ಬೆಂಗಳೂರು: ಕಾನೂನು ಕಾಲೇಜಿನ ಮಾಲೀಕರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾವನೂರು ಲೇಔಟ್ ನಿವಾಸಿ ಅಶೋಕ್ ಹಾವನೂರು (62) ಆತ್ಮಹತ್ಯೆ ಮಾಡಿಕೊಂಡವರು.
ರಾಮಮೂರ್ತಿನಗರದಲ್ಲಿರುವ ಹಾವನೂರು ಕಾನೂನು ಕಾಲೇಜಿನ ಮಾಲೀಕ ಅಶೋಕ್ 15 ದಿನಗಳಿಂದ ಯಾರೊಂದಿಗೂ ಬೆರೆಯದೇ ಒಂಟಿ ಯಾಗಿ ಇರುತ್ತಿದ್ದರು. ಭಾನುವಾರ ಬೆಳಗ್ಗೆ ತಡವಾಗಿ ಎದ್ದು ಮನೆಯಿಂದ ಹೊರ ಹೋಗಿ ಮಧ್ಯಾಹ್ನ ಮನೆಗೆ ವಾಪಾಸ್ಸಾಗಿದ್ದರು. 4 ಗಂಟೆ ಬಳಿಕ ಊಟ ಮಾಡುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು. ನಂತರ ತಮ್ಮ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. ರಾತ್ರಿಯಾದರೂ ಅಶೋಕ್ ಹೊರ ಬಾರದಿರುವುದನ್ನು ಗಮನಿಸಿದ ಮನೆಯವರು ಬಾಗಿಲು ಬಡಿದರೂ ತೆಗೆದಿರಲಿಲ್ಲ. ನಂತರ ಬಾಗಿಲು ಒಡೆದು ಒಳಹೋಗಿ ನೋಡಿದಾಗ ಅಶೋಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತವಾಗಿದೆ. ಅಶೋಕ್ ಪತ್ನಿ ಕೊಟ್ಟ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಾಗಿದೆ.