Advertisement

Kundapura: ರಿಕ್ಷಾ ನಿಲುಗಡೆಗೆ ಇನ್ನೂ ದೊರಕದ ಅಧಿಕೃತ ತಾಣ‌

02:53 PM Dec 29, 2023 | Team Udayavani |

ಕುಂದಾಪುರ: ನಗರದಲ್ಲಿ ಇನ್ನೂ ಅಧಿಕೃತ ರಿಕ್ಷಾ ನಿಲ್ದಾಣಗಳ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣವಾಗಿಲ್ಲ. ಕಂದಾಯ ಇಲಾಖೆಯಿಂದಾಗಿ ಬಾಕಿಯಾಗಿದೆ. ಕಳೆದ ಎರಡೂವರೆ ತಿಂಗಳಿಂದ ಡಿಸಿ ಕಚೇರಿಯಲ್ಲಿ ಕಡತ ಬಾಕಿಯಾಗಿದೆ.

Advertisement

ಯಾವುದೇ ನಗರಕ್ಕೆ ಹೋದರೂ ಅಲ್ಲಿ ರಿಕ್ಷಾ ನಿಲ್ದಾಣ ಇರುತ್ತದೆ. ಬಸ್‌ ತಂಗುದಾಣ, ರೈಲು ನಿಲ್ದಾಣ, ಆಸ್ಪತ್ರೆ, ಸರ್ಕಲ್‌ ಹೀಗೆ ಅಲ್ಲಲ್ಲಿ ರಿಕ್ಷಾಗಳು ಪ್ರಯಾಣಿಕರ ಸೇವೆಗೆ ಸಜ್ಜಾಗಿ ನಿಂತಿವೆ. ಅವುಗಳಿಗೆ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರ ಕೊಡುಗೆಯಿಂದ ಉತ್ತಮ ಮಾಡು ನಿರ್ಮಾಣವಾಗಿದೆ. ರಿಕ್ಷಾಗಳು ನೆರಳಿನಲ್ಲಿ ನಿಂತಿರುವ ಕಾರಣ ಎಂತಹ ಬೇಸಗೆಯಲ್ಲೇ ರಿಕ್ಷಾ ಹತ್ತಿ ಕುಳಿತರೂ ಸೀಟು ಬಿಸಿಯಾಗದು. ಆದರೆ ಕುಂದಾಪುರದಲ್ಲಿ ರಿಕ್ಷಾ ನಿಲ್ದಾಣಗಳೇ ಅಧಿಕೃತ ಆಗಿಲ್ಲ!

ಎಚ್ಚೆತ್ತುಕೊಳ್ಳಲಿಲ್ಲ
ಈ ಬಗ್ಗೆ ರಿಕ್ಷಾ ಚಾಲಕರು ನಿರಂತರ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಪ್ರಯೋಜ ನ ಆಗಲಿಲ್ಲ. ಕೊನೆಗೊಂದು ದಿನ ಎಲ್ಲ ರಿಕ್ಷಾಗಳನ್ನು ಪುರಸಭೆ ಎದುರು ನಿಲ್ಲಿಸಿ ಪ್ರತಿಭಟನೆಯನ್ನೇ ಮಾಡಿದರು. ಆದರೂ ಪ್ರಯೋಜನ ಆಗಲಿಲ್ಲ. ಇತ್ತೀಚೆಗೆ ಒಂದು ದಿನ ಇನ್ನೂ ರಿಕ್ಷಾ ನಿಲ್ದಾಣ ನೀಡದೇ ಇದ್ದರೆ ನಗರದೆಲ್ಲೆಡೆ ರಿಕ್ಷಾ ನಿಲ್ಲಿಸಿ ಪ್ರತಿಭಟನೆ ಮಾಡುವುದಾಗಿ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದರು. ಆಗ ಸ್ವಲ್ಪ ಎಚ್ಚರವಾದಂತಾದ ಆಡಳಿತ ಮುಗ್ಗಲು ಬದಲಿಸಿ ನೋಡಿ ಮತ್ತೆ ಮಲಗಿದೆ!

ಎಲ್ಲೆಲ್ಲಿ ತಂಗುದಾಣ?
ಪುರಸಭೆ ವ್ಯಾಪ್ತಿಯಲ್ಲಿ 32ರಷ್ಟು ರಿಕ್ಷಾ ತಂಗುದಾಣಗಳಿವೆ. ಶಾಸ್ತ್ರಿ ಸರ್ಕಲ್‌, ಶಿವಪ್ರಸಾದ್‌ ಹೊಟೇಲ್‌, ವಿನಯ ಆಸ್ಪತ್ರೆ, ಚಿನ್ಮಯ ಆಸ್ಪತ್ರೆ, ಹಳೆ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ, ಸಂಗಮ್‌, ಚಿಕ್ಕನ್‌ ಸಾಲ್‌ ರಸ್ತೆ ಬದಿ, ಎಪಿಎಂಸಿ ಬಳಿ, ಕೆಎಸ್‌ ಆರ್‌ಟಿಸಿ ಬಳಿ, ಬಸ್ರೂರುಮೂರು ಕೈ, ಕೋಡಿಯಲ್ಲಿ ಮೂರು ಕಡೆ ರಿಕ್ಷಾಗಳ ನಿಲುಗಡೆಯಿದೆ. ಇದಿಷ್ಟಲ್ಲದೇ ಇನ್ನೊಂದತ್ತು ಕಡೆ ಮೂರು, ನಾಲ್ಕು ರಿಕ್ಷಾಗಳು ನಿಂತು ತಾತ್ಕಾಲಿಕ ತಂಗುದಾಣ ಇವೆ.

ಇದು ಸಾಲದು ಎಂಬಂತೆ ಈಗ ಒಂದೊಂದು ಒಂದೊಂದು ರಿಕ್ಷಾಗಳು ಅಲ್ಲಲ್ಲಿ ರಸ್ತೆ ಬದಿ ನಿಲ್ಲಿಸಿ ಅದನ್ನೇ ತಮ್ಮ ತಂಗುದಾಣವಾಗಿಸಿದ್ದೂ ಇದೆ. ವಿನಾಯಕ ಥಿಯೇಟರ್‌ ಬಳಿಯ ತಂಗುದಾಣ ತೆರವಿಗೆ ಆದೇಶ ಬಂದಿದ್ದು ಗ್ರಂಥಾಲಯ ಬಳಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ಸಾರ್ವಜನಿಕರಿಗೂ, ರಿಕ್ಷಾವಾಲಾಗಳಿಗೂ ದಮಡಿ ಪ್ರಯೋಜನ ಇಲ್ಲ. ಹಾಗಾಗಿ ಗ್ರಂಥಾಲಯ ಬಳಿ ಫಲಕ ಮಾತ್ರ ಇದೆ ವಿನಾ ರಿಕ್ಷಾಗಳು ಬರುವುದೇ ಇಲ್ಲ.

Advertisement

ಮನಸು ಮಾಡಲಿ 
ಮೂರು ನಾಲ್ಕು ದಶಕಗಳಿಂದಲೂ ರಿಕ್ಷಾಗಳು ನಿಲುಗಡೆಯಾಗುತ್ತಿವೆ. ಪುರಸಭೆಯಾಗಲೀ, ಸಾರಿಗೆ ನಿಯಂತ್ರಣ ಪ್ರಾಧಿಕಾರವಾಗಲೀ ಈವರೆಗೆ ಇಲ್ಲಿ ಅಧಿಕೃತ ರಿಕ್ಷಾ ನಿಲುಗಡೆಗೆ ವ್ಯವಸ್ಥೆಯಾಗಬೇಕೆಂದು ಮನಸ್ಸು ಮಾಡಿಲ್ಲ. ವರ್ಷಕ್ಕೆ ನೂರಾರು ರಿಕ್ಷಾಗಳಿಗೆ ಅನುಮತಿ ನೀಡುವ ಪ್ರಾಧಿಕಾರ ಅವುಗಳ ನಿಲುಗಡೆ ಕುರಿತು ಗಮನ ಹರಿಸುವುದಿಲ್ಲ. ಬಸ್‌ಗಳಿಗೆ ಅನುಮತಿ ನೀಡುವಾಗ ಸುವ್ಯವಸ್ಥಿತ ಕ್ರಮದಲ್ಲಿ ಮಾರ್ಗಸೂಚಿ, ಸಮಯ, ನಿಲ್ದಾಣಗಳು ನಿಗದಿಯಾಗುತ್ತವೆ. ರಿಕ್ಷಾ ಗಳಿಗೂ ಬ್ಯಾಡ್ಜ್, ಮೀಟರ್‌, ಯೂನಿಫಾರಂ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಚಾಲಕ- ವಾಹನದ ಮಾಹಿತಿ ಫ‌ಲಕ, ಸಹಾಯವಾಣಿ ಮಾಹಿತಿ
ಕಡ್ಡಾಯ ಮಾಡಿದಂತೆ ನಿಲುಗಡೆಗೆ ಸೂಕ್ತ ಅಧಿಕೃತ ವ್ಯವಸ್ಥೆಯಾಗಬೇಕಿದೆ. ಈ ಬಗ್ಗೆ ಆಡಳಿತ ಗಟ್ಟಿ ಮನಸು ಮಾಡಬೇಕಿದೆ.

ತೊಂದರೆ
ಅಧಿಕೃತ ನಿಲ್ದಾಣಗಳಿಲ್ಲದೇ ಇರುವುದರಿಂದಾಗಿ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಅಥವಾ ದಾನಿಗಳಿಗೆ ರಿಕ್ಷಾ ತಂಗುದಾಣ ನಿರ್ಮಿಸಿ ಕೊಡಲು ಸಾಧ್ಯವಾಗುವುದಿಲ್ಲ. ತಂಗುದಾಣಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಸರಕಾರಿ ಇಲಾಖೆಗಳಲ್ಲಿ ಈಡೇರಿಸಿ ಕೊಳ್ಳಲು, ಪರಿಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಡಿಕೆ ನಿರ್ದಿಷ್ಟ ದಿನಗಳ ಒಳಗೆ ಬೇಡಿಕೆಗೆ ಸ್ಪಂದಿಸದೇ ಇದ್ದರೆ ರಿಕ್ಷಾ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಚಾಲಕರು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು. ಸಂಬಂಧಪಟ್ಟವರಿಗೆ ಮನವಿ ನೀಡಿದ್ದರು. ಆಗೆಲ್ಲ ಸ್ವಲ್ಪ ಕಾಯಿರಿ ಎಂಬ ಭರವಸೆ ಮಾತ್ರ ದೊರಕಿದ್ದು ವಿನಾ ಪರಿಹಾರ ಸಿಕ್ಕಿರಲಿಲ್ಲ. ಈಗ 7 ಕಡೆ ರಿಕ್ಷಾ ನಿಲ್ದಾಣಗಳಿಗೆ ಅಧಿಕೃತ ಮಾನ್ಯತೆ ನೀಡುವ ಪ್ರಸ್ತಾವನೆ ಜಾರಿಯಲ್ಲಿದೆ.

ಸುದಿನ ವರದಿ
ನಗರದಲ್ಲಿ 500ರಷ್ಟು ರಿಕ್ಷಾಗಳು, 32ರಷ್ಟು ರಿಕ್ಷಾ ನಿಲ್ದಾಣಗಳಿದ್ದರೂ ಅಧಿಕೃತ ರಿಕ್ಷಾ ತಂಗುದಾಣ ಒಂದೇ ಒಂದು ಇಲ್ಲ ಎಂದು
ಉದಯವಾಣಿ ಸುದಿನ ವರದಿ ಮಾಡಿತ್ತು. ಪುರಸಭೆ, ನಗರಸಭೆ ಆಡಳಿತ ಇರುವ ಪ್ರದೇಶಗಳಲ್ಲಿ ಬಹುಶಃ ಕುಂದಾಪುರ ಪುರಸಭೆ ಮಾತ್ರ ಇಂತಹ ಆಡಳಿತಾತ್ಮಕ ಅಸಡ್ಡೆ ಮಾಡಿದೆ. ಬೇರೆ ಹೆಚ್ಚಿನ ಕಡೆ ಅಧಿಕೃತ ರಿಕ್ಷಾ ನಿಲ್ದಾಣಗಳು ಸ್ಥಳೀಯಾಡಳಿತದಿಂದ
ಗುರುತಿಸಲ್ಪಟ್ಟಿವೆ.

ಶೀಘ್ರ ಪ್ರಕ್ರಿಯೆ
ತಹಶೀಲ್ದಾರ್‌ ಹಾಗೂ ಸರ್ವೇ ಇಲಾಖೆ ಮುಖ್ಯಸ್ಥರು ವಿನಾಯಕ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇತರೆಡೆ ಆಟೊರಿಕ್ಷಾ ನಿಲ್ದಾಣಗಳನ್ನು ಅಧಿಕೃತಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಒಟ್ಟು 7 ಕಡೆ ಅಧಿಕೃತ ನಿಲ್ದಾಣಗಳನ್ನು ಗುರುತಿಸಿದ್ದು ಆರ್‌ಟಿಒ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ಇದೆ. ಶೀಘ್ರ ಈ ಪ್ರಕ್ರಿಯೆ ನಡೆಸಲಾಗುವುದು.
*ರಶ್ಮೀ ಎಸ್‌. ಆರ್‌. ಸಹಾಯಕ ಕಮಿಷನರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next