Advertisement

ಸಂಗೀತ ನಿರ್ದೇಶನದತ್ತ ಲಕ್ಷ್ಮೀ

09:45 PM Jun 20, 2019 | mahesh |

ಸಂಗೀತ ಕ್ಷೇತ್ರವೇ ಹಾಗೆ. ಹೊಸ ಹೊಸ ಕನಸುಗಳನ್ನು ತುಂಬುತ್ತಲೇ ಇರುತ್ತದೆ. ಗಾಯಕರಾದವರು ಸಂಗೀತ ನಿರ್ದೇಶಕರಾಗಬೇಕು, ಸಂಗೀತ ನಿರ್ದೇಶಕರಾದವರು ಅದರಲ್ಲೇ ಇನ್ನೇನೋ ಸಾಧನೆ ಮಾಡಬೇಕೆಂದು ಕನಸು ಕಾಣುತ್ತಾರೆ. ಇಲ್ಲೊಬ್ಬ ಗಾಯಕಿ ಕೂಡಾ ಸಂಗೀತ ನಿರ್ದೇಶಕಿಯಾಗುವ ಕನಸು ಕಾಣುತ್ತಿದ್ದಾರೆ. ಆಕೆ ಬೇರಾರು ಅಲ್ಲ ಲಕ್ಷ್ಮೀ ವಿಜಯ್‌. ಈಗಾಗಲೇ 120ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡಿರುವ ಲಕ್ಷ್ಮೀಯವರಿಗೆ ಮುಂದೆ ಸಿನಿಮಾಗಳಿಗೆ ಸಂಗೀತ ನೀಡುವ ಕನಸಿದೆ. “ಸ್ನೇಹನಾ ಪ್ರೀತಿನಾ’ ಚಿತ್ರದ ಹಾಡಿನ ಮೂಲಕ ಸಿನಿಮಾ ಅವಕಾಶ ಪಡೆದು ಕೊಂಡ ಲಕ್ಷ್ಮೀ ಇಲ್ಲಿವರೆಗೆ ಹಲವು ಹಿಟ್‌ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅದರಲ್ಲೂ ಯಶ್‌ ನಾಯಕರಾಗಿರುವ “ಜಾನು’ ಚಿತ್ರದ “ಸ್ವಲ್ಪ ಬಿಟ್ಕೊಂಡು …’ ಹಾಡು ಇವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದು ಸುಳ್ಳಲ್ಲ. “ಅಂಬರೀಷ’, “ವಿಷ್ಣುವರ್ಧನ’, “ಪರಮೇಶ ಪಾನ್‌ವಾಲಾ’, “ಕಲ್ಪನಾ’, “ಸಿಂಹಾದ್ರಿ’ ಸೇರಿದಂತೆ ಹಲವು ಸಿನಿಮಾಗಳಿಗೆ ಲಕ್ಷ್ಮೀ ಹಾಡಿದ್ದಾರೆ. ಜೀ ವಾನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಲ್ಲಿ ಗ್ರಾಂಡ್‌ ತೀರ್ಪುಗಾರರ ಪ್ಯಾನಲ್‌ನಲ್ಲಿ ಒಬ್ಬರಾಗಿರುವ ಲಕ್ಷ್ಮೀ ಈಗಾಗಲೇ ಒಂದಷ್ಟು ಟ್ಯೂನ್‌ಗಳನ್ನು ಸಿದ್ಧಪಡಿಸಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಜೊತೆಗೆ ಇಲ್ಲಿವರೆಗೆ ಹಲವು ವೇದಿಕೆಗಳಲ್ಲಿ ಸಿನಿಮಾ ಕಾರ್ಯಕ್ರಮ ಕೂಡಾ ನಡೆಸಿಕೊಟ್ಟಿದ್ದಾರೆ. ಈ ಎಲ್ಲಾ ಅನುಭವ ಹೊಂದಿರುವ ಲಕ್ಷ್ಮೀ ವಿಜಯ್‌ ಅವರಿಗೆ ಮುಂದೆ ಒಳ್ಳೆಯ ಸಂಗೀತ ನಿರ್ದೇಶಕಿಯಾಗುವ ಕನಸಿದೆ.

Advertisement

ಲಕ್ಷ್ಮೀಯವರು “ಗಗನ ಮ್ಯೂಸಿಕ್‌ ಅಕಾಡೆಮಿ ಶಾಲೆಯ ಉಸ್ತುವಾರಿ ಹೊತ್ತುಕೊಂಡಿದ್ದಾರೆ. ಇಲ್ಲಿ ಸುಮಾರು ಒಂದು ಸಾಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ ಪಾಠ ಮಾಡುತ್ತಿದ್ದು, ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ “ಸುಮಧುರ ಧ್ವನಿ ಸ್ಪರ್ಧೆ’ ಏರ್ಪಡಿಸಿದ್ದು, ಜೂನ್‌ ಮೂವತ್ತರಂದು ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next