Advertisement

ಹಣಕಾಸಿನ ಕೊರತೆ: ಪಂಚಾಯಿತಿಗಳ ಬೆಳವಣಿಗೆಗೆ ಅಡ್ಡಿ

09:48 PM Feb 19, 2023 | Team Udayavani |

ಬೆಂಗಳೂರು: ಪಂಚಾಯತ್‌ರಾಜ್‌ ಸಂಸ್ಥೆಗಳು ಹಣಕಾಸಿನ ಮತ್ತು ಸಂಪನ್ಮೂಲಗಳ ಕೊರತೆ ಎದುರಿಸುತ್ತಿದ್ದು, ಇದು ಅವುಗಳ ಕಾರ್ಯ ಮತ್ತು ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು 2022-23ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.

Advertisement

ಆಧಿಕಾರದ ವಿಕೇಂದ್ರೀಕರಣ ಬಹಳ ಕಡಿಮೆ ಇರುವುದರಿಂದ ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಆಡಳಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ನೀಡದ ಹೊರತು ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಆರ್ಥಿಕ ಸಮೀಕ್ಷೆ ವಿಶ್ಲೇಷಿಸಿದೆ.

ಅದೇ ರೀತಿ ಸಂಪನ್ಮೂಲಗಳ ಕೊರತೆಯೂ ಇದ್ದು, ತರಬೇತಿ ಕೇಂದ್ರಗಳಲ್ಲಿ ಕಂಪ್ಯೂಟರ್‌ಗಳ ಕೊರತೆ, ಉಪಗ್ರಹ ಸಂವಹನ ಸೌಲಭ್ಯದ ಕೊರತೆ, ವಸತಿ ನಿಲಯಗಳಲ್ಲಿನ ಕಳಪೆ ಸೌಲಭ್ಯ ಇತ್ಯಾದಿ ಮೂಲ ಸೌಕರ್ಯಗಳ ಅಭಾವವನ್ನು ಸಂಸ್ಥೆಗಳು ಎದುರಿಸುತ್ತಿವೆ. ಗ್ರಾಮ ಪಂಚಾಯತ್‌ಗಳ ದಕ್ಷ ಕಾರ್ಯನಿರ್ವಹಣೆಗೆ ಉನ್ನತ ಅಧಿಕಾರಿಗಳಿಂದ ತರಬೇತಿ ಮತ್ತು ಸಾಮಥ್ಯಾìಭಿವೃದ್ಧಿಯ ಅಗತ್ಯವಿದೆ. ವಯಸ್ಕರ ಶಿಕ್ಷಣ ಅಥವಾ ಪ್ರಾಯೋಗಿಕ ತರಬೇತಿಯ ವಿಶೇಷ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಪಂಚಾಯತ್‌ ಸದಸ್ಯರಿಗೆ ತರಬೇತಿ ನೀಡಿದ ಬಳಿಕ ಅವರ ತಿಳಿವಳಿಕೆ ಮತ್ತು ಕಾರ್ಯಕ್ಷಮತೆ ಬಗ್ಗೆ ಸೂಕ್ತ ಮೇಲ್ವಿಚಾರಣೆ ಆವಶ್ಯಕವಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಸಂಪನ್ಮೂಲಗಳ ಕೊರತೆ, ಯುವಕರ ಪಾಲ್ಗೊಳ್ಳುವಿಕೆಯ ಕೊರತೆ ಮತ್ತು ರಾಜಕೀಯ ವರ್ಗದ ಹಸ್ತಕ್ಷೇಪಗಳು ಪಂಚಾಯತ್‌ಗಳಿಗೆ ಸವಾಲು ಆಗಿವೆ. ನಿಧಿಗಳ ಬಳಕೆ ಮತ್ತು ಕಾರ್ಯನಿರ್ವಹಣೆಗೆ ಒತ್ತು ನೀಡುವ ಮೂಲಕ ಪಂಚಾಯತ್‌ಗಳನ್ನು ಬಲಪಡಿಸಬಹುದು. ಆಗ ಪಂಚಾಯತ್‌ಗಳು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಯೋಜನೆಗಳನ್ನು ರೂಪಿಸಬಹುದು. ಇಂಧನ, ಮೇವು, ಅಸಾಂಪ್ರದಾಯಿಕ ಇಂಧನ ಮೂಲಗಳು, ವಿದ್ಯುತ್‌ ವಿತರಣೆ, ಗ್ರಾಮೀಣ ವಿದ್ಯುದೀಕರಣ, ಅನೌಪಚಾರಿಕ ಶಿಕ್ಷಣ, ಸಂಸ್ಕರಣಾ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು, ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ಶಿಕ್ಷಣಗಳಲ್ಲಿ ಹೆಚ್ಚಿನ ಅಧಿಕಾರಿಗಳನ್ನು ನೀಡುವ ಮೂಲಕ ಪಂಚಾಯತ್‌ಗಳನ್ನು ಬಲಪಡಿಸಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next