Advertisement

ಮಕ್ಕಳು ಬೆಳೆಸಿದ ಹೂವಿನ ಕೋಲು

02:26 PM Oct 02, 2022 | Team Udayavani |

ಕುಂದಾಪುರ: ನವರಾತ್ರಿ ಸಂದರ್ಭದಲ್ಲೇ ಆಚರಣೆಯಲ್ಲಿರುವ ಹೂವಿನ ಕೋಲು ಯಕ್ಷಗಾನ ಕಲಾಪ್ರಕಾರವನ್ನು ತಾಲೂಕಿನ ಒಂದಷ್ಟು ಮಕ್ಕಳೇ ಬೆಳೆಸುವ ಕಾರ್ಯ ನಡೆಸುತ್ತಿದ್ದಾರೆ.

Advertisement

ಇಲ್ಲಿನ ದೇವಾಲಯಗಳು ಹಾಗೂ ಕಲಾಸಕ್ತರ ಮನೆಗಳಿಗೆ ಬಂದು ಹರಸುವ ಬಾಲಕರಿಂದ ನಡೆಯುವ ಹೂವಿನ ಕೋಲು ಎನ್ನುವ ಯಕ್ಷಗಾನ ಪರಂಪರೆಯ ಕಲಾಪ್ರಕಾರ ಉಳಿಸುವಲ್ಲಿ ಯಶಸ್ವಿ ಕಲಾವೃಂದ ತೆಕ್ಕಟ್ಟೆಯವರ ಕೊಡುಗೆಯೂ ಇದೆ.

ಬಡಗುತಿಟ್ಟಿನ ಯಕ್ಷಗಾನದ ಈ ಕಲೆಗೆ ನೂರಾರು ವರ್ಷ ಗಳ ಇತಿಹಾಸ, ಪರಂಪರೆ ಇದೆ. ನವರಾತ್ರಿಯ ಸಂದರ್ಭ ನಡೆಯುವ ಈ ಕಲೆಯು ಕುಂದಾಪುರ ನಗರವಷ್ಟೇ ಅಲ್ಲ, ಬ್ರಹ್ಮಾವರ, ಬಾರಕೂರು, ಕೋಟ, ಬೈಂದೂರು ಭಾಗದಲ್ಲಿ ತಂಡಗಳನ್ನು ಹೊಂದಿದೆ. ಈ ತಂಡಗಳು ದೂರದ ಧರ್ಮಸ್ಥಳದ ವರೆಗೂ ಮನೆಗಳಿಗೆ, ದೇವಾಲಯಗಳಿಗೆ ತೆರಳಿ ಪ್ರದರ್ಶನ ನೀಡಿ ಕಲೆ ಉಳಿಸುವ ಕೈಂಕರ್ಯದಲ್ಲಿ ನಿರತವಾಗಿವೆ.

ಅಭ್ಯಾಸ ಮಕ್ಕಳನ್ನು ಆಯ್ಕೆ ಮಾಡಿ ಹೂವಿನ ಕೋಲಿನ ತರಬೇತಿ ನೀಡುವ ಕೆಲಸವನ್ನು ಯಶಸ್ವಿ ಸಂಸ್ಥೆ ನಿರ್ವಹಿಸುತ್ತಿದೆ. 10 ಮಕ್ಕಳನ್ನು ತಯಾರು ಮಾಡಿ, ಸುಧನ್ವ ಅರ್ಜುನ ಮೊದಲಾದ ಎರಡು ಅರ್ಥಧಾರಿಗಳು ಬರುವ ಸನ್ನಿವೇಶದ ಪ್ರಸಂಗಗಳನ್ನು ಅಭ್ಯಸಿಸಲಾಗುತ್ತದೆ.

ಹೂವಿನಕೋಲು ಪ್ರದರ್ಶನ ಆಹ್ವಾನ ನೀಡಿದ ಕಲಾಭಿಮಾನಿಗಳ ಮನೆಯಲ್ಲಿ ಅಥವಾ ದೇವಾಲಯದಲ್ಲಿ ಸಮವಸ್ತ್ರ ಧಾರಿಯಾದ ಇಬ್ಬರು ಎದುರು ಬದುರಾಗಿ ಕುಳಿತುಕೊಳ್ಳುತ್ತಾರೆ. 15 ಇಂಚು ಎತ್ತರದ ಹೂವಿನಿಂದ ಅಲಂಕೃತಗೊಂಡ ಕೋಲನ್ನು ಹಿಡಿದುಕೊಂಡು ನಾರಾಯಣ ದೇವರನ್ನು ಸ್ತುತಿ ಮಾಡಿ ನಾರಾಯಣಾಯ ನಮಃ ನಾರಾಯಣಾಯ ಎನ್ನುವುದರೊಂದಿಗೆ ಆರಂಭ ಗೊಳ್ಳುತ್ತದೆ. ಹೀಗೆ ಹೂವಿನ ಅಲಂಕಾರ ಮಾಡಿದ ಕೋಲು ಹಿಡಿಯುವ ಕಾರಣದಿಂದಲೇ ಇದಕ್ಕೆ ಹೂವಿನ ಕೋಲು ಎಂಬ ಹೆಸರು ಬಂತು ಎನ್ನುತ್ತಾರೆ ಕಲಾಗುರು, ಯಕ್ಷದೇಗುಲ ಸಂಸ್ಥೆಯ ಸುದರ್ಶನ ಉರಾಳ. 20 ನಿಮಿಷ ಸಮಯದ ಪ್ರದರ್ಶನ ಇದಾಗಿದ್ದು ಅಂತಹ ಪ್ರಸಂಗಗಳನ್ನೇ ಆಯ್ಕೆ ಮಾಡಲಾಗುತ್ತದೆ. ಯಕ್ಷಗಾನದ ಕಥೆಗೆ ಪೂರಕವಾಗಿ ಭಾಗವತಿಕೆ, ಮದ್ದಳೆ ಇರುತ್ತದೆ. ಕೋಲಾಟದ ಹಾಡಿನೊಂದಿಗೆ ಪ್ರದರ್ಶನ ಮುಗಿಯುತ್ತದೆ. 4 ಮಂದಿಯ ತಂಡ ಪ್ರತೀ ದಿನ ಆಯ್ದ ಮನೆಗಳಿಗೆ ಸಂಚರಿಸುತ್ತಾರೆ. ಇಂತಹ ಕಲೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೂ ಪ್ರೋತ್ಸಾಹಿಸಬೇಕಾದ ಅವಶ್ಯವಿದೆ ಎನ್ನುತ್ತಾರೆ ಗೋಪಾಲ ಕುಂದಾಪುರ.

Advertisement

ಚೆಂಡೆ ಇಲ್ಲ ಸಮವಸ್ತ್ರ ಧರಿಸಿರುವ ಬಾಲಕರು ತಲೆಗೆ ಬಿಳಿಯ ಟೋಪಿ ಧರಿಸುವುದು ಸಾಂಪ್ರದಾಯಿಕ ಕ್ರಮ. ಎದುರಲ್ಲಿ ಇಡುವ ಹೂವಿನ ಕೋಲುಗಳು ಆಕರ್ಷಕ.

ಹೂವಿನ ಕೋಲುಗಳನ್ನು ಹಿಡಿದುಕೊಂಡ ಬಾಲಕರು 2 ಪಾತ್ರಗಳ ಅರ್ಥಗಳನ್ನು ಹೇಳಿದರೆ, ಭಾಗವತರು ಪದ್ಯಗಳನ್ನು ಹೇಳುತ್ತಾರೆ. ಮದ್ದಳೆಗಾರರು ಹಿಮ್ಮೇಳದಲ್ಲಿ ಸಾಥ್‌ ನೀಡುತ್ತಾರೆ. ಯಕ್ಷಗಾನದಲ್ಲಿ ಬಳಕೆಯಿರುವ ಚೆ‌ಂಡೆಯನ್ನು ಹಿಂದಿನಿಂದಲೂ ಹೂವಿನಕೋಲಿನಲ್ಲಿ ಬಳಸುವ ಕ್ರಮ ಇಲ್ಲ. ಪೌರಾಣಿಕ ಯಕ್ಷಗಾನ ಪ್ರಸಂಗಳ ಅರ್ಥಗಳನ್ನು ಮಾತ್ರ ಹೇಳಲಾಗುತ್ತದೆ.

ಯಾರೆಲ್ಲ ಕುಂದಾಪುರದ ಕುಂದೇಶ್ವರ ದೇವಾಲಯದಲ್ಲಿ ನಡೆದ ಹೂವಿನ ಕೋಲು ಪ್ರದರ್ಶನದಲ್ಲಿ ಸುಧನ್ವ ಅರ್ಜುನ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು. ಭಾಗವತಿಕೆಯಲ್ಲಿ ಪೂಜಾ ಆಚಾರ್‌, ಮದ್ದಳೆಯಲ್ಲಿ ದೇವದಾಸ ರಾವ್‌ ಕೂಡ್ಲಿ, ಅರ್ಥದಲ್ಲಿ ಪವನ್‌ ಆಚಾರ್‌ ಕುಂದಾಪುರ, ಕಿಶನ್‌ ಕುಂದಾಪುರ ಭಾಗವಹಿಸಿದ್ದರು. ಇವರಿಗೆ ದೇವಾ ಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಸದಸ್ಯ ಸತೀಶ್‌ ಶೆಟ್ಟಿ ಗೌರವಾರ್ಪಣೆ ಮಾಡಿದರು.

ತಂಡಗಳು ಕಾಳಿಂಗ ನಾವಡರು, ಅವರ ತಂದೆ ರಾಮಚಂದ್ರ ನಾವಡರೇ ಮೊದಲಾದವರು, ವೃತ್ತಿ ಮೇಳಗಳ ಹಲವು ಭಾಗವತರು ಹೂವಿನಕೋಲಿನ ತಂಡಗಳನ್ನು ಕಟ್ಟಿ ನವರಾತ್ರಿಯ 9 ದಿನಗಳ ತಿರುಗಾಟ ನಡೆಸುತ್ತಿದ್ದರು. ಮನೆ ಮನೆಗೆ ತೆರಳಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಭಾಗವತರು ಪ್ರದರ್ಶನಕ್ಕೆ ಬೇಕಾಗಿ ಅರ್ಥವನ್ನು ಬರೆದು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಆ ಅರ್ಥವನ್ನು ಬಾಯಿಪಾಠಮಾಡಿಕೊಂಡ ಮಕ್ಕಳು ಪ್ರದರ್ಶನದ ವೇಳೆ ನಿರರ್ಗಳವಾಗಿ ಪ್ರಸ್ತುತ ಪಡಿಸುತ್ತಿದ್ದರು. ಬಾಲಕರು ಪ್ರದರ್ಶನದ ಮುನ್ನ ಸುಶ್ರಾವ್ಯವಾಗಿ ಹಾಡುವ ಹಾಡು ಹೂವಿನ ಕೋಲಿನ ತಂಡದ ವಿಶೇಷ. ಅಂತಹ ಬಾಲಕಲಾವಿದರೇ ಮುಂದಿನ ದಿನಗಳಲ್ಲಿ ಮಹಾನ್‌ ಕಲಾವಿದರಾದ ಉದಾಹರಣೆಗಳಿವೆ.

ಕಲಾಪ್ರಕಾರ ಉಳಿಯಲು: ಹೂವಿನ ಕೋಲು ಕಲಾಪ್ರಕಾರ ಮುಂದಿನ ದಿನಕ್ಕೂ ಉಳಿಯಲು ಕಲಾವಿದರ ತಂಡಗಳನ್ನೇ ಸಿದ್ಧಗೊಳಿಸುವ ಕೆಲಸ ಯಶಸ್ವಿ ಸಂಸ್ಥೆಯಿಂದ ನಡೆಯುತ್ತಿದೆ. ಈ ಬಾರಿ 5 ತಂಡಗಳನ್ನು ರಚಿಸಲಾಗಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ಆಹ್ವಾನದ ಮೇರೆಗೆ ಪ್ರದರ್ಶನ ನೀಡಲಾಗುತ್ತಿದೆ. ನವರಾತ್ರಿ ಸಂದರ್ಭದಲ್ಲಷ್ಟೇ ಇದು ಆಚರಣೆಯಲ್ಲಿದೆ.- ವೆಂಕಟೇಶ ವೈದ್ಯ, ಯಶಸ್ವಿ ಕಲಾವೃಂದ, ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next