Advertisement

Kundgola: ಬೆನಕನಹಳ್ಳಿ ಜಲ ಜೀವನಾಡಿಗೆ ಅಸ್ವಚ್ಛತೆ ಬೇಡಿ

01:13 PM Jun 23, 2024 | Team Udayavani |

ಕುಂದಗೋಳ: ಬರದಿಂದ ಬಸವಳಿದಿದ್ದ ಜನತೆ ಮಳೆಯಿಂದ ನಿಟ್ಟುಸಿರುಬಿಟ್ಟಿದೆ. ಆದರೆ ಹಿರೇನೆರ್ತಿ ಗ್ರಾಪಂ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮಸ್ಥರ ಜಲಸಂಕಷ್ಟ ಮಾತ್ರ ತೀರದಾಗಿದೆ. ಜೀವನಾಡಿಯಾದ ಕೆರೆ ನೀರಿನಿಂದ ತುಂಬಿಕೊಂಡಿದ್ದರೂ ಕುಡಿಯಲು, ದಿನಬಳಕೆಗೆ ಯೋಗ್ಯವಿಲ್ಲದಂತಾಗಿದ್ದು ಪರ್ಯಾಯ ವ್ಯವಸ್ಥೆ ಇಲ್ಲದೆ ಕಲುಷಿತ ನೀರೇ ಗತಿಯಾಗಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.

Advertisement

ಮೂರು ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆ ಅಂದಾಜು 2,500 ಜನಸಂಖ್ಯೆಯ ಗ್ರಾಮದ ಜನತೆಯ ಜೀವಾಳ. ಕುಡಿಯಲು, ದನಕರುಗಳಿಗೆ, ಇತರೆ ಬಳಕೆಗೆ ಕೆರೆಯೇ ಜಲಮೂಲ. ಕೆರೆ ಸುತ್ತಮುತ್ತ ಸ್ವತ್ಛತೆ ಮರೀಚಿಕೆಯಾಗಿದೆ. ಗಿಡಗಂಟಿ ಬೆಳೆದು ಪಾಚಿಗಟ್ಟಿದೆ. ಮದ್ಯದ ಪಾಕೀಟುಗಳು ಸೇರಿದಂತೆ ತ್ಯಾಜ್ಯದಿಂದ ಮಲಿನಗೊಂಡು ನೀರು ಹಸಿರುಗಟ್ಟಿದಂತೆ ಕಾಣುತ್ತಿದೆ. ವಾಸನೆಯೂ ರಾಚುತ್ತಿದೆ.

ಕೆರೆ ಅಂಚಿನಲ್ಲೇ ಅಂದಾಜು 3 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಇದೆ. ಗ್ರಾಪಂನವರು ಪಂಪ್‌ಸೆಟ್‌ ಮೂಲಕ ಕೆರೆಯ ನೀರನ್ನು ತುಂಬಿಸಿ ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದಾರೆ. ಮಷಿನ್‌ ಒಳಗಿನ ಡೀಸೆಲ್‌ ಸಹ ಹರಿದು ಕೆರೆಯ ನೀರಿನ ಒಳಗೆ ಹೋಗುತ್ತಿರುವುದರಿಂದ ಊರಿಗೆ ಕಲುಷಿತ ನೀರು ಸರಬರಾಜು ಸಮಸ್ಯೆ ಜೀವಂತವಾಗಿದೆ ಎಂಬುದು ಸಿದ್ದಪ್ಪ, ಶಂಕ್ರಪ್ಪ, ಭೀಮಪ್ಪ, ಫಕ್ಕೀರಪ್ಪ, ನಿಂಗಪ್ಪ ಸೇರಿದಂತೆ ಅನೇಕರ ಆಕ್ರೋಶವಾಗಿದೆ.

ಯೋಜನೆಗಳು ಹೆಸರಿಗಷ್ಟೆ: ನರೇಗಾ ದಂತಹ ಯೋಜನೆಗಳಿದ್ದರೂ ಕೆರೆಯ ದಡದ ಸ್ವತ್ಛತೆ ಕೈಗೊಂಡಿಲ್ಲ. ಕೆರೆ ನಿರ್ವಹಣೆ ಮಾಡಬೇಕಾದ ಕೆರೆ ಅಭಿವೃದ್ಧಿ ಪ್ರಾಧಿಕಾರ ಇದ್ದರೂ ಸ್ವತ್ಛತೆ ನನೆಗುದಿಗೆ ಬಿದ್ದಿದೆ. ತಾಲೂಕಿನ 14 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಈ ಗ್ರಾಮ ಒಳಪಡುತ್ತದೆ. ಆದರೆ ಕಾಮಗಾರಿ ಹೆಸರಿಗಷ್ಟೇ ಎಂಬಂತಾಗಿದೆ. ಹನಿ ನೀರು ಸರಬರಾಜು ಆಗುತ್ತಿಲ್ಲ. ಇನ್ನು ಜಲಜೀವನ್‌ ಮಿಷನ್‌ ಯೋಜನೆಯಡಿಯೂ ನೀರು ಮರೀಚಿಕೆಯಾಗಿದೆ. ಪರಿಣಾಮ ಬೇರೆ ವ್ಯವಸ್ಥೆ ಇಲ್ಲದೆ ಜಮೀನಿನ ಕೆರೆ ಕಟ್ಟೆಗಳಿಗೆ ಹಾಗೂ ಪಕ್ಕದ ಊರಿನಿಂದ ನೀರು ತರುವ ಪರಿಸ್ಥಿತಿ ಉದ್ಭವವಾಗಿದೆ ಎಂಬುದು ಗ್ರಾಮಸ್ಥರ ಆರೋಪ.

Advertisement

ಇದ್ದೂ ಇಲ್ಲದಂತೆ: ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಪಾಳುಬಿದ್ದಿದ್ದು, ಇದ್ದೂ ಇಲ್ಲದಂತಾಗಿದೆ. ದುರಸ್ತಿಗೂ ಕ್ರಮಕೈಗೊಂಡಿಲ್ಲ. ಕೆರೆಯ ಕಲುಷಿತ ನೀರನ್ನು ಉಪಯೋಗಿಸುತ್ತಿರುವುದರಿಂದ ಜನತೆಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿರುವ ಘಟನೆಗಳು ಸಹ ಜರುಗುತ್ತಿವೆ ಎಂಬುದು ಗ್ರಾಮಸ್ಥರಾದ ಜಗದೀಶ ಶಿವಳ್ಳಿ, ಶಿವಪ್ಪ ಹರಕುಣಿ, ಲಕ್ಷ್ಮಣ ತಳವಾರ, ಮಾದೇವಪ್ಪ ಬೆಟಗೇರಿ ಅವರ ಅಹವಾಲು.

ಗ್ರಾಮದ ನೀರಿನ ತೊಂದರೆ ಕುರಿತು ಹಿರೇನೆರ್ತಿ ಪಿಡಿಒ ಹಾಗೂ ತಾಲೂಕಾಡಳಿತಕ್ಕೆ ಅನೇಕ ಬಾರಿ ಮೌಖೀಕವಾಗಿ ಹೇಳಿದರೂ, ಹಿಂದೆ ಮನವಿ ಕೊಟ್ಟಿದ್ದರೂ ಯಾರೂ ತಿರುಗಿ ನೋಡಿಲ್ಲ. ಗ್ರಾಮದ ಕೆರೆಯತ್ತ ತಾಲೂಕಾಡಳಿತ ಒಮ್ಮೆ ದೃಷ್ಟಿ ಹಾಯಿಸಿದರೆ ಇಲ್ಲಿನ ವಾಸ್ತವ ಅವರಿಗೂ ತಿಳಿಯುತ್ತದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಎಲ್ಲ ಕೆಲಸ ಕಾರ್ಯಗಳಿಗೆ ಸೇರಿದಂತೆ ಕುಡಿಯಲು ಸಹ ಇದೇ ಕೆರೆ ನೀರನ್ನು ಉಪಯೋಗಿಸುತ್ತೇವೆ. ಹಲವು ದಿನಗಳಿಂದ ನೀರು ಕೆಟ್ಟು ವಾಸನೆ ಬರುತ್ತಿದೆ. ಈ ನೀರನ್ನು ಕುಡಿದು ಕೆಲವರು ಆಸ್ಪತ್ರೆ ಕದ ತಟ್ಟಿದ್ದಾರೆ. ಕೆರೆ ದಂಡೆಯಲ್ಲಿ ಕುಡುಕರ ಹಾವಳಿಯಿಂದ ಮದ್ಯದ ಪಾಕೀಟುಗಳು ಅಲ್ಲಿಯೇ ಬೀಳುತ್ತಿವೆ. ತಾಲೂಕು-ಗ್ರಾಮಾಡಳಿತಕ್ಕೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗೆ ಮುಂದುವರಿದರೆ ತಾಲೂಕು ಕಚೇರಿ ಮುಂದೆ ಧರಣಿ ಕೂರುತ್ತೇವೆ. ∙ಸಿದ್ದಪ್ಪ ಹುಣಸಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ

ಗ್ರಾಮದಲ್ಲಿ ರೈತಾಪಿ ವರ್ಗ ಹೆಚ್ಚಿದ್ದು ದನಕರುಗಳಿಗೆ ಎಲ್ಲದಕ್ಕೂ ಇದೇ ನೀರನ್ನು ಅವಲಂಬಿಸಿದ್ದೇವೆ. ನಮಗೆ ಈ ಕೆರೆ ಬಿಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲ. ನೀರು ಕೆಟ್ಟಿರುವ ವಾಸನೆ ಬರುತ್ತಿದೆ. ಸ್ಥಳೀಯ ಆಡಳಿತ ಹಾಗೂ ತಾಲೂಕು ಆಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ∙ಭೀಮಪ್ಪ ಎಚ್‌. ಬೆನಕನಹಳ್ಳಿ, ಗ್ರಾಮದ ರೈತ

■ ಗಿರೀಶ ಘಾಟಗೆ

Advertisement

Udayavani is now on Telegram. Click here to join our channel and stay updated with the latest news.

Next