Advertisement

ಹಳೇದ್ವೇಶ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನಿಂದ ಮತ್ತೊಬ್ಬ ರೌಡಿಶೀಟರ್ ಬರ್ಬರ ಹತ್ಯೆ

04:28 PM Dec 31, 2023 | Team Udayavani |

ಕುಣಿಗಲ್: ಹಳೇ ದ್ವೇಶದ ಹಿನ್ನಲೆ ರೌಡಿಶೀಟರ್ ಹಾಗೂ ಆತನ ಸಹಚರರು ಮತ್ತೊಬ್ಬ ರೌಡಿಶೀಟರ್ ಓರ್ವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದು ಪರಾರಿಯಾಗಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ.

Advertisement

ಕಂಪಲಾಪುರ ಗ್ರಾಮದ ಸುರೇಶ ಅಲಿಯಾಸ್ ಕ್ಯಾಪ್ಟನ್ ಸೂರಿ (43) ಕೊಲೆಯಾದ ರೌಡಿಶೀಟರ್.

ಘಟನೆ ವಿವರ: ಆಟೋ ರಾಮ ಮತ್ತು ಸುರೇಶ ಅಲಿಯಾಸ್ ಕ್ಯಾಪ್ಟನ್ ಸೂರಿ ಕುಣಿಗಲ್ ತಾಲೂಕು ಕಂಪಲಾಪುರ ಗ್ರಾಮದವರಾಗಿದ್ದು, ಈ ಇಬ್ಬರು ಸ್ನೇಹಿತರಾಗಿದ್ದರು. ಬೆಂಗಳೂರಿನಲ್ಲಿ ವಾಸವಾಗಿದ್ದ ಇವರು ಹಲವು ಪ್ರಕರಣದಲ್ಲಿ ಈ ಇಬ್ಬರ ವಿರುದ್ದ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ರೌಡಿಶೀಟರ್‌ಗೆ ಈ ಇಬ್ಬರ ಹೆಸರು ಸೇರ್ಪಡೆಯಾಗಿತ್ತು.

ಕೊಲೆ ಪ್ರಕರಣ ಒಂದರಲ್ಲಿ 2003 ರಲ್ಲಿ ಇಬ್ಬರಿಗೂ 20 ವರ್ಷ ಜೈಲು ಶಿಕ್ಷೆಯಾಗಿತ್ತು. ಕಳೆದ ಆರು ತಿಂಗಳ ಹಿಂದೆ ಆಟೋ ರಾಮ ಹಾಗೂ ಸುರೇಶ್ ಇಬ್ಬರು ಬಿಡುಗಡೆಯಾಗಿ ಹೊರಬಂದು ತನ್ನ  ಸ್ವಗ್ರಾಮ ಕಂಪಲಾಪುರದಲ್ಲಿ ವಾಸವಾಗಿದ್ದರು.

ದ್ವೇಶಕ್ಕೆ ಹುಟ್ಟಹಬ್ಬದ ಕಾರಣ : ಡಿ.26 ರಂದು ಆಟೋ ರಾಮು ಅವರ ಹೆಂಡತಿಯ ಹೊಟ್ಟೆಯಲ್ಲಿ ಏಳು ತಿಂಗಳ ಮಗು ಮೃತಪಟ್ಟಿರುತ್ತದೆ. ಅಪರೇಷನ್ ಮೂಲಕ ಮಗುವನ್ನು ಹೊರತೆಗೆದು ಮಗುವನ್ನು ಕಂಪಲಾಪುರದಲ್ಲಿ ಶವ ಸಂಸ್ಕಾರ ಮಾಡಲಾಗಿರುತ್ತದೆ. ಈ ಶವ ಸಂಸ್ಕಾರದಲ್ಲಿ ಸುರೇಶ ಕೂಡಾ ಪಾಲ್ಗೊಂಡು ಹುಲಿಯೂರುದುರ್ಗದ ಎಂ.ಎಸ್.ಐ.ಎಲ್ ಬಳಿ ಬರುತ್ತಿರುವ ವೇಳೆ, ಕಂಪಲಾಪುರ ಜೆಸಿಬಿ ಚಾಲಕ ಆನಂದ್, ಆಟೋ ರಾಮನ ತಂಗಿ ಮಕ್ಕಳಾದ ನಾಗೇಶ, ಪವನ್ ಹಾಗೂ ಆತನ ತಂಗಿ ಜಯಲಕ್ಷ್ಮಿ ಇವರಲ್ಲಾ ಸೇರಿಕೊಂಡು ಪಟಾಕಿ ಸಿಡಿಸಿ ಪವನ್‌ನ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದರು.

Advertisement

ರಾಮನ ಮನೆಯಲ್ಲಿ ಸಾವಾಗಿದೆ, ಅವರ ಮನೆಯಲ್ಲಿ ತಿಂದು, ಉಂಡು, ಈಗ ಪಟಾಕಿ ಹೊಡದು, ಹುಟ್ಟುಹಬ್ಬ ಆಚರಣೆ ಮಾಡುತ್ತೀರ ಎಂದು ಸುರೇಶನ್ನು ಪ್ರಶ್ನಿಸಿದ್ದನು ಎನ್ನಲಾಗಿದ್ದು, ಈ ನಡುವೆ ಪವನ ಮತ್ತು ಅತನ ಸಹಪಾಠಿ ಹಾಗೂ ಸುರೇಶನ ನಡುವೆ ವಾಗ್ವಾದ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಬಳಿಕ ಪೊಲೀಸ್ ಠಾಣೆ ಮೆಟ್ಟಿಲು ಏರಿದರು. ನಂತರ ಎರಡು ಕಡೆಯವರು ರಾಜಿ ಮಾಡಿಕೊಂಡಿದರು.

ಬೆಚ್ಚಿ ಬೀಳಿಸಿದ ಘಟನೆ: ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಕಂಪಲಾಪುರ ಗೇಟ್ ಬಳಿಯ ಶನಿದೇವರ ದೇವಾಲಯದ ಆರ್ಚ್ ಬಳಿ ಲಾಂಗ್ ನಿಂದ ನಡೆದ ಸುರೇಶ ಅಲಿಯಾಸ್ ಕ್ಯಾಪ್ಟನ್ ಸೂರಿ ಭೀಕರ ಹತ್ಯೆಯು ಸ್ಥಳೀಯ ಜನರನ್ನು ಬೆಚ್ಚಿ ಬೀಳಿಸಿದೆ ಒಂದು ಕಾಲದಲ್ಲಿ ರೌಡಿಶೀಟರ್‌ರಾದ ಆಟೋ ರಾಮ ಮತ್ತು ಸುರೇಶ ಅವರು ಆತ್ಮೀಯರಾಗಿದ್ದರು. ಕೊಲೆ ಪ್ರಕರಣ ಒಂದರಲ್ಲಿ ಈ ಇಬ್ಬರು ಸುಮಾರು 20 ವರ್ಷಗಳ ಕಾಲ ಜೊತೆಯಲ್ಲೇ ಶಿಕ್ಷೆ ಅನುಭವಿಸಿದರು. ಆದರೆ ವಿಧಿಯಾಟ ಎಂಬತ್ತೇ ಆಟೋ ರಾಮನ ತಂಗಿಯ ಮಗನ ಹುಟ್ಟುಹಬ್ಬದಂದು ಪಟಾಕಿ ಸಿಡಿಸಿದನ್ನು ಪ್ರಶ್ನಿಸಿದ್ದೇ ಸುರೇಶನ ಕೊಲೆಗೆ ಮುಳುವಾಯಿತು.

ಕಾರಿನಿಂದ ಎಳೆದು ಕೊಚ್ಚಿ ಕೊಲೆ: ಸುರೇಶನ ಹೆಂಡತಿ ಮೇಘಶ್ರೀ ಹೆಬ್ಬೂರಿನ ಹೇಮಾವತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಡಿ.30 ಶನಿವಾರ ಸಂಜೆ ಸುರೇಶನ್ನು ತನ್ನ ಸ್ವಿಫ್ಟ್ ಕಾರಿನಲ್ಲಿ ಹೆಂಡತಿಯನ್ನು ಕರೆದುಕೊಂಡು ಬರುತ್ತಿರುವ ವೇಳೆ ಸುರೇಶನ ಸ್ನೇಹಿತ ಟಿ.ಹೊನ್ನಮಾಚನಹಳ್ಳಿಯ ಪ್ರಕಾಶ, ಹುಲಿಯೂರುದುರ್ಗ ಹಳೇಪೇಟೆಯ ದೇವಿ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದು ತನ್ನ ಹೆಂಡತಿಯನ್ನು ಮನೆಯಲ್ಲಿ ಬಿಟ್ಟು, ಪ್ರಕಾಶ ಮತ್ತು ದೇವಿಯನ್ನು ಅವರ ಮನೆಗೆ ಬಿಡಲು ಹೊಗುತ್ತಿದ್ದ ಸಂದರ್ಭ ರಾತ್ರಿ  ಸುಮಾರು 7.30 ಗಂಟೆಗೆ ಕಂಪಲಾಪುರ ಗೇಟ್ ಬಳಿ ಆಟೋ ರಾಮನ್ನು ಯಾವುದೋ ಒಂದು ಕಾರಿನಲ್ಲಿ 4-5 ಜನ ಹುಡುಗರನ್ನು ಕರೆದುಕೊಂಡು ಬಂದು ಸುರೇಶನ್ನು ಚಲಿಸುತ್ತಿದ್ದ ಕಾರಿಗೆ ಎದುರಾಗಿ ಬಂದು ಡಿಕ್ಕಿ ಹೊಡೆಸಿ ಅಟ್ಯಾಕ್ ಮಾಡಿ ಕಾರಿನ ಮುಂಭಾಗ ಗಾಜನ್ನು ಲಾಂಗ್‌ನಿಂದ ಹೊಡೆದು ಹಾಕಿ ನಂತರ ಲಾಂಗ್‌ಗಳಿಂದ  ಕೊಚ್ಚಿ ಬೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತನ ತಂದೆ ವೆಂಕಟರಾಮು  ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಬೇಟಿ : ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್, ಎಎಸ್‌ಪಿ ಮರಿಯಪ್ಪ, ಡಿವೈಎಸ್‌ಪಿ ಲಕ್ಷ್ಮಿಕಾಂತ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next