Advertisement

ಕುಂದಾಪುರ: ಸಂತೆಯಿಲ್ಲದಿದ್ದರೂ ಖರೀದಿಗೆ ಮುಗಿಬಿದ್ದ ಜನ

03:02 PM Apr 12, 2020 | sudhir |

ಕುಂದಾಪುರ: ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಾಗಿ ವಾರದ ಸಂತೆಯನ್ನು 3 ವಾರಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದ್ದು, ಸ್ಥಳೀಯ ಸಣ್ಣ ವ್ಯಾಪಾರಿಗಳಿಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿತ್ತು.

Advertisement

ಆದರೆ ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಂತೆಯ ಗೇಟು ತೆರೆಯು ತ್ತಿದ್ದಂತೆ ಖರೀದಿಗೆ ಜನ ಮುಗಿಬಿದ್ದರು.
ಅಗತ್ಯ ವಸ್ತುಗಳನ್ನು ಹೋಲ್‌ಸೇಲ್‌ ಖರೀದಿ ಮಾಡುವ ನಿಟ್ಟಿನಲ್ಲಿ ವಾರದ ಸಂತೆ ದಿನವಾದ ಶನಿವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಜನರು ಸಂತೆ ಇದೆ ಎಂದು ನುಗ್ಗಿದ್ದು, ಬಳಿಕ ವ್ಯಾಪಾರಿಗಳಿಗೆ ಮಾತ್ರ ಗೇಟು ಒಳಗೆ ಹೋಗಲು ಅನುಮತಿ ನೀಡಲಾಯಿತು. ಅದಾಗಿಯೂ ಕೆಲವರು ಸುಳ್ಳು ಹೇಳಿ ಹೋಗುತ್ತಿದ್ದುದು, ಬೇರೆ ದಾರಿ, ಬೇಲಿ ಹಾರಿ ನುಗ್ಗಿದ್ದು ಕಂಡು ಬಂತು. ಇನ್ನು ಕೆಲವರು ವ್ಯಾಪಾರಿಗಳಿಗೆ ಚೀಲ ಕೊಟ್ಟು ಸಾಮಾನು ಖರೀದಿಸಿದರು. ಎಪಿಎಂಸಿಯ ಕಾರ್ಯದರ್ಶಿ ದೀಪ್ತಿ ಎಸ್‌. ಅವರು ಸ್ಥಳದಲ್ಲೇ ಇದ್ದು, ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಲಘು ಲಾಠಿ ಪ್ರಹಾರ
ಸುದ್ದಿ ತಿಳಿದ ತತ್‌ಕ್ಷಣ ಸಂತೆ ಮಾರುಕಟ್ಟೆಗೆ ಭೇಟಿ ನೀಡಿದ ಕುಂದಾಪುರ ಎಸ್‌ಐ ಹರೀಶ್‌ ಆರ್‌. ಹಾಗೂ ಪೊಲೀಸರ ತಂಡ ಜನರಿಗೆ ತಿಳಿ ಹೇಳಿತು. ಕೇಳದಿದ್ದಾಗ ಲಘು ಲಾಠಿ ಪ್ರಹಾರ ಕೂಡ ನಡೆಸಲಾಯಿತು.

ನೀವೇ ಹೀಗೆ ಮಾಡಿದರೆ..?
ಕೆಲವು ಪೊಲೀಸರು ಕೂಡ ಖರೀದಿ ಸುತ್ತಿದ್ದುದು ಕಂಡು ಬಂದಿದ್ದು, ಅವರಿಗೆ ಎಸ್‌ಐ ಅವರು “ನೀವೇ ಹೀಗೆ ಮಾಡಿದರೆ ಹೇಗೆ?’ ಎಂದು ಎಚ್ಚರಿಕೆ ನೀಡಿದರು.

ಸಂತೆಗೆ ಎಸಿ ಭೇಟಿ
ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಅವರು ಕೂಡ ಸಂತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಣ್ಣು, ತರಕಾರಿ ಮಾರಾಟಕ್ಕೆ ಬಂದಿದ್ದ ವ್ಯಾಪಾರಿಗಳಿಗೆ 5 ಕೆ.ಜಿ., 10 ಕೆ.ಜಿ.ಗಿಂತ ಕಡಿಮೆ ಪ್ರಮಾಣದಲ್ಲಿ ಯಾರಿಗೂ ಕೊಡಬೇಡಿ ಎಂದು ಸೂಚನೆ ನೀಡಿದ್ದಲ್ಲದೆ, ಖರೀದಿಗೆ ಬಂದಿದ್ದ ಜನರನ್ನೂ ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next