Advertisement

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

01:23 AM May 13, 2017 | Team Udayavani |

ಬೆಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಪಿಯುಸಿ ಫ‌ಲಿತಾಂಶದಂತೆ ಎಸ್ಸೆಸ್ಸೆಲ್ಸಿಯಲ್ಲಿಯೂ ಬೀದರ್‌ ಕೊನೆಯ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಪ್ರಕಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್, ಬೀದರ್‌ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿ ಸೇರಿದಂತೆ ಅತ್ಯಂತ ಕಳಪೆ ಸಾಧನೆ ತೋರಿದ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ವಿಷಯವಾರು ಹಾಗೂ ಭಾಷಾವಾರು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಈ ವರ್ಷ ರಾಷ್ಟ್ರೀಯ ನೀತಿಯಿಂದ ಗ್ರೇಸ್‌ ಮಾರ್ಕ್‌ ನೀಡಿಲ್ಲ ಹಾಗೂ ಸ್ಕೀಮ್‌ ಆಫ್ ಇವ್ಯಾಲ್ಯೂವೇಷನ್‌ ತಂದಿದ್ದರಿಂದ ವಿದ್ಯಾರ್ಥಿಗಳ ಶ್ರಮದ ನೈಜ ಫ‌ಲಿತಾಂಶ ಬಂದಿದೆ ಎಂದು ಹೇಳಿದರು.

Advertisement

ಪ್ರಾಥಮಿಕ ಶಾಲೆಯಲ್ಲಿ 14,729 ಶಿಕ್ಷಕರ ಹುದ್ದೆ ಖಾಲಿಯಿದ್ದು, ಸದ್ಯ ಎಲ್ಲಾ ಹುದ್ದೆಗೂ ಅತಿಥಿ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. 10 ಸಾವಿರ ಶಿಕ್ಷಕರ ನೇಮಕಾತಿಗೆ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತಂದು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಲಿದ್ದೇವೆ. ಹಾಗೆಯೇ 1689 ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೂ ಶೀಘ್ರವೇ ಚಾಲನೆ ಸಿಗಲಿದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಬೇಕಾದ ಯೋಜನೆ ರೂಪಿಸಿ, ಅನುಷ್ಠಾನ ಮಾಡಲಿದ್ದೇವೆ. ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಿದ್ದೇವೆ ಎಂದರು. 2012ರ ಆರ್‌ಎಂಎಸ್‌ಎ ಅನುದಾನದಲ್ಲಿ 72 ಆದರ್ಶ ಶಾಲೆಗಳನ್ನು ರಾಜ್ಯದಲ್ಲಿ ತೆರೆದಿದ್ದೇವೆ. ಅದರಿಂದ 3,876 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಶೇ.93.89ರಷ್ಟು ಫ‌ಲಿತಾಂಶ ಬಂದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಂದ ಪರೀಕ್ಷೆ ಬರೆದ 19,506 ವಿದ್ಯಾರ್ಥಿಗಳಲ್ಲಿ ಶೇ.92.28ರಷ್ಟು ಮಂದಿ ಪಾಸಾಗಿದ್ದಾರೆ ಎಂಬ ಮಾಹಿತಿ ನೀಡಿದರು.

51 ಮಂದಿ ಡಿಬಾರ್‌
5159 ಸರ್ಕಾರಿ ಶಾಲೆಗಳಲ್ಲಿ 268 ಶಾಲೆಗಳು ನೂರಕ್ಕೆ ನೂರರಷ್ಟು ಫ‌ಲಿತಾಂಶ ಹಾಗೂ 5 ಶಾಲೆ ಶೂನ್ಯಗಳು ಫ‌ಲಿತಾಂಶ ಪಡೆದಿವೆ. 3285 ಅನುದಾನಿತ ಶಾಲೆಗಳಲ್ಲಿ 44 ಶಾಲೆಗಳು ನೂರಕ್ಕೆ 100ರಷ್ಟು ಫ‌ಲಿತಾಂಶ ಹಾಗೂ 4 ಶಾಲೆಗಳು ಶೂನ್ಯ ಫ‌ಲಿತಾಂಶ ಮತ್ತು 5710 ಅನುದಾನ ರಹಿತ ಶಾಲೆಗಳಲ್ಲಿ 612 ಶಾಲೆ 100ಕ್ಕೆ 100 ಫ‌ಲಿತಾಂಶ ಮತ್ತು 51 ಶಾಲೆಗಳು ಶೂನ್ಯ ಫ‌ಲಿತಾಂಶ ಪಡೆದಿವೆ. ಒಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 51 ಮಂದಿ ಡಿಬಾರ್‌ ಆಗಿದ್ದರು.

1749 ವಿದ್ಯಾರ್ಥಿಗಳು ತೇರ್ಗಡೆ: ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 36138 ಮಂದಿ ಎ+, 93332 ಎ, 137098 ಬಿ +, 157693 ಬಿ, 114879 ಸಿ + ಹಾಗೂ 21299 ಸಿ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಹಾಗೆಯೇ ಪರೀಕ್ಷೆ ಬರೆದ 3185 ವಿಕಲಚೇತನ ಅಭ್ಯರ್ಥಿಗಳಲ್ಲಿ 1749 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಶಾಲೆಗಳ ಉನ್ನತೀಕರಣ
ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಯನ್ನು ಸಮಾನವಾಗಿ ನೋಡುತ್ತೇವೆ. ಸರ್ಕಾರಿ ಪಿಯು ಕಾಲೇಜನ್ನು ಶಿಫಾರಸಿನ ಆಧಾರದಲ್ಲಿ ಆರಂಭಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳ ಉನ್ನತೀಕರಣ ಮಾಡಲಿದ್ದೇವೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ, ಅದನ್ನು ಹಿರಿಯ ಪ್ರಾಥಮಿಕ ಶಾಲೆಗೆ ಉನ್ನತೀಕರಿಸುವುದು ಹಾಗೂ 8ನೇ ತರಗತಿಯಲ್ಲಿ 80ಕ್ಕಿಂತ ಅಧಿಕ ಮಕ್ಕಳಿದ್ದರೆ, ಪ್ರೌಢಶಾಲೆಗೆ ಉನ್ನತೀಕರಿಸುವುದು, ಎಸ್ಸೆಸ್ಸೆಲ್ಸಿಯ 120 ಮಕ್ಕಳಿದ್ದರೆ ಪಿಯು ತರಗತಿ ಆರಂಭಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂಬ ಮಾಹಿತಿ ನೀಡಿದರು. 2164 ಶಾಲೆಯಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಿದ್ದೇವೆ. ಸರ್ಕಾರಿ ಶಾಲೆಯಲ್ಲೇ ಪೂರ್ವ ಪ್ರಾಥಮಿಕ ತರಗತಿ ತೆರೆಯಲು ಒತ್ತಡ ಇದೆ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಇಲ್ಲ, ಎನ್‌ಸಿಆರ್‌ಟಿ ನಿಯಮದಂತೆ ನಮ್ಮಲ್ಲಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಅರ್ಹತೆ ಹೊಂದಿದ ಸರ್ಕಾರಿ ಶಾಲೆಯೂ ಇಲ್ಲ. ಕಾನೂನಿನ ತಿದ್ದುಪಡಿ ಮೂಲಕ ಮುಂದಿನ ವರ್ಷ ಈ ಪ್ರಸ್ತಾವನೆಗೆ ಅನುಮೋದನೆ ಪಡೆಯಲಿದ್ದೇವೆ ಎಂದರು.

Advertisement

ಕಾಲೇಜುಗಳು ಪ್ರವೇಶ ನಿರಾಕರಿಸುವಂತಿಲ್ಲ
ಪಿಯುಸಿ ಪ್ರವೇಶಾತಿಗೆ ಕಟ್ಟುನಿಟ್ಟಿನ ನಿಮಯ ರೂಪಿಸಿದ್ದೇವೆ. ಅಂಕಗಳ ಆಧಾರದಲ್ಲಿ ಪ್ರವೇಶ ನೀಡುತ್ತಿರುವುದರಿಂದ ಹೆಚ್ಚಿನ ಅಂಕ ಪಡೆದವರಿಗೆ ಪ್ರವೇಶ ಸಿಗುತ್ತಿದೆ. ಪ್ರವೇಶ ನಿರಾಕರಿಸುವ ಶಾಲಾ ಕಾಲೇಜುಗಳ ವಿರುದ್ಧ ಯಾವುದೇ ದೂರು ಬಂದರೂ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶ ಸಿಗಬೇಕು. ಸರ್ಕಾರ ಶಾಲೆಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಿದೆಎಂದು ಹೇಳಿದರು. ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕಳೆದ ವರ್ಷ ಅಕ್ಷಯ ಫೌಂಡೇಷನ್‌ ಜತೆ ಒಪ್ಪಂದ ಮಾಡಿಕೊಂಡು, ಗಣಿತ ಕಿಟ್‌ ವಿತರಿಸಿದ್ದೇವೆ. ವಿಜ್ಞಾನ ವಿಷಯದಲ್ಲೂ ಸಾಕಷ್ಟು ಸುಧಾರಣೆ ತರುತ್ತಿದ್ದೇವೆ. ಕಳೆದ ವರ್ಷ ಜಿಲ್ಲಾ ಕೇಂದ್ರದ ಡಯಾಟ್‌ನಲ್ಲಿ ಇಂಗ್ಲಿಷ್‌ ವಿಷಯಕ್ಕೆ ಹೆಚ್ಚಿನ ಆದ್ಯತೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ ಎಂದರು.

ಖಾಸಗಿ ಶಾಲೆಗಳ ಜೊತೆ ಸ್ಪರ್ಧೆ ಅನಿವಾರ್ಯ: ಖಾಸಗಿ ಶಾಲೆಗೆ ಹೋಲಿಸಿದರೆ ಶೈಕ್ಷಣಿಕ ಗುಣಮಟ್ಟದಲ್ಲಿ ಸರ್ಕಾರಿ ಶಾಲೆಗಳು ಬಹಳಷ್ಟು ಹಿಂದಿವೆ. ಆ ಕಾರಣದಿಂದಲೇ ಸರ್ಕಾರಿ ಶಾಲಾ ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇವೆ. ಸರ್ಕಾರಿ ಶಾಲೆ ಉಳಿಯಬೇಕಾದರೆ, ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡುವುದು ಅನಿವಾರ್ಯವಾಗಿದೆ. ಶೈಕ್ಷಣಿಕ ವರ್ಷ ಅರಂಭದೊಳಗೆ ಎಲ್ಲಾ ಶಾಲೆಗೂ ಕನಿಷ್ಠ ಅನುದಾನ ನೀಡಲಿದ್ದೇವೆ ಎಂದು ಭರವಸೆ ನೀಡಿದರು.

ಮೂವರಿಗೆ ನೂರಕ್ಕೆ ನೂರು ಅಂಕ
ಎಸ್ಸೆಸ್ಸೆಲ್ಸಿ ಅಥವಾ ಪಿಯುನಲ್ಲಿ ನೂರಕ್ಕೆ ನೂರು ಅಂಕ ಕೊಡುವ ಪದ್ಧತಿ ಇರಲಿಲ್ಲ. ಕಳೆದ ವರ್ಷ ಮೊದಲಬಾರಿಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಪೂರ್ಣಪ್ರಜ್ಞಾ ಪ್ರೌಢಶಾಲೆ ವಿದ್ಯಾರ್ಥಿ ಬಿ.ಎಸ್‌.ರಂಜನ್‌ 625ಕ್ಕೆ 625 ಅಂಕ ಪಡೆದು ಎಸ್ಸೆಸ್ಸೆಲ್ಸಿ ಇತಿಹಾಸದಲ್ಲೆ ಹೊಸ ದಾಖಲೆ ಸೃಷ್ಟಿಸಿದ್ದರು. ಪ್ರಸಕ್ತ ವರ್ಷ ಈ ಸಾಲಿಗೆ ಮೂವರು ಸೇರಿದ್ದಾರೆ. ಉತ್ತರಕನ್ನಡ ಮೂಲದ ಬೆಂಗಳೂರಿನ ಎಂಇಎಸ್‌ ಕಿಶೋರ್‌ ಕೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿ ಸುಮಂತ್‌ ಹೆಗಡೆ, ದಕ್ಷಿಣಕನ್ನಡ ಜಿಲ್ಲೆಯ ಸೇಂಟ್‌ ಜಾಕೀಮ್‌ ಪ್ರೌಢಶಾಲೆಯ ಎಚ್‌.ಪೂರ್ಣಾನಂದ ಹಾಗೂ ಬಾಗಲಕೋಟೆಯ ಎಸ್‌ಆರ್‌ಎ ಸಂಯುಕ್ತ ಪ್ರೌಢಶಾಲೆಯ ಪಲ್ಲವಿ ಶಿರಹಟ್ಟಿ 625ಕ್ಕೆ 625 ಅಂಕ ಪಡೆದು ಬೆರಗು ಮೂಡಿಸಿದ್ದಾರೆ. ವ್ಯಾಪಕ, ನಿರಂತರ ಮೌಲ್ಯಮಾಪನ(ಸಿಸಿಇ) ಪದಟಛಿತಿ ಜಾರಿ ಮಾಡಿದ ನಂತರ 625ಕ್ಕೆ 625 ಅಂಕ ಪಡೆಯಲು ಸಾಧ್ಯವಾಗಿದೆ.

2017-18ನೇ ಸಾಲಿನಲ್ಲಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಿದ್ದೇವೆ. ಮುದ್ರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಪಠ್ಯಪುಸ್ತಕ ರವಾನಿಸುತ್ತಿದ್ದೇವೆ. ಜೂನ್‌ 1ರಿಂದಲೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲಿದ್ದೇವೆ.
– ತನ್ವೀರ್‌ ಸೇಠ್, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next