Advertisement

ಹಂಪಿಯಲ್ಲಿ ಸೌಲಭ್ಯಗಳ ಕೊರತೆ

02:42 PM Mar 12, 2022 | Team Udayavani |

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದ್ದು, ದೇಶ-ವಿದೇಶಿ ಪ್ರವಾಸಿಗರು ಪರದಾಡುತವಂತಾಗಿದೆ. ಹಂಪಿ ಪರಿಸರದಲ್ಲಿ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಸಂಬಂಧಿಸಿದ ಇಲಾಖೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರು ಹೈರಾಣವಾಗುತ್ತಿದ್ದಾರೆ.

Advertisement

ಕೈಚೆಲ್ಲಿ ಕುಳಿತ ಇಲಾಖೆ: ಹಂಪಿ ಅಭಿವೃದ್ಧಿ, ಸಂರಕ್ಷಣೆ ಹಾಗೂ ನಿರ್ವಹಣೆ ಹೊಣೆ ಹೊತ್ತಿರುವ ಹಂಪಿ ವಿಶ್ವಪರಂಪರೆ ಪ್ರದೇಶಾಭಿವೃದ್ಧಿ ನಿರ್ವಹಣೆ ಪ್ರಾಧಿಕಾರ, ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಕೆಚೆಲ್ಲಿ ಕುಳಿತಿವೆ.

ಹಂಪಿ ಸ್ಮಾರಕಗಳ ರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಜಪ ಮಾಡುತ್ತಿರುವ ಇಲಾಖೆಗಳು ಹಂಪಿಯ ಪ್ರಮುಖ ಸ್ಥಳಗಳಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ಹಿಂದೆ ಬಿದ್ದಿವೆ.

ನಿರುಪಯುಕ್ತ ಶೌಚಾಲಯ: ಹಂಪಿ ಗ್ರಾಮ ಪಂಚಾಯ್ತಿ ಎದುರಿನ ಪಾಕಿಂಗ್‌ ಪ್ರದೇಶದಲ್ಲಿರುವ ಗ್ರಾಮ ಶೌಚಾಲಯ ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿದೆ. ರಾಣಿ ಸ್ನಾನಗೃಹದ ಹತ್ತಿರ ಇರುವ ಶೌಚಾಲಯ ಕೆಲವಡೆ ಶೌಚಾಲಯಗಳು ನಿರ್ವಹಣೆ ಇಲ್ಲದೇ ಸೊರಗಿ, ಇದ್ದು ಇಲ್ಲದಂತಾಗಿವೆ.

ಹದೆಗೆಟ್ಟ ನೀರಿನ ಘಟಕ: ವಿಜಯವಿಠuಲ ದೇವಾಲಯ ಹಾಗೂ ಕಮಲ ಮಹಲ್‌ ಟಿಕೆಟ್‌ ಕೌಂಟರ್‌ ಹತ್ತಿರ ಇರುವ ಪ್ರವಾಸೋದ್ಯಮ ಕಚೇರಿ ಎದುರು ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಲ್ಲಿದ್ದು, ಆಗೊಮ್ಮೆ-ಇಗೊಮ್ಮೆ ಕೆಲಸ ಮಾಡುತ್ತಿದೆ. ಹಂಪಿ ಅಭಿವೃದ್ಧಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಯಾವುದೇ ಅನುದಾನ ಮೀಸಲಿಡದೇ ಹಂಪಿ ನಿರ್ಲಕ್ಷಿಸಿದೆ.

Advertisement

ಕಾಲ್ನಡಿಗೆಯಲ್ಲಿ ಹಂಪಿ: ಹಂಪಿಗೆ ಭೇಟಿ ನೀಡುವ ಹೆಚ್ಚು ಜನ ಪ್ರವಾಸಿಗರು, ಕಾಲ್ನಡಿಗೆ ಮೂಲಕ ಪ್ರಮುಖ ಸ್ಮಾರಕ ವೀಕ್ಷಣೆ ಮಾಡುವುದು ವಾಡಿಕೆ. ಹಂಪಿ ವಿರೂಪಾಕ್ಷ ಬಜಾರ್‌ನಿಂದ ಎದುರು ಬಸವಣ್ಣ ಮಂಟಪ, ಯಂತ್ರೋದ್ಧಾರಕ ಆಂಜನೇಯ ದೇಗುಲ, ಕೋದಂಡರಾಮ ದೇಗುಲ, ಅಚ್ಯುತ ದೇವಾಲಯ, ಸುಗ್ರೀವ್‌ ಗುಹೆ, ಅರಸರ ತುಲಭಾರ ಹಾಗೂ ಪುರಂದರ ಮಂಟಪದ ದಾಸರ ಮಂಟಪದವರಗೆ ಒಂದೇ ಒಂದು ಶೌಚಾಲಯವಾಗಲಿ ಕುಡಿಯುವ ನೀರಿನ ಘಟಕ ಇಲ್ಲವಾಗಿದೆ.

ಅಲ್ಲದೆ, ಹೇಮಕೂಟದಿಂದ ಉಗ್ರ ನರಸಿಂಹ, ಬಡವಿಲಿಂಗ, ಕೃಷ್ಣ ದೇವಾಲಯ, ಕಡಲೆಕಾಳು ಗಣಪತಿ, ಸಾಸವಿಕಾಳು ಗಣಪತಿ ದೇವಾಲಯದವರಗೆ, ಭೂಮಿಮಟ್ಟದ ಶಿವಾಲಯ, ಹಜಾರರಾಮ ದೇವಾಲಯ, ಕಮಲ ಮಹಲ್‌, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬದ ಪರಿಸರದಲ್ಲಿ ಸಾಗುವ ಮಾರ್ಗದಲ್ಲಿ ಕುಡಿಯುವ ನೀರಿನ ಘಟಕ, ಶೌಚಾಲಯಗಳ ಅವಶ್ಯಕತೆ ಇದೆ. ಕಾಲ್ನಡಿಗೆಯಲ್ಲಿ ಸಾಗುವ ಪ್ರವಾಸಿಗರು ಬಾಯರಿಕೆಯಿಂದ ಬಳಲುವುದು ಸೇರಿದಂತೆ ಮೂರ್ತವಿಸರ್ಜನೆಗಾಗಿ ಪರದಾಡುವುದು ಕಂಡು ಬರುತ್ತದೆ. ಅನಿವಾರ್ಯವಾಗಿ ಬಯಲು ಜಾಗದಲ್ಲಿ ಮಲ-ಮೂರ್ತ ವಿಸರ್ಜನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆ ಆರಂಭ: ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಪ್ರವಾಸಿಗರು ಸುಡ ಬಿಸಿಲಿನಲ್ಲಿ ಹಂಪಿ ಪರಿಸರದಲ್ಲಿ ಸುತ್ತಾಡುತ್ತಾರೆ. ಈ ಸಮಯದಲ್ಲಿ ಪ್ರವಾಸಿಗರಿಗೆ ಬಾಟಲಿ ನೀರು ಸಾಕಾವುದಿಲ್ಲ. ಕುಡಿಯುವ ನೀರಿನ ಅವಶ್ಯಕತೆ ತುಂಬ ಇರುತ್ತದೆ. ಹೀಗಾಗಿ ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

 

ಹಂಪಿ ಪ್ರದೇಶದಲ್ಲಿ ಕೆಲವಡೆ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯಗಳ ವ್ಯವಸ್ಥೆ ಇದ್ದರೂ ಕೂಡ ಸಮರ್ಪಕವಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಹಾಗೂ ಹಂಪಿ ನಿರ್ವಹಣಾ ಪ್ರಾಧಿಕಾರ ಖಾಸಗಿ ಸಹಭಾಗತ್ವದಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಲು ಕಾರ್ಯ ಯೋಜನೆ ರೂಪಿಸಲಾಗುತ್ತಿದೆ ಹಂತ, ಹಂತವಾಗಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ಸಿದ್ದರಾಮೇಶ್ವರ, ಉಪವಿಭಾಗಾಧಿಕಾರಿ,

ಆಯುಕ್ತರು, ಹಂಪಿ ಅಭಿವೃದ್ಧಿ ಪ್ರಾಧಿಕಾರ

 

ಶೌಚಾಲಯ, ಕುಡಿಯುವ ನೀರಿಲ್ಲದೇ ಪ್ರವಾಸಿಗರು ಪರದಾಡುತ್ತಿದ್ದಾರೆ. ಅನಿವಾರ್ಯವಾಗಿ ಯಾತ್ರಾರ್ಥಿಗಳು ಬಯಲಿನಲ್ಲಿ ಶೌಚ ಮಾಡುತ್ತಿದ್ದಾರೆ. ಹಂಪಿಯ ಪ್ರಮುಖ ಸ್ಥಳದಲ್ಲಿ ಕುಡಿಯುವ ನೀರಿನ ಘಟಕ, ಶೌಚಾಲಯಗಳು ನಿರ್ಮಿಸಬೇಕಿದೆ. ಐತಿಹಾಸಿಕ ಧಾರ್ಮಿಕ ಸ್ಥಳದಲ್ಲಿ ಸಾಕಷ್ಟು ಶೌಚಾಲಯ-ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ಹಂಪಿಯಲ್ಲಿ ಏಕೆ ಮಾಡುತ್ತಿಲ್ಲ?

ಹುಲಗಪ್ಪ, ಗೈಡ್‌, ಹಂಪಿ.

 

Advertisement

Udayavani is now on Telegram. Click here to join our channel and stay updated with the latest news.

Next