Advertisement

ಸಮಗ್ರ ನೀರಾವರಿಯತ್ತ ಹರಿಯಲಿ ಸಿಎಂ ಚಿತ್ತ

07:46 PM Aug 19, 2021 | Team Udayavani |

ವರದಿ: ಶಂಕರ ಜಲ್ಲಿ

Advertisement

ಆಲಮಟ್ಟಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕೇಂದ್ರ ಭಾಗವಾಗಿರುವ ಆಲಮಟ್ಟಿ ಶಾಸ್ತ್ರಿ ಸಾಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆ. 21ರಂದು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಿದ್ದಾರೆ.

ರಾಜ್ಯದ ಶೇ. 60 ಭೂಮಿಯನ್ನು ನೀರಾವರಿಗೊಳಪಡಿಸುವ ಬೃಹತ್‌ ಕೃ.ಮೇ.ಯೋ. ಕೇಂದ್ರ ಸ್ಥಾನ ಆಲಮಟ್ಟಿಯಲ್ಲಿ ಕೃಷ್ಣೆಗೆ ನಿರ್ಮಿಸಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ತುಂಬಿ ನಿಂತಿದೆ. ಶಾಸ್ತ್ರಿ ಜಲಾಶಯಕ್ಕೆ ಮಹಾಪೂರ ಬಂದು ತಿಂಗಳುಗಳವರೆಗೆ ಸುಮಾರು 425 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ.

ಬರದ ನಾಡಿನ ದಾಹ ನೀಗಿಸಲು ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಪ್ರಧಾನಿಯಾಗಿದ್ದ ಶಾಸ್ತ್ರೀಜಿಯವರು 1964 ಮೇ 22ರಂದು ಭೂಮಿಪೂಜೆ ನೆರವೇರಿಸಿದ್ದರು. ನಂತರ ಕಟ್ಟಡದ ಕಾಮಗಾರಿ ಹಾಗೂ ಭೂ ಸ್ವಾ ಧೀನ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಯೋಜನೆಗಳು ಆಮೆಗತಿಯಲ್ಲಿ ಸಾಗಿದ್ದವು. ಇದರಿಂದ ಜಲಾಶಯದ ಕಟ್ಟಡ ನಿರ್ಮಾಣ ಕಾಮಗಾರಿ 2000ನೇ ಸಾಲಿನಲ್ಲಿ ಪೂರ್ಣಗೊಂಡಿದ್ದರೂ 2002ರಿಂದ ನೀರು ಸಂಗ್ರಹಿಸಲು ಆರಂಭಿಸಲಾಯಿತು.

ಜಲಾಶಯವನ್ನು 2006ರಲ್ಲಿ ಆ. 21ರಂದು ಜೆಡಿಎಸ್‌ -ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿಯವರು ರಾಷ್ಟ್ರಪತಿಯಾಗಿದ್ದ ಖ್ಯಾತ ವಿಜ್ಞಾನಿ ಡಾ| ಎ.ಪಿ.ಜೆ. ಅಬ್ದುಲ್‌ಕಲಾಂ ಅವರಿಂದ ಲೋಕಾರ್ಪಣೆಗೊಳಿಸಿದ್ದರು. ಗೇಟು ಜೋಡಿಸಿ: ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳ ವ್ಯಾಜ್ಯದಿಂದ ಸರ್ವೋತ್ಛ ನ್ಯಾಯಾಲದ ತೀರ್ಪಿನಿಂದ 524 ಮೀ. ಎತ್ತರದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಗೇಟುಗಳನ್ನು ಕತ್ತರಿಸಿ 519.60 ಮೀ.ಗೆ ಕಡಿತಗೊಳಿಸಲಾಗಿತ್ತು. ನಂತರ ನ್ಯಾ| ಬೃಜೇಶಕುಮಾರ ಅವರ ನೇತೃತ್ವದ ಎರಡನೇ ಕೃಷ್ಣಾನ್ಯಾಯಾ ಧಿಕರಣವು 519.60 ಮೀ.ಗಿರುವ ಜಲಾಶಯದ ಗೇಟುಗಳನ್ನು 524.256 ಮೀ.ಗೆ ಎತ್ತರಿಸಲು ಅನುಮತಿ ನೀಡಿದೆ. ನೀರು ಬಳಸಿಕೊಳ್ಳಲು ಕೆಲವು ನಿರ್ಬಂಧಗಳನ್ನು ಹಾಕಲಾಗಿದೆ. ಇದರಿಂದ ಜಲಾಶಯದ ಗೇಟುಗಳನ್ನು ಎತ್ತರಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ.

Advertisement

ಇನ್ನು ಜಲಾಶಯದ ನೀರಿನ ಸಂಗ್ರಹದ ಬಗ್ಗೆ ಕೇಂದ್ರೀಯ ಜಲ ಆಯೋಗದ ನೇತೃತ್ವದಲ್ಲಿ ನೀರು ನಿರ್ವಹಣಾ ಸಮಿತಿಯನ್ನು ಮೂರು ರಾಜ್ಯಗಳ ಸದಸ್ಯರುಗಳನ್ನೊಳಗೊಂಡು ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಇದರಿಂದ ಜಲಾಶಯ ಎತ್ತರಿಸಿದರೂ ಯಾವುದೇ ತೊಂದರೆಯಿಲ್ಲ.

522 ಮೀ.ಗೆ ಎತ್ತರಿಸಿ: ಆಲಮಟ್ಟಿ ಶಾಸ್ತ್ರಿ ಜಲಾಶಯವನ್ನು 519.60 ಮೀ.ದಿಂದ 524.256 ಮೀ.ಗೆ ಎತ್ತರಿಸುವುದರಿಂದ ಭೂ ಸ್ವಾ ಧೀನ ಹಾಗೂ ಮುಳುಗಡೆ ಪುನರ್ವಸತಿ ಮತ್ತ ಪುನರ್‌ ನಿರ್ಮಾಣ ಸೇರಿದಂತೆ ಸುಮಾರು 1 ಲಕ್ಷ ಕೋಟಿ. ರೂ. ಬೇಕಾಗುತ್ತವೆ. ಇದರಿಂದ ಸಮಯವೂ ಗತಿಸಲಿದೆ, ಅಲ್ಲದೇ ಮಾರುಕಟ್ಟೆ ದರವೂ ಏರಿಕೆಯಾಗುತ್ತದೆ. 2013ರ ಭೂ ಸ್ವಾ ಧೀನ ಕಾಯ್ದೆಯನ್ವಯ ಸಂತ್ರಸ್ತರಿಗೆ ಪರಿಹಾರ ನೀಡಲೂ ನಿರ್ಮಾಣದ ವೆಚ್ಚ ಏರಿಕೆಯಾಗಲಿದೆ.

ಜಲಾಶಯವನ್ನು 524ರ ಬದಲಾಗಿ 522 ಮೀ.ಗೆ ಎತ್ತರಿಸುವುದರಿಂದ ಜಲಾಶಯದಲ್ಲಿ 60 ಟಿಎಂಸಿ ಅಡಿವರೆಗೂ ನೀರು ಸಂಗ್ರಹವಾಗಲಿದ್ದು, ಇದರಿಂದ ಸುಮಾರು 3.2 ಲಕ್ಷ ರೂ. ಹೆಕ್ಟೇರ್‌ ಪ್ರದೇಶ ನೀರಾವರಿಗೊಳಪಡಲಿದೆ. ಇದರಿಂದ 22 ಗ್ರಾಮಗಳನ್ನು 76 ಸಾವಿರ ಎಕರೆ ಭೂಮಿಯನ್ನು ಉಳಿಸಿಕೊಳ್ಳುವುದರೊಂದಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದೆ ಕಾಲಮಿತಿಯಲ್ಲಿ ನೀರು ಬಳಸಿಕೊಳ್ಳಬಹುದಾಗಿದೆ. ಚಾಲ್ತಿಯಲ್ಲಿರುವ ನ್ಯಾ| ಆರ್‌.ಎಸ್‌. ಬಚಾವತ್‌ ಹಾಗೂ ನ್ಯಾ| ಬೃಜೇಶಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣಗಳು ನೀಡಿರುವ ತೀರ್ಪುಗಳು 2050 ಮೇ 31ಕ್ಕೆ ಮುಕ್ತಾಯಗೊಳ್ಳಲಿವೆ. ಮುಂದೆ ಹೊಸ ನ್ಯಾಯಾಧಿಕರಣಗಳಾಗಲಿ ಇಲ್ಲವೇ ಈಗಿರುವ ನಿಯಮಗಳನ್ನು ಮುಂದುವರಿಸಬಹುದಾಗಿದೆ. ಹೀಗಿರುವಾಗ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು 29 ವರ್ಷಗಳು ಬಾಕಿಯುಳಿದಿವೆ. ಅಷ್ಟರೊಳಗಾಗಿ ಬರದ ನಾಡಿನ ಹಣೆಪಟ್ಟಿ ಅಂಟಿಸಿಕೊಂಡಿರುವ ಜಿಲ್ಲೆಗಳನ್ನು ಸಮಗ್ರವಾಗಿ ನೀರಾವರಿಗೊಳಪಡಿಸಲು ಮುಖ್ಯಮಂತ್ರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next