Advertisement

ಕುಂದಾಪುರ: ಎಪ್ರಿಲ್‌ನಿಂದ ಫ್ಲೈಓವರ್‌ನಲ್ಲಿ ಪ್ರಯಾಣ!

10:57 PM Mar 05, 2021 | Team Udayavani |

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ ಕಾಮಗಾರಿ ಮಾ. 31ರಂದು ಮುಕ್ತಾಯಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದು ಎಪ್ರಿಲ್‌ನಿಂದ ಫ್ಲೈ ಓವರ್‌ ಮೂಲಕ ವಾಹನಗಳ ಓಡಾಟ ನಡೆಯಲಿದೆ ಎಂದು ನಂಬಲಾಗಿದೆ.

Advertisement

ಭರದ ಕಾಮಗಾರಿ
ಬಾಕಿಯಾಗಿದ್ದ ಕಾಮಗಾರಿ ಕಳೆದ ಕೆಲವು ತಿಂಗಳಿಂದ ಭರದಿಂದ ನಡೆಯುತ್ತಿದೆ. ಪ್ರಾಚೀನ ಸ್ಮಾರಕಗಳಂತೆ ಕಾಣುತ್ತಿದ್ದ ಫ್ಲೈಓವರ್‌ಗೆ ಸಂಪರ್ಕ ರಸ್ತೆಯು ಪೂರ್ಣವಾಗಿದ್ದು ಬಸ್ರೂರು ಮೂರುಕೈ ಅಂಡರ್‌ಪಾಸ್‌ಗೆ ಕೂಡ ಸಂಪರ್ಕ ರಸ್ತೆಯಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿಯೂ ಕ್ಯಾಟಲ್‌ ಪಾಸ್‌ಗೆ ಸಂಪರ್ಕ ರಸ್ತೆ ಕೆಲಸ ನಡೆದಿದ್ದು ಇನ್ನು ಸ್ವಲ್ಪ ಪ್ರಮಾಣದ ಕಾಮಗಾರಿಯಷ್ಟೇ ಬಾಕಿಯಿದೆ. ಇದಕ್ಕಾಗಿಯೇ ಬೊಬ್ಬರ್ಯನಕಟ್ಟೆ ಬಳಿ ಇದ್ದ ತೆರವನ್ನು ಮುಚ್ಚಲಾಗಿದೆ.

ಸುತ್ತಾಟ
ಒಂದು ಸರ್ವೀಸ್‌ ರಸ್ತೆಯಿಂದ ಇನ್ನೊಂದು ಸರ್ವೀಸ್‌ ರಸ್ತೆಗೆ ಸಂಪರ್ಕ ಕಲ್ಪಿಸಲು ಈಗ ಪೇಟೆಯಲ್ಲಿ ಅವಕಾಶ ಇರುವುದು ಒಂದು ಕಡೆ ಮಾತ್ರ. ಶಾಸ್ತ್ರಿ ಸರ್ಕಲ್‌ನಲ್ಲಿ ಸರ್ವೀಸ್‌ ರಸ್ತೆಗಳನ್ನು ದಾಟಬಹುದು. ಹೊರತಾಗಿ ಬಸ್ರೂರು ಮೂರುಕೈ ಅಂಡರ್‌ಪಾಸ್‌ನಲ್ಲಿ ಅಪಘಾತಗಳಾಗುವ ಸಾಧ್ಯತೆಯಿದೆ, ಸಂಚಾರ ದಟ್ಟಣೆ ಆಗಬಹುದು ಎಂದು ತಾಂತ್ರಿಕ ಕಾರಣಗಳಿಗಾಗಿ ಸದ್ಯಕ್ಕೆ ತೆರೆದಿಲ್ಲ. ಎ.1ರ ಬಳಿಕ ಇದು ತೆರವಾಗಲಿದೆ. ಇವೆರಡು ದೊಡ್ಡ ಸಂಪರ್ಕ ರಸ್ತೆಗಳು ಬಿಟ್ಟರೆ ಟಿ.ಟಿ. ರೋಡ್‌ ಎದುರು ಇರುವ ಪಾದಚಾರಿ ಅಂಡರ್‌ಪಾಸ್‌ ಹಾಗೂ ನಂದಿಬೆಟ್ಟು ರಸ್ತೆ ಬಳಿ ಇರುವ ಕ್ಯಾಟಲ್‌ ಪಾಸ್‌ ರಸ್ತೆಯಲ್ಲಿ ಸಣ್ಣ ವಾಹನಗಳು ಚಲಿಸಬಹುದು. ವಿನಾಯಕದಿಂದ ಎಪಿಎಂಸಿವರೆಗೂ ಎರಡು ಕಡೆ ಮಾತ್ರ ದೊಡ್ಡ ವಾಹನಗಳಿಗೆ ಸರ್ವೀಸ್‌ ರಸ್ತೆ ದಾಟಲು ಅವಕಾಶ ಇರುವುದು. ಈ ಕಾರಣದಿಂದ ವಾಹನಗಳಿಗೆ ಕಿ.ಮೀ.ಗಟ್ಟಲೆ ಸುತ್ತಾಟ ಅನಿವಾರ್ಯ.

ಬೇಡಿಕೆ ಈಡೇರಿಲ್ಲ
ಬೊಬ್ಬರ್ಯನಕಟ್ಟೆ ಬಳಿ ಅನೇಕ ಸರಕಾರಿ, ಎಲ್‌ಐಸಿ ಕಚೇರಿಗಳಿವೆ. ಇವುಗಳಿಗೆ ಬರುವವರಿಗೆ ಸುತ್ತಾಟ ಅನಿವಾರ್ಯ. ಇಲ್ಲೊಂದು ಅವಕಾಶ ಕೊಡಬೇಕು ಎನ್ನುವುದು ತಾಂತ್ರಿಕ ಕಾರಣದಿಂದ ಮಂಜೂರಾಗಿಲ್ಲ. ಬಸ್ರೂರು ಮೂರುಕೈ ಕಡೆಯಿಂದ ಬರುವ, ಫ್ಲೈಓವರ್‌ ಇಳಿಯುವ ವಾಹನಗಳ ವೇಗಕ್ಕೆ ತಡೆಯಾಗಿ ಅಡ್ಡ ದಾಟಲು ಅವಕಾಶ ನೀಡಿದರೆ ಅಪಘಾತಗಳ ಸರಮಾಲೆಯಾಗಲಿದೆ. ಹಾಗಾಗಿ ಇಲ್ಲಿನ ಬೇಡಿಕೆ ಈಡೇರಿಲ್ಲ. ವಿನಾಯಕ ಬಳಿ ಕೋಡಿಗೆ ತೆರಳಲು ಅವಕಾಶ ಕೇಳಲಾಗಿತ್ತು. ಈಗಿನ ಪ್ರಕಾರ ದುರ್ಗಾಂಬಾ ಡಿಪೋವರೆಗೆ ಹೋಗಿ ಸರ್ವೀಸ್‌ ರಸ್ತೆಗೆ ತಿರುವು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ವಿನಾಯಕ ಬಳಿಯೇ ಅವಕಾಶ ಕೊಡಿ ಎನ್ನುವ ಬೇಡಿಕೆಯೂ ಸದ್ಯಕ್ಕೆ ಈಡೇರಿಲ್ಲ. ಈ ಕುರಿತಾಗಿ ನಡೆದ ಹೋರಾಟಗಳು, ನೀಡಿದ ಮನವಿಗಳೆಲ್ಲ ನೇರ ಕಸದ ಬುಟ್ಟಿ ಸೇರಿವೆ.

ಬಾರದ ಸಂಸದೆ
ಆಗ ಆಗುತ್ತದೆ, ಈಗ ಆಗುತ್ತದೆ, ಟ್ರೋಲ್‌ ಆಗುತ್ತದೆ ಎಂದೇ ಹೇಳುತ್ತಿದ್ದ ಸಂಸದೆ ಫ್ಲೈಓವರ್‌ ಕಾಮಗಾರಿ ಚುರುಕುಗೊಳಿಸುವ ನಿಟ್ಟಿನಲ್ಲಿ ಒಂದು ಬಾರಿ ಕುಂದಾಪುರದಲ್ಲಿ ಸಭೆ ನಡೆಸಿದ್ದು ಬಿಟ್ಟರೆ ಉಳಿದಂತೆ ಜಿಲ್ಲಾಧಿಕಾರಿಗಳ ಸಭೆಯಲ್ಲೇ ಆದೇಶ ಮಾಡಿದ್ದಾರೆ.

Advertisement

ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ವಾರಕ್ಕೊಮ್ಮೆ ಭೇಟಿ ನೀಡುವ ಅವರ ಭರವಸೆಯೂ ಫ್ಲೈಓವರ್‌ ಕುರಿತಂತೆ ಅವರು ನೀಡಿದ ಭರವಸೆಯಂತೆಯೇ ಆಗಿದೆ. ಮಾರ್ಚ್‌ ಮೊದಲ ವಾರ ಮುಗಿದಾಗ ಓಡಾಟಕ್ಕೆ ದೊರೆಯಲಿದೆ ಎಂಬ ಅವರ ಹೇಳಿಕೆಯೂ ಅಧಿಕಾರಿಗಳ ಮಾತನ್ನು ನಂಬಿ ನೀಡಿದಂತಿದೆ. ವಾಸ್ತವ ನೋಡಿದ್ದರೆ ಇನ್ನಷ್ಟು ಚುರುಕುಗೊಳಿಸಿ ಕಾಮಗಾರಿಗೆ ಆದೇಶ ಮಾಡಬಹುದಿತ್ತು. ಸ್ಥಳೀಯರ ಬೇಡಿಕೆ ಕುರಿತು ಪರಿಹಾರಕ್ಕೆ ಪ್ರಯತ್ನಿಸಬಹುದಿತ್ತು.

ಚರಂಡಿ ಇಲ್ಲ
ಸರ್ವೀಸ್‌ ರಸ್ತೆಯ ಸಮೀಪ ಸರಿಯಾದ ರೀತಿಯಲ್ಲಿ ಚರಂಡಿ ಇಲ್ಲ. ಇದ್ದರೂ ಕೆಲವೆಡೆ ಅದಕ್ಕೆ ಮುಚ್ಚಳ ಇಲ್ಲ. ಇದನ್ನು ಸರಿಪಡಿಸುವ ಕಾರ್ಯ ಫ್ಲೈಓವರ್‌ ಕಾಮಗಾರಿ ಪೂರ್ಣವಾದ ಬಳಿಕ ನಡೆಯಲಿದೆ.

ಪಾದಚಾರಿ ರಸ್ತೆ ಇಲ್ಲ
ಸರ್ವೀಸ್‌ ರಸ್ತೆಗಳಲ್ಲಿ ಪಾದಚಾರಿ ರಸ್ತೆಯೇ ಇಲ್ಲ. ಚರಂಡಿಯ ಮೇಲೆ ಹಾಕಿದ ಚಪ್ಪಡಿಯ ಮೇಲೆ ನಡೆಯಬಹುದಾದರೂ ಕೆಲವೆಡೆ ಅಂಗಡಿಗಳ ಬೋರ್ಡ್‌ಗಳಿವೆ. ಕೆಲವೆಡೆ ಚಪ್ಪಡಿ ಇಲ್ಲ.

ಪಾರ್ಕಿಂಗ್‌ ಇಲ್ಲ
ಸರ್ವೀಸ್‌ ರಸ್ತೆಗಳ ಪಕ್ಕದಲ್ಲಿ ಅನೇಕ ಅಂಗಡಿ ಗಳಿದ್ದು ಅವುಗಳು ಪುರಸಭೆಗೆ ಸೂಕ್ತ ತೆರಿಗೆ ಪಾವತಿಸು ತ್ತಿವೆ. ಹಾಗಿದ್ದರೂ ವಾಹನಗಳ ಮೂಲಕ ಇವುಗಳಿಗೆ ಹೋಗಬೇಕಾದರೆ ಪಾರ್ಕಿಂಗ್‌ ವ್ಯವಸ್ಥೆಯೇ ಇಲ್ಲ.

ಭರವಸೆ
ಪುರಸಭೆ ಮೀಟಿಂಗ್‌ನಲ್ಲಿ ಭಾಗವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾ.31ಕ್ಕೆ ಕಾಮಗಾರಿ ಮುಗಿಸಿ ಎ.1ರಿಂದ ವಾಹನ ಸಂಚಾರಕ್ಕೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ.

ಕೇಸು, ನೋಟಿಸ್‌
ಕ್ಲಪ್ತ ಸಮಯಕ್ಕೆ ಕಾಮಗಾರಿ ಮುಗಿಯದ ಕಾರಣ ಎಸಿ ಆಗಿದ್ದ ಭೂಬಾಲನ್‌ ಅವರು ಕೇಸು ಮಾಡಿ ವಿಚಾರಣೆ ನಡೆಸಿದ್ದು, ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಈಗಿನ ಡಿಸಿ ಜಿ.ಜಗದೀಶ್‌ ಹಾಗೂ ಎಸಿ ಕೆ. ರಾಜು ಅವರ ಬೆನ್ನತ್ತುವಿಕೆ ಒಂದು ಹಂತದಲ್ಲಿ ಕಾಮಗಾರಿ ವೇಗ ಪಡೆಯಲು ಕಾರಣವಾಯಿತು. ಈ ಅಧಿಕಾರಿಗಳೆಲ್ಲ ಆಗಾಗ ಸ್ವತಃ ಕಾಮಗಾರಿ ವೀಕ್ಷಿಸಿ, ಗುತ್ತಿಗೆದಾರರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರು. ಕಾಮಗಾರಿ ಅವಧಿಯಲ್ಲಿ ಮುಗಿಸದೇ ಇದ್ದರೆ ಟೋಲ್‌ ಸಂಗ್ರಹಕ್ಕೆ ಬಿಡುವುದಿಲ್ಲ ಎಂಬ ಪ್ರಿಯಾಂಕಾ ಅವರ ಜನಪರ ಹೇಳಿಕೆ ಅವರಿಗೇ ಮುಳುವಾಗಿತ್ತು. ಗುತ್ತಿಗೆದಾರರ ಲಾಬಿ ಎಷ್ಟು ಪ್ರಬಲವಾಗಿತ್ತೆಂದರೆ ಅವರ ವಿರುದ್ಧವೇ ದೂರು ಹೋಗಿತ್ತು.

ಎಚ್ಚರಿಕೆ
ಸರ್ವೀಸ್‌ ರಸ್ತೆ, ಪುರಸಭೆಯ ಮುಖ್ಯರಸ್ತೆಗೆ ಸೇರುವಲ್ಲಿ ಕೆಲವು ಕಾಮಗಾರಿಗಳನ್ನು ಹೆದ್ದಾರಿ ಗುತ್ತಿಗೆದಾರರೇ ನಿರ್ವಹಿಸಬೇಕು. ಅದನ್ನು ಸಕಾಲದಲ್ಲಿ ನಿರ್ವಹಿಸದೇ ಇದ್ದರೆ ಅವರ ಮೇಲೆ ಪುರಸಭೆ ಕೇಸು ದಾಖಲಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next