ಯಲಹಂಕ: ಯಲಹಂಕ ಜಲರಿಸಿ ಸಂಘಟನೆ ಮತ್ತು ರಾಜ್ಯ ಪ್ರವಾಸೋಧ್ಯ ಇಲಾಖೆಯಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಯಲಹಂಕ ಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಶನಿವಾರ ಚಾಲನೆ ನೀಡಿದರು.
ಕೆಲ ವರ್ಷಗಳ ಹಿಂದೆ ಕಾರ್ಖಾನೆಯ ತ್ಯಾಜ್ಯ ತುಂಬಿ ಕೆರೆಯೋ ಅಥವಾ ಕೊಳಚೆ ಕೇಂದ್ರದಂತಿದ್ದ ಕರೆ ಸುತ್ತ ಈಗ ಹಸಿರು, ತಂಗಾಳಿ, ಇಂಪಾದ ಲಘು ಸಂಗೀತ, ಬಣ್ಣ ಬಣ್ಣದ ವಿದ್ಯುತ್ ದ್ವೀಪಗಳು ಕಣ್ಮನ ಸೆಳೆಯುತ್ತಿವೆ. ಜತೆಗೆ ವಾಟರ್ ಏರಿಯೇಟರ್ ಜೆಟ್ ಮೂಲಕ ಚಿಮ್ಮುವ ಬಣ್ಣ ಕಾರಂಜಿ ಪ್ರವಾಸಿಗರನ್ನು ಆಕರ್ಶಿಸುತ್ತಿದೆ.
ಈ ವೇಳೆ ಮಾತನಾಡಿದ ಶಾಸಕ ವಿಶ್ವನಾಥ್ ಅವರು, ಯಲಹಂಕ ಕೆರೆ ಅಭಿವೃದ್ಧಿಗೆ ಸುಮಾರು 50 ಕೋಟಿ ರೂ. ವೆಚ್ಚವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ಬದಿಯಲ್ಲಿ ಸಂಚರಿಸುವ ಪ್ರಯಾಣಿಕರು ಸ್ಥಳೀಯ ನಾಗರೀಕರು ಬಿಡುವಿದ್ದಾಗ ಕೆರೆಗೆ ಬಂದು ವಿಶ್ರಾಂತಿ ಪಡೆಯಬಹುದು ಎಂದರು.
ಏನೇನು ಬದಲಾವಣೆ: 300 ಎಕರೆ ವಿಸ್ತೀರ್ಣದ ಕೆರೆ ಸುತ್ತ 6 ಕಿ.ಮೀ. ವಾಕಿಂಗ್ ಟ್ರ್ಯಾಕ್, ಸೈಕಲ್ ಟ್ರ್ಯಾಕ್, ಉದ್ಯಾನವನ, ವಾಯು ವಿಹಾರಿಗಳಿಗೆ ವಿಶ್ರಾಂತಿ ಗೃಹ, ವಿಶ್ರಾಂತಿ ಬೆಂಚುಗಳು, ಇ-ಶೌಚಾಲಯಗಳು, ಕೆರೆ ಸುತ್ತ ಎಲ್ಇಡಿ ವಿದ್ಯುತ್ ದೀಪ, ಎಫ್ಎಮ್ ರೇಡಿಯೋ,
ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಜಿಮ್ಗಳು, ಮಕ್ಕಳಿಗೆ ಆಟದ ಸಾಮಗ್ರಿ, ಕೆರೆ ಮಧ್ಯದಲ್ಲಿ ಐಲ್ಯಾಂಡ್, ಪಕ್ಷಿಧಾಮ, ಕೆರೆ ಸುತ್ತ ಒಂದು ಸಾವಿರ ಗಿಡಗಳ ನಾಟಿ, ಪರ್ಗೊಲಾ, ಗಂಗಮ್ಮ ದೇವಸ್ಥಾನ ನಿರ್ಮಾಣ, ಸಿಸಿ ಕ್ಯಾಮೆರಾ ಕಣ್ಗಾವಲು ಸೇರಿ ಹಲವು ಬದಲಾವಣೆಗಳಿಗೆ ಕೆರೆ ಅಂಗಳ ಸಾಕ್ಷಿಯಾಗಿದೆ.
ಕಾರ್ಯಕ್ರಮದಲ್ಲಿ ಜಲಸಿರಿ ಸಂಘಟನೆಯ ಕಾರ್ಯಾಧ್ಯಕ್ಷ ಮು.ಕೃಷ್ಣಮೂರ್ತಿ, ಅಧ್ಯಕ್ಷ. ಅಬ.ಶಿವಕುಮಾರ್, ರಾಜ್ಯ ಪ್ರವಾಸೋಮದ್ಯಮ ಇಲಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಉದಯಕುಮಾರ್ ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ, ಸತೀರ್ಶ ಪದ್ಮಾವತಿ ಅಮರ್ನಾಥ್ ಮತ್ತಿತರರು ಹಾಜರಿದ್ದರು.