Advertisement

ಮಧುಮೇಹಿಗಳಲ್ಲಿ ನೋವಿನಿಂದ ಕೂಡಿದ ನರದೌರ್ಬಲ್ಯ ಮತ್ತು ಲೇಸರ್‌ ಚಿಕಿತ್ಸೆ

10:14 PM Jan 01, 2022 | Team Udayavani |

ಫಿಸಿಯೋಥೆರಪಿಯ ಮಧುಮೇಹ ಪಾದದ ಚಿಕಿತ್ಸೆಯ ವಿಭಾಗದಲ್ಲಿ ಪಾದಗಳ ನರದೌರ್ಬಲ್ಯಕ್ಕೆ ಲೇಸರ್‌ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ನರದೌರ್ಬಲ್ಯದ ಲಕ್ಷಣಗಳಾದ ಉರಿ, ಜುಮ್ಮೆನಿಸುವಿಕೆ, ನೋವು, ಸಂವೇದನಶೀಲತೆ ಗಳು ಕಡಿಮೆಯಾಗುತ್ತವೆ. ಈ ಚಿಕಿತ್ಸೆಯಲ್ಲಿ ಉಪಯೋಗಿಸುವ ಲೇಸರ್‌ ಕಿರಣಗಳು ಸಾಮಾನ್ಯ ಕಿರಣಗಳಾಗಿರದೆ ನೋವುಗಳ ಚಿಕಿತ್ಸೆಗೆಂದೇ ವಿಶೇಷವಾಗಿ ರೂಪುಗೊಂಡದ್ದಾಗಿರುತ್ತವೆ. ಇವುಗಳಿಂದ ಯಾವುದೇ ವಿಧವಾದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

Advertisement

ಇಪ್ಪತ್ತೂಂದನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಅಸಾಂಕ್ರಾಮಿಕ ರೋಗಗಳು ಒಂದು ಹೊರೆಯಾಗಿ ಪರಿಣಮಿಸಿವೆ. ಅವುಗಳೆಂದರೆ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು, ಕ್ಯಾನ್ಸರ್‌, ಪಾರ್ಶ್ವವಾಯು, ಮಧುಮೇಹ. ಅಂತಾರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದ ಪ್ರಕಾರ ಮಧುಮೇಹವು ಒಂದು ಜಾಗತಿಕ ಹೊರೆಯಾಗಿ ಪರಿಣಮಿಸುತ್ತಿದೆ. ಅಲ್ಲದೆ ಇದು ಆರ್ಥಿಕ ದುಸ್ಥಿತಿಗೂ ಕಾರಣವಾಗಿದೆ. ಮುಂದುವರಿದ ಮತ್ತು ಮುಂದುವರಿಯತ್ತಿರುವ ಎರಡೂ ರಾಷ್ಟ್ರಗಳಲ್ಲಿ ಇದು ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಮಧುಮೇಹ ಹೊಂದಿರುವವರು ಜೀವಕ್ಕೆ ತೊಂದರೆ ಉಂಟುಮಾಡುವ ವಿವಿಧ ಕಾಯಿಲೆಗಳಿಗೆ ತುತ್ತಾಗುವಅಪಾಯ ಜಾಸ್ತಿ ಇರುತ್ತದೆ. ಹಾಗಾಗಿ ಇವರಿಗೆ ವೈದ್ಯಕೀಯ ಆರೈಕೆಯ ಅಗತ್ಯವು ಹೆಚ್ಚಾಗಿ ಇರುವುದರಿಂದ ಇವರ ಜೀವನ ಮಟ್ಟ ಕುಂದುವುದರೊಂದಿಗೆ ಮನೆಯವರ ಮೇಲೂ ಒತ್ತಡ ಬೀಳುವಂತೆ ಮಾಡುತ್ತದೆ. ಮಧುಮೇಹ ಮತ್ತು ಅದರಿಂದ ಉಂಟಾಗುವ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಹೋದಲ್ಲಿ ಪದೇ ಪದೆ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಉಂಟಾಗುತ್ತದೆ. ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆಗಳೆಂದರೆ ಹೃದಯ ಸಂಬಂಧಿ ತೊಂದರೆ, ಕಣ್ಣಿನ ತೊಂದರೆ, ಮೆದುಳಿನ ತೊಂದರೆ, ಮೂತ್ರ ಪಿಂಡದ ತೊಂದರೆ, ನರದೌರ್ಬಲ್ಯ (ಕೈ ಮತ್ತು ಪಾದದ ತೊಂದರೆ).

ದೀರ್ಘ‌ ಸಮಯದ ಮಧುಮೇಹಿಗಳು ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇರದ ಮಧುಮೇಹಿಗಳಲ್ಲಿ ಪಾದದ ತೊಂದರೆಗಳು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತವೆ. ಪಾದದಲ್ಲಿ ಈ ಸಮಸ್ಯೆಯಿಂದಾಗಿ ಪದೇ ಪದೇ ಹುಣ್ಣುಗಳು ಉಂಟಾಗುವುದಲ್ಲದೆ ಅವುಗಳು ಉಲ್ಬಣಿಸಿದಾಗ ಪಾದದ ಒಂದು ಭಾಗ ಅಥವಾ ಪೂರ್ಣ ಪಾದವು ಛೇದನಕ್ಕೆ ಒಳಪಡುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ವ್ಯಕ್ತಿಯ ದೈನಂದಿನ ಚಟುವಟಿಕೆ ಮತ್ತು ಸಾಮರ್ಥ್ಯದ
ಮೇಲೆ ಅಡ್ಡ ಪರಿಣಾಮ ಉಂಟಾಗುವುದಲ್ಲದೆ ಆರ್ಥಿಕ ದುಸ್ಥಿತಿ ತಂದೊಡ್ಡುತ್ತದೆ.

ಮಧುಮೇಹಿಗಳಲ್ಲಿ ನರದೌರ್ಬಲ್ಯವು ಶೇ. 16ರಿಂದ ಶೇ. 87 (ವಿವಿಧ ಪ್ರದೇಶಗಳಲ್ಲಿ) ಕಂಡುಬರುತ್ತದೆ; ಇವರಲ್ಲಿ ಶೇ. 26 ಜನರಲ್ಲಿ ಇದು ನೋವಿನಿಂದ ಕೂಡಿರುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಸಮುದಾಯ ಸಮೀಕ್ಷೆಯ ಪ್ರಕಾರ ಶೇ. 30.2 ಜನರಲ್ಲಿ ಸಂವೇದನ ನರದೌರ್ಬಲ್ಯವು ಇದೆ ಎಂದು ತಿಳಿದು ಬಂದಿದೆ. ಅಂತೆಯೇ, ಮಧುಮೇಹ ಇಲ್ಲದವರಿಗೆ ತುಲನೆ ಮಾಡಿದಲ್ಲಿ ಮಧುಮೇಹಿಗಳು ಪಾದದ ಛೇದನಕ್ಕೆ ಒಳಪಡುವ ಸಾಧ್ಯತೆ 10ರಿಂದ 30 ಪ್ರತಿಶತ ಅಧಿಕವಾಗಿರುತ್ತದೆ.

Advertisement

ಮಧುಮೇಹಿಗಳಲ್ಲಿ ಚಯಾಪಚಯದ ತೊಂದರೆ ಮತ್ತು ರಕ್ತ ಸಂಚಾರದ ತೊಂದರೆಗಳಿಂದಾಗಿ ನರದೌರ್ಬಲ್ಯ ಉಂಟಾಗುತ್ತದೆ. ಇವೆಲ್ಲದಕ್ಕೂ ಮೂಲ ಕಾರಣವೆಂದರೆ ರಕ್ತದಲ್ಲಿ ಸಕ್ಕರೆ ಅಂಶವು ನಿಯಂತ್ರಣದಲ್ಲಿ ಇಲ್ಲದೆ ಇರುವುದು. ರಕ್ತದಲ್ಲಿ ಅತಿಯಾದ ಸಕ್ಕರೆ ಅಂಶ ಇರುವಾಗ ಕೆಲವು ಕಿಣ್ವಗಳು ಉತ್ಪತ್ತಿಯಾಗಿ ನರಗಳ ಕಾರ್ಯಚಟುವಟಿಕೆಗಳಿಗೆ ತೊಂದರೆ ಉಂಟುಮಾಡುತ್ತವೆ. ಕಿಣ್ವಗಳು ನರಗಳ ಮೇಲೆ ಉತ್ಕರ್ಷಣಶೀಲ ಒತ್ತಡ ಉಂಟುಮಾಡುತ್ತವೆ. ಪಾದದ ಸ್ಪರ್ಶ ಮತ್ತು ಸಂವೇದನಶೀಲತೆಯಿಂದಾಗಿ ಮಧುಮೇಹಿಗಳಲ್ಲಿ ನರದ ತೊಂದರೆಯಿಂದಾಗಿ ನೋವು ಕಂಡುಬರುತ್ತದೆ. ಬೆರಳುಗಳ ತುದಿಯಲ್ಲಿ ಇರುವ ಸಣ್ಣ ನರಗಳು ನೋವಿನಿಂದ ಕೂಡಿರದ ವಸ್ತುಗಳಿಗೂ ಉದ್ರೇಕಗೊಂಡು ತೊಂದರೆ ಉಂಟುಮಾಡುತ್ತವೆ. ನರಗಳ ಈ ಬದಲಾವಣೆಯು ಕೇವಲ ಬಾಹ್ಯ ನರಮಂಡಲದಲ್ಲಿ ಕಂಡುಬರುವುದಲ್ಲದೆ ಕೇಂದ್ರ ನರಮಂಡಲದಲ್ಲಿಯೂ ಕಂಡುಬರುತ್ತದೆ. ಇದರಿಂದಾಗಿ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ, ನೋವು, ಉರಿ, ಚುಚ್ಚಿದಂತಹ ಅನುಭವ ಉಂಟಾಗುತ್ತದೆ. ಇದನ್ನು ಶೀರ್ಘ‌ದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡದೆ ಹೋದಲ್ಲಿ ವಿಷಮ ಸ್ಥಿತಿ ಉಂಟಾಗಿ ನಿದ್ದೆ, ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಬಹುದು.

ಮಧುಮೇಹಿಗಳ ಪಾದದ ತೊಂದರೆಗಳನ್ನು ಹಲವು ಉಪಕರಣಗಳನ್ನು ಬಳಸಿ ಪತ್ತೆ ಹಚ್ಚಲಾಗುತ್ತದೆ. ನರದೌರ್ಬಲ್ಯವನ್ನು ಸಾಮಾನ್ಯವಾಗಿ ಮೋನೋಫಿಲಾಮೆಂಟ್‌, ಕಂಪನ ಗ್ರಹಿಸುವ ಮಿತಿ ಬಳಸಿ ಪರೀಕ್ಷಿಸಲಾಗುತ್ತದೆ. ನರದೌರ್ಬಲ್ಯದಿಂದಾಗಿ ಪಾದದ ಕೆಲವು ಭಾಗಗಳಲ್ಲಿ ಒತ್ತಡ ಶೇಖರಣೆ ಅಧಿಕವಾಗಿರುತ್ತದೆ. ಇದನ್ನು ಕೂಡ ಒತ್ತಡ ಅಳೆಯುವ ಸ್ಕ್ಯಾನಿಂಗ್‌ ಬಳಸಿ ಪರೀಕ್ಷಿಸಲಾಗುತ್ತದೆ. ಕಾಲಿನ ರಕ್ತ ಸಂಚಾರವನ್ನು ಡೊಪ್ಲರ್‌ ಅಥವಾ ರಕ್ತದೊತ್ತಡ ಅಳೆಯುವ ಮಾಪನದ ಸಹಾಯದಿಂದ ಪರಿಶೀಲಿಸಲಾಗುತ್ತದೆ. ಈ ನೋವಿನಿಂದ ಕೂಡಿದ ನರದೌರ್ಬಲ್ಯಕ್ಕೆ ಹಲವು ರೀತಿಯ ಚಿಕಿತ್ಸೆಗಳು ಲಭ್ಯವಿರುತ್ತವೆ. ಅವುಗಳೆಂದರೆ ರಕ್ತದಲ್ಲಿನ ಸಕ್ಕರೆಯ ಅಂಶದ ನಿಯಂತ್ರಣ (ಜೀವನ ಶೈಲಿಯಲ್ಲಿ ಬದಲಾವಣೆ, ಗುಳಿಗೆಗಳು, ಇನ್ಸುಲಿನ್‌), ಖನ್ನತೆ ಶಮನಕಾರಿ ಗುಳಿಗೆಗಳು, ಇಮ್ಯೂನ್‌ (ಪ್ರತಿರಕ್ಷಣ) ಥೆರಪಿ, ಆಕ್ಯುಪ್ರಶರ್‌, ಆಮ್ಲಜನಕದ ಚಿಕಿತ್ಸೆ ಮತ್ತು ಫಿಸಿಯೋಥೆರಪಿ.

ಫಿಸಿಯೋಥೆರಪಿಯ ಮಧುಮೇಹ ಪಾದದ ಚಿಕಿತ್ಸೆಯ ವಿಭಾಗದಲ್ಲಿ ಪಾದದ ನರದೌರ್ಬಲ್ಯಕ್ಕೆ ಲೇಸರ್‌ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಿಂದ ನರದೌರ್ಬಲ್ಯದ ಲಕ್ಷಣಗಳಾದ ಉರಿ, ಜುಮ್ಮೆನಿಸುವಿಕೆ, ನೋವು, ಸಂವೇದನಶೀಲತೆಯು ಕಡಿಮೆಯಾಗುತ್ತದೆ. ಈ ಚಿಕಿತ್ಸೆಯಲ್ಲಿ ಉಪಯೋಗಿಸುವ ಲೇಸರ್‌ಗಳು ಸಾಮಾನ್ಯ ಕಿರಣಗಳಾಗಿರದೆ ನೋವುಗಳ ಚಿಕಿತ್ಸೆಗೆಂದೇ ವಿಶೇಷವಾಗಿ ತಯಾರಿಸಲ್ಪಟ್ಟಿರುತ್ತವೆ ಮತ್ತು ಇವುಗಳಿಂದ ಯಾವುದೇ ತೆರನಾದ ಅಡ್ಡ ಪರಿಣಾಮಗಳಿರುವುದಿಲ್ಲ. ಲೇಸರ್‌ ಕಿರಣಗಳು ಚರ್ಮದ ಮೂಲಕ ದೇಹದ ಒಳಗೆ ಪ್ರವೇಶಿಸಿ ನರಗಳ ಮೇಲೆ ನೇರ ಪರಿಣಾಮ ಉಂಟುಮಾಡುತ್ತವೆ. ಈ ಕಿರಣಗಳು ನರಗಳ ರಕ್ತ ಸಂಚಾರ ಹೆಚ್ಚಿಸಿ ಅವುಗಳನ್ನು ಪುನಶ್ಚೇತನಗೊಳಿಸುತ್ತವೆ. ಇದರಿಂದಾಗಿ ಕ್ರಮೇಣ ಪಾದದ ಸ್ಪರ್ಶಜ್ಞಾನವು ಯಥಾಸ್ಥಿತಿಗೆ ಬಂದು ನೋವಿನ ಅನುಭವ ಕಡಿಮೆಯಾಗುತ್ತದೆ. ಈ ಚಿಕಿತ್ಸೆಗೆ ಸಾಮಾನ್ಯವಾಗಿ 10-15 ದಿನಗಳು ಬೇಕಾಗುತ್ತವೆ.

ಮಧುಮೇಹ ಪಾದದ ಚಿಕಿತ್ಸೆಯ ವಿಭಾಗದಲ್ಲಿ ಲೇಸರ್‌ ಚಿಕಿತ್ಸೆಯಲ್ಲದೆ ಸರಿಯಾದ ಪಾದರಕ್ಷೆಯನ್ನು ನೀಡಲಾಗುತ್ತದೆ. ಒರಟಾಗಿರುವ, ಪಾದಕ್ಕೆ ಸರಿಯಾಗಿ ಹೊಂದದ ಪಾದರಕ್ಷೆಯು ಮಧುಮೇಹಿಗಳ ಪಾದದ ಮೇಲೆ ತೀವ್ರ ತರಹದ ಪರಿಣಾಮ ಬೀರಬಹುದು ಮತ್ತು ನೋವನ್ನು ಉಂಟು ಮಾಡಬಹುದು. ಆದುದರಿಂದ ಇಲ್ಲಿ ಪಾದದಅಡಿಯ ಒತ್ತಡಕ್ಕೆ ಅನುಗುಣವಾಗಿ ಸರಿಯಾದ ಪಾದರಕ್ಷೆಯನ್ನುಕೊಡಲಾಗುವುದು. ಅಲ್ಲದೆ ಪಾದರಕ್ಷೆಯ ಒಳಮೈಯನ್ನು ಆವಶ್ಯಕತೆಗನುಗುಣವಾಗಿ ನೀಡಲಾಗುವುದು. ಇಲ್ಲಿ ಮಧುಮೇಹಿಗಳಿಗೆ ವ್ಯಾಯಾಮ, ಪಾದದ ಸಣ್ಣ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ, ಉಗುರುಗಳ ಆರೈಕೆ, ಮಧುಮೇಹಿಗಳ ಪಾದದ ಆರೈಕೆಯ ಬಗ್ಗೆ ಆಪ್ತ ಸಮಾಲೋಚನೆಯನ್ನು ನೀಡಲಾಗುವುದು. ಇವೆಲ್ಲವೂ ಮಧುಮೇಹಿಗಳ ಪಾದದ ಆರೈಕೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ.

-ಡಾ| ಶುಭಾ ಜಿ.
ಸಹಾಯಕ ಪ್ರಾಧ್ಯಾಪಕರು

-ಡಾ| ಜಿ. ಅರುಣ್‌ ಮಯ್ಯ
ಡೀನ್‌, ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಷನ್‌, ಮುಖ್ಯಸ್ಥರು,
ಮಧುಮೇಹ ಪಾದದ ಆರೈಕೆ ಮತ್ತು
ಸಂಶೋಧನ ಕೇಂದ್ರ , ಫಿಸಿಯೋಥೆರಪಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

 

 

Advertisement

Udayavani is now on Telegram. Click here to join our channel and stay updated with the latest news.

Next