Advertisement

ಕುಂದಾಪುರ: ಆಧಾರ್‌ಗಾಗಿ ಮುಗಿಬಿದ್ದ ಜನತೆ

09:58 AM Oct 22, 2019 | Team Udayavani |

ಕುಂದಾಪುರ: ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು, ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರವಿವಾರ ನಡೆಸಿದ ಆಧಾರ್‌ ಅದಾಲತ್‌ಗೆ ಸಾವಿರಾರು ಮಂದಿ ಆಗಮಿಸಿ ಕೆಲವರಿಗಷ್ಟೇ ಪ್ರಯೋಜನ ದೊರೆತ ಕಾರಣ ಅನೇಕರು ನಿರಾಶರಾಗಿ ವಾಪಸಾದರು.

Advertisement

ಅಂಚೆ ಇಲಾಖೆ ವತಿಯಿಂದ ಆಧಾರ್‌ ಅದಾಲತ್‌ ಹಮ್ಮಿಕೊಳ್ಳಲಾಗಿತ್ತು. ಅಂಚೆ ಇಲಾಖೆ ಸಿಬಂದಿಯನ್ನು ರವಿವಾರದ ರಜೆಯಾದರೂ ಅಂಚೆ ಅಧೀಕ್ಷಕರು ಸಾರ್ವಜನಿಕರಿಗೆ ಪ್ರಯೋಜನ ದೊರಕಿಸಿಕೊಡುವ ಸಲುವಾಗಿ ಆಧಾರ್‌ ಅದಾಲತ್‌ ನಡೆಸಿಕೊಡಲು ಒಪ್ಪಿಸಿದ್ದರು. ಸುತ್ತಲಿನ ಐದು ಅಂಚೆ ಕಚೇರಿಗಳಿಂದ ಸಿಬಂದಿ ಹಾಗೂ ಕಂಪ್ಯೂಟರನ್ನು ತರಿಸಲಾಗಿತ್ತು. ಒಂದು ಘಟಕದಲ್ಲಿ 1 ದಿನದಲ್ಲಿ ಸಾಮಾನ್ಯವಾಗಿ 50 ಮಂದಿ ಆಧಾರ್‌ ಪ್ರಕ್ರಿಯೆ ನಡೆಸಬಹುದು. ಈ ನಿಟ್ಟಿನಲ್ಲಿ ಸುಮಾರು 250ರಿಂದ 300 ಜನರಿಗೆ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು.

ಹೆಚ್ಚುವರಿ ಕೌಂಟರ್‌
ಆದರೆ ಬೆಳಗ್ಗೆ 8.30ಕ್ಕೆ ಅದಾಲತ್‌ ಆರಂಭಕ್ಕೆ ಒಂದೂವರೆ ತಾಸು ಮುನ್ನವೇ ಇಲಾಖಾ ಕಚೇರಿ ಎದುರು ಜನಸಂದಣಿ ಇತ್ತು. ಅದಾಲತ್‌ ಆರಂಭವಾಗುವ ವೇಳೆಗೆ ಸುಮಾರು 3 ಸಾವಿರ ಮಂದಿ ಸಾರ್ವಜನಿಕರು ಆಧಾರ್‌ ಸೇವೆಗಾಗಿ ಕಾಯುತ್ತಿದ್ದರು. ತತ್‌ಕ್ಷಣ ಅಂಚೆ ಇಲಾಖೆಯು ಇನ್ನೆರಡು ಘಟಕಗಳ ವ್ಯವಸ್ಥೆಯನ್ನು ಮಾಡಿತು. ಅದೇನೇ ಇದ್ದರೂ 300ರಿಂದ 400 ಮಂದಿಗಷ್ಟೇ ಪ್ರಯೋಜನ. ಆಧಾರ್‌ ಪ್ರಕ್ರಿಯೆಗಾಗಿ ಆಗಮಿಸಿದ ಅನೇಕರು ದಾಖಲೆಗಳ ಮೂಲಪ್ರತಿಯನ್ನು ತಾರದ ಕಾರಣ ಸಮಸ್ಯೆಯಾಯಿತು. ಸರಿಯಾದ ಮಾಹಿತಿ ಅರಿಯದೇ ಬಂದಿದ್ದರಿಂದ ಮರಳಿ ಹೋಗುವಂತಾಯಿತು.

ಮಾತಿನ ಚಕಮಕಿ
ಸಾರ್ವಜನಿಕರ ಜಮಾವಣೆ ಹೆಚ್ಚಾಗುತ್ತಿದ್ದಂತೆಯೇ ಸ್ಥಳದಲ್ಲಿ ಪೊಲೀಸ್‌ ನಿಯೋಜಿಸಲಾಯಿತು. ಅಂಚೆ ಇಲಾಖೆ ಕಚೇರಿ ಇರುವ ರಸ್ತೆಯ ತುಂಬ ಜನಜಂಗುಳಿ, ವಾಹನಗಳ ಸಾಲು ಹೆಚ್ಚಾಯಿತು. ಸೇರಿದ್ದ ಜನರ ಸರತಿ ಸಾಲು ಉದ್ದವಾಗುತ್ತಿದ್ದಂತೆಯೇ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಬಳಿಕ ಅಂಚೆ ಕಚೇರಿಯ ಬಾಗಿಲು ಹಾಕಿ ನಿಗದಿತ ಸಂಖ್ಯೆಯ ಜನರನ್ನಷ್ಟೇ ಒಳ ಬಿಡುತ್ತಾ ಪ್ರಕ್ರಿಯೆ ನಡೆಸಲಾಯಿತು. ಈ ಮಧ್ಯೆ ಅನೇಕರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.

ಕೇಂದ್ರಗಳಿಲ್ಲ
ಕುಂದಾಪುರದಲ್ಲಿ ತಾಲೂಕು ಕಚೇರಿ, ಅಂಚೆ ಕಚೇರಿ, ಎಸ್‌ಬಿಐ, ಕೆನರಾ ಬ್ಯಾಂಕ್‌, ವಂಡ್ಸೆ ಹೋಬಳಿ ಕಚೇರಿ, ಬೈಂದೂರು ತಾಲೂಕು ಕಚೇರಿಯಲ್ಲಿ ಮಾತ್ರ ಆಧಾರ್‌ ಕೇಂದ್ರಗಳಿವೆ. ತಾಲೂಕು ಕಚೇರಿಯಲ್ಲಿ ದಿನಕ್ಕೆ 50ರಷ್ಟು ನಡೆಯುತ್ತಿದ್ದರೆ ಇತರೆಡೆ ತಲಾ 10ರಿಂದ 15 ಮಾತ್ರ ನಡೆಸುತ್ತಿದ್ದಾರೆ. ಅಲ್ಲೆಲ್ಲ ಸಿಬಂದಿ ಕೊರತೆಯಿದೆ. ಇದರಿಂದಾಗಿ ಜನರ ಆಧಾರ್‌ ಸಮಸ್ಯೆ ಇತ್ಯರ್ಥವಾಗುತ್ತಲೇ ಇಲ್ಲ. ಈ ಕುರಿತಾಗಿ ಆಧಾರ್‌ ಕಡ್ಡಾಯ ಎಂದು ಕಾನೂನು ತರುವ ಯಾವುದೇ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ.

Advertisement

ಎಲ್ಲೆಲ್ಲಿಂದ ಜನ
ಅಸಲಿಗೆ ಕುಂದಾಪುರ ಭಾಗದ ಜನರಿಗೆ ಪ್ರಯೋಜನವಾಗಲಿ ಎಂದು ಆಧಾರ್‌ ಅದಾಲತ್‌ ನಡೆಸಲಾಗಿತ್ತು. ಆದರೆ ಬೈಂದೂರು ಹಾಗೂ ಇತರೆಡೆಗಳಿಂದಲೂ ಜನ ಆಗಮಿಸಿದ್ದರು. ಅಷ್ಟಲ್ಲದೇ ಭಾರೀ ಪ್ರಮಾಣದಲ್ಲಿ ಜನ ಸೇರಿದ ಕಾರಣ ಅಂಚೆ ಇಲಾಖೆಗೆ ದರ ಜತೆಗೆ ಹಮ್ಮಿಕೊಂಡ ಇತರ ಸೇವೆ ಒದಗಿಸುವುದು ಕಷ್ಟವಾಯಿತು. ವೃದ್ಧರು, ಮಹಿಳೆಯರು, ಮಕ್ಕಳು ಎಂದು ಸೇರಿದ್ದು ಮೂಲಭೂತ ಸೌಕರ್ಯಗಳು ಕೂಡಾ ಇಲ್ಲದೇ ಕಚೇರಿಯ ಅಂಗಳದಲ್ಲಿ ಕುಳಿತು ಸಮಯ ಕಳೆದರು.

ಹೆಚ್ಚುವರಿ ಸೇವೆ
ಆಧಾರ್‌ ನೊಂದಣಿ ಮತ್ತು ತಿದ್ದುಪಡಿಯ ಜೊತೆಗೆ ಅಂಚೆ ಯೋಜನೆಗಳಾದ ಸುಕನ್ಯ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ಸಣ್ಣ ಉಳಿತಾಯ ಖಾತೆ ಯೋಜನೆಗಳು, ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವವಿಮೆ, ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌, ಅಂಚೆ ಸಂಗ್ರಹಣಾ ಖಾತೆಗಳನ್ನು ತೆರೆಯಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next