Advertisement

ರಾಮಾವತಾರದ ಕೊನೆಯ ಕ್ಷಣಗಳು…

09:58 AM Jun 15, 2019 | keerthan |

ಶ್ರೀರಾಮ ಹಾಗೂ ಯಮರಾಜನ ನಡುವೆ ಸಂಭಾಷಣೆಯು ಸಾಗುತ್ತಿರುವಾಗಲೇ, ರಾಮನನ್ನು ತತ್‌ಕ್ಷಣವೇ ಭೇಟಿಯಾಗಬೇಕೆಂದು ದೂರ್ವಾಸ ಮುನಿಗಳು ದಾಪುಗಾಲಿಡುತ್ತಾ ಆಗಮಿಸಿದರು. ಕೊಠಡಿಯ ದ್ವಾರಪಾಲಕನಾ ಗಿದ್ದ ಹನುಮನು, ಶ್ರೀರಾಮನೀಗ ಬೇರೊಬ್ಬರೊಡನೆ ಖಾಸಗಿ ಸಂಭಾಷಣೆಯಲ್ಲಿ ನಿರತನಾಗಿರುವನೆಂದೂ ಹಾಗೂ ಅವರ ಸಂಭಾಷಣೆಯು ಮುಕ್ತಾಯಗೊಂಡ ಕೂಡಲೇ ತಾವು ಶ್ರೀರಾಮನನ್ನು ಭೇಟಿಯಾಗಬಹುದೆಂದೂ, ಅಲ್ಲಿಯವರೆಗೆ ಬಾಗಿಲ ಬಳಿಯೇ ನಿರೀಕ್ಷಿಸಬೇಕೆಂದೂ ವಿನಂತಿಸಿಕೊಳ್ಳುತ್ತಾನೆ…

Advertisement

ರಾಮಾವತಾರದ ಅಂತ್ಯ ಹೇಗಾಯಿತು ಎಂಬುದು ಹಲವರ ಕುತೂಹಲದ ಪ್ರಶ್ನೆ. ಅದಕ್ಕೆ ಉತ್ತರ ಹುಡುಕಲು ಹೊರಟರೆ, ಭಗವಂತನ ಲೀಲೆ, ಅವತಾರಗಳ ಸಂದರ್ಭ, ತಂತಾನೇ ಸೃಷ್ಟಿಯಾಗುತ್ತಿದ್ದ, ನಡೆದು ಹೋಗುತ್ತಿದ್ದ ಸಂದರ್ಭಗಳು ಕಣ್ಣಮುಂದೆ ನಿಲ್ಲುತ್ತವೆ. ಇಲ್ಲಿ, ರಾಮಾವತಾರದ ಕೊನೆಯ ಕ್ಷಣಗಳ ವಿವರಣೆ ಇದೆ.

ಸೀತಾಮಾತೆಯು ಭೂಮಿಯ ಮೇಲಿನ ತನ್ನ ಅವತಾರವನ್ನು ಕೊನೆಗೊಳಿಸಿದ ಬಳಿಕ, ಶ್ರೀರಾಮಚಂದ್ರನ ಸಹೋದರರೆಲ್ಲರೂ (ಲಕ್ಷ್ಮಣ- ಆದಿಶೇಷ, ಭರತ – ಶಂಖ, ಶತ್ರುಘ್ನ – ಚಕ್ರ) ಕೂಡಾ ಇಹಲೋಕ ಯಾತ್ರೆಯನ್ನು ಮುಕ್ತಾಯಗೊಳಿಸುತ್ತಾರೆ. ಅವರೆಲ್ಲರೂ ವೈಕುಂಠ ಲೋಕದಲ್ಲಿ ಸೇರಿ, ಅಲ್ಲಿ ಶ್ರೀರಾಮಚಂದ್ರನ ಆಗಮನದ ನಿರೀಕ್ಷೆಯಲ್ಲಿರುತ್ತಾರೆ. ಈಗ ಭೂಮಿಯ ಮೇಲೆ ಶ್ರೀ ರಾಮಚಂದ್ರನ ಸೇವೆ ಮಾಡಲು ಉಳಿದುಕೊಂಡಿದ್ದ ಏಕೈಕ ವ್ಯಕ್ತಿಯು ಹನುಮನೋರ್ವನೇ ಆಗಿರುತ್ತಾನೆ.

ಬ್ರಾಹ್ಮಣನ ರೂಪದಲ್ಲಿ ಯಮಧರ್ಮ

ರಾಮಾವತಾರದ ಅಂತಿಮ ಘಟ್ಟವು ಸನ್ನಿಹಿತವಾದಾಗ, ಯಮಧರ್ಮನು ಬ್ರಾಹ್ಮಣನ ರೂಪ ಧರಿಸಿ, ತಾನು ನಿಮ್ಮೊಡನೆ ಏಕಾಂತದಲ್ಲಿ ಭೇಟಿಯಾಗಬೇಕಾಗಿದೆ ಎಂದು ಶ್ರೀರಾಮನಲ್ಲಿ ಹೇಳಿಕೊಳ್ಳುವನು. ಇದರ ಜೊತೆಗೆ ಆತ ಶರತ್ತೂಂದನ್ನು ವಿಧಿಸುತ್ತಾನೆ. ತಾನು ಏಕಾಂತದಲ್ಲಿ ಸಂಭಾಷಿಸುತ್ತಿರುವಾಗ ಯಾರಾದರೂ ಅದಕ್ಕೆ ಅಡ್ಡಿಪಡಿಸಿದಲ್ಲಿ ಅಂತಹವರ ಶಿರಚ್ಚೇದವಾಗಬೇಕೆಂದು ಕೋರುತ್ತಾನೆ. ಈ ಮಾತಿಗೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪುವ ರಾಮ, ಹನುಮನನ್ನು ತನ್ನ ಕೊಠಡಿಯ ದ್ವಾರಪಾಲಕನನ್ನಾಗಿ ನೇಮಿಸುತ್ತಾನೆ.

Advertisement

ಅಸಲಿ ರೂಪ ತಾಳಿದ ಯಮಧರ್ಮ

ಕೊಠಡಿಯ ಬಾಗಿಲು ಮುಚ್ಚಿದ ಬಳಿಕ, ಯಮರಾಜನು ತನ್ನ ಅಸಲೀ ರೂಪದಲ್ಲಿ ಕಾಣಿಸಿಕೊಂಡು, ಭೂಮಿಯ ಮೇಲಿನ ರಾಮಾವತಾರವನ್ನು ಕೊನೆಗೊಳಿಸಿ, ವೈಕುಂಠಲೋಕಕ್ಕೆ ಮರಳಿಬರುವಂತೆ ಶ್ರೀರಾಮನನ್ನು ಒತ್ತಾಯಿಸುತ್ತಾನೆ. ಸ್ವಯಂ ಯಮಧರ್ಮನೇ ಬಂದು ಕೇಳಿಕೊಂಡರೂ ಕೂಡ, ಹನುಮಂತನು ತನ್ನಮೇಲೆ ಇಟ್ಟಿರುವ ಪರಮಭಕ್ತಿ, ಪ್ರೀತಿ, ವಿಶ್ವಾಸಗಳ ಕಾರಣಕ್ಕಾಗಿ ತಾನಿನ್ನೂ ಸ್ವಲ್ಪ ಕಾಲ ರಾಮಾವತಾರಿಯಾಗಿಯೇ ಇದ್ದು, ಹನುಮನ ಸೇವೆಯನ್ನು ಪಡೆಯಲಿಚ್ಛಿಸಿರುವೆ ಎಂದು ಶ್ರೀರಾಮನು ಯಮರಾಜನಿಗೆ ತಿಳಿಸುತ್ತಾನೆ. ಆಗ ಯಮಧರ್ಮನು ಶ್ರೀರಾಮನ ಹಾಗೂ ಹನುಮನ ಭೌತಿಕ ಸಾಮೀಪ್ಯವು ಅತೀ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆಯೆಂದು ತಿಳಿಸುತ್ತಾನೆ.

ಹೀಗೆ, ಶ್ರೀರಾಮ ಹಾಗೂ ಯಮರಾಜನ ನಡುವೆ ಸಂಭಾಷಣೆಯು ಸಾಗುತ್ತಿರುವಾಗಲೇ, ಶ್ರೀರಾಮನನ್ನು ತತ್‌ಕ್ಷಣವೇ ಭೇಟಿಯಾಗಬೇಕೆಂದು ದೂರ್ವಾಸ ಮುನಿಗಳು ದಾಪುಗಾಲಿಡುತ್ತಾ ಆಗಮಿಸಿದರು. ಕೊಠಡಿಯ ದ್ವಾರಪಾಲಕನಾಗಿದ್ದ ಹನುಮನು, ಶ್ರೀರಾಮನೀಗ ಬೇರೊಬ್ಬರೊಡನೆ ಖಾಸಗಿ ಸಂಭಾಷಣೆಯಲ್ಲಿ ನಿರತನಾಗಿರುವನೆಂದೂ ಹಾಗೂ ಅವರ ಸಂಭಾಷಣೆಯು ಮುಕ್ತಾಯಗೊಂಡ ಕೂಡಲೇ ತಾವು ಶ್ರೀರಾಮನನ್ನು ಭೇಟಿಯಾಗ ಬಹುದೆಂದೂ, ಅಲ್ಲಿಯವರೆಗೆ ಬಾಗಿಲ ಬಳಿಯೇ ನಿರೀಕ್ಷಿಸಬೇಕೆಂದೂ ವಿನಂತಿಸಿಕೊಳ್ಳುತ್ತಾನೆ.

ಶಾಪದ ಭಯ
ಕೊಠಡಿಯನ್ನು ಪ್ರವೇಶಿಸಲು ಹನುಮನು ಅನುಮತಿ ನೀಡದಿದ್ದಾಗ ದೂರ್ವಾಸರು ಸಿಡಿಮಿಡಿಗೊಳ್ಳುತ್ತಾರೆ. ಕೋಪದ ಭರದಲ್ಲಿ, ಭಗವಾನ್‌ ಶ್ರೀರಾಮನನ್ನೂ ಹಾಗೂ ಆತನ ಸಮಸ್ತ ಸಾಮ್ರಾಜ್ಯವನ್ನೂ ಶಪಿಸುವುದಾಗಿ ಬೆದರಿಸುತ್ತಾರೆ. ಹನುಮನಿಗೆ ಅನ್ಯಮಾರ್ಗವಿಲ್ಲದಾಗುತ್ತದೆ. ತಾನೇ ಸ್ವತಃ ಒಳಪ್ರವೇಶಿಸಿ, ಬ್ರಾಹ್ಮಣನೊಂದಿಗಿನ ರಾಮನ ಖಾಸಗಿ ಭೇಟಿಗೆ ಅಡ್ಡಿಪಡಿಸಲು ನಿರ್ಧರಿಸುತ್ತಾನೆ. ಶ್ರೀರಾಮಚಂದ್ರ ಹಾಗೂ ಆತನ ಸಮಸ್ತ ಸಾಮ್ರಾಜ್ಯವನ್ನು ದೂರ್ವಾಸ ಮುನಿಗಳ ಶಾಪಕ್ಕೆ ಗುರಿಯಾಗಿಸುವುದರ ಬದಲು, ತನ್ನ ತಲೆಯನ್ನೇ ಕಳೆದುಕೊಳ್ಳುವುದು ಒಳ್ಳೆಯದೆಂದು ಹನುಮನು ನಿರ್ಧರಿಸಿರುತ್ತಾನೆ.

ಹನುಮನು ಕೊಠಡಿಯನ್ನು ಪ್ರವೇಶಿಸಿದಾಗ, ಕರಾರನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನಿಬಂಧನೆಯ ಪ್ರಕಾರ ಅವನ ಶಿರಚ್ಚೇದ ಮಾಡುವಂತೆ ಯಮಧರ್ಮನು ಪಟ್ಟು ಹಿಡಿಯುತ್ತಾನೆ. ರಾಮನಿಗಂತೂ ದಿಕ್ಕೇ ತೋಚದಂತಾಗುತ್ತದೆ. ಅರಮನೆಯಲ್ಲಿ ಸಂದಿಗ್ಧ ವಾತಾವರಣ ನಿರ್ಮಾಣಗೊಂಡದ್ದನ್ನು ಅರಿತ ವಸಿಷ್ಟ ಮಹರ್ಷಿಗಳು ಒಡನೆಯೇ ಅರಮನೆಗೆ ಆಗಮಿಸುತ್ತಾರೆ.

ಗಡೀಪಾರು ಶಿಕ್ಷೆ

ಸ್ವಾಮಿನಿಷ್ಟನಾದ ಓರ್ವ ಸೇವಕ/ಭಕ್ತನ ಪಾಲಿಗೆ, ಆತನ ಸ್ವಾಮಿಯ ಸೇವೆಯಿಂದ ವಂಚಿತನಾಗುವುದೆಂದರೆ ಅದು ಆತನ ಶಿರಚ್ಚೇದಕ್ಕೆ ಸಮಾನವಾದುದಾಗಿರುತ್ತದೆ ಎಂದು ಮಹರ್ಷಿ ವಸಿಷ್ಟರು ಯಮರಾಜನಿಗೆ ವಿವರಿಸುತ್ತಾರೆ. ಈ ಕಾರಣಕ್ಕಾಗಿ ಹನುಮನನ್ನು ಅಯೋಧ್ಯೆಯಿಂದ ಗಡಿಪಾರು ಮಾಡುವುದರ ಮೂಲಕ ಆತನನ್ನು ಶ್ರೀರಾಮನ ಸೇವೆಯ ಅವಕಾಶದಿಂದ ವಂಚಿತನನ್ನಾಗಿಸಲಾಗುತ್ತದೆ. ಹನುಮನು ಅದಾಗಲೇ ತನ್ನನ್ನು ತೊರೆದು ಹೋದ ಕಾರಣದಿಂದಾಗಿ ಭಗವಾನ್‌ ಶ್ರೀರಾಮಚಂದ್ರನಿಗೆ ಭೂಮಿಯ ಮೇಲೆ ಇನ್ನೇನೂ ಕೆಲಸವಿಲ್ಲದಾಗುತ್ತದೆ. ಆ ಕಾರಣಕ್ಕಾಗಿ ತಾನು ರಾಮಾವತಾರವನ್ನು ಸಮಾಪ್ತಿ ಗೊಳಿಸಲು ಒಪ್ಪಿಕೊಳ್ಳುವನು.

ಕಟ್ಟಕಡೆಗೆ ಭಗವಾನ್‌ shri ramನು ಸರಯೂ ನದಿಯನ್ನು ಪ್ರವೇಶಿಸಿ, ಜಲಸಮಾಧಿ ಹೊಂದುವ ಮೂಲಕ ಭೂಮಿಯ ಮೇಲಿನ ತನ್ನ ಅವತಾರವನ್ನು ಮುಕ್ತಾಯ ಗೊಳಿಸಿಕೊಳ್ಳುವನು. •

Advertisement

Udayavani is now on Telegram. Click here to join our channel and stay updated with the latest news.

Next