Advertisement

ರಾಜ್ಯದಲ್ಲಿ ಕೆಎಎಸ್‌ ಅಧಿಕಾರಿಗಳ ಕೊರತೆ

10:25 AM Jun 03, 2022 | Team Udayavani |

ಬೆಂಗಳೂರು: ಕೆಎಎಸ್‌ ಅಧಿಕಾರಿಗಳನ್ನು “ಆಡಳಿತ ಪಿರಾಮಿಡ್‌’ನ ತಳಪಾಯದ ಇಟ್ಟಿಗೆಗಳೆಂದು ಹೇಳಲಾಗುತ್ತದೆ. ಆದರೆ, ರಾಜ್ಯದಲ್ಲಿ ಸದ್ಯ ಈ ಇಟ್ಟಿಗೆಗಳ ಸಾಲು ಅಲ್ಲಲ್ಲಿ ಸಡಿಲಗೊಂಡಿದೆ. ಅಂದರೆ, ರಾಜ್ಯದಲ್ಲಿ ಕೆಎಎಸ್‌ ಅಧಿಕಾರಿಗಳ ಕೊರತೆ ಇದೆ.

Advertisement

ಕೆಎಎಸ್‌ ಅಧಿಕಾರಿಗಳ ಕೊರತೆ ಇರುವುದಕ್ಕೆ ಪ್ರಮುಖ ಕಾರಣ ಕರ್ನಾಟಕ ಲೋಕಸೇವಾ ಆಯೋಗದಿಂದ ಕಾಲ ಕಾಲಕ್ಕೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ನಡೆಯದೇ ಇರುವುದು ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ 500ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳು ಇರಬೇಕು. ಆದರೆ, ಇದರಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿ. ಇದರಿಂದಾಗಿ ಒಬ್ಬ ಕೆಎಎಸ್‌ ಅಧಿಕಾರಿ ಅನೇಕ ಕಡೆ ಒಂದಕ್ಕಿಂತ ಹೆಚ್ಚು ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಇದು ಆಡಳಿತದ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತ್ಯೇಕವಾಗಿ ಭೂಸ್ವಾಧೀನ ಅಧಿಕಾರಿಗಳು ಇಲ್ಲದ ಕಾರಣಕ್ಕೆ ಅನೇಕ ಕಡೆ ಆಯಾ ಉಪವಿಭಾಗಾಧಿಕಾರಿಗಳು ಭೂಸ್ವಾಧೀನಾಧಿಕಾರಿಯ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಮುಖ್ಯವಾಗಿ ರಸ್ತೆ, ರೈಲು, ನೀರಾವರಿ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನಕ್ಕೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕೆಎಎಸ್‌ ಅಧಿಕಾರಿಗಳಲ್ಲಿ  ಕಿರಿಯ ವೇತನ ಶ್ರೇಣಿ, ಹಿರಿಯ ವೇತನ ಶ್ರೇಣಿ, ಸೆಲೆಕ್ಷನ್‌ ಗ್ರೇಡ್‌, ಸೂಪುರ್‌ಟೈಮ್‌ ಸ್ಕೇಲ್‌, ಸಿನಿಯರ್‌ ಸೂಪರ್‌ಟೈಂ ಸ್ಕೇಲ್‌ ಎಂಬ ಶ್ರೇಣಿಗಳಿರುತ್ತವೆ. ಕಿರಿಯ ವೇತನ ಶ್ರೇಣಿಯ ಅಧಿಕಾರಿಗಳು ತಹಶೀಲ್ದಾರ್‌, ಹಿರಿಯ ವೇತನ ಶ್ರೇಣಿ ಅಧಿಕಾರಿಗಳು ಉಪವಿಭಾಗಾಧಿಕಾರಿ, ಭೂಸ್ವಾಧೀನಾಧಿಕಾರಿ, ಸೆಲೆಕ್ಷನ್‌ ಗ್ರೇಡ್‌ ಅಧಿಕಾರಿಗಳು ಜಿ.ಪಂ. ಸಿಇಒಗಳಾಗಿರುತ್ತಾರೆ. ಸದ್ಯ ಸೆಲೆಕ್ಷನ್‌ ಗ್ರೇಡ್‌ನ‌ಲ್ಲಿ ಕಳೆದ 8-10 ವರ್ಷಗಳಿಂದ ಶೇ.50ರಿಂದ 100ರಷ್ಟು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಕೆಎಎಸ್‌ಯೇತರ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇದರಿಂದ ಆಡಳಿತಾತ್ಮಕ ಸಮಸ್ಯೆಗಳು ಉಂಟಾಗುತ್ತವೆ. ಸೂಪರ್‌ಟೈಂ ಹಾಗೂ ಸಿನಿಯರ್‌ ಸೂಪರ್‌ಟೈಂ ಸ್ಕೇಲ್‌ನ ಐದಾರು ಹುದ್ದೆಗಳಿಗೂ ಸಮಸ್ಯೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪರಿಹಾರವೇನು? :

Advertisement

ಕಳೆದ ಹಲವು ವರ್ಷಗಳಿಂದ ಕೆಎಎಸ್‌ ಅಧಿಕಾರಿಗಳ ನೇಮಕಾತಿ ನಿಯಮಿತವಾಗಿ ನಡೆದಿಲ್ಲ. ನಡೆದ ನೇಮಕಾತಿಗಳಲ್ಲೂ ಅಕ್ರಮ, ಭ್ರಷ್ಟಾಚಾರ ನಡೆದು ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಕೆಪಿಎಸ್ಸಿ ಅಕ್ರಮಗಳಿಂದಾಗಿ ಕೆಎಎಸ್‌ ಆಗಿದ್ದ ಅನೇಕರು ಹುದ್ದೆಗಳನ್ನು ಕಳೆದುಕೊಳ್ಳಬೇಕಾಯಿತು. ಇನ್ನೂ ಕೆಲವರು ಹಿಂಬಡ್ತಿ ಪಡೆದುಕೊಳ್ಳಬೇಕಾಯಿತು. ಇದು ಕೆಎಎಸ್‌ ವೃಂದದ ಮನೋಬಲ ಕುಸಿಯುವಂತೆ ಮಾಡಿತು. ಇದರ ನೇರ ಪರಿಣಾಮ ಆಡಳಿತ ವ್ಯವಸ್ಥೆಯ ಮೇಲೆ ಆಗುತ್ತದೆ. ಇಂದು ಕೆಎಎಸ್‌ ಅಧಿಕಾರಿಗಳ ಕೊರತೆ ಇರುವುದಕ್ಕೂ ಇದೇ ಪ್ರಮುಖ ಕಾರಣ. ಇದಕ್ಕೆ ಪರಿಹಾರವೆಂದರೆ ಕಾಲ-ಕಾಲಕ್ಕೆ ಕೆಎಎಸ್‌ ಹುದ್ದೆಗಳ ನೇಮಕಾತಿ ನಡೆದು, ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಮುಗಿಸಬೇಕು ಎಂಬ ಸಲಹೆ ಅನೇಕ ಕೆಎಎಸ್‌ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.

ಬಡ್ತಿ ಪ್ರಮಾಣ ಹೆಚ್ಚಾಗಬೇಕು:

ಸದ್ಯ ರಾಜ್ಯದಲ್ಲಿ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ನೀಡುವ ಪ್ರಮಾಣ 1:3 ಇದೆ. ಈ ಪ್ರಮಾಣ ಶೇ.50ರಷ್ಟು ಆದರೆ, ಐಎಎಸ್‌ಗೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಾಗುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಇದೆ. ನಮ್ಮ ರಾಜ್ಯದಲ್ಲೂ ಇದು ಜಾರಿಗೆ ಬರಬೇಕು. ಅಲ್ಲದೇ, ಯಾವುದಾದರೂ ಕಾರಣಕ್ಕೆ ಬಡ್ತಿ ಪ್ರಕ್ರಿಯೆ ವಿಳಂಬವಾದರೆ, ಕೆಎಎಸ್‌ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಹುದ್ದೆಗೆ ಪರಿಗಣಿಸುವ ವ್ಯವಸ್ಥೆ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿದೆ. ಈ ಬಗ್ಗೆ ನಮ್ಮ ರಾಜ್ಯದಲ್ಲಿ ಪರಿಶೀಲಿಸಬಹುದು ಎಂದು ಕೆಎಎಸ್‌ ಅಧಿಕಾರಿಗಳ ಸಂಘದ ಅಭಿಪ್ರಾಯವಾಗಿದೆ.

ಹಿರಿಯ ವೇತನ ಶ್ರೇಣಿಯ ಕೆಎಎಸ್‌ ಅಧಿಕಾರಿಗಳನ್ನು ಒಂದು ಬಾರಿಗೆ ತಾತ್ಕಾಲಿಕವಾಗಿ ಆಯ್ಕೆ ಶ್ರೇಣಿ ವೃಂದದ ಹುದ್ದೆಗೆ ಪದನ್ನೋತಿ ನೀಡಿರುವ ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಇದರಿಂದ ಕಳಚುತ್ತಿರುವ ಆಡಳಿತ ಪಿರಾಮಿಡ್‌ಗೆ ಅಲ್ಲಲ್ಲಿ ತಾತ್ಕಾಲಿಕವಾಗಿ ಇಟ್ಟಿಗೆಗಳನ್ನು ಜೋಡಿಸಿದಂತಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ, ಕೆಎಎಸ್‌ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಸಂಘದ ಒತ್ತಾಸೆಯಾಗಿದೆ.ಡಾ. ರವಿ ಎಂ. ತಿರ್ಲಾಪೂರ.ಅಧ್ಯಕ್ಷರು, ರಾಜ್ಯ ಕೆಎಎಸ್‌ ಅಧಿಕಾರಿಗಳ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next