Advertisement

ಕಲಿಕೆಯ ಪಯಣ

07:55 AM Oct 13, 2017 | Harsha Rao |

ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನು ಶರಣ ಕಣೋ

Advertisement

“ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಹೊಸ ತಪ್ಪುಗಳನ್ನು ಮಾಡಲು ನಾನು ಓಪನ್‌ ಆಗಿದ್ದೇನೆ …’
 – ಹೀಗೆ ಹೇಳಿ ನಕ್ಕರು ಶರಣ್‌. ಶರಣ್‌ ಯಾವ ತಪ್ಪುಗಳನ್ನು ತಿದ್ದಿಕೊಂಡರು, ಮತ್ಯಾವ ಹೊಸ ತಪ್ಪು ಮಾಡಲು ಓಪನ್‌ ಆಗಿದ್ದಾರೆಂದು ನೀವು ಕೇಳಿದರೆ ಅದಕ್ಕೆ ಉತ್ತರ ಸಿನಿಮಾ ಮತ್ತು ಸಿನಿಮಾ. ನೀವು ಸೂಕ್ಷ್ಮವಾಗಿ ಗಮನಿಸಿದರೆ, “ಅಧ್ಯಕ್ಷ’ ನಂತರ ಶರಣ್‌ ಅವರ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಸಿನಿಮಾ ಬಿಡುಗಡೆಗೆ ಮುಂಚೆ ಆ ಚಿತ್ರಗಳು ನಿರ್ಮಾಪಕರನ್ನು ಸೇಫ್ ಮಾಡಿರಬಹುದು. ಆದರೆ, ಥಿಯೇಟರ್‌ಗೆ ಬಂದ ನಂತರ ನಿರೀಕ್ಷಿತ ಮಟ್ಟ ತಲುಪಲೇ ಇಲ್ಲ. ಅದು “ರಾಜ ರಾಜೇಂದ್ರ’ ಆಗಿರಬಹುದು, “ಬುಲೆಟ್‌ ಬಸ್ಯಾ’ ಆಗಿರಬಹುದು ಅಥವಾ ಇತ್ತೀಚೆಗೆ ತೆರೆಕಂಡ “ರಾಜ್‌-ವಿಷ್ಣು’ನೇ ಆಗಿರಬಹುದು. ಈ ಚಿತ್ರಗಳಾÂವುವು ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ನಿಲ್ಲಲೇ ಇಲ್ಲ. ಹಾಗಂತ ಶರಣ್‌ಗೆ ಇಲ್ಲಿಯವರೆಗೆ ಮಾಡಿರುವ ಯಾವ ಸಿನಿಮಾಗಳ ಬಗ್ಗೆಯೂ ಬೇಸರವಿಲ್ಲ. 

“ಸಿನಿಮಾದ ಸೋಲಿಗೆ ಕಾರಣ ಗೊತ್ತಾದರೆ ಜನ ದೇವರಾಗಿ ಬಿಡ್ತಾರೆ. ನಾನು ಮಾಡಿದ ಸಿನಿಮಾಗಳ ಬಗ್ಗೆ ನನಗೆ ಯಾವ ಪಶ್ಚಾತ್ತಾಪ ಇಲ್ಲ. ಇವತ್ತಿಗೂ ಜನ ನನ್ನ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. “ಜೈಲಲಿತಾ” ಲೇಡಿ ಗೆಟಪ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ನಾನು ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ಹೊಸತನ ಬಯಸುತ್ತೇನೆ. ಆ ಹೊಸ ಹಾದಿಯಲ್ಲಿ ನಾನು ಎಡವಿರಬಹುದು, ತಪ್ಪು ಮಾಡಿರಬಹುದು. ಆ ಬಗ್ಗೆ ನನಗೆ ಬೇಸರವಿಲ್ಲ. ಎಲ್ಲಿ ತನಕ ನಾನು ತಪ್ಪುಗಳನ್ನು ಮಾಡಲು ರೆಡಿ ಇರೋದಿಲ್ವೋ, ಅಲ್ಲಿ ತನಕ ನಾನು ಪಫೆìಕ್ಟ್ ಆಗೋದಿಲ್ಲ. ಈ ಹಿಂದಿನ ಕೆಲವು ಸಿನಿಮಾಗಳಲ್ಲಿ ನಾನು ಮಾಡಿದ ತಪ್ಪು ನನಗೆ ಗೊತ್ತಾಗಿದೆ. ಆ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದೇನೆ. ಹೊಸ ತಪ್ಪುಗಳಿಗೆ ನಾನು ತೆರೆದಿದ್ದೇನೆ. ನಾನು  ಹೊಸತನದ ಕಲಿಕೆಯ ಜರ್ನಿಯಲ್ಲಿದ್ದೇನೆ’ ಎಂದು ತಮ್ಮ ಸಿನಿಮಾ ಆಯ್ಕೆಯ ಬಗ್ಗೆ ಮಾತನಾಡುತ್ತಾರೆ ಶರಣ್‌. 

ಶರಣ್‌ ಏಕಾಏಕಿ ಹೀರೋ ಆದವರಲ್ಲ. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡ ನಂತರ ಹೀರೋ ಆದವರು ಶರಣ್‌. ಹಾಗಾಗಿ, ಅವರಿಗೆ ಕಾಮಿಡಿ ಸಿನಿಮಾಗಳ ಪಲ್ಸ್‌ ಗೊತ್ತಿದೆ. ಕಾಮಿಡಿ ಸಿನಿಮಾ ಮಾಡೋದು ಎಷ್ಟು ಕಷ್ಟ ಮತ್ತು ಸವಾಲಿನ ಕೆಲಸ ಎಂಬುದು ಅವರಿಗೆ ಇಷ್ಟು ವರ್ಷಗಳ ಅನುಭದಲ್ಲಿ ತಿಳಿದಿದೆ. “ಕಾಮಿಡಿ ಪ್ರಪಂಚದಲ್ಲಿ ಮಾಡಿದ್ದನ್ನು ಮಾಡೋ ಹಾಗಿಲ್ಲ. ಒಂದೇ ಜೋಕ್‌ ಅನ್ನು ಮೂರು ಸಲ ಹೇಳಿದ್ರೆ ನಗು ಬರಲ್ಲ.

ಕಾಮಿಡಿಗಿರುವ ನಿರ್ಬಂಧವದು. ಒಮ್ಮೆ ಮಾಡಿದ ಕಾಮಿಡಿ ರಿಪೀಟ್‌ ಆಗಬಾರದು. ಆ ತರಹದ ಸವಾಲು ಕಾಮಿಡಿ ನಟನಿಗೆ ಇದೆ. ಏನಾದರೂ ಬೇರೆ ಮಾಡ್ತೀನಿ ಅಂತ ಹೋದಾಗ “ಇವನಿಗೆ ಅದು ಬೇಕಾಗಿತ್ತಾ’ ಅನ್ನೋ ಮಾತು ಬರುತ್ತದೆ, ಈ ತರಹದ ಸಂದಿಗ್ಧತೆಯಲ್ಲಿ ಹೊಸತನವನ್ನು ಹುಡುಕೋದು ಕೂಡಾ ತುಂಬಾ ಸವಾಲಿನ ಕೆಲಸ’ ಎನ್ನುವುದು ಶರಣ್‌ ಮಾತು. 

Advertisement

ಸಿನಿಮಾಗಳ ಫ‌ಲಿತಾಂಶ ಏನೇ ಆದರೂ ಶರಣ್‌ ಮಾತ್ರ ಹೊಸ ಪ್ರಯೋಗ ಮಾಡೋದನ್ನು ನಿಲ್ಲಿಸೋದಿಲ್ಲವಂತೆ. ಹೊಸದನ್ನು ಹುಡುಕುತ್ತಲೇ ಸಾಗುತ್ತೇನೆ ಎನ್ನುತ್ತಾರೆ. “ಸೋಲು, ಗೆಲುವು ನಮ್ಮ ಕೈ ಮೀರಿರುವ ಅಂಶ. ಸೋಲಿಗೆ ಕಾರಣವನ್ನು ಹುಡುಕುತ್ತಿರುತ್ತೇನೆ. ಈಗಲೂ ಆ ಹುಡುಕಾಟ, ಅನ್ವೇಷಣೆಯಲ್ಲೇ ಇದ್ದೇನೆ. ಫ‌ಲಿತಾಂಶ ಏನೇ ಇರಬಹುದು. ಹೊಸ ಪ್ರಯತ್ನ ಮಾಡೋದು ನಿಲ್ಲಿಸೋದಿಲ್ಲ. ಒಂದು ಸಿನಿಮಾ ಚೆನ್ನಾಗಿ ಹೋದ ಕೂಡಲೇ ಆ ನಂತರದ ಸಿನಿಮಾ ಕೂಡಾ ಅದೇ ರೀತಿ ಹೋಗಬೇಕಿತ್ತು ಎಂದು ಬಯಸುತ್ತೇವೆ. ಇದು ಒಬ್ಬ ನಟನಿಗೆ ನಿಜಕ್ಕೂ ತುಂಬಾ ಸವಾಲು. ನನ್ನ ಕೆರಿಯರ್‌ನಲ್ಲಿ ಸಕ್ಸಸ್‌ ಒಂದೈದು ಪಾಠ ಕಲಿಸಿದರೆ, ಸೋಲು ಹತ್ತು ಪಾಠ ಕಲಿಸಿದೆ. ಎರಡರಿಂದಲೂ ಕಲಿತಿದ್ದೇನೆ. ಹಾಗಂತ ಹೊಸದನ್ನು ಹುಡುಕುವುದನ್ನು ನಿಲ್ಲಿಸೋದಿಲ್ಲ. ಸೋಲು-ಗೆಲುವಿನ ಆಯುಧ ಇಟ್ಟುಕೊಂಡು ಮುಂದಿನ ಸಿನಿಮಾದಲ್ಲೂ ಅದರ ಹುಡುಕಾಟದಲ್ಲೇ ಇರುತ್ತೇನೆ’ ಎನ್ನುತ್ತಾರೆ ಶರಣ್‌.

ಶರಣ್‌ ಅವರ ಇತ್ತೀಚಿನ ಸಿನಿಮಾಗಳನ್ನು ನೋಡಿದವರಿಗೆ ಶರಣ್‌ ಕಾಮಿಡಿಯಿಂದ ಆ್ಯಕ್ಷನ್‌ನತ್ತ ಹೋಗುತ್ತಿದ್ದಾರಾ ಎಂದು ಭಾಸವಾಗುವಂತಹ ಆ್ಯಕ್ಷನ್‌ ದೃಶ್ಯಗಳಿದ್ದವು. ಶರಣ್‌ ಹೇಳುವಂತೆ ಕಥೆಗೆ ಪೂರಕವಾದ್ದರಷ್ಟೇ ಆ್ಯಕ್ಷನ್‌ ದೃಶ್ಯಗಳಿಗೆ ಮನ್ನಣೆ ಕೊಡುತ್ತಾರಂತೆ. “ನಾನು ಕಾಮಿಡಿ ಬಿಟ್ಟು, ಶರಣ್‌ ಶೈಲಿ ಬಿಟ್ಟು ಯಾವ ಸಿನಿಮಾನೂ ಮಾಡಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ನನ್ನ ಸಿನಿಮಾದ ಫೈಟಿಂಗ್‌ ಕೂಡಾ ಕಾಮಿಡಿ ಹಿನ್ನೆಲೆಯಲ್ಲೇ ಸಾಗುತ್ತದೆ. ಮೊದಲು ಒದೆ ತಿಂದು ಆ ನಂತರ ನಾನು ಹೊಡಿತೀನಿ.  ಸಿನಿಮಾ ಎಲ್ಲಾ ಆಡಿಯನ್ಸ್‌ಗೂ ತಲುಪಬೇಕು. ನಿರ್ಮಾಪಕರಿಗೆ ಎಲ್ಲಾ ಏರಿಯಾ ರೀಚ್‌ ಆಗಬೇಕೆಂಬ ಆಸೆ ಇರುತ್ತದೆ. ಕೆಲವು ಸೆಂಟರ್‌ಗಳಿಂದ, “ಸಿನಿಮಾ ಸಖತ್ತಾಗಿದೆ ಒಂದು ಫೈಟ್‌ ಇದ್ದಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು’ ಎಂಬ ಬೇಡಿಕೆ ಬರುತ್ತದೆ. ಆಗ “ಒಂದು ಕಾಮಿಡಿ ಫೈಟ್‌ ಆದರೂ ಇಡಬಹುದಿತ್ತಲ್ವಾ’ ಎಂಬ ಆಲೋಚನೆ ಬರುತ್ತದೆ. ಹಾಗಂತ  ಸುಖಾಸುಮ್ಮನೆ ಫೈಟ್‌ ಸೀನ್‌ ಮಾಡೋಕೆ ಇಷ್ಟವಿಲ್ಲ. ಕಥೆಗೆ ಅಗತ್ಯವಾಗಿದ್ದರೆ ಮಾತ್ರ ಮಾಡಬೇಕು. ಈ ಹಿಂದೆ “ನಟರಾಜ ಸರ್ವೀಸ್‌’ನಲ್ಲಿ ಒಂದೇ ಒಂದು ಫೈಟ್‌ ಇರಲಿಲ್ಲ. ಆ ತರಹದ ಪ್ರಯತ್ನ ಕೂಡಾ ಮಾಡಿದ್ದೀನಿ. ಒಂದಂತೂ ಸ್ಪಷ್ಟಪಡಿಸುತ್ತೇನೆ, ಕಾಮಿಡಿ ಬಿಟ್ಟು ಹೊರ ಹೋದಾಗ ಮಾತ್ರ ಶರಣ್‌ ಮಿಸ್‌ ಆಗಬಹುದು. ಆ ಕೆಲಸ ಯಾವತ್ತೂ ಮಾಡಲ್ಲ’ ಅಂತಾರೆ.

ಶರಣ್‌ ನಾಯಕರಾಗಿರುವ “ಸತ್ಯ ಹರಿಶ್ಚಂದ್ರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ತಿಂಗಳ 20ಕ್ಕೆ ಬಿಡುಗಡೆಯಾಗುತ್ತಿದೆ. 

– ರವಿ ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next