Advertisement

ಶಾಸಕರ ಮೇಲೆ ಹಲ್ಲೆ ಕಠಿನ ಕ್ರಮ ಅಗತ್ಯ

10:28 PM Nov 19, 2019 | mahesh |

ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ಮಾಜಿ ಸಚಿವ ಹಾಗೂ ಶಾಸಕ ತನ್ವೀರ್‌ ಸೇಠ್ ಪ್ರಕರಣವನ್ನು ಕೇವಲ ಒಂದು “ಕೊಲೆ ಯತ್ನ’ ಪ್ರಕರಣ ಎಂಬಂತೆ ನೋಡಲು ಸಾಧ್ಯವಿಲ್ಲ.

Advertisement

ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಒಬ್ಬ ಶಾಸಕನಿಗೆ ಗನ್‌ಮ್ಯಾನ್‌ ಜತೆಯಲ್ಲಿದ್ದಾಗಲೇ ಡ್ಯಾಗರ್‌ನಿಂದ ಮಾರಣಾಂತಿಕ ಹಲ್ಲೆ ನಡೆಯುತ್ತದೆ ಎಂದರೆ ಕಾನೂನು ಸುವ್ಯವಸ್ಥೆಯ ಸ್ಥಿತಿ ಎಲ್ಲಿಗೆ ಬಂತು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕುವ ತುರ್ತನ್ನು ಈ ಪ್ರಕರಣ ಸಾರುತ್ತಿದೆ.

ತನ್ವೀರ್‌ ಸೇಠ್ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ಐ ವಿರುದ್ಧದ ಎಲ್ಲ ಪ್ರಕರಣ ವಾಪಸ್‌ ಪಡೆದಿದ್ದರು. ಅದರಿಂದಾಗಿಯೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಹಿರಿಯ ರಾಜಕಾರಣಿಯಾಗಿದ್ದ ಅಜೀಜ್‌ ಸೇs… ಪುತ್ರ ತನ್ವೀರ್‌ ಸೇs… ರಾಜ್ಯದ ಹಿರಿಯ ಶಾಸಕರು. ಮೈಸೂರು ಭಾಗದಲ್ಲಷ್ಟೇ ಅಲ್ಲದೆ ರಾಜ್ಯದ ಅಲ್ಪಸಂಖ್ಯಾತರ ಸಮುದಾಯದಲ್ಲೂ ತಮ್ಮದೇ ಆದ ಪ್ರಭಾವ, ವರ್ಚಸ್ಸು ಹೊಂದಿರುವ ರಾಜಕಾರಣಿ. ಅಂತಹವರ ಮೇಲೆ ಹಲ್ಲೆ ನಡೆಯುವುದು ಗಂಭೀರವಾದ ವಿಚಾರವೇ. ಸಮಾಜಘಾತುಕ ಶಕ್ತಿಗಳು ಯಾರೇ ಆಗಿದ್ದರೂ, ಎಂತಹ ಸಂಘಟನೆ ಅಥವಾ ಧರ್ಮ, ಸಮುದಾಯಕ್ಕೆ ಸೇರಿದ್ದರೂ ತಪ್ಪು ತಪ್ಪೇ. ಹಿಂಸೆ ಯನ್ನು ಯಾರೂ ಒಪ್ಪುವುದಿಲ್ಲ.

ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಸಭೆ, ಸಮಾರಂಭ, ಕ್ಷೇತ್ರದ ಜನತೆಯ-ಕುಟುಂಬ ವರ್ಗದವರ ಮದುವೆ ಸೇರಿದಂತೆ ನಿತ್ಯವೂ ಅನೇಕ ಕಾರ್ಯಕ್ರಮಗಳಲ್ಲಿ ಹಾಜರಾಗಬೇಕಾಗುತ್ತದೆ. ಆಗ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬಂದು ಕೈ ಕುಲುಕುವುದು ಸಹ ಜವೇ. ಇತ್ತೀಚಿನ ವರ್ಷಗಳಲ್ಲಿ ಜನ ಪ್ರತಿನಿಧಿಗಳೊಂದಿಗೆ ಸೆಲ್ಫಿ ಪಡೆದುಕೊಳ್ಳುವ ಕ್ರೇಜ್‌ ಕೂಡ ಅಧಿಕವಾಗುತ್ತಿದೆ. ಜನಪ್ರತಿನಿಧಿಗಳಿಗೆ ಜನರ ಇಂಥ ಆಗ್ರಹಗಳನ್ನು ನಿರಾಕರಿಸುವುದಕ್ಕೂ ಕಷ್ಟವಾಗುತ್ತದೆ.

Advertisement

ಆದರೆ, ಇಂತಹ ಕೃತ್ಯಗಳು ನಡೆದಾಗ ಪ್ರತಿಯೊಬ್ಬರನ್ನೂ ಅನುಮಾನದ ದೃಷ್ಟಿಯಿಂದ ನೋಡುವಂತಾಗುತ್ತದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಿದ್ದರೆ ಜನಸಾಮಾನ್ಯರ ಕಥೆ ಏನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇನ್ನಾ ದರೂ ರಾಜಕೀಯ ಪಕ್ಷಗಳು ಹಾಗೂ ನಾಯಕರು ಸಮಾಜಘಾತುಕ ಶಕ್ತಿಗಳು, ವ್ಯಕ್ತಿಗಳು, ಸಂಘಟನೆಗಳ ಬಗ್ಗೆ ಮೃದು ಧೋರಣೆ ತಾಳದೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ದಿಟ್ಟ ನಿರ್ಧಾರ ತೋರಬೇಕು.

ಜನಪ್ರತಿನಿಧಿಯ ಮೇಲೆ ಇಂತಹ ಹಲ್ಲೆ ವೈಯಕ್ತಿಕ ಅಥವಾ ರಾಜಕೀಯ ದ್ವೇಷಕ್ಕೆ ಆಗಿದ್ದರೂ ಅದರ ಹಿಂದೆ ಯಾರಿದ್ದಾರೆ? ಯಾವ ಕಾರಣ ಇರಬಹುದು? ಎಂಬುದರ ಬಗ್ಗೆ ಸಮಗ್ರ ತನಿಖೆಯೂ ಅಗತ್ಯ. ಹೀಗಾಗಿ, ಸರ್ಕಾರ ಹಾಗೂ ಪ್ರತಿಪಕ್ಷ ಇದರಲ್ಲಿ ರಾಜಕೀಯ ಬೆರೆಸದೆ ಪಾರದರ್ಶಕ ತನಿಖೆಗೆ ಅವಕಾಶ ಕೊಟ್ಟು ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳಿಗೆ ರಕ್ಷಣೆ ವಿಚಾರದಲ್ಲಿ ಬಿಗಿ ಕ್ರಮದ ಬಗ್ಗೆ ಯೋಚಿಸಬೇಕು. ಜನಪ್ರತಿನಿಧಿಗಳು ಸಹ ಎಚ್ಚರಿಕೆ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next