿತ್ತೋ ಮದ್ದು? ಮತ್ತೆ ತಾಜಾತನಕ್ಕೆ ಮರಳಿದೆ. ಅವಳ ಮುಖದಲ್ಲಿ “ಅಗತ್ಯಕ್ಕಿಂತ ಅತಿಯಾದದ್ದು’ ಏನೂ ಕಾಣಿಸಲಿಲ್ಲ. ಬದುಕಿನ ಕನಿಷ್ಠ ಅಗತ್ಯವೇ ತನಗಿನ್ನೂ ಸಿಕ್ಕಿಲ್ಲವೆಂಬ ನೋವು ಅವಳಲ್ಲಿತ್ತಾದರೂ, ಅದನ್ನು ಆಕೆ ತೋರಿಸಿಕೊಳ್ಳಲು ಹೋಗಲಿಲ್ಲ.

  ಅಸಲಿಗೆ, ಮನುಷ್ಯರನ್ನು ಜೀವಂತವಾಗಿರಿಸುವುದೇ ಈ ಆಸೆಗಳು. ಬೆಳಗನ್ನು ಕಾಯುವುದೇ ನಿತ್ಯದ ಅದ್ಯಾವುದೋ ಕನವರಿಕೆಗಳು. ಬೆಳಗಿನ ಕೋರಿಕೆ ಸಂಜೆ ಕಣ್ಮುಂದೆ ಸಿಗುವುದಾದರೆ, ಆ ಬದುಕಿನಲ್ಲಿ ಅಂಥ ಜೋಶ್‌ ಏನಿರುತ್ತೆ? ಎಲ್ಲವೂ ಪಿತ್ರಾರ್ಜಿತವಾಗಿ ಬಂದರೆ, ನಮ್ಮ ಪಯಣದಲ್ಲಿ ಹೆಜ್ಜೆಗಳೇ ಮೂಡುವುದಿಲ್ಲ. ಹಾರಿ ಮುಂದೆ ಹೋಗಿ ಹಿಂತಿರುಗಿ ನೋಡಿದಾಗ, ಬಂದ ಹಾದಿಯೂ ಕಾಡುವಂತಿರುವುದಿಲ್ಲ.

“ತೋಡಾ ಹೈ ತೋಡೆ ಜರೂರತ್‌ ಹೈ
ಜಿಂದಗೀ ಫೋಟೋ ಭೀ ಯಹಾ
ಖೂಬ್‌ಸೂರತ್‌ ಹೈ…’

  ಕೊರತೆಗಳಿರಬೇಕು. ಶ್ರಮದಿಂದಲೇ ಅವನ್ನು ನೀಗಿಸಿಕೊಳ್ಳಬೇಕು. ಹಾಗಾಗಿ, ಬದುಕನ್ನು ಸೊನ್ನೆಯಿಂದ ಕಟ್ಟಲು ಶುರುಮಾಡಿ. ಬದುಕು ಎಲ್ಲವನ್ನೂ ಕೊಟ್ಟುಬಿಟ್ಟರೆ, ಬಯಕೆಗೆ ಬೆಲೆ ಬರುವುದೆಂತು? 

ಮಂಜುಳಾ ಡಿ.

Advertisement

Udayavani is now on Telegram. Click here to join our channel and stay updated with the latest news.

Next