Advertisement

ಕುಂದಾಪುರ: ಹೆಣ್ಣುಮಗುವಿಗೆ ಜನ್ಮನೀಡಿ ಬಾಣಂತಿ ಸಾವು; ಸರಕಾರಿ ಆಸ್ಪತ್ರೆ ವಿರುದ್ಧ ಆಕ್ರೋಶ

09:54 AM Dec 17, 2019 | sudhir |

ಕುಂದಾಪುರ: ಹಂಗಳೂರು ಗ್ರಾಮದ ಅಂಕದಕಟ್ಟೆ ನಿವಾಸಿ, ಹೆಮ್ಮಾಡಿ ಸುಳ್ಸೇ ಸುಧೀರ್‌ ದೇವಾಡಿಗ ಅವರ ಪತ್ನಿ ಸುಜಾತಾ (26) ಅವರ ಸಾವಿಗೆ ಸಂಬಂಧಿಸಿದಂತೆ ಸೋಮವಾರ ಹಂಗಳೂರು ಪರಿಸರದ ಜನತೆ, ದೇವಾಡಿಗ ಸಂಘಟನೆಯವರು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.

Advertisement

ನೂರಾರು ಜನ ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದರು. ಎಸ್‌ಐ ಹರೀಶ್‌ ಆರ್‌. ನಾಯ್ಕ ಹಾಗೂ ಪೊಲೀಸರು ಆಸ್ಪತ್ರೆಯ ಒಳಪ್ರವೇಶಕ್ಕೆ ಅನುಮತಿ ನಿರಾಕರಿಸಿ ಆಯ್ದ ಕೆಲವರು ಆಡಳಿತ ಶಸ್ತ್ರಚಿಕಿತ್ಸಕರು ಹಾಗೂ ವೈದ್ಯರ ಜತೆ ಮಾತನಾಡಲು ಅನುವು ಮಾಡಿದರು. ಅಲ್ಲಿ ಬಿಜೆಪಿ ತಾಲೂಕು ನಿಯೋಜಿತ ಅಧ್ಯಕ್ಷ ಶಂಕರ ಅಂಕದಕಟ್ಟೆ, ತಾ.ಪಂ. ಸದಸ್ಯರಾದ ರಾಜು ದೇವಾಡಿಗ, ಗೌರಿ ದೇವಾಡಿಗ, ಜಗದೀಶ್‌ ದೇವಾಡಿಗ, ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ರಾಧಾದಾಸ್‌ ಮೊದಲಾದವರು ಉಪಸ್ಥಿತರಿದ್ದರು.

ಆರೋಪ, ಸ್ಪಷ್ಟನೆ
ಕರ್ತವ್ಯ ನಿರ್ವಹಿಸಿದ ವೈದ್ಯರ ಕುರಿತು ಮನೆಯವರು ಹಾಗೂ ಸಾರ್ವಜನಿಕರು ನಿರ್ಲಕ್ಷ್ಯದ ಆರೋಪ ಮಾಡಿದರು. ಸಿಸೇರಿಯನ್‌ ಮಾಡುವಂತೆ ಸುಜಾತಾ ಸೂಚಿಸಿದ್ದರೂ ವೈದ್ಯರು ಮಾಡಿಲ್ಲ, ಸ್ಕಾನಿಂಗ್‌ ಮಾಡುವಾಗಲೇ ಸಿಸೇರಿಯನ್‌ ಮಾಡಬೇಕೆಂದು ತಿಳಿದಿದ್ದರೂ ಸಹಜ ಹೆರಿಗೆಗೆ ಕಾದಿದ್ದರು, ಸಕಾಲದಲ್ಲಿ ಚಿಕಿತ್ಸೆ ನೀಡಿಲ್ಲ, ಮನೆಯವರಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.

ಇದಕ್ಕೆಲ್ಲ ಸ್ಪಷ್ಟನೆ ನೀಡಿದ ವೈದ್ಯರು, ಸ್ಕಾನಿಂಗ್‌ ಸಂದರ್ಭ ಸಹಜವೋ ಸಿಸೇರಿಯನ್‌ ಮಾಡಬೇಕೋ ಎಂದು ಹೇಳುವ ಕ್ರಮ ಇಲ್ಲ. ಮಗುವಿನ ಬೆಳವಣಿಗೆ, ಸ್ಥಿತಿ ಕುರಿತು ತಿಳಿಯುತ್ತದೆ. ವೈದ್ಯಕೀಯ ನಿರ್ಲಕ್ಷ್ಯ ಮಾಡಿಲ್ಲ.

ಹತ್ತು ಸಾವಿರದಲ್ಲಿ ಒಬ್ಬರಿಗೆ ಉಂಟಾಗುವ ಅಪರೂಪದ ಸಮಸ್ಯೆ ಸುಜಾತಾ ಅವರಿಗೆ ಉಂಟಾಗಿದೆ. ರಕ್ತಸ್ರಾವ ನಿಲ್ಲಲಿಲ್ಲ. ಆದ್ದರಿಂದ ಇಲ್ಲಿ ಎಲ್ಲ ಪ್ರಯತ್ನ ಮಾಡಿ ರಕ್ತದ ವ್ಯವಸ್ಥೆà ಮಾಡಿ ತತ್‌ಕ್ಷಣ ಕೆಎಂಸಿಗೆ ಮೂವರ ವೈದ್ಯರ ಜತೆಗೇ ಕರೆದೊಯ್ಯಲಾಗಿದೆ. ಸಿಸೇರಿಯನ್‌ ಮಾಡಿ ಎಂದು ಸಾಧಾರಣವಾಗಿ ಹೆರಿಗೆ ನೋವು ಬಂದ ಕೂಡಲೇ ಎಲ್ಲ ಗರ್ಭಿಣಿಯರೂ ಹೇಳುತ್ತಾರೆ. ಅವಶ್ಯಕತೆ ಇದ್ದರೆ ಮಾತ್ರ ಸಿಸೇರಿಯನ್‌ ಮಾಡಲಾಗುತ್ತದೆ, ಯಾವುದೇ ನಿರ್ಲಕ್ಷ್ಯ ನಡೆದಿಲ್ಲ. 3.4 ಕೆ.ಜಿ. ತೂಕದ ಮಗುವಿನ ಸಹಜ ಹೆರಿಗೆ ನಡೆದಿದೆ. ನಂತರ ಸಮಸ್ಯೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

ಉಚಿತ ಅಂಬುಲೆನ್ಸ್‌
ಸರಕಾರಿ ಅಂಬುಲೆನ್ಸ್‌ ಇದ್ದರೂ ಖಾಸಗಿ ಅಂಬುಲೆನ್ಸ್‌ನಲ್ಲಿ ಕೊಂಡೊಯ್ಯಲಾಗಿದೆ ಎಂದು ಗೌರಿ ದೇವಾಡಿಗ ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಆಡಳಿತ ಶಸ್ತ್ರಚಿಕಿತ್ಸಕ ಡಾ| ರಾಬರ್ಟ್‌ ರೆಬೆಲ್ಲೋ, ಖಾಸಗಿ ಅಂಬುಲೆನ್ಸ್‌ಗೆ ಸರಕಾರದಿಂದಲೇ ಹಣ ಪಾವತಿಸಲಾಗಿದೆ. ರೋಗಿಯ ಕಡೆಯವರಿಂದ ಪಡೆದಿಲ್ಲ ಎಂದರು.

ಬಡತನದ ಕುಟುಂಬ
ಸುಜಾತಾ ಅವರು ಬಡಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು ವಿವಾಹವಾಗಿ ಹತ್ತು ತಿಂಗಳಷ್ಟೇ ಆಗಿದೆ. ಇಡೀ ಕುಟುಂಬ ನಡೆಸುವ ಜವಾಬ್ದಾರಿ ಹೊಂದಿದ್ದರು. ಅವರ ನಿಧನದಿಂದ ಇಡೀ ಕುಟುಂಬ ಆಧಾರಸ್ತಂಭ ಕಳೆದುಕೊಂಡಂತಾಗಿದೆ. ಖಾಸಗಿ ಆಸ್ಪತ್ರೆ ಚಿಕಿತ್ಸೆ ಬಿಲ್‌ 1.2 ಲಕ್ಷ ರೂ.ಗಳಾಗಿದ್ದು ಅದರ ಪಾವತಿಗೆ ಅವಧಿ ಕೇಳಲಾಗಿದೆ. ತುರ್ತಾಗಿ ಊರವರಿಂದ ಸಂಗ್ರಹಿಸಿ 54 ಸಾವಿರ ರೂ. ಪಾವತಿಸಲಾಗಿದೆ. ತಂದೆ, ತಾಯಿಯ ಅನಾರೋಗ್ಯದಿಂದ ಕುಟುಂಬ ನಿರ್ವಹಣೆ ಅವರಿಗೆ ಕಷ್ಟವಾಗಿದೆ. ಆದ್ದರಿಂದ ಸುಜಾತಾ ಅವರ ಕುಟುಂಬ ನಿರ್ವಹಣೆಗೆ, ಆಸ್ಪತ್ರೆ ಬಿಲ್‌ ಪಾವತಿಗೆ ವೈದ್ಯರು 5 ಲಕ್ಷ ರೂ. ನೀಡಬೇಕೆಂದು ಸೇರಿದ್ದ ಗ್ರಾಮಸ್ಥರು ಒತ್ತಾಯಿಸಿದರು. ಆದರೆ ಯಾವುದೇ ತಪ್ಪು ಮಾಡದೇ ಹಣ ನೀಡಿದರೆ ಅದು ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ವೈದ್ಯರು ಹಣ ನೀಡಲು ನಿರಾಕರಿಸಿದರು.

ಆಯುಷ್ಮಾನ್‌ ಇಲ್ಲ
ಸಹಜ ಹೆರಿಗೆ ಹಾಗೂ ರೋಗಿ ಮೃತಪಟ್ಟ ಕಾರಣ ಆಯುಷ್ಮಾನ್‌ ಭಾರತ ಸ್ಕೀಮಿನಲ್ಲಿ ಈ ಪ್ರಕರಣ ಸೇರುವುದಿಲ್ಲ. ಯಾವುದೇ ವಿಮಾ ಮೊತ್ತ ದೊರೆಯುವುದಿಲ್ಲ ಎಂದು ಖಾಸಗಿ ಆಸ್ಪತ್ರೆಯವರು ಸೂಚಿಸಿದ್ದಾಗ ಪ್ರತಿಭಟನಕಾರರು ಹೇಳಿದಾಗ, ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದು ಆಯುಷ್ಮಾನ್‌ ಭಾರತ ಸ್ಕೀಮಿನಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ಕೊಡಿಸುವ ಕುರಿತು ಹಿರಿಯ ಅಧಿಕಾರಿಗಳಲ್ಲಿ ಮಾತನಾಡುವುದಾಗಿ ತಿಳಿಸಿದ್ದಾಗಿ ವೈದ್ಯರು ಸೇರಿದ್ದವರಿಗೆ ಹೇಳಿದರು. ವೈದ್ಯರ ಮೇಲೆ ಪೊಲೀಸ್‌ ದೂರು ನೀಡುವುದಾಗಿ ಮನೆಯವರು ಹೇಳಿದರು. ಆಸ್ಪತ್ರೆ ಹೊರಗೆ ಆವರಣದಲ್ಲಿ ಸೇರಿದ್ದವರು ಆಸ್ಪತ್ರೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಡವರಿಗಾಗಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿ ದೊರೆಯದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ನಿರ್ಲಕ್ಷ್ಯ ನಡೆದಿಲ್ಲ
ಅಪರೂಪದ ಸಂದರ್ಭ ಇದಾಗಿದ್ದು ನಮ್ಮ ಆಸ್ಪತ್ರೆಯ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ನಡೆದಿಲ್ಲ. ಬದುಕಿಸುವ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗಿದೆ.
– ಡಾ| ರಾಬರ್ಟ್‌ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಕ

ಇನ್ನು ಹೀಗಾಗದಿರಲಿ
ಬಡವರ ಚಿಕಿತ್ಸೆಗಾಗಿ ಇರುವ ಸರಕಾರಿ ಆಸ್ಪತ್ರೆಯಲ್ಲಿ ಇಂತಹ ನಿರ್ಲಕ್ಷ್ಯಗಳು ನಡೆಯದಿರಲಿ. ಯಾವುದೇ ಸಾವು ಸಂಭವಿಸದಿರಲಿ. ವೈದ್ಯರು ಚಿಕಿತ್ಸೆ ನೀಡುವಾಗ ರೋಗಿಗಳು ಬಡವರು ಎನ್ನುವುದನ್ನು ಮನಗಂಡು ಚಿಕಿತ್ಸೆ ನೀಡಲಿ.
– ಶಂಕರ ಅಂಕದಕಟ್ಟೆ, ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next