Advertisement

ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಆಪ್ತ “ದಳ’ಪತಿ!

11:33 PM Nov 18, 2019 | Lakshmi GovindaRaj |

ಬೆಳಗಾವಿ: ಚುನಾವಣೆಯಲ್ಲಿ ಸೋತರೂ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನದ ಜತೆಗೆ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದ ಲಕ್ಷ್ಮಣ ಸವದಿ, ಈಗ ಅಥಣಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ವತಃ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ತಂತ್ರ ಹಣೆದಿದ್ದಾರೆಯೇ? ಇಂತಹದೊಂದು ಅನುಮಾನದ ಪ್ರಶ್ನೆ ಈಗ ಅಥಣಿ ಕ್ಷೇತ್ರದಲ್ಲಿ ದಟ್ಟವಾಗಿ ಹರಿದಾಡುತ್ತಿದೆ. ಸೋಮವಾರ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ ತೆಲಸಂಗ ಜಿ.ಪಂ. ಕ್ಷೇತ್ರದ ಸದಸ್ಯ ಗುರಪ್ಪ ದಾಸ್ಯಾಳ ಈ ಅನುಮಾನಕ್ಕೆ ಪುಷ್ಟಿ ನೀಡಿದ್ದಾರೆ.

Advertisement

ಇದಕ್ಕೆ ಕಾರಣ ಗುರಪ್ಪ ದಾಸ್ಯಾಳ ಅವರು ಸಚಿವ ಸವದಿಯವರ ಕಟ್ಟಾ ಶಿಷ್ಯ. ಕೊನೇ ಕ್ಷಣದಲ್ಲಿ ಜೆಡಿಎಸ್‌ ಟಿಕೆಟ್‌ ಪಡೆದು ನಾಮಪತ್ರ ಸಲ್ಲಿಸಿರುವ ಗುರಪ್ಪ ದಾಸ್ಯಾಳ, ಈಗ ಅಥಣಿ ಕ್ಷೇತ್ರದ ರಾಜಕಾರಣಕ್ಕೆ ಮಹತ್ವದ ತಿರುವು ನೀಡಿದ್ದಾರೆ. ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದು ಸವದಿ ಅವರ ನಡೆ. ತಮಗೆ ಬಿಜೆಪಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಅವರು, ಈಗ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರನ್ನು ಸೋಲಿಸಲು ಗುಪ್ತವಾಗಿ ರಣತಂತ್ರ ಹಣೆದಿದ್ದು, ಅದರ ಭಾಗವಾಗಿಯೇ ದಾಸ್ಯಾಳ ಸ್ಪರ್ಧೆ ಎಂಬ ಮಾತು ಕೇಳಿ ಬರುತ್ತಿವೆ.

ಒಂದೇ ಸಮುದಾಯದವರು: ಗುರಪ್ಪ ದಾಸ್ಯಾಳ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು. ಮಹೇಶ ಕುಮಟಳ್ಳಿ ಸಹ ಇದೇ ಸಮಾಜದವರು. ಬಿಜೆಪಿಗೆ ಹೋಗುವ ಈ ಸಮಾಜದ ಮತಗಳನ್ನು ಒಡೆಯುವ ಉದ್ದೇಶದಿಂದಲೇ ಸವದಿ ಈ ಆಟ ಆಡಿದ್ದಾರೆ. ಈ ಮೂಲಕ ತಮಗೆ ಟಿಕೆಟ್‌ ತಪ್ಪಿಸಿದವರಿಗೆ ಪಾಠ ಕಲಿಸುವುದು ಅವರ ಉದ್ದೇಶ ಎಂಬುದು ಅವರ ಆಪ್ತ ಮೂಲಗಳ ಹೇಳಿಕೆ.

ಭಾನುವಾರ ಸಂಜೆಯವರೆಗೆ ಜೆಡಿಎಸ್‌ನಿಂದ ತಾಲೂಕು ಬ್ಲಾಕ್‌ ಅಧ್ಯಕ್ಷ ಶ್ರೀಶೈಲ ಹಳ್ಳದಮಳ ಅವರ ಹೆಸರು ಮುಂಚೂಣಿ ಯಲ್ಲಿತ್ತು. ಆದರೆ, ಗುರಪ್ಪ ದಾಸ್ಯಾಳ ಹೆಸರು ಅಂತಿಮವಾಗಿದ್ದರ ಹಿಂದೆ ಸವದಿ ಕಾರ್ಯತಂತ್ರ ಹಾಗೂ ಲೆಕ್ಕಾಚಾರ ಸಾಕಷ್ಟು ಕೆಲಸ ಮಾಡಿದೆ. ತಮ್ಮ ಕಟ್ಟಾ ಶಿಷ್ಯ ದಾಸ್ಯಾಳ ಅವರಿಗೆ ಟಿಕೆಟ್‌ ಕೊಡಿಸಲು ಸವದಿ ಅವರು ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂಬುದು ಮೂಲಗಳ ಹೇಳಿಕೆ.

ದಾಸ್ಯಾಳ ಮೂಲತಃ ಜೆಡಿಎಸ್‌ ಸದಸ್ಯರು. ಮೊದಲ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಅವರು, ಜಿಪಂಗೆ ಪ್ರವೇಶ ಮಾಡಲು ಆಗಿರಲಿಲ್ಲ. ಆಗ ಸೋಲು ಅನುಭವಿ ಸಿದ್ದರು. ಕಳೆದ ಜಿಪಂ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದ ದಾಸ್ಯಾಳ, ಚುನಾವಣೆಯಲ್ಲಿ ಜಯ ಗಳಿಸಿ ಸವದಿಯವರ ಪರಮ ಶಿಷ್ಯರಾದರು.

Advertisement

60 ಸಾವಿರ ಲಿಂಗಾಯತ ಮತ!: ತೆಲಸಂಗ ಹೋಬಳಿಯ 9 ಹಳ್ಳಿಗಳಲ್ಲಿ ಸುಮಾರು 60 ಸಾವಿರ ಲಿಂಗಾಯತ ಪಂಚಮಸಾಲಿ ಮತದಾರರಿದ್ದಾರೆ. ಇದರ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವುದು ಗುರಪ್ಪ ದಾಸ್ಯಾಳ ಗುರಿ. ಅದಕ್ಕೆ ಈಗ ಸವದಿ ಬೆಂಬಲವಾಗಿ ನಿಂತಿದ್ದಾರೆ. ಕುಮಾರಸ್ವಾಮಿ ತಂತ್ರಗಾರಿಕೆಗೆ ಸವದಿ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.

ಬಿಜೆಪಿಯಲ್ಲಿ ಹೆಚ್ಚಾದ ತಳಮಳ: ಗುರಪ್ಪ ದಾಸ್ಯಾಳ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ತಳಮಳ ಆರಂಭವಾಗಿದೆ. ತಾಲೂಕಿನ ಐದು ಜಿಪಂ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಜೆಡಿಎಸ್‌ ಪರವಾಗಿ ನಿಲ್ಲಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜವೇ ಆದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಗೆಲುವಿಗೆ ಹರಸಾಹಸವನ್ನೇ ಮಾಡಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಸವದಿ ನಡೆಯ ಮೇಲೆ ಬಿಜೆಪಿ ಅಭ್ಯರ್ಥಿ ಗೆಲುವು ಅವಲಂಬಿತವಾಗಿದೆ. ಈ ಮಧ್ಯೆ, ಲಕ್ಷ್ಮಣ ಸವದಿ ಹಾಗೂ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದು ಜೆಡಿಎಸ್‌ ವಲಯದಲ್ಲಿ ಹೊಸ ಶಕ್ತಿ ಮೂಡಿಸಿದ್ದರೆ, ಈಗಾಗಲೇ ಬಿಜೆಪಿ ಕಾರ್ಯಕರ್ತರ ಆಕ್ರೋಶ ಎದುರಿಸಿರುವ ಮಹೇಶ ಕುಮಟಳ್ಳಿ ವಲಯದಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next