Advertisement

ಪೊಲೀಸ್‌ ವಸತಿ ಗೃಹದಲ್ಲಿ ಸೌಲಭ್ಯ ಕೊರತೆ

05:43 PM Aug 14, 2021 | Team Udayavani |

ಶೃಂಗೇರಿ: ಪಟ್ಟಣದ ಹೊರವಲಯದ ವಿದ್ಯಾ ನಗರದಲ್ಲಿ ಪೊಲೀಸ್‌ ವಸತಿ ಗೃಹಕ್ಕೆ ಮೀಸಲಾದ ಸ್ಥಳದಲ್ಲಿ ಅಫೀಸರ್‌ ವಸತಿ ಗೃಹ ಹಾಗೂ 38
ಸಿಬ್ಬಂದಿಗೆ ವಸತಿ ಗೃಹವಿದ್ದು, ಸಿಬ್ಬಂದಿಯ ಅಗತ್ಯ ಪೂರೈಸಿದೆ. ಆದರೆ ಕಳೆದ ಎರಡು ವರ್ಷದಲ್ಲಿ ಪೊಲೀಸ್‌ ವಸತಿ ಗೃಹ ಸಮೀಪ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದರೂ ಒಂದಷ್ಟು ಕೊರತೆಗಳು ಇವೆ.

Advertisement

2019-20 ರಲ್ಲಿ ನಿರ್ಮಾಣವಾದ 12 ವಸತಿ ಗೃಹದ ಕಟ್ಟಡ ಹೊರ ನೋಟಕ್ಕೆ ಸುಂದರವಾಗಿದ್ದರೂ ಕಟ್ಟಡ ಕಾಮಗಾರಿ, ಕಟ್ಟಡದ ಒಳಗಿನ ಕಾಮಗಾರಿಗಳು ಗುಣಮಟ್ಟದಲ್ಲಿಲ್ಲ. ಮಲೆನಾಡಿಗೆ ಹೊಂದಿಕೆಯಾಗದ ಕಟ್ಟಡ ನಿರ್ಮಾಣದ ತಂತ್ರಜ್ಞಾನದಿಂದ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಿರುವ ಶೀಟಿನ ಹೊದಿಕೆ ಅಪೂರ್ಣವಾಗಿದೆ. ಇದರಿಂದ ಕಟ್ಟಡದ ಮೇಲ್ಭಾಗದಲ್ಲಿ ಸೋರಿಕೆಯಾಗುತ್ತಿದೆ.

ಅಫೀಸರ್‌ ವಸತಿ ಗೃಹಕ್ಕೆ ಟಾರ್ಪಲಿನ್‌ ಹೊದಿಕೆ: ವೃತ್ತ ನಿರೀಕ್ಷಕ ಹಾಗೂ ನಿರೀಕ್ಷಕರಿಗೆ ಮೀಸಲಾಗಿರುವ ಎರಡು ವಸತಿ ಗೃಹಗಳು ಸೋರಿಕೆಯಾಗುತ್ತಿವೆ. ಇದೀಗ ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲಿನ್‌ ಹೊದಿಕೆ ಮಾಡಲಾಗಿದೆ. 2005 ರಲ್ಲಿ ನಿರ್ಮಾಣವಾಗಿದ್ದ ವಸತಿ ಗೃಹಕ್ಕೆ ಶೀಟಿನ ಮೇಲ್ಚಾವಣಿಗೆ ಮಂಜೂರಾತಿ ಹಂತದಲ್ಲಿದ್ದರೂ, ಕೋವಿಡ್‌ನಿಂದ ಕಾಮಗಾರಿ ಆಗದೆ ಇದೀಗ ಟಾರ್ಪಲ್‌ ಹೊದೆಸಲಾಗಿದೆ.

2005ರಲ್ಲಿ ನಿರ್ಮಾಣವಾದ 22 ವಸತಿ ಗೃಹದ ಕಾಂಪ್ಲೆಕ್ಸ್‌ಗೆ ಮೇಲ್ಚಾವಣಿ ಸುಸಜ್ಜಿತವಾಗಿದೆ. ಹಳೆಯ ನಾಲ್ಕು ವಸತಿಗೃಹವಿದ್ದರೂ ಹೊಸ ಕಟ್ಟಡ ನಿರ್ಮಾಣದಿಂದ ಹಳೇ ಮನೆಗಳು ಈಗ ಉಪಯೋಗಕ್ಕೆ ಇಲ್ಲವಾಗಿದೆ.

ಇದನ್ನೂ ಓದಿ:ಇನ್ನೂ ಆರಂಭವಾಗಿಲ್ಲ ಆಧಾರ ಸೇವಾ ಕೇಂದ್ರ

Advertisement

ಕುಡಿಯುವ ನೀರಿನ ಸಮಸ್ಯೆ: ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಈ ಪ್ರದೇಶವಾದರೂ ತುಂಗಾ ನದಿಯಿಂದ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆಯನ್ನು ಪೊಲೀಸ್‌ ಇಲಾಖೆ ಮಾಡಿಕೊಂಡಿದೆ. ಹಿಂದಿನ ಪೈಪ್‌ಲೈನ್‌ ಆಗಾಗ್ಗೆ ಒಡೆದು ಸಮರ್ಪಕ ನೀರು ಸರಬರಾಜಿಗೆ ಅಡ್ಡಿಯಾಗುತ್ತಿದೆ. ಗ್ರಾಪಂನಿಂದ ಹೊಸ ಪೈಪ್‌ಲೈನ್‌ ಭರವಸೆ ದೊರಕಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ನದಿಯಿಂದ ನೇರವಾಗಿ
ನೀರೆತ್ತುವುದರಿಂದ ಮಳೆಗಾಲದಲ್ಲಿ ಕೆಂಬಣ್ಣದ ಕಲುಷಿತ ನೀರು ಪೂರೈಕೆಯಾಗುತ್ತದೆ. ವಸತಿಗೃಹದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಶಾಸಕರಿಗೆ ಬೇಡಿಕೆ ಸಲ್ಲಿಸಿದ್ದು ಅದು ಇನ್ನೂ ಈಡೇರಿಲ್ಲ.

ಕೌಂಪಾಂಡ್‌, ಕಾಂಕ್ರೀಟ್‌ ರಸ್ತೆ: ವಸತಿ ಗೃಹಕ್ಕೆ ಕೌಂಪಾಂಡ್‌ ನಿರ್ಮಾಣ ಹಾಗೂ ಕಾಂಕ್ರೀಟ್‌ ರಸ್ತೆ, ಒಳ ಚರಂಡಿ ವ್ಯವಸ್ಥೆಯಾಗುತ್ತಿದ್ದು, ಕಾಮಗಾರಿ ನಡೆಯುತ್ತಿದೆ. ಇದರಲ್ಲೂ ಕಳಪೆ ಕಾಮಗಾರಿ ಮೇಲ್ನೋಟಕ್ಕೆ ಗೋಚರಿಸುವಂತಿದೆ. ವಸತಿ ಗೃಹದ ಬಳಿ ಅಳವಡಿಸಲಾಗಿದ್ದ
ಸೋಲಾರ್‌ ದೀಪಗಳು ಹಾಳಾಗಿದ್ದು ಬದಲಿ ವ್ಯವಸ್ಥೆ ಇನ್ನೂ ಆಗಿಲ್ಲ. ವಿದ್ಯುತ್‌ ಆಗಾಗ್ಗೆ ಕೈಕೊಡುತ್ತಿದ್ದು ಸೋಲಾರ್‌ ದೀಪ ಅಗತ್ಯವಿದೆ. ತಾಲೂಕಿಗೆ ಪೊಲೀಸ್‌ ಸಿಬ್ಬಂದಿ ವರ್ಗಾವಣೆಗೊಂಡರೂ ಬರಲು ಹಿಂದೆ ಸರಿಯುವುದರಿಂದ ಪ್ರತಿ ವರ್ಷವೂ ಒಂದಷ್ಟು ಹುದ್ದೆ ಖಾಲಿ ಇರುತ್ತದೆ. ಹಾಲಿ ಇರುವ ಸಿಬ್ಬಂದಿಗೆ ಅಗತ್ಯವಿರುವಷ್ಟು ವಸತಿಗೃಹ ಲಭ್ಯವಿದ್ದು ಎರಡು ವಸತಿ ಗೃಹ ಖಾಲಿ ಇದೆ.

ತಾಲೂಕಿನಲ್ಲಿ ವಸತಿಗೃಹದ ಸಮಸ್ಯೆ ಇಲ್ಲ. ಹಾಲಿ ಇರುವ ಸಿಬ್ಬಂದಿಗೆ ಸಾಕಾಗುವಷ್ಟು ವಸತಿಗೃಹವಿದೆ. ಕುಡಿಯುವ ನೀರಿನ ಸಮಸ್ಯೆಗೆ ವಿದ್ಯಾರಣ್ಯಪುರ ಗ್ರಾಪಂ ಹೊಸ ಪೈಪ್‌ ಅಳವಡಿಕೊಡುವುದಾಗಿ ತಿಳಿಸಿದೆ.ನಿರ್ಮಾಣವಾಗುತ್ತಿರುವ ಕಾಮಗಾರಿಯ ಬಗ್ಗೆ ಉನ್ನತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ. ಕಳಪೆಯಾದಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿ ತಡೆ ಹಿಡಿಯಲಾಗುತ್ತದೆ. ಸೋಲಾರ್‌ ದೀಪ, ಶುದ್ಧ ನೀರಿನ ಘಟಕದ ಅಗತ್ಯವಿದೆ.
-ಬಿ.ಎಸ್‌. ರವಿ, ವೃತ್ತ ನಿರೀಕ್ಷಕ,
ಶೃಂಗೇರಿ ಪೊಲೀಸ್‌ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next