ಬೆಂಗಳೂರು: ನಿಮಗೆ ಧಮ್ ಇದ್ದರೆ, ತಾಕತ್ ಇದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಚರ್ಚೆಯಲ್ಲಿ ಅವರು ಮಾತನಾಡಿ, ಮಂಡ್ಯದಲ್ಲಿ ಸಚಿವ ಅಶ್ವತ್ಥನಾರಾಯಣ ನೀಡಿದ ಹೇಳಿಕೆಯನ್ನು ಮತ್ತೆ ಪ್ರಸ್ತಾವಿಸಿದರು. ಟಿಪ್ಪು ಸುಲ್ತಾನ್ ರೀತಿ ನನ್ನನ್ನು ಮೇಲಕ್ಕೆ ಕಳುಹಿಸಿ ಎಂದು ಹೇಳಿದ್ದಾರೆ. ನಾನು ಅದಕ್ಕೆಲ್ಲ ಬಗ್ಗುವವನಲ್ಲ. ಬೆದರಿಕೆ ಹಾಕಿದ ಕಾರಣಕ್ಕೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಿಮಗೆ ಧಮ್ ಇದ್ದರೆ, ತಾಕತ್ ಇದ್ದರೆ ಹೊಡೆದು ಹಾಕಿ ನೋಡೋಣ. ನಾನು ಎಲ್ಲ ರೀತಿಯ ಪರಿಸ್ಥಿತಿ ಎದುರಿಸುವುದಕ್ಕೆ ಸಿದ್ಧನಿದ್ದೇನೆ ಎಂದರು.
ಹೊಡಿಬಡಿ ಸಂಸ್ಕೃತಿಯನ್ನು ಯಾವುದೇ ಧರ್ಮ ಹೇಳುವುದಿಲ್ಲ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಕ್ಕೆ ಇವರಿಗೆ ಸಾಧ್ಯವಿಲ್ಲ. ಸೋತು ಹೋಗುತ್ತೇವೆಂಬ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಇದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಆರಗ ಜ್ಞಾನೇಂದ್ರ ಅವರೇ ನಿಮ್ಮ ಇಲಾಖೆ ಸತ್ತು ಹೋಗಿದೆ. ಇಲ್ಲವಾದರೆ ಪ್ರಚೋದನಾಕಾರಿ ಭಾಷಣ ಮಾಡಿದ ಅಶ್ವತ್ಥನಾರಾಯಣ ವಿರುದ್ಧ ಏಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಿಮ್ಮ ಬಳಿ ಮಾತನಾಡುವುದಕ್ಕೆ ಯಾವುದೇ ಸರಕಿಲ್ಲ. ಹೀಗಾಗಿ ಇಂಥ ವಿಚಾರಗಳನ್ನು ಪದೇಪದೆ ಪ್ರಸ್ತಾವ ಮಾಡುತ್ತಿದ್ದೀರಿ. ಅಶ್ವತ್ಥನಾರಾಯಣ ಅವರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬಳಿಕವೂ ಮತ್ತೆ ಚರ್ಚೆ ಏಕೆ? ನಿಮ್ಮ ಎದುರೇ ವಿಷಾದ ವ್ಯಕ್ತಪಡಿಸಿದ್ದಾರಲ್ಲ ? ನೀವು ಬಜೆಟ್ ಮೇಲೆ ಮಾತನಾಡಿ ಎಂದು ಹೇಳಿದರು.
Related Articles
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಆರಗ ಅವರೇ ನೀವು ಒಳ್ಳೆಯ ಮನುಷ್ಯ. ಆದರೆ ಗೃಹ ಇಲಾಖೆ ನಡೆಸಲು ಅಸಮರ್ಥ. ನೀವು ಸಮರ್ಥರಾಗಿದ್ದರೆ ಅಶ್ವತ್ಥನಾರಾಯಣ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೀರಿ’ ಎಂದು ಮತ್ತೆ ಕಾಲೆಳೆದರು. ಇದರಿಂದ ಕೆರಳಿದ ಆರಗ ಜ್ಞಾನೇಂದ್ರ ನಿಮ್ಮ ಕಾಲದಲ್ಲಿ ಇದ್ದ ಗೃಹ ಸಚಿವರಿಗಿಂತ ನಾನು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ. 2017ರಲ್ಲಿ ಕರ್ನಾಟಕ ರೌಡಿ ರಾಜ್ಯವಾಗಿತ್ತು ಎಂದು ಟೀಕಿಸಿದರು.
ಸುನಿಲ್ ಕಾಲೆಳೆದ ಸಿದ್ದರಾಮಯ್ಯ
ಸಿಎಂ ಬೊಮ್ಮಾಯಿ ಅವರ ಬಜೆಟ್ ಅನ್ನು ರಾಜಸ್ವ ಹೆಚ್ಚಳದ ಅಮೃತ ಕಾಲದ ಬಜೆಟ್ ಎಂದು ವ್ಯಾಖ್ಯಾನಿಸಿದ್ದ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಡಂಬನೆ ಮಾಡಿದ್ದಾರೆ. ಇದು ರಾಜಸ್ವ ಹೆಚ್ಚಳದ ಅಮೃತ ಕಾಲದ ಬಜೆಟ್ ಅಂತೆ. ಮಂತ್ರಿ ಸುನಿಲ್ ಕುಮಾರ್ ಹೀಗೆ ಹೇಳಿದ್ದಾರೆ. ಆದರೆ ನನ್ನ ಪ್ರಕಾರ ಇದು ತೆರಿಗೆ ಸುಲಿಗೆಯ ಕತ್ತಲ ಕಾಲದ ಬಜೆಟ್. ಹಸುಗಳು ತಿನ್ನುವ ಬೂಸಾದ ಮೇಲೂ ಇವರು ಜಿಎಸ್ಟಿ ಹಾಕಿದ್ದಾರೆ. ಜನಸಾಮಾನ್ಯರ ಮೇಲೆ ಸಾಲದ ಬಂಡೆ ಹೇರಿದ್ದಾರೆ. ಇಷ್ಟೆಲ್ಲ ಆದ ಮೇಲೆ ಅಮೃತ ಕಾಲ ಎಂದು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಕೆಟ್ಟ ಬಜೆಟ್ ಎಂಬುದನ್ನು ಅವರಿಗೆ ಹೇಳಬಯಸುತ್ತೇನೆ ಎಂದರು.
ನೀವು ಹೇಳಿದ ಸ್ಥಳಕ್ಕೇ ಬರುತ್ತೇವೆ, ಕೊಲ್ಲಿ ನೋಡೋಣ
ಮಂಡ್ಯ: ಬಿಜೆಪಿಯವರು ಕೊಲ್ಲುವ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನೀವು ಹೇಳಿದ ಸಮಯಕ್ಕೆ, ಸ್ಥಳಕ್ಕೆ ಕರೆತರುತ್ತೇವೆ, ಕೊಲ್ಲಿ ನೋಡೋಣ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಸವಾಲು ಹಾಕಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಭರವಸೆಯ ಬಾಂಡ್ ವಿತರಣ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಚಿವ ಡಾ|ಅಶ್ವತ್ಥನಾರಾಯಣ ಅವರು, ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಹೇಳುತ್ತಾರೆ. ಇಂದು ಸಿದ್ದರಾಮಯ್ಯ ಅವರನ್ನು ಕೊಲ್ಲಿ ಎಂದು ಹೇಳುವ ಅವರು, ಮುಂದೆ ಡಿ.ಕೆ.ಶಿವಕುಮಾರ್ ಅವರನ್ನೂ ಕೊಲ್ಲಿ ಎನ್ನುತ್ತಾರೆ. ಇದು ಅಶ್ವತ್ಥನಾರಾಯಣ ಮಾತನಾಡಿರುವುದಲ್ಲ. ಅವರ ಮೂಲಕ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಲ್ಲಿ ಎಂದು ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರನ್ನು ಏತಕ್ಕಾಗಿ ಕೊಲ್ಲಬೇಕು ಎಂಬ ಕಾರಣ ಹುಡುಕಿದರೆ, ಕಾಂಗ್ರೆಸ್ ಪಕ್ಷ ಜನರಿಗೆ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದರಿಂದ ಸಹಿಸಲಾಗದೆ ಕೊಲ್ಲು ಎನ್ನುತ್ತಿದ್ದಾರೆ. ನಮ್ಮ ನಾಯಕರನ್ನು ಕೊಂದಿರಬಹುದು. ಆದರೆ ರೈತ, ದಲಿತ, ಹಿಂದುಳಿದ, ಕಾರ್ಮಿಕ, ಅಲ್ಪಸಂಖ್ಯಾಕ, ಬಡವರು, ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ನೀಡಿರುವ ಕಾರ್ಯಕ್ರಮಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.