Advertisement

ಕಾನ್ಪುರ ಚುನಾವಣಾ ರ್‍ಯಾಲಿ: ತ್ರಿವಳಿ ತಲಾಖ್‌ನಿಂದ ಲಾಭ; ಪ್ರಧಾನಿ ಮೋದಿ ಪ್ರತಿಪಾದನೆ

09:11 PM Feb 14, 2022 | Team Udayavani |

ಕಾನ್ಪುರ: ತ್ರಿವಳಿ ತಲಾಖ್‌ ವಿರುದ್ಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಮುಸ್ಲಿಂ ಸಮುದಾಯದ ಮಹಿಳೆಯರನ್ನು ರಕ್ಷಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಉತ್ತರ ಪ್ರದೇಶದ ಕಾನ್ಪುರ್‌ನ ದೆಹಾತ್‌ನಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಿದ್ದು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.

ತ್ರಿವಳಿ ತಲಾಖ್‌ ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ಸಮರ್ಥಿಸಿಕೊಂಡ ಪ್ರಧಾನಿ, ಅದರಿಂದ ಅವರಿಗೆ ಅನುಕೂಲವೇ ಆಗಿದೆ ಎಂದರು. “ತವರು ಮನೆಯಿಂದ ಮುಸ್ಲಿಂ ಸಮುದಾಯ ಮಹಿಳೆ ಬರಿಗೈನಲ್ಲಿ ಬಂದಿದ್ದರೆ ಆಕೆಗೆ ಕೂಡಲೇ ತ್ರಿವಳಿ ತಲಾಖ್‌ ನೀಡಲಾಗುತ್ತಿತ್ತು. ಒಂದು ವೇಳೆ ಮೋಟರ್‌ ಸೈಕಲ್‌, ಚಿನ್ನದ ಸರ, ವಾಚು ಅಥವಾ ಮೊಬೈಲ್‌ ತರದೇ ಇದ್ದರೆ ತಲಾಖ್‌ ನೀಡಲಾಗುತ್ತಿತ್ತು. ಇದರಿಂದಾಗಿ ಆಕೆಯ ಜೀವನವೇ ನಷ್ಟವಾಗುತ್ತಿತ್ತು’ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಆಡಳಿತ ಇದ್ದ ಅವಧಿಯಲ್ಲಿ ಕುಟುಂಬದ ಸದಸ್ಯರು ಜನರಿಂದ ಲೂಟಿ ಮಾಡಿದ್ದನ್ನು ತಮ್ಮೊಳಗೇ ಹಂಚಿಕೊಳ್ಳಲಾಗುತ್ತಿತ್ತು ಎಂದು ಟೀಕಿಸಿದ್ದಾರೆ ಪ್ರಧಾನಿ ಮೋದಿ. ಗೋವಾದಲ್ಲಿ ಹಿಂದೂಗಳನ್ನು ವಿಭಜಿಸಿ ಮತಯಾಚಿಸುತ್ತಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ “ಚುನಾವಣಾ ಆಯೋಗ ಸಂಸದರ ಈ ಮಾತುಗಳನ್ನು ಗಮನಿಸಬೇಕು. ಉತ್ತರ ಪ್ರದೇಶದ ಮತದಾರರೂ ಇದು ಪ್ರಧಾನವಾದದ್ದು’ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಟಿಎಂಸಿ ಸಂಸದೆ ಹಿಂದೂಗಳ ಮತಗಳನ್ನು ವಿಭಜಿಸಲೆಂದೇ ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು. ಪ್ರಜಾಪ್ರಭುತ್ವದಲ್ಲಿ ಇದು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ ಪ್ರಧಾನಿ.

ಈ ಬಾರಿ 300ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ
– ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿಶ್ವಾಸ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 300 ಸೀಟು ಬರಲಿವೆ ಎಂಬ ವಿಶ್ವಾಸವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

Advertisement

ಎಎನ್‌ಐ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಇಂದು ನಮ್ಮದೇ ಆದ ಸಂವಿಧಾನ ಆಧಾರಿತ ಆಡಳಿತ ವ್ಯವಸ್ಥೆ ಬೇಕು, ಇಸ್ಲಾಮಿಕ್‌ ಮಾದರಿಯ ಆಡಳಿತ ವ್ಯವಸ್ಥೆಯಲ್ಲ. ಇಸ್ಲಾಂ ಆಧಾರಿತ ಆಡಳಿತ ವ್ಯವಸ್ಥೆಯ ಪರಿಕಲ್ಪನೆಯಾದ ಗಾಝಾÌ-ಎ-ಹಿಂದ್‌ನ ಜಾರಿ ಮಾಡಲು ಮೋದಿ ಸರ್ಕಾರ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಮುಸ್ಲಿಮರು ತಿಲಕ ಇಡುವಂತೆ ಮಾಡುವೆ
– ದೊಮರಿಗಂಜ್‌ ಶಾಸಕ ರಾಘವೇಂದ್ರ ಘೋಷಣೆ
ಉತ್ತರ ಪ್ರದೇಶದ ದೊಮರಿಯಾಗಂಜ್‌ನ ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್‌ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರ್ಯಾಲಿ ನಡೆಸಿರುವ ಅವರು, ತಾವು ಮತ್ತೂಮ್ಮೆ ಶಾಸಕರಾಗಿ ಚುನಾಯಿತರಾದರೆ ತಮ್ಮ ಕ್ಷೇತ್ರದಲ್ಲಿರುವ ಎಲ್ಲಾ ಮುಸ್ಲಿಮರೂ ಹಣೆಗೆ ತಿಲಕ ಇಡುವುದನ್ನು ಕಡ್ಡಾಯಗೊಳಿಸುತ್ತೇನೆ ಎಂದಿದ್ದಾರೆ.

ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅನೇಕ ಪ್ರಗತಿಪರ ಸಂಘಟನೆಗಳು ಶಾಸಕರ ವಿರುದ್ಧ ಹರಿಹಾಯ್ದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, “”ತಮ್ಮ ಕ್ಷೇತ್ರದಲ್ಲಿ ಇಸ್ಲಾಂ ಭಯೋತ್ಪಾದನೆ ಇದೆ. ಅವರು ಹಿಂದೂಗಳು ತಲೆಗೆ ಮುಸ್ಲಿಮರ ಟೋಪಿ ಧರಿಸುವಂತೆ ಮಾಡಿದ್ದಾರೆ. ಅದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಮಾತ್ರ ನಾನು ಈ ಹೇಳಿಕೆ ನೀಡಿದ್ದೇನೆ” ಎಂದಿದ್ದಾರೆ.

“ನವ ಪಂಜಾಬ್‌ ನಿರ್ಮಾಣವೇ ನಮ್ಮ ಗುರಿ’
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಪಂಜಾಬ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಂದ ಪಂಜಾಬ್‌ನ ಅಭಿವೃದ್ಧಿಯಲ್ಲಿ ಹೊಸ ಪುಟಗಳು ತೆರೆದುಕೊಳ್ಳಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಲಂಧರ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಯುವಜನತೆ ಅಭಿವೃದ್ಧಿಗೆ ಬೇಕಾದ ಯಾವುದೇ ಅವಕಾಶಗಳನ್ನು ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ನಾನು ಪಂಜಾಬ್‌ ಜನತೆಗೆ ಖಾತ್ರಿಯನ್ನು ಕೊಡುತ್ತೇನೆ. ನವ ಪಂಜಾಬ್‌ ಸೃಷ್ಟಿಯೇ ನಮ್ಮ ಗುರಿ. ಪಂಜಾಬ್‌ನಲ್ಲಿ ಬೇರುಬಿಟ್ಟಿರುವ ಮಾದಕ ವಸ್ತುಗಳ ಪಿಡುಗನ್ನು ಬೇರು ಸಹಿತ ಕಿತ್ತುಹಾಕುವುದಾಗಿ ಮೋದಿ ಆಶ್ವಾಸನೆ ನೀಡಿದರು.

ಹಾಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ಬಾಣ ಬಿಟ್ಟ ಅವರು, “ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ, ಕೈಗಾರಿಕೆಗಳ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಇದರಿಂದಾಗಿ, ಪಂಜಾಬ್‌ನಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟವಿದೆ. ತಮ್ಮಲ್ಲೇ ಕಿತ್ತಾಡುವ ಪಕ್ಷದ ನಾಯಕರು ಪಂಜಾಬ್‌ನಲ್ಲಿ ಅಭಿವೃದ್ಧಿಯನ್ನು ಹೇಗೆ ತಾನೇ ತಂದಾರು ನೀವೇ ಹೇಳಿ” ಎಂದು ಮತದಾರರನ್ನು ಪ್ರಶ್ನಿಸಿದರು.

ನಿರುದ್ಯೋಗ, ಕಪ್ಪು ಹಣದ ಬಗ್ಗೆ ಚರ್ಚೆ ಏಕಿಲ್ಲ
– ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನೆ
ಪಂಜಾಬ್‌ನ ಹೋಶಿಯಾರ್‌ಪುರ್‌ನಲ್ಲಿ ನಡೆದ ಬೃಹತ್‌ ಬಹಿರಂಗ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. 2014ರ ಚುನಾವಣೆಗೂ ಮುನ್ನ ಮೋದಿಯವರು ಕಪ್ಪು ಹಣವನ್ನು ನಿರ್ಮೂಲನೆ ಮಾಡುವುದಾಗಿ ತಿಳಿಸಿದ್ದರು. ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ಸಮಸ್ತ ಭಾರತೀಯ ಬ್ಯಾಂಕ್‌ ಖಾತೆಗಳಿಗೆ ತಲಾ 15 ಲಕ್ಷ ರೂ. ಹಾಕುವುದಾಗಿ ತಿಳಿಸಿದ್ದರು. ಆದರೆ, ಅವರು ಯಾಕೆ ಇನ್ನೂ ಆ ಹಣವನ್ನು ತಂದಿಲ್ಲ ಎಂದೂ ಪ್ರಶ್ನಿಸಿದರು.

ಹೋಶಿರಾಯರ್‌ಪುರದಲ್ಲಿ ನಡೆದ ಕಾಂಗ್ರೆಸ್‌ ಬಹಿರಂಗ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ, ನೋಟು ಅಮಾನ್ಯ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ನಂಥ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಕೆಲವು ಕುಬೇರರಿಗೆ ನೆರವಾದರಷ್ಟೇ ಎಂದು ಆರೋಪಿಸಿದರು.

ನೋಟು ಅಮಾನ್ಯ ಮಾಡಿದಾಗ ಮೋದಿಯವರು ಕಪ್ಪು ಹಣದ ವಿರುದ್ಧ ಇದು ಯುದ್ಧ ಎಂದು ಹೇಳಿದ್ದರು. ಆದರೆ, ನಿಜವಾಗಿಯೂ ಅವರು ಮಾಡಿದ್ದೇನೆಂದರೆ, ಬಡವರು ಹಾಗೂ ಮಧ್ಯಮ ವರ್ಗದ ಉದ್ಯಮಿಗಳ ಕಿಸೆಯಲ್ಲಿದ್ದ ಹಣವನ್ನು ಕಿತ್ತುಕೊಂಡು ಅದನ್ನು ಶ್ರೀಮಂತರಿಗೆ ನೀಡಿದ್ದು ಎಂದು ಹೇಳಿದರು.

ಛನ್ನಿಗೆ ಬಡತನದ ಅರಿವಿದೆ
ಪಂಜಾಬ್‌ನ ಹಾಲಿ ಸಿಎಂ ಚರಣ್‌ಜಿತ್‌ ಛನ್ನಿಯವರಿಗೆ ಬಡತನದ ಅರಿವಿದೆ. ಹಾಗಾಗಿ, ಅವರು ರೈತರು, ಬಡವರು, ಸಣ್ಣ ವರ್ತಕರು, ಸೂಕ್ಷ್ಮ ಹಾಗೂ ಮಧ್ಯಮ ಮಟ್ಟದ ಕೈಗಾರಿಕೆಗಳನ್ನು ನಡೆಸುವವರಿಗೆ ಸೂಕ್ತವಾದ ಆಡಳಿತ ನೀಡಲಿದ್ದಾರೆ ಎಂದು ರಾಹುಲ್‌ ತಿಳಿಸಿದರು.

ಛನ್ನಿ ಹೆಲಿಕಾಪ್ಟರ್‌ಗೆ ತಡೆ
ಜಲಂಧರ್‌ನಲ್ಲಿ ಪ್ರಧಾನಿಯವರು ಚುನಾವಣಾ ಪ್ರಚಾರಕ್ಕಾಗಿ ಆಗಮಿಸಲಿದ್ದ ಹಿನ್ನೆಲೆಯಲ್ಲಿ, ಚಂಡೀಗಢದಿಂದ ಪ್ರಯಾಣಿಸಬೇಕಿದ್ದ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಛನ್ನಿಯವರ ಹೆಲಿಕಾಪ್ಟರ್‌ನ ಹಾರಾಟಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ತಡೆ ಒಡ್ಡಿದ್ದ ಪ್ರಸಂಗ ನಡೆದಿದೆ.

ಕ್ರಮಕ್ಕೆ ಆಗ್ರಹ:
ಹೋಶಿಯಾರ್‌ಪುರ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಛನ್ನಿಯವರು ಚಂಡೀಗಡದಿಂದ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಛನ್ನಿಯವರ ಹೆಲಿಕಾಪ್ಟರ್‌ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ಆಯೋಗ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ.

ಶಾಂತಿಯುತ ಮತದಾನ
ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದ 2ನೇ ಹಂತದ ಮತದಾನ ಶಾಂತಿಯುತವಾಗಿತ್ತು. 55 ಕ್ಷೇತ್ರಗಳಲ್ಲಿನ 586 ಅಭ್ಯರ್ಥಿಗಳಿಗಾಗಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಸಂಜೆ 5ರ ಹೊತ್ತಿಗೆ ಶೇ. 60ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ.

ಗೋವಾ, ಉತ್ತರಾಖಾಂಡದಲ್ಲಿ ಒಂದು ಹಂತದ ಮತದಾನ ಮುಕ್ತಾಯವಾಗಿದೆ. ಉತ್ತರಾಖಾಂಡದಲ್ಲಿ ಶೇ. 59, ಗೋವಾದಲ್ಲಿ ಶೇ. 75ರಷ್ಟು ಮತದಾನ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next